Advertisement

ರಸ್ತೆ ಬದಿ ನೆಟ್ಟಿರುವ ಸಸಿ ಹೆಮ್ಮರವಾಗಲು ಸಹಕರಿಸಿ

12:30 PM Feb 10, 2017 | Team Udayavani |

ದಾವಣಗೆರೆ: ಪರಿಸರ ನಾಶದಿಂದ ಆಗುತ್ತಿರುವ ದುಷ್ಪರಿಣಾಮ ಕುರಿತು ಎಲ್ಲರೂ ಪುಂಖಾನುಪುಂಖವಾಗಿ ಮಾತನಾಡಬಲ್ಲರು. ಅದೇ ಪರಿಸರ ಸಂರಕ್ಷಣೆ ಕುರಿತು ತುಟಿ ಬಿಚ್ಚುವವರು, ಕಾರ್ಯೋನ್ಮುಖರಾಗುವವರು ಕೆಲವರು ಮಾತ್ರ. ಪರಿಸರ ನಾಶವಾದಂತೆ ಗಂಭೀರ ಸಮಸ್ಯೆಗಳು ಎದುರಾಗುತ್ತವೆ. ಇವನ್ನು ನಿವಾರಿಸುವ ನಿಟ್ಟಿನಲ್ಲಿ ಯಾರೋ ಒಬ್ಬರು ಕಾರ್ಯೋನ್ಮುಖರಾದರೆ ಸಾಲದು ಎಲ್ಲರೂ ಕೈ ಜೋಡಿಸಬೇಕು. 

Advertisement

ಅಂತಹದ್ದೊಂದು ಕಾರ್ಯ ಮಾಡುವ ಸದಾವಕಾಶ ಇದೀಗ ಪಾಲಿಕೆ ವ್ಯಾಪ್ತಿಯ ಜನರಿಗೆ ಒದಗಿಬಂದಿದೆ. ನಗರದಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಈಗಾಗಲೇ ನೂರಾರು ಮರಗಳು ನೆಲಕ್ಕುರುಳಿವೆ. ಇದೀಗ ಜಿಲ್ಲಾಡಳಿತ, ಪಾಲಿಕೆ ಅದೇ ಜಾಗದಲ್ಲಿ ಸಸಿಗಳನ್ನು ನೆಟ್ಟು ಪರಿಸರ ಬೆಳೆಸಲು ಮುಂದಾಗುತ್ತಿವೆ. ಈ ಕಾರ್ಯದಲ್ಲಿ ಪಾಲಿಕೆ ವ್ಯಾಪ್ತಿಯ ಜನರೂ ಕೈ ಜೋಡಿಸಬೇಕಿದೆ. 

ನಗರದ ವಿವಿಧ ರಸ್ತೆಗಳ ಇಕ್ಕೆಲಗಳಲ್ಲಿ ತರೇಹವಾರಿ ಸಸಿಗಳನ್ನು ನೆಡಲಾಗಿದೆ.  ಮಳೆಗಾಲ, ಚಳಿಗಾಲ ಇದ್ದುದರಿಂದ ಜೊತೆಗೆ ಅರಣ್ಯ ಇಲಾಖೆ ಒಂದಿಷ್ಟು ನೀರುಣಿಸಿದ್ದರಿಂದ ಸಸಿಗಳು ಇನ್ನೂ ಹಸಿರಾಗಿ ನಳನಳಿಸುತ್ತಿವೆ. ನೀಡುತ್ತಿವೆ. ಇಂತಹ ಸಸಿಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ನಗರದ ಪ್ರತಿಯೊಬ್ಬ ನಾಗರಿಕರು ತಮ್ಮ ಜವಾಬ್ದಾರಿ ಸಹ ನಿಭಾಯಿಸಬೇಕಿದೆ. ಸರ್ಕಾರದ ಕೆಲಸವೆಂದರೆ ಎಷ್ಟರ ಮಟ್ಟಿಗೆ ಕಾರ್ಯಗತವಾಗಲಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ.

ಈ ಹಿಂದೆ ಅದೆಷ್ಟೋ ಸಸಿಗಳು ನೆಟ್ಟ ಕೆಲವೇ ದಿನಗಳಲ್ಲಿ ನಾಶವಾಗಿ ಹೋಗಿವೆ. ಆದರೆ, ಈ ಬಾರಿ ತೀರಾ ಅಂತಹ ಪರಿಸ್ಥಿತಿ ಇಲ್ಲ. ಒಂದಿಷ್ಟು ಸಸಿಗಳು ಉಳಿದಿವೆ. ತಮ್ಮ ತಮ್ಮ ಮನೆ ಮುಂದೆ ರಸ್ತೆ ಬದಿಯಲ್ಲಿ ನೆಟ್ಟಿರುವ ಸಸಿಗಳಿಗೆ ನಿವಾಸಿಗಳು ನೀರೆರೆಯುವ ಕೆಲಸಮಾಡಿದರೆ ಆ ಸಸಿಗಳು ಮುಂದೆ ಹೆಮ್ಮರವಾಗಿ ನಿಮಗೆ, ನಿಮ್ಮ ಮುಂದಿನ ಪೀಳಿಗೆಗೆ ನೆರಳಾಗಲಿವೆ. ಮಳೆ ಬರಲು ಸಹಕಾರಿಯಾಗಲಿವೆ.

ಅಲ್ಲದೆ, ತಾಪಮಾನ ಕಡಿಮೆ ಮಾಡುವಲ್ಲಿ ತಮ್ಮದೇ ಕೊಡುಗೆ ನೀಡಲಿವೆ. ಸಾಮಾಜಿಕ ಜವಾಬ್ದಾರಿ ಬಗ್ಗೆ ಮಾತನಾಡುವ ಬಹುತೇಕರು ಇಂತಹ ಸಣ್ಣ ಸಣ್ಣ ವಿಷಯಗಳು ಬಂದಾಗ ನುಣುಚಿಕೊಳ್ಳುತ್ತಾರೆ. ಇದಕ್ಕೊಂದು ಅಪವಾದ ಎಂಬಂತೆ ಪರಿಸರ ಕಾಳಜಿವುಳ್ಳವರು ಸಸಿಗಳ ಉಳಿಸಲು ಮುಂದಾಗಬೇಕು.  

Advertisement

ಕೈ ಬಿಡಲಿರುವ ಅರಣ್ಯ ಇಲಾಖೆ: ನಗರದಲ್ಲಿ ನಿರ್ಮಾಣವಾಗಿರುವ ರಸ್ತೆಗಳ ಬದುಗಳಲ್ಲಿ ಸಸಿಗಳನ್ನು ನೆಡಲಾಗಿದೆ. ಎಸ್‌ಎಸ್‌ ಹೈಟೆಕ್‌  ಆಸ್ಪತ್ರೆ, ಲಕ್ಷ್ಮಿ ಫ್ಲೋರ್‌ ಮಿಲ್‌ ರಸ್ತೆ, ಡೆಂಟಲ್‌ ಕಾಲೇಜು ರಸ್ತೆ, ಎವಿಕೆ ಕಾಲೇಜು ರಸ್ತೆ, ಹದಡಿ ರಸ್ತೆ, ಲೋಕಿಕೆರೆ ರಸ್ತೆ ಸೇರಿದಂತೆ ಬಹುತೇಕ ಎಲ್ಲಾ ಭಾಗಗಳಲ್ಲಿ ಸಸಿಗಳನ್ನು ನೆಡಲಾಗಿದೆ. ಸದ್ಯ ಅರಣ್ಯ ಇಲಾಖೆ ನೀರು ಎರೆಯುತ್ತಿದೆ. ಇಲಾಖೆ ಅಧಿಕಾರಿಗಳು ಹೇಳುವಂತೆ ಪಾಲಿಕೆಯಿಂದ ಬಂದಿರುವ ಅನುದಾನ ಇನ್ನೊಂದು ಬಾರಿ ಮಾತ್ರ ನೀರುಣಿಸಲು ಸಾಕಾಗುತ್ತದೆ. ಮತ್ತೆ ನೀರುಣಿಸುವುದು ಅಸಾಧ್ಯವಂತೆ. 

ಇಷ್ಟು ಮಾಡಿ ಸಾಕು: ನೀವು ಕುಡಿಯುವ ನೀರನ್ನು ಈ ಸಸಿಗಳಿಗೆ ಎರೆಯಬೇಕಿಲ್ಲ. ನಿಮ್ಮ ಮನೆಯಲ್ಲಿನ ತ್ಯಾಜ್ಯ ನೀರು ಈ ಸಸಿಗಳಿಗೆ ಸಾಕು. ನೆಲ, ಪಾತ್ರೆ, ಬಟ್ಟೆ ತೊಳೆದ ನೀರನ್ನು ಚರಂಡಿಗೆ ಸುರಿಯುವ ಬದಲು ಈ ಸಸಿಗಳಿಗೆ ಹಾಕಿ. ಇನ್ನು ಮನೆ ಮುಂದೆ ವಾಹನ ತೊಳೆದ ನೀರು ನೇರ ಸಸಿಯ ಬುಡ ತಲುಪುವಂತೆ ಒಂದಿಷ್ಟು ದಾರಿಮಾಡಿ. ಇನ್ನು ಹೋಟೆಲ್‌, ಇತರೆ ವ್ಯಾಪಾರಿ ಮಳಿಗೆ ಹೊಂದಿದವರು ಕನಿಷ್ಠ ಅರ್ಧಕೊಡ ನೀರು ಸಸಿಗಳಿಗೆ ಎರೆದು ಸಾಮಾಜಿಕ ಜವಾಬ್ದಾರಿ ಮೆರೆಯಬೇಕಿದೆ.

* ಪಾಟೀಲ ವೀರನಗೌಡ

Advertisement

Udayavani is now on Telegram. Click here to join our channel and stay updated with the latest news.

Next