ಮುಂಬೈ: ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ವಿರೋಧ ಪಕ್ಷಗಳ ರಂಗದೊಂದಿಗೆ ಯಾವುದೇ ಒಡನಾಟವನ್ನು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ತಳ್ಳಿಹಾಕಿದ್ದಾರೆ. ಅಲ್ಲದೆ ತೃತೀಯ ಅಥವಾ ಚತುರ್ಥ ರಂಗದಿಂದ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯ ಎಂದು ನನಗನಿಸುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆ ಪ್ರಯೋಗ ಮಾಡಲಾಗಿರುವ ತೃತೀಯ ರಂಗದ ಮಾದರಿ ಪುರಾತನವಾದುದು. ಸದ್ಯದ ರಾಜಕೀಯ ಪರಿಸ್ಥಿತಿಗೆ ಇದು ಸರಿಯಾಗಿಲ್ಲ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಇದನ್ನೂ ಓದಿ:ರಾಹುಲ್ ಗಾಂಧಿ ಭೇಟಿ ಮಾಡಿದ ಡಿ.ಕೆ.ಶಿವಕುಮಾರ್: ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರೊಂದಿಗಿನ ಸಭೆಗಳು, 2024 ರ ಸಾರ್ವತ್ರಿಕ ಚುನಾವಣೆಗೆ ತೃತೀಯ ರಂಗ ಮತ್ತೆ ಒಟ್ಟಾಗುತ್ತಿದೆ ಎಂಬ ಊಹಾಪೋಹಗಳ ಕಾರಣದಿಂದ ಪ್ರಶಾಂತ್ ಕಿಶೋರ್ ಈ ಸ್ಪಷ್ಟನೆ ನೀಡಿದ್ದಾರೆ.
ಶರದ್ ಪವಾರ್ ಅವರನ್ನು ಪ್ರಶಾಂತ್ ಕಿಶೋರ್ ಅವರು ಎರಡು ವಾರದಲ್ಲಿ ಎರಡು ಬಾರಿ ಭೇಟಿಯಾಗಿದ್ದಾರೆ. ಈ ಸಭೆಗಳ ಕುರಿತು ಮಾತನಾಡಿದ ಅವರು, ಇಬ್ಬರೂ ರಾಜಕೀಯ ಚರ್ಚೆಗಳನ್ನು ಮಾಡಿದ್ದೇವೆ. ಬಿಜೆಪಿ ವಿರುದ್ಧದ ಹೋರಾಟದಲ್ಲಿ ಏನು ಕೆಲಸ ಮಾಡುತ್ತದೆ ಮತ್ತು ಏನು ಆಗುವುದಿಲ್ಲ ಎಂಬ ಸಾಧ್ಯತೆಗಳ ಬಗ್ಗೆ ಮಾತನಾಡಿದ್ದೇವೆ. ಸಂಭವನೀಯ ತೃತೀಯ ರಂಗ ಮಾದರಿಯ ಸದ್ಯ ಚರ್ಚೆಯ ವಿಚಾರವಾಗಿಲ್ಲ ಎಂದಿದ್ದಾರೆ.