Advertisement

ಕೋವಿಡ್‌ ಎಫೆಕ್ಟ್: ಕಡು ಬಡತನ 100 ಕೋಟಿಗೇರಿಕೆ?

02:52 PM Jun 13, 2020 | sudhir |

ನ್ಯೂಯಾರ್ಕ್‌: ಬಡತನ ಹೊಡೆದೋಡಿಸುತ್ತೇವೆ ಎಂದು ಸರಕಾರಗಳು ನಿರಂತರವಾಗಿ ಶತಮಾನಗಳಿಂದ ಹೇಳುತ್ತಲೇ ಬರುತ್ತಿದ್ದರೂ ಬಡತನ ಹೋಗಿಲ್ಲ. ಈಗ ಕೋವಿಡ್‌ ಸೋಂಕಿನ ಕಾರಣದಿಂದಾಗಿ “ಕಡು ಬಡತನ’ ಎನ್ನುವುದು ಜಗತ್ತಿನ 100 ಕೋಟಿಗೂ ಹೆಚ್ಚಿನ ಮಂದಿಗೆ ತಟ್ಟಲಿದೆ ಎಂದು ಹೇಳಲಾಗಿದೆ.

Advertisement

ಈ ಸಾಂಕ್ರಾಮಿಕ ಕಾಯಿಲೆಯಿಂದಾಗಿ ತೀವ್ರ ಬಡತನಕ್ಕೆ 39 ಕೋಟಿ ಮಂದಿ ಹೆಚ್ಚುವರಿಯಾಗಿ ಸೇರ್ಪಡೆಯಾಗಲಿದ್ದಾರೆ. ಇವರಲ್ಲಿ ಬಹುತೇಕರು ದಕ್ಷಿಣ ಏಷ್ಯಾದವರೇ ಆಗಿರಲಿದ್ದಾರೆ. ಇಲ್ಲಿ ಕೋವಿಡ್‌ ದೊಡ್ಡ ಪ್ರಮಾಣದಲ್ಲಿ ಹಾನಿ ಸೃಷ್ಟಿಸಿದೆ ಎಂದು ಹೊಸ ವರದಿಯೊಂದು ಹೇಳಿದೆ.

ಲಂಡನ್‌ನ ಕಿಂಗ್ಸ್‌ ಕಾಲೇಜು ಮತ್ತು ಆಸ್ಟ್ರೇಲಿಯಾದ ನ್ಯಾಷನಲ್‌ ವಿಶ್ವವಿದ್ಯಾಲಯ ವಿಶ್ವಸಂಸ್ಥೆಯ ವಲ್ಡ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಡೆವಲಪ್‌ಮೆಂಟ್‌ ಎಕನಾಮಿಕ್ಸ್‌ ರಿಸರ್ಚ್‌ ನೊಂದಿಗೆ ಪ್ರಕಟಪಡಿಸಿದ ಸಂಶೋಧನ ವರದಿಯಲ್ಲಿ ಹೇಳಲಾಗಿದೆ.

ಬಡತನ ಹೆಚ್ಚುವುದರೊಂದಿಗೆ ವಿಶ್ವದಲ್ಲಿ ಬಡವರು ದಿನವೊಂದರಲ್ಲಿ ಕಳೆದುಕೊಳ್ಳುವ ಒಟ್ಟು ಹಣದ ಪ್ರಮಾಣ 380 ಕೋಟಿ ರೂ. ದಾಟಬಹುದು ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ಬಡತನ ಪ್ರಮಾಣ ಏರಿಕೆ ಮಧ್ಯ ಆದಾಯ ಹೊಂದಿದ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲೇ ಹೆಚ್ಚಿರುತ್ತದೆ. ವಿಶೇಷವಾಗಿ ದಕ್ಷಿಣ ಏಷ್ಯಾ ಮತ್ತು ಪೂರ್ವ ಏಷ್ಯಾಗಳಲ್ಲಿ ಬಡತನ ಪ್ರಮಾಣ ಏರಿಕೆ ಸಮಸ್ಯೆ ಕಾಡಬಹುದು ಎಂದು ಹೇಳಲಾಗಿದೆ.

ದಿನವೊಂದಕ್ಕೆ 144 ರೂ.ಗಿಂತ ಕಡಿಮೆ ಸಂಪಾದನೆ ಹೊಂದಿದವರನ್ನು ಅತಿ ಬಡವರು ಎಂದು ಪರಿಗಣಿಸಿದರೆ, ಅಥವಾ ಇದರಲ್ಲೂ ಶೇ.20ರಷ್ಟು ಕಡಿಮೆ ಮೊತ್ತವನ್ನು ಬಡತನ ರೇಖೆಯ ಮಾನದಂಡವಾಗಿ ಪರಿಗಣಿಸಿದರೆ, 39 ಕೋಟಿ ಮಂದಿ ದಕ್ಷಿಣ ಏಷ್ಯಾದಲ್ಲೇ ಹೆಚ್ಚಾಗಿ ಕಂಡುಬರಬಹುದು. ಅದರಲ್ಲೂ ಭಾರತದಲ್ಲೇ ಇವರ ಪ್ರಮಾಣ ದೊಡ್ಡದಿರಬಹುದು. ಇದವರ ಹೊರತಾಗಿ ಸಹರಾ ಆಸುಪಾಸಿನ ಆಫ್ರಿಕನ್‌ ರಾಷ್ಟ್ರಗಳಲ್ಲಿದೆ. ಇಲ್ಲಿನ ಪ್ರಮಾಣ ಸುಮಾರು ಶೇ.30ರಷ್ಟು ಆಗಿರಲಿದೆ ಎಂದು ಹೇಳಲಾಗಿದೆ.

Advertisement

ಒಂದು ವೇಳೆ ಮೇಲ್ಮಟ್ಟದ ಮಧ್ಯ ಆದಾಯ ಹೊಂದಿದ ರಾಷ್ಟ್ರಗಳಲ್ಲಿ ದಿನಕ್ಕೆ 400 ರೂ.ಗಿಂತ ಕಡಿಮೆ ಸಂಪಾದನೆ ಹೊಂದಿದವರನ್ನು ಬಡತನ ರೇಖೆಗಿಂತ ಕಳೆಗಿನವರು ಎಂದು ಪರಿಗಣಿಸಿದರೆ ಪೂರ್ವ ಏಷ್ಯಾ, ಚೀನಾದ ಭಾಗ, ದಕ್ಷಿಣ ಏಷ್ಯಾದಲ್ಲಿ ಬಡತನ ಪ್ರಮಾಣ ಜಗತ್ತಿನ ಶೇ.20ರಷ್ಟು ಆಗಬಹುದು. ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾದಲ್ಲಿ ಇವರ ಪ್ರಮಾಣ ಶೇ.18ರಷ್ಟು ಆಗಬಹುದು.

ಅತ್ಯಂತ ಕಡಿಮೆ ಆದಾಯ ಹೊಂದಿದ ದೇಶಗಳಾದ ನೈಜೀರಿಯಾ, ಇಥಿಯೋಪಿಯಾ, ಬಾಂಗ್ಲಾದೇಶ, ಇಂಡೋನೇಷ್ಯಾಗಳ ತೀವ್ರ ಬಡತನ ಹೊಂದಿದವರ ಪ್ರಮಾಣ ಶೇ.18ರಿಂದ 19ರಷ್ಟಾಗಬಹುದು ಎಂದು ಹೇಳಿದೆ. ಇದರೊಂದಿಗೆ ತಾಂಜೇನಿಯಾ, ಕೀನ್ಯಾ, ಉಗಾಂಡಾ, ಫಿಲಿಫೈನ್ಸ್‌ಗಳಲ್ಲೂ ಶೇ.12ರಷ್ಟು ಬಡವರು ಈ ಸಾಲಿಗೆ ಸೇರಬಹುದು ಎನ್ನಲಾಗಿದೆ. ಜಗತ್ತಿನ ಹಲವು ದೇಶಗಳಲ್ಲಿ ತೀವ್ರ ಬಡತನ ರೇಖೆಗಿಂತ ಕೆಲವೇ ಅಂಶಗಳಷ್ಟು ಮೇಲೆ ಕೋಟ್ಯಂತರ ಜನರು ವಾಸಿಸುತ್ತಿದ್ದು ಈ ಸಾಂಕ್ರಾಮಿಕ ಕಾಯಿಲೆ ಮತ್ತೆ ಅವರನ್ನು ಕಡು ಬಡತನಕ್ಕೆ ದೂಡುತ್ತದೆ. ಜಿ.7, ಜಿ.20 ಒಕ್ಕೂಟಗಳು ಇದಕ್ಕಾಗಿ ಮೂರು ಅಂಶಗಳ ಯೋಜನೆಗಳನ್ನು ರೂಪಿಸಬೇಕು ಮತ್ತು ಸರಕಾರಗಳು ಸುಸ್ಥಿರ ಅಭಿವೃದ್ಧಿ ಕುರಿತ ಯೋಜನೆಗಳನ್ನು ರೂಪಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಅಗತ್ಯ ಹೆಚ್ಚಿದೆ ಎಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next