Advertisement

ಸಾಹಿತ್ಯ, ಸಂಸ್ಕೃತಿಯಿಂದ ಮನಸ್ಸು ಕಟ್ಟುವ ಹಬ್ಬವೇ ನುಡಿಸಿರಿ

09:32 AM Nov 28, 2017 | |

ರಾಜ್ಯದಲ್ಲಿ  ಕನ್ನಡ ನಾಡು - ನುಡಿ, ಭಾಷೆ-ಸಂಸ್ಕೃತಿಗೆ ಸಂಬಂಧಿಸಿದಂತೆ ಕರಾವಳಿ ಭಾಗದಲ್ಲಿ ನಡೆಯುವ ಅತಿ ದೊಡ್ಡ ಅಕ್ಷರ ಹಬ್ಬ ವಾದ ರಾಷ್ಟ್ರೀಯ ಸಮ್ಮೇಳನ “ಆಳ್ವಾಸ್‌ ನುಡಿಸಿರಿ’ಗೆ ದಿನಗಣನೆ ಆರಂಭವಾಗಿದ್ದು, ಡಿ. 1ರಿಂದ 3ರ ವರೆಗೆ ಮೂಡಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆ ಕ್ಯಾಂಪಸ್‌ನಲ್ಲಿ ನಡೆಯಲಿದೆ. ನುಡಿಸಿರಿ ರೂವಾರಿ ಹಾಗೂ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ
ಡಾ| ಎಂ. ಮೋಹನ ಆಳ್ವ ಅವರು ಈ ಬಾರಿಯ ಹಬ್ಬದ ಪೂರ್ವಸಿದ್ಧತೆ ಗಳ ಕುರಿತು “ಉದಯವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ವಿವರಿಸಿದ್ದಾರೆ.

Advertisement

ನುಡಿಸಿರಿ ಪರಿಕಲ್ಪನೆ ರೂಪುಗೊಂಡ ಬಗೆ…
ಅಖೀಲ ಭಾರತ ಸಾಹಿತ್ಯ ಸಮ್ಮೇಳನ ಮಾಡುವ ಅವಕಾಶ ಒಂದು ಬಾರಿ ಮೂಡಬಿದಿರೆಗೆ ಲಭಿಸಿತ್ತು. ಕಾರ್ಯಕ್ರಮ ನಡೆದ ಬಳಿಕ ಸುಮಾರು 100 ಮಂದಿ ಸಮಾನ ಮನಸ್ಕರು ಸಭೆ ನಡೆಸಿ ನಾವು ಕೂಡ ಏಕೆ ಇದೇ ಮಾದರಿಯಲ್ಲಿ ಇನ್ನಷ್ಟು ಪರಿಣಾಮಕಾರಿ ಸಾಹಿತ್ಯ ಹಬ್ಬ ಆಯೋಜಿಸಬಾರದು ಎಂದು ಚರ್ಚಿಸಿದೆವು. ಇಂತಹ ಸಾಹಿತ್ಯ ಚಟುವಟಿಕೆಗಳನ್ನು ಸರಕಾರ ಅಥವಾ ಅಕಾಡೆಮಿಯೇ ಏಕೆ ಮಾಡಬೇಕು? ಖಾಸಗಿ ನೆಲೆಯಲ್ಲಿ ಇದೇ ರೀತಿಯ ಸಮ್ಮೇಳನ ಮಾಡಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ನಮ್ಮಲ್ಲಿ ಮೂಡಿತ್ತು. ಈ ರೀತಿಯ ಚಿಂತನೆಗಳ ಪರಿಣಾಮವೇ ಆಳ್ವಾಸ್‌ ನುಡಿಸಿರಿ. ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಆರಂಭವಾದ ಸಣ್ಣ ಮಟ್ಟದ ಸಮ್ಮೇಳನ ಈ ಹಂತಕ್ಕೆ ಬಂದು ನಿಂತಿದೆ.

 ಪ್ರಾರಂಭದ ದಿನಗಳಿಗೆ ಹೋಲಿಸಿದರೆ ಈಗ ಏನನ್ನಿಸುತ್ತದೆ ?
ಹಿಂದೆ ಸಾಹಿತ್ಯ ಸಮ್ಮೇಳನ ಅಂದರೆ ಕೇವಲ ಸಾಹಿತಿಗಳಿಗೆ, ಸಾಹಿತ್ಯಾಸಕ್ತರಿಗೆ ಅಥವಾ ವಿದ್ಯಾ ವಂತರಿಗೆ ಸೀಮಿತ ಎಂಬ ಕಲ್ಪನೆ ಇತ್ತು. ಆದರೆ ಈಗ ಜನಸಾಮಾನ್ಯರೂ ಭಾಗವಹಿಸುವ ಕಾರ್ಯ ಕ್ರಮವಾಗಿ ಬದಲಾಗಿದೆ. ಸಾಹಿತ್ಯ ಸಮ್ಮೇ ಳನ ಅಂದರೆ ಜಾತ್ರೆಯಲ್ಲ; ಬದಲಾಗಿ ಇದು ನಮ್ಮ ಮನೆಯ, ನಾಡಿನ ಜನಪ್ರಿಯ ಹಬ್ಬವಾಗಿ ಪರಿ ವರ್ತನೆಗೊಂಡಿರುವುದು ಖುಷಿ ತಂದಿದೆ.

 ಸಾಹಿತ್ಯ ಸಮ್ಮೇಳನಗಳಲ್ಲಿ ಗೊಂದಲ, ವಿವಾದ ಸಹಜ; ಆದರೆ ಆಳ್ವಾಸ್‌ ನುಡಿಸಿರಿ ಹೇಗೆ ಭಿನ್ನವಾಗಿ ನಿಲ್ಲುತ್ತದೆ ?
ಯಾವುದೇ ಒಂದು ಕಾರ್ಯಕ್ರಮ ಸಂಘಟಿಸುವಾಗ ಉದ್ದೇಶ ಹಾಗೂ ಸಂಘಟಕರ ಮನಸ್ಸು ಸರಿಯಾದ ದಿಕ್ಕಿನಲ್ಲಿರಬೇಕು. ಕಾರ್ಯ ಕ್ರಮದ ಆಶಯ-ಗುರಿಯ ಬಗ್ಗೆ ಸ್ಪಷ್ಟತೆಯಿದ್ದಾಗ ಯಶಸ್ವಿಯಾಗಿ ನಡೆಯುತ್ತದೆ. ಅದರಲ್ಲೂ ಈಗ ಸಾಹಿತ್ಯ ವಲಯದಲ್ಲಿ ಎಡ- ಬಲದ ಮಾತು ಕೇಳಿಬರುತ್ತಿದೆ. ಆದರೆ ನಾನು ಇಂತಹ ಯಾವುದೇ ರೀತಿಯ ಯೋಚನೆ- ಸಿದ್ಧಾಂತ ಇಟ್ಟುಕೊಳ್ಳದೆ ಮುಕ್ತ ಮನಸ್ಸಿನಿಂದ ನನ್ನ ಕೆಲಸ ಕನ್ನಡದ ಕೆಲಸ, ಸಾಂಸ್ಕೃತಿಕ ಸಂಪತ್ತು ರಕ್ಷಿಸುವುದು ನನ್ನ ಕೆಲಸ ಎಂದಷ್ಟೇ ಭಾವಿಸಿ ಆ ದಿಸೆಯಲ್ಲಿ ಮುನ್ನಡೆಯುತ್ತಿದ್ದೇನೆೆ. ಮನಸ್ಸು ಕಟ್ಟುವುದಷ್ಟೇ ನನ್ನ ಕೆಲಸ. ಮನಸ್ಸು ಒಡೆಯುವ ಕೆಲಸ ನಮ್ಮದಲ್ಲ. ಇಂತಹ ಸಾಮಾನ್ಯ ಸಂಗತಿಗಳ ಪ್ರಜ್ಞೆ ಇಟ್ಟುಕೊಂಡಾಗ ವಿವಾದಗಳಿಗೆ ಆಸ್ಪದವೇ ಇರುವುದಿಲ್ಲ.

 ನುಡಿಸಿರಿಗೆ ತಯಾರಿ ಹೇಗಿದೆ?
ಹೆಚ್ಚಾ ಕಡಿಮೆ ಒಂದು ವರ್ಷದಿಂದ ನುಡಿಸಿರಿಗೆ ಸಿದ್ಧತೆ ನಡೆಸಲಾಗುತ್ತದೆ. ಎಲ್ಲ ಕ್ಷೇತ್ರದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪೂರ್ವ ತಯಾರಿ ನಡೆಸಲಾಗುತ್ತಿದೆ. ಕೃಷಿ ಕ್ಷೇತ್ರದ ಪ್ರಮುಖರನ್ನು ಒಟ್ಟುಗೂಡಿಸಿಕೊಂಡು ಅದಕ್ಕೂ ಒತ್ತು ನೀಡಲಾಗುತ್ತಿದೆ. ಚಿತ್ರಕಲೆ, ಫೋಟೋಗ್ರಫಿ, ಸಾಹಿತ್ಯ ಹೀಗೆ ಎಲ್ಲ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡವರನ್ನು ಆಯ್ಕೆ ಮಾಡಿಕೊಂಡು ಅವರಿಗೆಲ್ಲ ಜವಾಬ್ದಾರಿಗಳನ್ನು ವಹಿಸಿಕೊಡಲಾಗಿದೆ. ಈ ನುಡಿಸಿರಿಯಲ್ಲಿ ನನ್ನ ಹೆಸರಿನ ಪ್ರಶ್ನೆಯೇ ಇಲ್ಲ. ಎಂದೂ ಸ್ವಪ್ರತಿಷ್ಠೆಗಾಗಿ ಈ ಸಮ್ಮೇಳನ ಆಯೋಜಿಸುತ್ತಿಲ್ಲ. ಇಡೀ ನುಡಿಸಿರಿ ಸಂಘಟನೆಯ ತೆರೆಮರೆಯಲ್ಲಿ ಇರುತ್ತೇನೆಯೇ ಹೊರತು ಅದರಿಂದ ಪ್ರಚಾರ ಗಳಿಸಬೇಕೆಂಬ ಆಸೆ ನನಗಿಲ್ಲ.

Advertisement

 ನುಡಿಸಿರಿ ಇಲ್ಲಿಗೆ ಸಾಕು ಎಂದು ಅನ್ನಿಸಿಲ್ಲವೇ?
ಯಾವತ್ತೂ ಅಂತಹ ಯೋಚನೆ ಬಂದಿಲ್ಲ. ನುಡಿಸಿರಿ ನನ್ನ ಜೀವನದ ಅವಿಭಾಜ್ಯ ಅಂಗ ಎಂದೇ ಭಾವಿಸಿದ್ದೇನೆ. ನನ್ನ ಉಸಿರು ಇರುವ ವರೆಗೂ ನುಡಿಸಿರಿ ನಡೆಸುವೆ. ಒಂದುವೇಳೆ ಇದನ್ನು ಮಾಡದಿದ್ದರೆ ನನ್ನ ಉಸಿರೇ ನಿಂತು ಹೋಯಿತು ಅಂದುಕೊಳ್ಳಬಹುದು. ಕೆಲವು ಭಿನ್ನವಾದ ಮಾತು ಬರುವುದು ಸಹಜ. ಆದರೆ ನನಗೆ ಕೋಪ ಬರುವುದಿಲ್ಲ. ಟೀಕಿಸುವವರಿಗೆ ಬುದ್ಧಿ ಕಲಿಸಬೇಕು ಎಂಬ ಮನಸ್ಥಿತಿಯೂ ನನಗಿಲ್ಲ. ನನ್ನ ಕೆಲಸವನ್ನು ನಾನು ಮಾಡುತ್ತೇನೆ. ಈ ಬಾರಿ ನುಡಿಸಿರಿ ಇಲ್ಲ-ವಿರಾಸತ್‌ ನಡೆ ಯಲ್ಲ ಎಂದು ಹೇಳಿದವರು ತುಂಬ ಜನ ರಿದ್ದಾರೆ. ಆದರೆ ದೇವರ ದಯೆಯಿಂದ ನನ್ನ ನುಡಿಸಿರಿ- ವಿರಾಸತ್‌ಗೆ ಇಲ್ಲಿಯವರೆಗೆ ಏನೂ ಆಗಿಲ್ಲ.

 ವಿರೋಧಿಗಳಿಗೆ ಕ್ಯಾರೇ ಅನ್ನುವುದಿಲ್ಲವೇ?
ನೋಡಿ, ವಿರೋಧ ಬಂದರೆ ಯಾಕೆ ಬಂತು, ನನ್ನಿಂದ ಏನು ತಪ್ಪಾಗಿದೆ? ಇದು ನಿಜಕ್ಕೂ ಹೌದಾ ಅಥವಾ ಸುಳ್ಳೇ ಎಂದೆಲ್ಲಾ ಆಲೋಚಿಸುತ್ತೇನೆ. ಆಪ್ತರ ಜತೆಗೆ ಚರ್ಚೆ ಮಾಡುತ್ತೇನೆ. ಅಂತಿಮವಾಗಿ ಆ ವಿಚಾರವನ್ನು ನಗಣ್ಯ ಮಾಡ ಬೇಕಾ ಅಥವಾ ಸ್ವೀಕಾರ ಮಾಡಬೇಕಾ ಎಂಬ ಬಗ್ಗೆ ನಾನೇ ನಿರ್ಧರಿಸುತ್ತೇನೆ.

 ನುಡಿಸಿರಿ ಖರ್ಚು ವೆಚ್ಚದ ಬಗ್ಗೆ ಹೇಳುವಿರಾ?
ಸರಕಾರದ ನೆರವಿಗೆ ಒತ್ತಡ ಹಾಕಿದರೆ ನಾವು ಸರಕಾರಕ್ಕೆ ತಲೆಬಾಗುವ ಪರಿಸ್ಥಿತಿ ಎದುರಾಗುತ್ತದೆ. ಆಗ ಕಾರ್ಯಕ್ರಮದಲ್ಲಿಯೂ ರಾಜಿ ಮಾಡಬೇಕಾಗುತ್ತದೆ. ಹಾಗೆಂದು ಸರ ಕರದ ಎದುರು ನಿಲ್ಲುವಂಥ ದೊಡ್ಡ ವ್ಯಕ್ತಿಯೂ ನಾನಲ್ಲ. ಆದರೆ ನಾವು ಸರಕಾರಕ್ಕೆ ವಿನಂತಿ ಮಾಡುತ್ತೇವೆ. ಕಳೆದ ವರ್ಷ ನುಡಿಸಿರಿ, ವಿರಾಸತ್‌ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಒಟ್ಟಾಗಿ 10 ಲಕ್ಷ ರೂ. ನೀಡಿದೆ. ಈ ವರ್ಷವೂ ಸರಕಾರಕ್ಕೆ ವಿನಂತಿ ಮಾಡುತ್ತೇವೆ. ಉಳಿದಂತೆ ಪ್ರತಿನಿಧಿ ಶುಲ್ಕವಾಗಿ 100 ರೂ. ನಾವು ಸ್ವೀಕರಿ ವುದು ಬಿಟ್ಟರೆ ಎಲ್ಲಿಯೂ ಹಣಪಡೆಯುವುದಿಲ್ಲ. ಇದೆಲ್ಲದಕ್ಕಿಂತ ಮಿಗಿಲಾಗಿ ಆಳ್ವಾಸ್‌ ಎಜುಕೇಶನ್‌ ಫೌಂಡೇಶನ್‌ ನಿಧಿಯಿಂದ ನುಡಿಸಿರಿಗೆ ಹಣವನ್ನು ಮೀಸಲಿಟ್ಟುಕೊಂಡು ಎಲ್ಲಿಯೂ ಕೊರತೆಯಾಗದಂತೆ ಯಶಸ್ವಿಗೊಳಿಸುತ್ತೇವೆ.

 ಇಷ್ಟೆಲ್ಲ ಖರ್ಚು ಮಾಡಿ ಅದ್ದೂರಿ ಸಾಹಿತ್ಯ ಸಮ್ಮೇಳನ ಏಕೆ ?
ಇದನ್ನು ನಿಜಕ್ಕೂ ಹುಚ್ಚು ಮನಸ್ಸಿನ ಹತ್ತು ಮುಖ ಎನ್ನಬಹುದು. ಕಲಾವಿದನಾಗಿ ಬೆಳೆಯುತ್ತಾ ಹೋದ ಹಾಗೆ ಅದರಿಂದ ಪಡೆದ ಅನುಭವದ ಜತೆ ನನಗೂ ಒಂದು ರೀತಿಯ ರೂಪ ಬರುತ್ತಾ ಹೋಗಿದೆ. ಯಾವುದನ್ನೂ ನಗಣ್ಯ ಎಂದು ಭಾವಿಸುವುದೇ ಇಲ್ಲ. ಎಲ್ಲ ವಿಚಾರಗಳನ್ನು ಪ್ರೀತಿಯ ಮುಖವಾಗಿ ಸ್ವೀಕರಿಸಿದ್ದೇನೆ. ನನಗೆ ಆಸಕ್ತಿ ಇರುವ ಎಲ್ಲ ಕಲಾ ಹುಚ್ಚನ್ನು ಪ್ರೀತಿಯಿಂದ ಸ್ವೀಕರಿಸಿದ್ದೇನೆ. ಒಂದುವೇಳೆ ನನ್ನ ಆಸಕ್ತಿಯನ್ನು ನಿರ್ಲಕ್ಷಿಸುತ್ತಿದ್ದರೇ ಇನ್ನೇನೋ ಆಗುತ್ತಿದ್ದೆ. ಹೀಗಾಗಿ ನುಡಿಸಿರಿಯನ್ನು ಅದ್ದೂರಿಯಾಗಿ ನಡೆಸುವುದು ಒಂದು ರೀತಿಯ ಹುಚ್ಚು ಅಂದುಕೊಳ್ಳಬಹುದು.

 ಈ ಬಾರಿಯ ನುಡಿಸಿರಿ ವಿಶೇಷತೆ ಏನು?
ಸಾಹಿತ್ಯ ಸಮ್ಮೇಳನದಲ್ಲಿ ಭಾಷೆ, ಸಾಹಿತ್ಯ-ಸಾಹಿತಿ ಅತ್ಯಂತ ಪ್ರಾಮುಖ್ಯ. ಆದರೆ ಅಷ್ಟಕ್ಕೇ ನಮ್ಮ ಸೀಮಿತವಾಗಬಾರದು. ಎಲ್ಲ ಆಯಾಮಗಳಲ್ಲಿ ಆಲೋಚಿಸಿ ಕೊಂಡು ಇನ್ನಷ್ಟು ವಿಶಿಷ್ಟಗೊಳಿಸುವ ನೆಲೆಯಲ್ಲಿ ನಾವು ಸಿದ್ಧತೆ ಮಾಡಿದ್ದೇವೆ. “ಕರ್ನಾಟಕ; ಬಹುತ್ವದ ನೆಲೆ ಗಳು’ ಎಂಬ ಪರಿಕಲ್ಪನೆಯಲ್ಲಿ ಈ ಬಾರಿಯ ಸಮ್ಮೇಳನ ಮೂಡಿಬರಲಿದೆ. ಕನ್ನಡ ನಾಡಿನ ಬದುಕನ್ನೇ ಮುಖ್ಯವಾಗಿಸಿಕೊಂಡು ಈ ಸಲದ ಸಮ್ಮೇಳನ ರೂಪಿಸಲಾಗಿದೆ. ಕೃಷಿ ಸಮ್ಮೇಳನವನ್ನು ಮನೋಜ್ಞವಾಗಿ ವ್ಯವಸ್ಥೆಗೊಳಿಸಲಾಗಿದೆ. ನುಡಿಸಿರಿಗಿಂತ  ಮಿಗಿಲಾದ ರೀತಿ ಈ ಬಾರಿ ಕೃಷಿ ಸಮ್ಮೇಳನ ರೂಪುಗೊಳ್ಳಲಿದೆ. ವಿದ್ಯಾರ್ಥಿ ಸಿರಿ ಎಂಬ ಹೊಸ ಪರಿಕಲ್ಪನೆಯನ್ನೂ ಪರಿಚಯಿಸಲಾಗಿದೆ.  ಕರ್ನಾಟದಲ್ಲಿ ಎಲ್ಲೂ ಆಗದಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ಬಾರಿ ಸಂಘಟಿಸಲಾಗಿದೆ. ಮೆರವಣಿಗೆಯಲ್ಲಿ 3,000 ಕಲಾವಿದರು ಭಾಗವಹಿಸಲಿದ್ದು, ಉಳಿದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ 3,000 ಕಲಾವಿದರು ಭಾಗವಹಿಸಲಿದ್ದಾರೆ. ಒಟ್ಟಾರೆ 300 ತಂಡದಲ್ಲಿ 6000ಕ್ಕೂ ಮಿಕ್ಕಿ ಕಲಾವಿದರು ಭಾಗವಹಿಸಲಿದ್ದಾರೆ.

 ಉದ್ಯೋಗ ಸಿರಿಯಲ್ಲಿ  ಉದ್ಯೋಗದ ಭರವಸೆ ನೀಡುವಿರಾ?
ಉದ್ಯೋಗ ಸಿರಿಯಲ್ಲಿ ಪ್ರತಿಷ್ಠಿತ ಕಂಪೆನಿಗಳು ಪಾಲ್ಗೊಂಡು ಕನ್ನಡ ಮಾಧ್ಯಮದಲ್ಲಿ 10ನೇ ತರಗತಿ ಓದಿದವರಿಗೆ ಸ್ಥಳದಲ್ಲೇ ಉದ್ಯೋಗಾವಕಾಶ ನೀಡುವುದೇ ಇದರ ವಿಶೇಷತೆ. ಹೀಗಾಗಿ 10ನೇ ವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತು ಅನಂತರ ಯಾವುದೇ ಶಿಕ್ಷಣ ಪಡೆದಿರುವ ಅಭ್ಯರ್ಥಿಗಳು ಮಾತ್ರ ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು. ಸುಮಾರು 100 ಪ್ರತಿಷ್ಠಿತ ಕಂಪೆನಿಗಳು ಭಾಗವಹಿಸುವ ನಿರೀಕ್ಷೆ ಇದ್ದು, ಆನ್‌ಲೈನ್‌ ಮೂಲಕ ಈಗಾಗಲೇ 10,000ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳಿಂದ ಅರ್ಜಿಗಳು ಬಂದಿವೆ.

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next