Advertisement

ಕೆರೆ ನೀರಿನಲ್ಲಿ ಪ್ಲಾಸ್ಟಿಕ್‌ ಹಾವಳಿ

09:23 PM Apr 26, 2019 | Team Udayavani |

ನೆಲಮಂಗಲ: ಕೆರೆಗಳ ಹೂಳೆತ್ತುವ ಮೂಲಕ ಅಂತರ್ಜಲಮಟ್ಟ ಹೆಚ್ಚಿಸಿ ರೈತರಿಗೆ ಮತ್ತು ಗ್ರಾಮೀಣ ಜನರಿಗೆ ಅನುಕೂಲ ಕಲ್ಪಿಸಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳು ಕೆರೆಗಳ ಪುನಃಶ್ಚೇತನಕ್ಕೆ ಮುಂದಾದರೆ, ಕೆಲವು ಮಣ್ಣುಗಳ್ಳರು ಕೆರೆಗಳ ಒಡಲಿಗೆ ಕನ್ನ ಹಾಕುವ ಮೂಲಕ ಕೆರೆಯಂಗಳದಲ್ಲಿ ಗುಂಡಿಗಳನ್ನು ನಿರ್ಮಿಸಿದ್ದಾರೆ.

Advertisement

ತಾಲೂಕಿನ ಕೆಂಪಲಿಂಗನಹಳ್ಳಿ ಹಾಗೂ ಬಾವಿಕೆರೆೆ ಗ್ರಾಮಗಳ ಜನರಿಗೆ ಜೀವನಾಡಿಯಾಗಿರುವ ಈ ಕೆರೆಯಲ್ಲಿ ವರ್ಷದ 365 ದಿನಗಳ ಕಾಲ ನೀರಿರುತ್ತದೆ. ಮಳೆಗಾಲದಲ್ಲಿ ನೀರು ತುಂಬಿರುತ್ತದೆ. ಆದರೆ, ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳಿಗೆ ಬಾಯಾರಿಕೆ ನೀಗಿಸುವ ಈ ಕೆರೆಗೆ ವಿಷದ ಮಿಶ್ರಣ ಮಾಡಿದಂತೆ ಪಾಸ್ಟಿಕ್‌ ಹಾವಳಿ ಹೆಚ್ಚಾಗಿದೆ. ಇದರಿಂದ, ಪ್ರಾಣಿ, ಪಕ್ಷಿಗಳು ಅಪಾಯದಂಚಿಗೆ ತಲುಪಿ, ಸಾವು, ಬದುಕಿನ ನಡುವೆ ಹೋರಾಟ ನಡೆಸುತ್ತಿವೆ.

ಕೆರೆ ಒಡಲಿಗೆ ಕನ್ನ: ಕೆರೆಯ ಅಂಗಳದಲ್ಲಿ ಹೂಳೆತ್ತುವ ಮೂಲಕ ಕೆ‌ರೆಯ ಅಭಿವೃದ್ಧಿ ಮಾಡಲಾಗುತ್ತಿದೆ ಎನ್ನುವ ಕೆಲವರು, ಕೆರೆಯ ಮಣ್ಣನ್ನು ಹತ್ತಾರು ಅಡಿ ಆಳಕ್ಕೆ ಅಗೆದು ಮಣ್ಣನ್ನು ಸಾಗಿಸುತ್ತಿದ್ದಾರೆ. ಇದರಿಂದ ಕೆರೆಯಂಗಳದಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ.

ಮಳೆಯ ನೀರು ಕೆರೆಯಲ್ಲಿ ನಿಲ್ಲದೇ ಸ್ವಲ್ಪ ಮಣ್ಣಿನ ಗುಂಡಿಯಲ್ಲಿ ನೀರು ಸಂಗ್ರಹವಾಗಿರುವುದರಿಂದ ಜಾನುವಾರಗಳು ನೀರು ಕುಡಿಯುವ ವೇಳೆ ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಲ್ಲದೇ, ಮಕ್ಕಳು ಈಜಲು ಮುಂದಾದರೆ ಕೆರೆಯ ಗುಂಡಿಯಲ್ಲಿನ ಮಣ್ಣಲ್ಲಿ ಸಿಲುಕಿಕೊಂಡು ಪ್ರಾಣಪಕ್ಷಿ ಹಾರುವುದರಲ್ಲಿ ಸಂಶಯವಿಲ್ಲ. ಕೆಲವರು ಮಣ್ಣಿಗಾಗಿ ಕೆರೆಯ ಒಡಲಿಗೆ ಕನ್ನ ಹಾಕುತ್ತಿರುವುದು ಬಹುದೊಡ್ಡ ದುರಂತವೇ ಸರಿ.

ಮೌನವಾದರೇ ಜಿಲ್ಲಾಧಿಕಾರಿ: ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕರೀಗೌಡರು ಅಧಿಕಾರ ಸ್ವೀಕರಿಸಿದ ನಂತರ ಕೆರೆಗಳ ಅಭಿವೃದ್ಧಿ ಮಾಡಲು ಹಲವು ಕೆರೆಗಳನ್ನು ಆಯ್ಕೆ ಮಾಡಿಕೊಂಡು ಖಾಸಗಿಯವರ ನೆರವಿನೊಂದಿಗೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದರು. ಕೆಲವು ಕೆರೆಗಳ ಹೂಳೆತ್ತುವ ಮೂಲಕ ಉತ್ತಮ ಕೆಲಸ ಮಾಡಿದ್ದಾರೆ. ಆದರೆ, ಇದನ್ನು ಬಂಡವಾಳವಾಗಿ ಮಾಡಿಕೊಂಡ ಕೆಲ ಮಣ್ಣುಗಳ್ಳರು ಬೇರೆ ಕೆರೆಗಳಲ್ಲಿ ಅವರಿಗೆ ಇಷ್ಟಬಂದತೆ ಮಣ್ಣು ಸಾಗಿಸುತ್ತಿದ್ದಾರೆ.

Advertisement

ಆ ನೂಲಕ ಕೆರೆಯಲ್ಲಿ ಗುಂಡಿಗಳು ನಿರ್ಮಾಣವಾಗುವಂತೆ ಮಾಡಿದ್ದಾರೆ. ಆದರೆ, ಕೆಲವು ಕೆರೆಗಳಲ್ಲಿ ಕದ್ದುಮುಚ್ಚಿ ಮಣ್ಣಿನ ಸಾಗಾಣಿಕೆ ನಡೆಯುತ್ತಿದ್ದರೂ ಜಿಲ್ಲಾಧಿಕಾರಿಗಳು ಮೌನವಾಗಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿವೆ. ಈಗಲಾದರೂ ಇಂತಹ ಕಳ್ಳರಿಗೆ ಕಡಿವಾಣ ಹಾಕದಿದ್ದರೆ ಮುಂದೆ ಗ್ರಾಮೀಣ ಜನರು ಬಹುದೊಡ್ಡ ಅಪಾಯ ಎದುರಿಸಬೇಕಾಗುತ್ತದೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಪ್ಲಾಸ್ಟಿಕ್‌ ಕೆರೆ: ಕೆಂಪಲಿಂಗನಹಳ್ಳಿ ದೇವಾಂಗ ಮಠದ ಸಮೀಪವಿರುವ ಈ ಕೆರೆ ರಸ್ತೆ ಪಕ್ಕದಲ್ಲಿರುವುದರಿಂದ ಪ್ಲಾಸ್ಟಿಕ್‌ ಪೇಪರ್‌ ಹಾಗೂ ವಸ್ತುಗಳನ್ನು ಕೆರೆಯಂಗಳದಲ್ಲಿ ಸುರಿಯಲಾಗಿದೆ. ಪರಿಣಾಮ ಗಾಳಿಗೆ ಹಾರಿಹೋಗಿ ಕೆರೆಯ ತುಂಬ ಪಾಸ್ಟಿಕ್‌ ವಸ್ತುಗಳು ತುಂಬಿಕೊಂಡಿವೆ. ಈ ಕೆರೆಯಲ್ಲಿ ಬೇಸಿಗೆಯಲ್ಲಿ ನೀರಿರುವುದರಿಂದ ಜಾನುವಾರಗಳು ಹಾಗೂ ಸಾವಿರಾರು ಪಕ್ಷಿಗಳು ನೀರು ಕುಡಿಯಲು ಈ ಕೆರೆಗೆ ಬರುತ್ತವೆ. ಆದರೆ, ಇಲ್ಲಿನ ಪ್ಲಾಸ್ಟಿಕ್‌ ಜಾನುವಾರಗಳ ದೇಹ ಸೇರುತ್ತಿವೆ. ಇನ್ನು ನೀರಿಗಾಗಿ ಬರುವ ಪಕ್ಷಿಗಳ ಕಾಲಿಗೆ ಪ್ಲಾಸ್ಟಿಕ್‌ ಕವರ್‌ ಸಿಲುಕಿ ನರಳಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಿಯಮ ಉಲ್ಲಂಘನೆ: ಕೆರೆಯಲ್ಲಿ ಇಂತಿಷ್ಟೇ ಅಡಿ ಆಳದವರೆಗೆ ಹೂಳೆತ್ತಬೇಕು. ಕೆಲವೊಮ್ಮೆ ಕೆರೆಯ ಕೀಟ್ರಂಚ್‌ ಮಿತಿಯವರೆಗೂ ಅಥವಾ ಕೆರೆಯ ತೂಬಿನ ಮಟ್ಟಕ್ಕೆ ತೆಗೆಯಬೇಕೆಂಬ ಸಣ್ಣ ನೀರಾವರಿ ಇಲಾಖೆ ನೀತಿನಿಯಮಗಳನ್ನು ಮಣ್ಣುಗಳ್ಳರು ಗಾಳಿಗೆ ತೂರಿದ್ದಾರೆ.

ನಮ್ಮ ಕೆರೆಯಲ್ಲಿ ವರ್ಷಪೂರ್ತಿ ನೀರಿರುತ್ತದೆ. ಆದರೆ,ಕೆಲವರು ಕದ್ದು ಮಣ್ಣು ಸಾಗಣೆ ಮಾಡಿ ಗುಂಡಿಗಳು ಬೀಳುವಂತೆ ಮಾಡಿದ್ದಾರೆ. ಹೂಳೆತ್ತಲು ನಿಯಮವಿದೆ.ಅದಕ್ಕೆ ವಿರುದ್ಧವಾಗಿ ಕೆಲಸ ಮಾಡುವವರನ್ನು ತಡೆಯಬೇಕಾದ ಅಧಿಕಾರಿಗಳು ಕಾಣೆಯಾಗಿದ್ದಾರೆ.
-ಪ್ರದೀಪ್‌, ಸ್ಥಳೀಯ

ಪ್ರಾಣಿ, ಪಕ್ಷಿಗಳಿಗೆ ಬೇಸಿಗೆಯಲ್ಲಿ ನೀರು ಸಿಗುವುದೇ ಕಷ್ಟ. ಇಂತಹ ಸಂದರ್ಭದಲ್ಲಿ ಕೆರೆಯ ನೀರು ಬೇಸಿಗೆಯಲ್ಲೂ ಪ್ರಾಣಿ, ಪಕ್ಷಿಗಳಿಗೆ ಅನುಕೂಲವಾಗಿರುವುದು ಸಂತೋಷ.ಆದರೆ ಇದಕ್ಕೆ ಪ್ಲಾಸ್ಟಿಕ್‌ ಪೇಪರ್‌ಗಳು ಮುಳ್ಳಾಗಿರುವುದು ಬಹಳ ಬೇಸರ ತಂದಿದೆ.ಸಮಬಂಧಪಟ್ಟ ಇಲಾಖೆ ಅಧಿಕಾರಿಗಳು ತಕ್ಷಣ ಸಮಸ್ಯೆ ಬಗೆಹರಿಸಬೇಕು.
-ನವೀನ್‌ಕುಮಾರ್‌, ಪಕ್ಷಿ ಪ್ರೇಮಿ.

Advertisement

Udayavani is now on Telegram. Click here to join our channel and stay updated with the latest news.

Next