Advertisement

ಬದುಕು ರಣರಂಗವಾಗದಿರಲು ಚದುರಂಗ ಆಡಿ

05:58 AM Jan 21, 2019 | |

ದಾವಣಗೆರೆ: ಬದುಕು ರಣರಂಗ ಆಗದಿರಲು ಚದುರಂಗ ಆಡಬೇಕು ಎಂದು ಚಿತ್ರದುರ್ಗ ಮುರುಘಾಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಜಿಲ್ಲಾ ಗುರುಭವನದಲ್ಲಿ ಭಾನುವಾರ ಶ್ರೀ ಶಿವಯೋಗಾಶ್ರಮ ಟ್ರಸ್ಟ್‌ (ರಿ), ಜೈನ್‌ ಸೋಶಿಯಲ್‌ ಗ್ರೂಪ್‌, ರೋಟರಿ ಕ್ಲಬ್‌, ಜಿಲ್ಲಾ ಚೆಸ್‌ ಕ್ಲಬ್‌ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಜಯದೇವ ಟ್ರೋಫಿ ರಾಜ್ಯಮಟ್ಟದ ಚದುರಂಗ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ಬೌದ್ಧಿಕ ಜ್ಞಾನದ ಆಟ ಚದುರಂಗವಾಗಿದೆ. ಶರೀರಕ್ಕಿಂತ ಮೆದುಳಿನ ಕೆಲಸ ಈ ಆಟದಲ್ಲಿ ಹೆಚ್ಚಿದೆ. ಈ ಆಟದಿಂದ ಬುದ್ಧಿ ಚುರುಕಾಗುತ್ತದೆ. ಈ ಕ್ರೀಡೆಯಲ್ಲಿ ಆಸಕ್ತ ಮಕ್ಕಳಿಗೆ ಪೋಷಕರು ಪ್ರೋತ್ಸಾಹ ನೀಡಬೇಕಿದೆ. ಮಕ್ಕಳು ಕೂಡ ಹೆಚ್ಚೆಚ್ಚು ಚದುರಂಗ ಆಟದಲ್ಲಿ ನೈಪುಣ್ಯತೆ ತೋರಿ ಹೆಚ್ಚು ಅಂಕ ಪಡೆದು ಸಾಧನೆ ಮಾಡಿ ಎಂದು ಸಲಹೆ ನೀಡಿದರು.

ಮಾನವನ ಬದುಕು ದಿನದಿಂದ ದಿನಕ್ಕೆ ಯುದ್ಧರಂಗ, ರಣರಂಗವಾಗುತ್ತಿದೆ. ಜೀವನದಲ್ಲಿ ಯಕಶ್ಚಿತ್‌ ಕಾರಣಕ್ಕೆ ಮನುಷ್ಯರ ನಡುವೆ ಮಾರಾಮಾರಿ, ಜಗಳ, ಹಣದ ಆಸೆಗಾಗಿ ಹಪಾಹಪಿಯಾಗುವಂತ ಸ್ಥಿತಿ ನಿರ್ಮಾಣವಾಗುತ್ತಿದೆ. ಮನುಷ್ಯ ಹಣದ ಗಳಿಕೆಯ ದುರಾಸೆಯಲ್ಲಿ ನಿರಾಸೆ, ದುಃಖ ಅನುಭವಿಸುತ್ತಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದ ಶ್ರೀಗಳು, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಸಮಚಿತ್ತವಾಗಿ ಜೀವನ ನಡೆಸಬಹುದು ಎಂದು ಹೇಳಿದರು.

ಮಹಾನಗರಪಾಲಿಕೆ ಸದಸ್ಯ ದಿನೇಶ್‌ ಕೆ.ಶೆಟ್ಟಿ ಮಾತನಾಡಿ, ಜೀವನದಲ್ಲಿ ಕಷ್ಟ-ಸುಖ ಬರುತ್ತವೆ. ಅದಕ್ಕೆ ಖನ್ನತೆಗೆ ಒಳಗಾಗಬಾರದು. ಧೈರ್ಯದಿಂದ ಸಮಸ್ಯೆಗಳನ್ನು ಎದುರಿಸಬೇಕು. ಚದುರಂಗ ಆಟದಿಂದ ಏಕಾಗ್ರತೆ, ಸ್ಮರಣಶಕ್ತಿ ವೃದ್ಧಿಯಾಗುತ್ತದೆ. ಹಾಗಾಗಿ ಚದುರಂಗ ಸ್ಪರ್ಧಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದ ಚೆಸ್‌ ಕ್ರೀಡೆಗಳಲ್ಲಿ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತರಲು ಮುಂದಾಗಿ ಎಂದರು.

ಇದೇ ವೇಳೆ 2015ರಲ್ಲಿ ನ್ಯಾಷನಲ್‌ ಅಮೆಚ್ಯೂರ್‌ ಚೆಸ್‌ನಲ್ಲಿ ಚಾಂಪಿಯನ್‌ ಹಾಗೂ 2016ರಲ್ಲಿ ಯೂರೋಪ್‌, ಗ್ರೀಸ್‌ ದೇಶಗಳಲ್ಲಿ ನಡೆದ ನ್ಯಾಷನಲ್‌ ಅಮೆಚ್ಯೂರ್‌ ಚೆಸ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದ ಮೈಸೂರಿನ ಚದುರಂಗ ತರಬೇತುದಾರ ಎಂ.ಪಿ. ಅಜಿತ್‌ ಅವರನ್ನು ಸನ್ಮಾನಿಸಲಾಯಿತು. ಜಿಲ್ಲೆಯ ವಿವಿಧ ಭಾಗಗಗಳಿಂದ 250ಕ್ಕೂ ಹೆಚ್ಚು ಚೆಸ್‌ ಸ್ಪರ್ಧಿಗಳು ಭಾಗವಹಿಸಿದ್ದರು. ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಚೆಸ್‌ ಕ್ಲಬ್‌ ಉಪಾಧ್ಯಕ್ಷ ಟಿ. ಯುವರಾಜ್‌, ಜಗದೀಶ್‌ ಬೇತೂರು, ಕರಿಬಸಪ್ಪ ಉಪಸ್ಥಿತರಿದ್ದರು.

Advertisement

ಮನೆಯತ್ತ ಮರಳಿದ ಚೆಸ್‌ ಸ್ಪರ್ಧಿಗಳು

ನಗರದ ನಿಟುವಳ್ಳಿ ಸರ್ಕಾರಿ ಪ್ರೌಢಶಾಲೆಯಿಂದ ಮೂವರು ವಿದ್ಯಾರ್ಥಿಗಳನ್ನು ಚೆಸ್‌ ಸ್ಪರ್ಧೆಗೆ ಕರೆದುಕೊಂಡು ಬಂದಿದ್ದೇನೆ. ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದ್ದರಿಂದ ಸ್ಪರ್ಧೆಯ ಪ್ರವೇಶ ಉಚಿತವೆಂದು ಭಾವಿಸಿದ್ದೆವು. ಆದರಿಲ್ಲಿ ಉಚಿತವಾಗಿ ಆಡಿಸಲಾಗುತ್ತಿಲ್ಲ. ಜ.28 ರಿಂದ ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆ ಪ್ರಾರಂಭವಾಗುತ್ತಿದ್ದು, ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಕೂಡ ಮಾಡಲಾಗುತ್ತಿತ್ತು. ಆದರೂ, ಕ್ರೀಡೆಗೆ ಉತ್ತೇಜನ ನೀಡಲು ಹಾಗೂ ಅವರ ಹಿಂದಿನ ಸಾಧನೆ ಗುರುತಿಸಿ, ತರಗತಿ ಬಿಡಿಸಿ ಕರೆದುಕೊಂಡು ಬಂದಿದ್ದು ವ್ಯರ್ಥವಾಗಿದೆ. ಹಾಗಾಗಿ ವಾಪಸ್‌ ಮನೆಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದೇನೆ ಎಂದು ಶಾಲೆಯ ಶಿಕ್ಷಕರು ನೋವು ತೋಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next