Advertisement

67,165 ಮಕ್ಕಳಿಗೆ ಪೋಲಿಯೋ ಲಸಿಕೆ ಗುರಿ

08:44 PM Jan 13, 2020 | Lakshmi GovindaRaj |

ಚಾಮರಾಜನಗರ: ಇದೇ ತಿಂಗಳ 19ರಂದು ನಡೆಯಲಿರುವ ಪಲ್ಸ್‌ ಪೋಲಿಯೋ ಕಾರ್ಯಕ್ರಮದಲ್ಲಿ ಜಿಲ್ಲೆಯ ಒಟ್ಟು 67165 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಲಸಿಕಾ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಜ.19ರಂದು ಪಲ್ಸ್‌ ಪೋಲಿಯೊ ಕಾರ್ಯಕ್ರಮದಡಿ ಚಾಮರಾಜನಗರ ತಾಲೂಕಿನ 22869, ಗುಂಡ್ಲುಪೇಟೆ ತಾಲೂಕಿನ 13625, ಕೊಳ್ಳೇಗಾಲ ತಾಲೂಕಿನ 24433 ಹಾಗೂ ಯಳಂದೂರು ತಾಲೂಕಿನ 6238 ಸೇರಿದಂತೆ ಒಟ್ಟು 67165 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.

Advertisement

ಗ್ರಾಮೀಣ ಪ್ರದೇಶದಲ್ಲಿ 530 ಬೂತ್‌: ಈ ಕಾರ್ಯಕ್ರಮಕ್ಕೆ 622 ಪಲ್ಸ್‌ ಪೋಲಿಯೋ ಬೂತ್‌ಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ 92 ಬೂತ್‌ಗಳು ನಗರ ಪ್ರದೇಶದಲ್ಲಿ ಹಾಗೂ 530 ಬೂತ್‌ಗಳನ್ನು ಗ್ರಾಮೀಣ ಪ್ರದೇಶದಲ್ಲಿ ತೆರೆಯಲಾಗುತ್ತಿದೆ. ತಾಲೂಕುವಾರು ಬೂತ್‌ಗಳ ಸಂಖ್ಯೆಯನ್ನು ಪರಿಗಣಿಸುವುದಾದರೆ ಚಾಮರಾಜನಗರದಲ್ಲಿ 194, ಗುಂಡ್ಲುಪೇಟೆಯಲ್ಲಿ 158, ಕೊಳ್ಳೇಗಾಲದಲ್ಲಿ 223 ಹಾಗೂ ಯಳಂದೂರು ತಾಲ್ಲೂಕಿನಲ್ಲಿ 47 ಬೂತ್‌ಗಳನ್ನು ತೆರೆಯಲಾಗುತ್ತಿದೆ.

130 ಮೇಲ್ವಿಚಾರಕರು ನೇಮಕ: ಲಸಿಕಾ ಕಾರ್ಯಕ್ರಮದ ವ್ಯವಸ್ಥಿತ ಜಾರಿಗಾಗಿ 130 ಮೇಲ್ವಿಚಾರಕರನ್ನು ಹಾಗೂ 2488 ಲಸಿಕಾ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ. ಈ ಬೂತ್‌ಗಳ ಜತೆಗೆ 20 ಟ್ರಾನ್ಸಿಟ್‌ (ಸಂಚಾರಿ) ಬೂತ್‌ಗಳು ಹಾಗೂ 10 ಮೊಬೈಲ್‌ ಬೂತ್‌ಗಳು ಸಹ ಕಾರ್ಯನಿರ್ವಹಿಸಲಿವೆ.

ಮನೆ-ಮನೆ ಭೇಟಿ ಕಾರ್ಯಕ್ರಮ: ಜ.19ರ ಲಸಿಕಾ ಕಾರ್ಯಕ್ರಮದ ನಂತರ, ಪ್ರತಿ ಮಗುವು ಲಸಿಕೆಯ ಪ್ರಯೋಜನ ಪಡೆದಿರುವ ಬಗ್ಗೆ ಪರಿಶೀಲಿಸಲು ಮನೆ-ಮನೆ ಭೇಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅದರಂತೆ ಲಸಿಕಾ ದಿನದ ನಂತರ ಮೂರು ದಿನಗಳ ಕಾಲ ನಗರ ಪ್ರದೇಶದಲ್ಲೂ ಹಾಗೂ ಎರಡು ದಿನಗಳ ಕಾಲ ಗ್ರಾಮೀಣ ಪ್ರದೇಶಗಳಲ್ಲೂ ಲಸಿಕಾ ಕಾರ್ಯಕರ್ತರು ಮನೆ-ಮನೆಗೆ ಭೇಟಿ ನೀಡಿ ವಿವರ ಪಡೆಯಲಿದ್ದಾರೆ. ಅದಕ್ಕಾಗಿ ಪಟ್ಟಣದಲ್ಲಿ 37256 ಹಾಗೂ ಗ್ರಾಮಾಂತರಗಳಲ್ಲಿ 198068 ಮನೆಗಳು ಸೇರಿದಂತೆ ಒಟ್ಟು 255130 ಮನೆಗಳಿಗೆ ಭೇಟಿ ನೀಡಲು ಯೋಜನೆ ರೂಪಿಸಲಾಗಿದೆ.

ವಲಸಿಗರಿಗೆ ಆದ್ಯತೆ: ಲಸಿಕಾ ಕಾರ್ಯಕ್ರಮವನ್ನು ಶೇ.100ರಷ್ಟು ಅನುಷ್ಠಾನಗೊಳಿಸಲು, ವಲಸಿಗರು ನೆಲೆಸಿರುವ ಸ್ಥಳಗಳು, ಬುಡಕಟ್ಟು ಹಾಡಿಗಳು ಮುಂತಾದ ಸೂಕ್ಷ್ಮ ವಲಯಗಳನ್ನು ಗುರುತಿಸಲಾಗಿದೆ. ಇಲ್ಲಿನ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವಲಸಿಗರಾದ ಕಾರಣ, ಸಂಚಾರ ಹೆಚ್ಚು ಮಾಡುವುದರಿಂದ ಯಾವುದೇ ಮಗುವು ಹೊರಗುಳಿಯದಂತೆ ನೋಡಿಕೊಳ್ಳಲು ಉದ್ದೇಶಿಸಲಾಗಿದೆ.

Advertisement

ಕಾಡಂಚಿನ ಗ್ರಾಮಗಳು, ಬುಡಕಟ್ಟು ಹಾಡಿಗಳನ್ನು ಬಿಡದೇ, ಎಲ್ಲೆಡೆ ಲಸಿಕಾ ಕಾರ್ಯಕ್ರಮವನ್ನು ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪೋಲಿಯೋ ಸಮಸ್ಯೆಯನ್ನು ತಡೆಯುವ ನಿಟ್ಟಿನಲ್ಲಿ 1995ರಿಂದ ಭಾರತದಲ್ಲಿ ಪ್ರತಿ ವರ್ಷ ಲಸಿಕಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪೋಲಿಯೊ ವೈರಾಣು ದೇಹ ಸೇರದಂತೆ ನೋಡಿಕೊಳ್ಳುವ ಲಸಿಕೆಯನ್ನು 5 ವರ್ಷದವರೆಗಿನ ಎಲ್ಲಾ ಮಕ್ಕಳಿಗೂ ನೀಡಲಾಗುತ್ತಿದೆ. ಸದ್ಯ ಭಾರತ ಪೋಲಿಯೊ ಮುಕ್ತ ದೇಶವಾಗಿದೆ.

ಪ್ರತಿ ವರ್ಷ ದೇಶದ ಎಲ್ಲಾ ರಾಜ್ಯಗಳ, ಪ್ರತಿ ಗ್ರಾಮಗಳಲ್ಲೂ ಲಸಿಕಾ ಅಭಿಯಾನವನ್ನು ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಲಸಿಕೆಯ ಮಹತ್ವದ ಕುರಿತು ತಿಳಿಸಿ, ಪ್ರತಿ ಮಗುವಿಗೂ ಲಸಿಕೆ ದೊರೆಯುವಂತೆ ಮಾಡಲಾಗಿದೆ. ಅದರಂತೆ ಜ.19ರನ್ನು ರಾಷ್ಟ್ರೀಯ ರೋಗನಿರೋಧಕ ದಿನವಾಗಿ ಗುರುತಿಸಿ, ಪಲ್ಸ್‌ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಸಮನ್ವಯದಿಂದ ಕರ್ತವ್ಯ ನಿರ್ವಹಿಸಿ: ಡೀಸಿ ಕಾವೇರಿ
ಚಾಮರಾಜನಗರ: ಪಲ್ಸ್‌ ಪೋಲಿಯೋ ಕಾರ್ಯಕ್ರಮಕ್ಕೆ ವಿವಿಧ ಇಲಾಖೆಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕಾವೇರಿ ಸೂಚಿಸಿದ್ದಾರೆ. ಪೊಲೀಸ್‌ ಇಲಾಖೆ ಸರ್ಕಾರಿ, ಖಾಸಗಿ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಇತರ ಜನನಿಬಿಡ ಪ್ರದೇಶಗಳಲ್ಲಿ ಸಂಚಾರಿ ಬೂತ್‌ಗಳ ಮೂಲಕ ಪೋಷಕರೊಂದಿಗೆ ಪ್ರಯಾಣ ಮಾಡುವ ವ‌ುಕ್ಕಳಿಗೆ ಪೋಲಿಯೊ ಲಸಿಕೆ ಹಾಕಲು ಸಿಬ್ಬಂದಿ ನಿಯೋಜಿಸಬೇಕು. ಈ ಮೂಲಕ ಯಾವುದೇ ಮಗು, ಯಾವುದೇ ಕಾರಣದಿಂದ ಲಸಿಕೆಯಿಂದ ಹೊರಗುಳಿಯದಂತೆ ಕ್ರಮವಹಿಸಬೇಕು ಎಂದು ತಿಳಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಲಸಿಕಾ ಕಾರ್ಯಕ್ರಮಕ್ಕೆ ಅಗತ್ಯ ಮಾನವ ಸಂಪನ್ಮೂಲವನ್ನು ಒದಗಿಸಿ ಹಾಗೂ ಅಂಗನವಾಡಿಗಳಲ್ಲಿ ಲಸಿಕಾ ಕೇಂದ್ರ ತೆರೆಯಲು ಸ್ಥಳಾವಕಾಶ ಕಲ್ಪಿಸಿಕೊಡಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಶಾಲೆಗಳಲ್ಲಿ ಬೂತ್‌ ತೆರೆಯಲು ಅನುವು ಮಾಡಿಕೊಡಬೇಕು. ಲಸಿಕಾ ಕಾರ್ಯಕ್ರಮ ಮಹತ್ವ ಪೂರ್ಣವಾಗಿರುವುದರಿಂದ ಯಾವುದೇ ಅಡ್ಡಿ ಉಂಟಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಸೆಸ್ಕ್ ಜ.17ರಿಂದ 22 ವರೆಗೆ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನಿರಂತರ 24 ಗಂಟೆಗಳ ವಿದ್ಯುತ್‌ ಸೌಲಭ್ಯವನ್ನು ಒದಗಿಸಬೇಕು.

ಮುಖ್ಯವಾಗಿ ವಾಹನಗಳ ಅವಶ್ಯಕತೆ ಹೆಚ್ಚಿರುವುದರಿಂದ ಪ್ರಾದೇಶಿಕ ಸಾರಿಗೆ ಇಲಾಖೆ, ಕಾರ್ಯಕ್ರಮಕ್ಕೆ ಅಧಿಗ್ರಹಣ ಆದೇಶ ಹೊಂದಿರುವ ಸರ್ಕಾರಿ ವಾಹನಗಳನ್ನು ಸ್ವಾಧೀನಕ್ಕೆ ಪಡೆದು, ಆಯಾಯ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಗೆ ಜ.18ರೊಳಗೆ ತಪ್ಪದೇ ನಿಯೋಜಿಸಬೇಕು. ಪಲ್ಸ್‌ ಪೋಲಿಯೋ ಸಂಪೂರ್ಣ ಯಶಸ್ವಿಗೊಳಿಸುವ ಉದ್ದೇಶದಿಂದ, ಕಾಡಂಚಿನ ಗ್ರಾಮಗಳು ಹಾಗೂ ದುರ್ಗಮ ಪ್ರದೇಶಗಳಲ್ಲಿ ಪಲ್ಸ್‌ ಪೋಲಿಯೋ ಕಾರ್ಯಕ್ರಮಕ್ಕೆ ನಿಯೋಜಿಸಿರುವ ವಾಹನಗಳ ಮುಕ್ತ ಓಡಾಟಕ್ಕೆ ಅರಣ್ಯ ಇಲಾಖೆ ಅವಕಾಶ ನೀಡಬೇಕು ಎಂದು ಸೂಚಿಸಿದ್ದಾರೆ.

ಪೌರಾಡಳಿತ ಇಲಾಖೆ, ಸ್ವಯಂ-ಸೇವಾ ಸಂಸ್ಥೆಗಳು, ಸರ್ಕಾರಿ ಹಾಗೂ ಖಾಸಗಿ ನರ್ಸಿಂಗ್‌ ಕಾಲೇಜುಗಳು ಪಲ್ಸ್‌ ಪೋಲಿಯೋ ಕಾರ್ಯಕ್ರಮಕ್ಕೆ ಸಹಕಾರ ನೀಡಬೇಕು. ಎಲ್ಲೆಡೆ ಪ್ರಚಾರ ನೀಡುವ ಜತೆಗೆ ಅಗತ್ಯ ಸ್ವಯಂ- ಸೇವಕರನ್ನು, ನರ್ಸಿಂಗ್‌ ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ನಿಯೋಜಿಸಬೇಕು. ಪುರಸಭಾ, ಪಟ್ಟಣ ಪಂಚಾಯ್ತಿ, ನಗರಸಭೆ, ಗ್ರಾಮ ಪಂಚಾಯ್ತಿಗಳಲ್ಲಿ ತೆರೆಯಲಾಗುವ ಲಸಿಕಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಊಟೋಪಚಾರ ವ್ಯವಸ್ಥೆಯನ್ನು ಸಂಬಂಧಪಟ್ಟ ಇಲಾಖೆ ಸೂಕ್ತ ರೀತಿಯಲ್ಲಿ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

* ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next