Advertisement

Poor work: ನಗರೋತ್ಥಾನ ಕಾಮಗಾರಿ ಕಳಪೆ ಆರೋಪ: ದೂರು ಸಲ್ಲಿಕೆ

03:41 PM Sep 02, 2023 | Team Udayavani |

ಯಳಂದೂರು: ಪಪಂನಿಂದ ನಗರೋತ್ಥಾನ ಯೋಜನೆ ಯಡಿ ನಡೆಯುತ್ತಿರುವ ಚರಂಡಿ ಕಾಮಗಾರಿಯು ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಲೋಕಾಯುಕ್ತ, ಪೌರಾಡಳಿತ ನಿರ್ದೇಶನಾಲಯ, ಯೋಜನಾ ನಿರ್ದೇ ಶಕರು, ಪಪಂ ಮುಖ್ಯಾಧಿಕಾರಿಗೆ ಗೌತಮ್‌ ಬಡಾವಣೆಯ ನಿವಾಸಿ ವಿನೋದ್‌ಕುಮಾರ್‌ ದೂರು ಸಲ್ಲಿಸಿದ್ದಾರೆ.

Advertisement

ಪಟ್ಟಣದಿಂದ ಹಾದು ಹೋಗಿರುವ ಈ ಹಿಂದೆ ಯರಿಯೂರು ಕಾಲುವೆ ಎಂದು ಕರೆಯುತ್ತಿದ್ದ ಪ್ರಸ್ತುತ ದೊಡ್ಡ ಚರಂಡಿ ದುರಸ್ತಿಗೆ ನಗರೋತ್ಥಾನ ಯೋಜನೆಯಡಿ 1.23 ಕೋಟಿ ರೂ.ನಲ್ಲಿ ವಿವಿಧ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿ ನೆರವೇರಿಸಲು ಕಳೆದ ಜನವರಿ ತಿಂಗಳಲ್ಲಿ ಅಂದಿನ ಶಾಸಕ ಎನ್‌.ಮಹೇಶ್‌ ಚಾಲನೆ ನೀಡಿದ್ದರು. ಇದರಲ್ಲಿ ಈ ಚರಂಡಿಯ ದುರಸ್ತಿಯೂ ಸೇರಿತ್ತು. ಈ ಕಾಮಗಾರಿ ಪ್ರಗತಿಯಲ್ಲಿದೆ. ಇಲ್ಲಿ ಸಂಬಂಧಪಟ್ಟ ಗುತ್ತಿಗೆದಾರ, ಎಂಜಿನಿಯರ್‌ ಸ್ಥಳದಲ್ಲಿ ಇರುವುದಿಲ್ಲ. ಸಿಮೆಂಟ್‌, ಕಬ್ಬಿಣ ಹಾಗೂ ಎಂ.ಸ್ಯಾಂಡ್‌ ಗುಣಮಟ್ಟದಿಂದ ಕೂಡಿಲ್ಲ. ಅಲ್ಲದೆ, ಇದನ್ನು ಕಡಿಮೆ ಪ್ರಮಾಣದಲ್ಲಿ ಇದರ ಬಳಕೆ ಮಾಡಲಾಗಿದೆ. ಇದರ ಬಳಕೆ ಬಗ್ಗೆ ಮಾಹಿತಿ ಕೇಳಿದರೆ ಹಾರಿಕೆಯ ಉತ್ತರ ನೀಡುತ್ತಾರೆ. ಅಲ್ಲದೆ, ಕೆಲವೆಡೆ ಈಗ ಹಾಕಲಾಗಿರುವ ಕಾಂಕ್ರೀಟ್‌ನಲ್ಲಿ ಬಿರುಕು ಕಾಣಿಸಿಕೊಂಡಿದೆ.

ಕೆಲವೆಡೆ ಡೆಕ್‌ ನಿರ್ಮಾಣ ಮಾಡಲಾಗಿದ್ದು, ಅದೂ ಸರಿಯಾಗಿ ಆಗಿಲ್ಲ. ಹಳೆ ಚರಂಡಿ ಕೆಲವೆಡೆ ಗೋಡೆಗಳನ್ನು ತೆರವುಗೊಳಿಸದೆ ಅದರ ಮೇಲೆ ಹೊಸ ಗೋಡೆ ನಿರ್ಮಿಸಲಾಗಿದೆ. ಪಪಂಗೆ ಬಂದಿರುವ ಅನುದಾನ ಸದ್ಬಳಕೆಯಾಗುತ್ತಿಲ್ಲ ಎಂಬುದು ಮಹೇಶ್‌, ಮನು ದೂರಾಗಿದೆ. ಈ ಬಗ್ಗೆ ಮುಖ್ಯಾಧಿಕಾರಿಗೆ, ಎಂಜಿನಿಯರ್‌ಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಉನ್ನತ ಮಟ್ಟದ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂಬುದು ದೂರುದಾರ ವಿನೋದ್‌ ಕುಮಾರ್‌ ಮಾಹಿತಿ ನೀಡಿದರು.

ಪ್ರಸ್ತುತ ನಡೆಯುತ್ತಿರುವ ಕಾಮಗಾರಿ ಬಗ್ಗೆ ತಾಂತ್ರಿಕ ವಿಭಾಗ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಗುಣಮಟ್ಟ ಪರೀಕ್ಷೆಯನ್ನು ನಡೆಸಿದ ಮೇಲೆ, ಅಂದಾಜು ಪಟ್ಟಿಯಲ್ಲಿರುವಂತೆ ಕಾಮಗಾರಿ ನಡೆದಿದೆಯೇ ಎಂದು ಪರಿಶೀಲಿಸಿ ನಂತರ ಬಿಲ್‌ ಪಾವತಿಸಲಾಗುವುದು. ●ರವಿಕೀರ್ತಿ, ಮುಖ್ಯಾಧಿಕಾರಿ, ಪಪಂ, ಯಳಂದೂರು.

Advertisement

Udayavani is now on Telegram. Click here to join our channel and stay updated with the latest news.

Next