ಹೊಸದಿಲ್ಲಿ: ಲೋಕಸಭೆ ಚುನಾವಣೆ ದಿನಾಂಕ ಘೋಷ ಣೆಗೆ ಕೆಲವೇ ಗಂಟೆ ಗಳ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ನಾಗರಿಕರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಪತ್ರದಲ್ಲಿ ತಮ್ಮ ಸರಕಾರದ 10 ವರ್ಷಗಳ ಸಾಧನೆಗಳ ಬಗ್ಗೆ ತಿಳಿಸಿದ್ದಾರೆ. ಜತೆಗೆ ವಿಕಸಿತ ಭಾರತ ಅಥವಾ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕಾಗಿ ಸಲಹೆಗಳನ್ನು ಯಾಚಿಸಿದ್ದಾರೆ. ಈ ವೇಳೆ ದೇಶದ ಜನರನ್ನು ಅವರು “ಪ್ರಿಯ ಕುಟುಂಬ ಪರಿವಾರದವರೇ’ ಎಂದು ಸಂಬೋಧಿಸಿದ್ದಾರೆ.
“ದೇಶದ ಬಡವರು, ರೈತರು, ಯುವಕರು ಮತ್ತು ಮಹಿಳೆಯರ ಜೀವನ ಗುಣಮಟ್ಟ ಸುಧಾರಿಸಲು ನಮ್ಮ ಸರಕಾರ ಬದ್ಧತೆಯಿಂದ ಕೆಲಸ ಮಾಡಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ಮನೆಗಳ ನಿರ್ಮಾಣ, ಪ್ರತಿಯೊಬ್ಬರಿಗೆ ವಿದ್ಯುತ್, ನೀರು ಮತ್ತು ಎಲ್ಪಿಜಿ ಸಂಪರ್ಕ, ಆಯುಷ್ಮಾನ್ ಭಾರತ್ ಮೂಲಕ ಉಚಿತ ಚಿಕಿತ್ಸೆ, ರೈತರಿಗೆ ಸಹಾಯಧನ, ಮಾತೃ ವಂದನ ಯೋಜನೆ ಸೇರಿದಂತೆ ನಾಗರಿಕರ ಏಳಿಗೆಗಾಗಿ ಹಲವು ಯೋಜನೆಗಳನ್ನು ಸರಕಾರ ಹಮ್ಮಿಕೊಂಡಿದೆ’ ಎಂದು ಹೇಳಿದ್ದಾರೆ.
ನಿಮ್ಮ ನಂಬಿಕೆಯಿಂದ ಐತಿಹಾಸಿಕ ನಿರ್ಧಾರ
ಜಿಎಸ್ಟಿ ಅನುಷ್ಠಾನ, 370ನೇ ವಿಧಿ ರದ್ದು, ತ್ರಿವಳಿ ತಲಾಖ್ ನಿಷೇಧ, ನಾರಿ ಶಕ್ತಿ ವಂದನ ಕಾಯ್ದೆ ಜಾರಿ, ನೂತನ ಸಂಸತ್ ಭವನ ಉದ್ಘಾ ಟನೆ, ಭಯೋತ್ಪಾದನೆ ವಿರುದ್ಧ ಕಠಿನ ಕ್ರಮ ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮೋದಿ ಪತ್ರದಲ್ಲಿ ಉಲ್ಲೇಖೀಸಿದ್ದಾರೆ.
ಬಿಜೆಪಿ ಪರಿವಾರ’ ಅಸ್ತ್ರ: ಮೋದಿ ಕೀ ಪರಿವಾರ್’ ವೀಡಿಯೋ ಬಿಡುಗಡೆ
ಲೋಕಸಭೆ ಚುನಾವಣೆ ಘೋಷ ಣೆ ದಿನವೇ “ಮೈ ಮೋದಿ ಕೀ ಪರಿವಾರ್’ ಎಂಬ ವೀಡಿಯೋವನ್ನು ಪ್ರಧಾನಿ ಮೋದಿ ಬಿಡುಗಡೆಗೊಳಿಸಿದ್ದಾರೆ. ವೀಡಿಯೋದಲ್ಲಿ ರೈತರಿಂದ ಹಿಡಿದು ಬಡವರವರೆಗೆ ಕೇಂದ್ರ ಸರಕಾರದ ಯೋಜನೆಗಳ ಫಲಾನುಭವಿಗಳನ್ನು ತೋರಿಸಲಾಗಿದ್ದು, ಅವರೆಲ್ಲರೂ ಪ್ರಧಾನಿಗೆ ಬೆಂಬಲ ಸೂಚಿಸಿ “ನಾವು ಮೋದಿಯ ಪರಿವಾರ’ ಎಂದು ಹೇಳಿಕೊಂಡಿದ್ದಾರೆ. ಎಕ್ಸ್ನಲ್ಲಿ ವೀಡಿಯೋ ಶೇರ್ ಮಾಡಿರುವ ಮೋದಿ, “ಮೇರೆ ಭಾರತ್, ಮೇರೆ ಪರಿವಾರ್'(ನನ್ನ ದೇಶ, ನನ್ನ ಪರಿ ವಾ ರ) ಎಂದು ಬರೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ವಿಪಕ್ಷ ನಾಯಕ ಲಾಲು ಪ್ರಸಾದ್ ಯಾದವ್ ಅವರು “ಮೋದಿಗೆ ಕುಟುಂಬವಿಲ್ಲ’ ಎಂದು ಗೇಲಿ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಪಿಎಂ, ದೇಶದ ಜನರೇ ತನ್ನ ಕುಟುಂಬಸ್ಥರು ಎಂದು ಹೇಳಿಕೊಂಡಿದ್ದರು. ಆ ಬೆನ್ನಲ್ಲೇ ಈ ವೀಡಿಯೋ ಕೂಡ ಬಿಡುಗಡೆಯಾಗಿದ್ದು, ಹಲವು ಬಿಜೆಪಿ ನಾಯಕರು ಕೂಡ ಜಾಲತಾಣಗಳಲ್ಲಿ ವೀಡಿಯೋ ಶೇರ್ ಮಾಡಿಕೊಂಡಿದ್ದಾರೆ.