Advertisement

ಪ್ರವಾಸಿ ಕ್ಷೇತ್ರ ಬೀದರನಲ್ಲಿ ರಾಜಕೀಯ ಬಿರುಗಾಳಿ

11:29 AM Apr 02, 2018 | Team Udayavani |

ಬೀದರ: ಚಾರಿತ್ರಿಕ ಕೋಟೆ ಕೊತ್ತಲುಗಳು, ಪಾರಂಪರಿಕ ಸ್ಮಾರಕಗಳನ್ನು ಹೊದ್ದು ಮಲಗಿರುವ ಬೀದರ ಐತಿಹಾಸಿಕ ಪ್ರವಾಸಿ ಕ್ಷೇತ್ರ. ಪ್ರತಿಯೊಂದು ರಾಜಕೀಯ ಪಕ್ಷಕ್ಕೆ ನೆಲೆ ನೀಡಿರುವ ಈ ಕ್ಷೇತ್ರ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಜನಸಂಘ ಮತ್ತು ಬಿಎಸ್‌ಪಿ ಪಕ್ಷವನ್ನು ಅರಳಿಸಿದ್ದ ಖ್ಯಾತಿ ಹೊಂದಿದೆ. ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ಬೀದರನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ
ಅವಕಾಶಗಳಿದ್ದರೂ ಬಳಸಿಕೊಳ್ಳುವ ಪ್ರಯತ್ನಗಳು ಆಗುತ್ತಿಲ್ಲ.

Advertisement

ಸದ್ಯ ಶಾಸಕರು ಮತ್ತು ಉಗ್ರಾಣ ನಿಗಮದ ಅಧ್ಯಕ್ಷ ರಹೀಮ್‌ ಖಾನ್‌ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಒಟ್ಟು 123 ಗ್ರಾಮಗಳನ್ನು ಒಳಗೊಂಡಿರುವ ಈ ತಾಲೂಕಿನಲ್ಲಿ 2.16 ಲಕ್ಷ ಜನರಿದ್ದಾರೆ. ತಾಲೂಕಿನಲ್ಲಿ ಹೇಳಿಕೊಳ್ಳುವಂಥ ಯಾವುದೇ ನೀರಾವರಿ ಯೋಜನೆಗಳಿಲ್ಲ. ಜಿಲ್ಲೆಯ ಏಕೈಕ ಕಾರಂಜಾ ಜಲಾಶಯದಿಂದ ರೈತರಿಗೆ ಸಮರ್ಪಕ ನೀರು ಸಿಗುತ್ತಿಲ್ಲ. ಹಾಗಾಗಿ ಇಲ್ಲಿಯ ರೈತರು ಕೃಷಿಗೆ ಮಳೆಯನ್ನೇ ಆಶ್ರಯಿಸಿದ್ದಾರೆ. ತೋಟಗಾರಿಕೆ ಬೆಳೆಯ ಪ್ರದೇಶ ಇದ್ದರೂ ಪ್ರತಿ ವರ್ಷ ಪ್ರತಿಕೃತಿ ವಿಕೋಪದಿಂದ ಹಾನಿಯಾಗಿ ಅನ್ನದಾತರ ಕೈ ಸುಡುತ್ತಿದೆ.

ಜೆಡಿಎಸ್‌ ಹೊರತುಪಡಿಸಿದರೆ ಇನ್ನುಳಿದ ಕಾಂಗ್ರೆಸ್‌, ಬಿಜೆಪಿ, ಬಿಎಸ್‌ಪಿ, ಜನಸಂಘ ಹೀಗೆ ಎಲ್ಲ ಪಕ್ಷಗಳಿಗೆ ಬೀದರ ಕ್ಷೇತ್ರ ಆಶ್ರಯ ನೀಡಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಮಕ್ಸೂದ್‌ ಅಲಿಖಾನ್‌ ಬಿಟ್ಟರೆ ನಂತರ ಯಾವ ಅಭ್ಯರ್ಥಿ ಸತತವಾಗಿ 2 ಬಾರಿ ಆಯ್ಕೆಯಾಗಿಲ್ಲ. ಜತೆಗೆ ಕಾಂಗ್ರೆಸ್‌ನ ಶಾಸಕ ರಹೀಮ್‌ ಖಾನ್‌ ಉಪ ಕದನದಲ್ಲೇ ಗೆಲುವಿನ ನಗೆ ಬೀರಿದ್ದು ವಿಶೇಷ. ಹೈದ್ರಾಬಾದ ರಾಜ್ಯಕ್ಕೊಳಪಟ್ಟಿದ್ದ
ಈ ಕ್ಷೇತ್ರದಿಂದ ಶಫಿಯುದ್ದೀನ್‌ ಅಹ್ಮದ್‌ ಆಯ್ಕೆಯಾಗಿರುವ ಮೊದಲ ಶಾಸಕರಾಗಿದ್ದರೆ, ಜನಸಂಘದಿಂದ ಚಂದ್ರಕಾಂತ ಸಿಂದೋಲ್‌ ಮತ್ತು ಬಿಎಸ್‌ಪಿಯಿಂದ ಜುಲೆಧೀಕಾರ್‌ ಹಾಸ್ಮಿ ಆಯ್ಕೆಯಾಗಿರುವುದು ಮೊಗದೊಂದು ವಿಶೇಷ.

1952ರಿಂದ 2016ರ ವರೆಗೆ 17 ಚುನಾವಣೆಗಳನ್ನು ಕಂಡಿರುವ ಈ ಕ್ಷೇತ್ರದಲ್ಲಿ ಮೂರು ಬಾರಿ ಉಪ ಚುನಾವಣೆ ನಡೆದಿವೆ. ಒಟ್ಟು 9 ಬಾರಿ ಕಾಂಗ್ರೆಸ್‌, ಬಿಜೆಪಿ 3, ಪಕ್ಷೇತರ 2 ಬಿಎಸ್‌ಪಿ, ಕೆಜೆಪಿ ಮತ್ತು ಬಿಜೆಎಸ್‌ ತಲಾ ಒಂದು ಬಾರಿ ಗೆಲ್ಲುವ ಮೂಲಕ ಬೀದರ ಕೋಟೆ ಆಳಿದ್ದಾರೆ. ಕಾಂಗ್ರೆಸ್‌ನ ಭದ್ರಕೋಟೆ ಎಂದು ಕರೆಯಿಸಿಕೊಂಡರೂ ಕ್ಷೇತ್ರದಲ್ಲಿ ಮಧ್ಯದಲ್ಲಿ ವಿವಿಧ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. 

ಸಹಕಾರ ಕ್ಷೇತ್ರದಲ್ಲಿ ದಿಗ್ಗಜರೆನಿಸಿಕೊಂಡಿದ್ದ ದಿ| ಗುರುಪಾದಪ್ಪ ನಾಗಮಾರಪಳ್ಳಿ 2008ರಲ್ಲಿ ಔರಾದ ಮೀಸಲು ಕ್ಷೇತ್ರವಾದ ಹಿನ್ನೆಲೆಯಲ್ಲಿ ಬೀದರ ಕ್ಷೇತ್ರಕ್ಕೆ ವಲಸೆ ಬಂದು ಕಾಂಗ್ರೆಸ್‌ ನಿಂದ ಸ್ಪರ್ಧಿಸಿ ಗೆದ್ದಿದ್ದರು. 2013ರಲ್ಲಿ ಪುನಃ ಗೆದ್ದಿದ್ದ ಗುರುಪಾದಪ್ಪ ಅವರ ನಿಧನದಿಂದ 2016ರಲ್ಲಿ ಖಾಲಿಯಾದ ಸ್ಥಾನಕ್ಕೆ ರಹೀಮ್‌ ಖಾನ್‌ ಜಯಗಳಿಸಿದ್ದಾರೆ. ಈಗ ಮತ್ತೂಂದು ಅವಧಿಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಸಜ್ಜಾಗಿರುವ ರಹೀಮ್‌ ಗೆಲವಿಗೆ ಬ್ರೇಕ್‌ ಹಾಕಲು ಬಿಜೆಪಿ ರೆಡಿಯಾಗಿದೆ. ಆದರೆ, ಅಭ್ಯರ್ಥಿ ಅಂತಿಮಗೊಳ್ಳಬೇಕಿದೆ.
 
ಬೀದರನ ದಕ್ಷಿಣ ಭಾರತದಲ್ಲೇ  ಭವ್ಯ ಕೋಟೆ, ಸ್ಮಾರಕಗಳು, ಅಳಿದುಳಿದ ಪಳೆಯುಳಿಕೆಗಳು ಇಂದಿಗೂ ಪುರಾತನ ಇತಿಹಾಸ ಮತ್ತು ರಾಜ ಮಹಾರಾಜರುಗಳ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿವೆ. ಬೀದರನ ಬೀದರನ ಸ್ಮಾರಕಗಳು ಆದರ್ಶ ಸ್ಮಾರಕ ಪಟ್ಟಿ ಹಾಗೂ ವರ್ಲ್ಡ್ ಮಾನ್ಯುಮೆಂಟ್‌ ಫಂಡ್‌ಗೆ ಆಯ್ಕೆಯಾಗಿವೆ. ಪ್ರತಿ ತಾಣಗಳು ತನ್ನದೇಯಾದ ಕಥೆ ಹೊಂದಿದೆ. ಇದನ್ನು ಅರಿತುಕೊಳ್ಳಲು ದೇಶ- ವಿದೇಶಗಳ ಸಂಶೋಧನಾ ವಿದ್ಯಾರ್ಥಿಗಳು, ಪ್ರವಾಸಿಗರು ಆಗಮಿಸುತ್ತಾರೆ. ಆದರೆ, ಇವರಿಗೆ ಮಹತ್ವ, ತಿಳಿಸುವ ಗೈಡ್‌ಗಳೇ ಇಲ್ಲ. ಹಿನ್ನೆಲೆಯನ್ನು ತಿಳಿಸುವವರು ಯಾರೂ ಇಲ್ಲದಂತಾಗಿದೆ. ಪ್ರವಾಸೋದ್ಯಮ ಬೆಳವಣಿಗೆಯ ಪ್ರಯತ್ನಗಳು ನಡೆಯುತ್ತಿಲ್ಲ.

Advertisement

ನಗರದಲ್ಲಿ ಕಳೆದ ಹಲವು ವರ್ಷಗಳಿಂದ ಕುಂಟುತ್ತ ಸಾಗಿರುವ ಒಳಚರಂಡಿ ಕಾಮಗಾರಿಯಿಂದ ನಗರ ಜನತೆ ಧೂಳಿನ ಕಿರಿಕಿರಿ ಅನುಭವಿಸುವಂತಾಗಿದೆ. 24*7 ಕುಡಿಯುವ ನೀರಿನ ಯೋಜನೆ ಪೂರ್ಣಗೊಂಡರೂ ನಲ್ಲಿಗೆ ನೀರು ಬರುತ್ತಿಲ್ಲ. ಸಿಎಂ ಉದ್ಘಾಟಿಸಿರುವ ಸಾವಿರ ಕೋಟಿ ರೂ.ಗಳ ಕಾಮಗಾರಿಗಳಲ್ಲಿ ಬಹುತೇಕ ಆರಂಭಗೊಂಡಿಲ್ಲ. ಜಿಲ್ಲಾ ಕೇಂದ್ರ ಬೀದರನಲ್ಲೇ ಮಿನಿ ವಿಧಾನಸೌಧ ಮತ್ತು ಕಚೇರಿಗಳ ಸಂಕೀರ್ಣ ನಿರ್ಮಾಣ ಸಾಧ್ಯವಾಗದಿರುವುದು ವಿಪರ್ಯಾಸ. ಕೂಡಲೇ ಕೆಲಸ ಕೈಗೆತ್ತಿಕೊಳ್ಳಬೇಕಿದೆ. ಜತೆಗೆ ಬೀದರನ ಹೆಮ್ಮೆ ಎನಿಸಿಕೊಂಡಿರುವ “ಬಿದ್ರಿ’ ಕಲೆ ಅಭಿವೃದ್ಧಿಗೆ ಸರ್ಕಾರ ವಿಶೇಷ ಪ್ಯಾಕೇಜ್‌ ನೀಡಿ, ಅಗತ್ಯ ಸೌಕರ್ಯಗಳನ್ನು ಒದಗಿಸಬೇಕಿದೆ

ಕ್ಷೇತ್ರದ ಬೆಸ್ಟ್‌ ಏನು?
ಬೀದರನಲ್ಲಿ 750 ಹಾಸಿಗೆಯ ಸುಸಜ್ಜಿತ ನೂತನ ಬ್ರಿಮ್ಸ್‌ ಆಸ್ಪತ್ರೆ ಹಾಗೂ ತಾಯಿ- ಮಕ್ಕಳ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಲಾಗಿದೆ. ಅಂತರ್ಜಲಮಟ್ಟ ಸುಧಾರಣೆಗಾಗಿ ಕ್ಷೇತ್ರದ ಹಲವು ಕೆರೆ ಮತ್ತು ಪುರಾತನ ಬಾವಿಗಳಲ್ಲಿನ ಹೂಳೆತ್ತಲಾಗಿದೆ. ನಿರಂತರ ಕುಡಿಯುವ ನೀರು 24ಗಿ7 ಕಾಮಗಾರಿ ಮುಗಿದಿದ್ದು, ಮನೆಗಳಿಗೆ ನಲ್ಲಿ ಮೂಲಕ ನೀರು ಪೂರೈಕೆ ಕ್ರಮ ಬದ್ದವಾಗಬೇಕಿದೆ. ಹಸಿವು ಮುಕ್ತ ಕರ್ನಾಟಕದ ಭಾಗವಾಗಿ ರಾಜ್ಯ ಸರ್ಕಾರ ನಗರದಲ್ಲಿ ಆರಂಭಿಸಿರುವ ಇಂದಿರಾ ಕ್ಯಾಂಟೀನ್‌ಗಳಿಗೆ ಭಾರಿ ಪ್ರತಿಕ್ರಿಯೆ
ವ್ಯಕ್ತವಾಗಿದೆ. 

ಕ್ಷೇತ್ರದ ದೊಡ್ಡ ಸಮಸ್ಯೆ?
ಜಿಲ್ಲೆಯ ಪ್ರತಿ ಕ್ಷೇತ್ರಗಳಲ್ಲಿರುವ ಮಿನಿ ವಿಧಾನಸೌಧ ಬೀದರನಲ್ಲಿಯೇ ಇಲ್ಲ. ಅಷ್ಟೇ ಅಲ್ಲ ಜಿಲ್ಲಾ ಕಚೇರಿಗಳ ಸಂಕೀರ್ಣ ಯೋಜನೆ ಇನ್ನೂ ನನೆಗುದಿಗೆ ಬಿದ್ದಿದೆ. ನಾಗರಿಕ ವಿಮಾನಯಾನ ಸೌಲಭ್ಯಕ್ಕೆ ಬೀದರ ಉಡಾನ್‌ ಯೋಜನೆಯಡಿ ಸೇರಿದ್ದು, ಹಾರಾಟಕ್ಕೆ ಅಡ್ಡಿಯಾಗಿರುವ ತಾಂತ್ರಿಕ ಕಾರಣಗಳನ್ನು ರಾಜ್ಯ ಸರ್ಕಾರದಿಂದ ಪರಿಹರಿಸಿಕೊಳ್ಳಲು ಸಾಧ್ಯವಾಗಿಲ್ಲ. ಯುಜಿಡಿ ಕಾಮಗಾರಿಯಿಂದ ನಗರದಲ್ಲಿ ರಸ್ತೆಗಳು ಹದಗೆಟ್ಟಿದ್ದು, ಬಹುತೇಕ ಭಾಗದಲ್ಲಿ ದುರಸ್ತಿ ಭಾಗ್ಯ ಆಗಿಲ್ಲ. ಇನ್ನು ಗ್ರಾಮೀಣ ಪ್ರದೇಶದಲ್ಲಿ ಸಂಪರ್ಕ ರಸ್ತೆಗಳು ಗುಂಡಿಗಳಾಗಿ ಮಾರ್ಪಟ್ಟಿದ್ದು, ಚರಂಡಿ- ನೀರಿನ ಸಮಸ್ಯೆ ಅಧಿಕವಾಗಿದೆ. ಮುಖ್ಯವಾಗಿ ಉದ್ಯೋಗ ಕೊಡುವಂಥ ಕೈಗಾರಿಕೆಗಳ
ಕೊರತೆ ಇದೆ.

ಶಾಸಕರು ಏನಂತಾರೆ?
ಉಪ ಚುನಾವಣೆಯಲ್ಲಿ ಗೆದ್ದು ಕಡಿಮೆ ಅವಧಿಯಲ್ಲೇ ಕ್ಷೇತ್ರದಲ್ಲಿ ಜನಪರ ಕೆಲಸ ಮಾಡಿರುವ ತೃಪ್ತಿ ಇದೆ. ಮುಖ್ಯಮಂತ್ರಿಗಳು
ಅತಿ ಹೆಚ್ಚು ಅನುದಾನ ನೀಡುವ ಮೂಲಕ ಬೀದರ ಕ್ಷೇತ್ರದ ಅಭಿವೃದ್ಧಿಗೆ ನೆರವಾಗಿದ್ದಾರೆ. ಸರ್ಕಾರದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿವೆ. ಇನ್ನೂ ಅನೇಕ ಕಾಮಗಾರಿಗಳು ಪ್ರಗತಿಯಲ್ಲಿವೆ. ಜಿಲ್ಲಾ ಆಸ್ಪತ್ರೆ ಲೋಕಾರ್ಪಣೆಗೊಂಡಿದೆ. 24ಗಿ7 ಮತ್ತು ಯುಜಿಡಿ ಕಾಮಗಾರಿ ಪ್ರಗತಿಯಲ್ಲಿದೆ. ಹಸಿವು ಮುಕ್ತ ಕರ್ನಾಟಕದ ಭಾಗವಾಗಿ ರಾಜ್ಯ ಸರ್ಕಾರ ನಗರದ ಮೂರು ಭಾಗದಲ್ಲಿ ಆರಂಭಿಸಿರುವ ಇಂದಿರಾ ಕ್ಯಾಂಟೀನ್‌ಗಳಿಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರ ಸೇರಿ ವಿವಿಧೆಡೆ ರಸ್ತೆಗಳ ನಿರ್ಮಾಣ ಪ್ರಗತಿಯಲ್ಲಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದ್ದು, ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ.
 ಶಾಸಕ ರಹೀಮ್‌ ಖಾನ್‌

ಕ್ಷೇತ್ರ ಮಹಿಮೆ 
ಸ್ಮಾರಕಗಳ ಖಣಿ ಎಂದೆನಿಸಿಕೊಂಡಿರುವ ಬೀದರ ಅದ್ಭುತ ಪ್ರವಾಸಿ ತಾಣ. ಗವಾನ್‌ ಮದರಸಾ, ಬರೀದಶಾಹಿ ಗುಂಬಜ್‌ಗಳು, ಚೌಬಾರಾ, ಚೌಕಂಡಿ, ಅಷ್ಟೂರಿನ ಪಾಳು ಬಿದ್ದ ಗುಂಬಜ್‌ಗಳು, ಗುರುದ್ವಾರ, ನರಸಿಂಹ ಮಂದಿರ, ಪಾಪನಾಶಿನಿ ಮಂದಿರ ಹೊಂದಿವೆ. ಮುಖ್ಯವಾಗಿ ರೇಕುಳಗಿಯ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ ರಾಜಕಾರಣಿ ಮತ್ತು ಉದ್ಯಮಿಗಳ ಪಾಲಿಗೆ ಆರಾಧ್ಯ ದೇವರು.
ರಾಷ್ಟ್ರಪತಿ, ಕೇಂದ್ರ ಸಚಿವರು, ರಾಜ್ಯಪಾಲರು ಇಲ್ಲಿಗೆ ಭೇಟಿ ಕೊಡುತ್ತಾರೆ. 

ಯುಜಿಡಿ ಕಾಮಗಾರಿಯಿಂದ ನಗರದಲ್ಲೆಡೆ ರಸ್ತೆಗಳು ಸಂಪೂರ್ಣ ಹದಗೆಟ್ಟು ಧೂಳು ಆವರಿಸಿವೆ. ಕೆಲವು ಕಡೆಗಳಲ್ಲಿ ರಸ್ತೆ ನಿರ್ಮಾಣ  ಮಾಡಲಾಗಿದ್ದು, ಇತರ ಕಡೆಗಳಲ್ಲಿ ನನೆಗುದಿಗೆ  ಬಿದ್ದಿವೆ. 24*7 ಯೋಜನೆ ಮುಗಿದರೂ ನೀರು ಪೂರೈಕೆ ಆರಂಭವಾಗಿಲ್ಲ. ನೆಹರು ಕ್ರೀಡಾಂಗಣ ಕೆಲಸವೂ ನನೆಗುದಿಗೆ ಬಿದ್ದಿದೆ.  
ಯೇಸುದಾಸ

ಚರಂಡಿ ವ್ಯವಸ್ಥೆಗಳು ಸುಸ್ಥಿತಿಯಲ್ಲಿದ್ದರೂ ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದೆ. ಫುಟ್‌ಪಾತ್‌ಗಳು ಹಾಳಾಗಿ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಬಿಸಿಲು ತಾಪ ಹೆಚ್ಚಾಗಿದೆ. ಆದರೆ, ನಗರದ ಪ್ರಮುಖ ರಸ್ತೆಗಳಲ್ಲಿ ಬಸ್‌ ತಂಗುದಾಣಗಳ ವ್ಯವಸ್ಥೆ ಇಲ್ಲದಿರುವುದು ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.  
 ರಾಜು ಬೆಮಳಖೇಡಕರ್‌

ಕ್ಷೇತ್ರದಲ್ಲಿ ಹೆಚ್ಚಿನ ನೀರಿನ ಸಮಸ್ಯೆ ಇಲ್ಲ, ಕೆಲವೆಡೆ ರಸ್ತೆಗಳು ಹದಗೆಟ್ಟಿವೆ. ಜಿಲ್ಲಾ ಕಚೇರಿಗಳಿಗಾಗಿ ನಗರವೆಲ್ಲ ಅಲೆಯಬೇಕು. ಬಹುದಿನಗಳ ಬೇಡಿಕೆಯಾದ ಕಚೇರಿಗಳ ಸಂಕೀರ್ಣ ಮತ್ತು ಮಿನಿ ವಿಧಾನ ಸೌಧ ನಿರ್ಮಾಣ ಆಗಿಲ್ಲ. ನೂತನ ಜಿಲ್ಲಾ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಅಗತ್ಯ ಸೌಲಭ್ಯಗಳು ಸಿಗುತ್ತಿಲ್ಲ. 
ಮಹೇಶ ರಾಮಶೆಟ್ಟಿ

ಬೀದರ ಹೈದ್ರಾಬಾದ್‌ಗೆ ಸಮೀಪದಲ್ಲಿದ್ದರೂ ಕೈಗಾರಿಕೆಗಳ ಅಭಿವೃದ್ಧಿ ಆಗಿಲ್ಲ. ಉದ್ಯೋಗಕ್ಕಾಗಿ ಯುವಕರು ಮಹಾನಗರದತ್ತ ವಲಸೆ ಹೋಗುತ್ತಿದ್ದಾರೆ. ಕನ್ನಡಪರ ಚಟುವಟಿಕೆಗಳನ್ನು ನಡೆಸಲು ಜಿಲ್ಲಾ ಕನ್ನಡ ಭವನ ನಿರ್ಮಾಣವಾಗಿಲ್ಲ. ವಿಮಾನಗಳ ಹಾರಾಟ ಶುರುವಾಗದೇ ಕೋಟ್ಯಂತರ ವೆಚ್ಚದ ಏರ್‌ ಟರ್ಮಿನಲ್‌ ಹಾಳು ಕೊಂಪೆಯಾಗಿದೆ.
ಶಾಂತಮ್ಮ

Advertisement

Udayavani is now on Telegram. Click here to join our channel and stay updated with the latest news.

Next