Advertisement

ಗುಮ್ಮಟ ನಗರಿಯಲ್ಲಿ ರಾಜಕೀಯ ಪ್ರತಿಧ್ವನಿ

11:58 PM May 02, 2023 | Team Udayavani |

ವಿಜಯಪುರ: ರಾಜಶಾಹಿ ಆಡಳಿತ ವ್ಯವಸ್ಥೆ ಅಸ್ತಿತ್ವದಲ್ಲಿದ್ದಾಗ ಆದಿಲ್‌ ಶಾಹಿ ದೊರೆಗಳು ರಾಜಧಾನಿ ಮಾಡಿಕೊಂಡಿದ್ದ ವಿಜಯಪುರ ಮಹಾನಗರ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ವಿಧಾನಸಭೆ ಕ್ಷೇತ್ರವಾಗಿದೆ.

Advertisement

ರಾಜಕೀಯ ನಾಯಕರ ವಿರುದ್ಧ ಟೀಕೆ ಹಾಗೂ ತಮ್ಮ ವಿವಾದಿತ ಮಾತುಗಳಿಂದ ಪ್ರಚಾರದಲ್ಲಿರುವ ಯತ್ನಾಳ್‌, ಸದ್ಯ ವಿಜಯಪುರ ನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಮತ್ತೂಮ್ಮೆ ಕಮಲ ಚಿಹ್ನೆಯಿಂದಲೇ ಸ್ಪರ್ಧೆಗಿಳಿದಿದ್ದಾರೆ. ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಬಿಜೆಪಿಯಿಂದ ಉಚ್ಛಾಟಿತರಾಗಿ ಜೆಡಿಎಸ್‌ ಸೇರಿ 2013ರಲ್ಲಿ ವಿಜಯಪುರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ ಯತ್ನಾಳ್‌ ಮತ್ತೆ ಬಿಜೆಪಿ ಸೇರ್ಪಡೆಯಾಗಿದ್ದರು. ಆಗ ನಡೆದ ವಿಜಯಪುರ- ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ಪರಿಷತ್‌ ಚುನಾವಣೆಯಲ್ಲಿ ಸ್ಪರ್ಧೆಗೆ ಬಿಜೆಪಿ ಟಿಕೆಟ್‌ ತಪ್ಪುವಲ್ಲಿ ಪ್ರಹ್ಲಾದ ಜೋಶಿ, ಜಗದೀಶ್‌ ಶೆಟ್ಟರ್‌ ಕಾರಣ ಎಂದು ಟೀಕಾಪ್ರಹಾರ ಮಾಡಿದ್ದರಿಂದ ಮತ್ತೂಮ್ಮೆ ಬಿಜೆಪಿಯಿಂದ ಉಚ್ಚಾಟಿತರಾಗಿದ್ದರು. ಪಕ್ಷೇತರರಾಗಿ ಸ್ಪರ್ಧಿಸಿ ವಿಜಯ ಸಾಧಿಸಿದ ಬಳಿಕ 2018ರಲ್ಲಿ ಮತ್ತೆ ಬಿಜೆಪಿ ಸೇರ್ಪಡೆಯಾಗಿ ವಿಜಯಪುರ ಕ್ಷೇತ್ರದಿಂದ ಸ್ಪಧಿìಸಿ ಗೆದ್ದಿದ್ದಾರೆ. ಈಗ ಕಮಲ ಪಾಳಯದಿಂದ 3ನೇ ಬಾರಿಗೆ ಶಾಸಕರಾಗಲು 4ನೇ ಬಾರಿಗೆ ಸ್ಪರ್ಧೆಯಲ್ಲಿದ್ದಾರೆ.

ಕಣದಿಂದ ಹಿಂದೆ ಸರಿದ ಜೆಡಿಎಸ್‌: ಕಾಂಗ್ರೆಸ್‌ನಿಂದ ರಿಯಲ್‌ ಎಸ್ಟೇಟ್‌ ಉದ್ಯಮಿ ಅಬ್ದುಲ್‌ ಹಮೀದ್‌ ಮುಶ್ರೀಫ್‌ ಕಣದಲ್ಲಿದ್ದಾರೆ. 2018ರಲ್ಲಿ ಅಂದಿನ ಕಾಂಗ್ರೆಸ್‌ ಶಾಸಕ ಡಾ| ಎಂ.ಎಸ್‌. ಬಾಗವಾನ ಅವರನ್ನು ಮೀರಿ ಕೊನೆ ಗಳಿಗೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ತಂದಿದ್ದ ಮುಶ್ರೀಫ್‌ ಕೇವಲ 6,413 ಮತಗಳಿಂದ ಪರಾಭವಗೊಂಡಿದ್ದರು. ಈ ಬಾರಿಯೂ ಕಾಂಗ್ರೆಸ್‌ನಿಂದ 27 ಜನರು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರೂ 26 ಜನರನ್ನು ಮೀರಿ ಮತ್ತೂಮ್ಮೆ ಟಿಕೆಟ್‌ ತರುವಲ್ಲಿ ಯಶಸ್ವಿಯಾಗಿದ್ದಾರೆ. ಹಲವರ ಅಸಮಾಧಾನದ ಮಧ್ಯೆಯೂ ಸ್ಪರ್ಧೆಗೆ ಇಳಿದಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಬಂದೇನವಾಜ್‌ ಮಹಾಬರಿ ನಾಮಪತ್ರ ಹಿಂದೆಪಡೆಯುವ ಅವಧಿ ಮೀರಿದ ಬಳಿಕ ಏಕಾಏಕಿ ಕಣದಿಂದ ಹಿಂದೆ ಸರಿದಿದ್ದಾರೆ. ಅಲ್ಲದೇ ಕಾಂಗ್ರೆಸ್‌ ಅಭ್ಯರ್ಥಿ ಮುಶ್ರೀಫ್‌ಗೆ ಬೆಂಬಲ ಘೋಷಿಸಿದ್ದಾರೆ. ಇದರಿಂದ ಮುಸ್ಲಿಂ ಮತಗಳು ವಿಭಜನೆಯಾಗದೇ ಕಾಂಗ್ರೆಸ್‌ಗೆ ಲಾಭವಾಗಬಹುದು ಎಂದೇ ವಿಶ್ಲೇಷಿಸಲಾಗಿದೆ. ಆಪ್‌ ಅಭ್ಯರ್ಥಿಯೂ ಮುಸ್ಲಿಂ ಆಗಿದ್ದು, ಇವರು ಎಷ್ಟು ಮತ ಪಡೆಯಲಿದ್ದಾರೆ ಎಂಬುದನ್ನು ನೋಡಬೇಕಾದಿದೆ.

ಈ ತಂತ್ರಕ್ಕೆ ಪ್ರತಿಯಾಗಿ ಯತ್ನಾಳ್‌, ಹಿಂದೂ ಮತಗಳ ಕ್ರೊಡೀಕರಣಕ್ಕೆ ಮುಂದಾಗಿದ್ದಾರೆ. ಬಣಜಿಗ ಸಮುದಾಯದ ಮತಗಳನ್ನು ಒಗ್ಗೂಡಿಸುವಲ್ಲಿ ಯತ್ನಿಸುತ್ತಿದ್ದಾರೆ. ಪಂಚಮಸಾಲಿ ಸಹಿತ ವೀರಶೈವ ಲಿಂಗಾಯತ ಸೇರಿದಂತೆ ಕಡಿಮೆ ಜನಸಂಖ್ಯೆ ಇರುವ ಶೋಷಿತ ಸಮುದಾಯಗಳ ಮೀಸಲಾತಿಗೆ ಧ್ವನಿ ಎತ್ತಿದ್ದು, ತಮ್ಮ ಪರ ಈ ಸಮುದಾಯಗಳ ಮತಗಳು ಒಗ್ಗೂಡುವ ನಿರೀಕ್ಷೆಯಲ್ಲಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ನೇರ ಹಣಾಹಣಿ ಇದ್ದು, ಆಮ್‌ ಆದ್ಮಿ, ಬಿಎಸ್ಪಿ ಅಭ್ಯರ್ಥಿಗಳು ಸಹಿತ ಇತರರು ಸೆಣಸಾಟ ಆರಂಭಿಸಿದ್ದಾರೆ.

Advertisement

~ ಜಿ.ಎಸ್‌.ಕಮತರ

 

Advertisement

Udayavani is now on Telegram. Click here to join our channel and stay updated with the latest news.

Next