Advertisement

“ಫೋನಿ’ಬೆನ್ನಲ್ಲೇ ಬಂತು ಪೂರ್ವ ಮುಂಗಾರು ಮಳೆ

11:16 PM May 07, 2019 | Lakshmi GovindaRaj |

ಬೆಂಗಳೂರು: “ಫೋನಿ’ ಬಂದು ಹೋದ ಬೆನ್ನಲ್ಲೇ ರಾಜ್ಯದಲ್ಲಿ ಪೂರ್ವ ಮುಂಗಾರಿನ ಅಬ್ಬರ ಆರಂಭವಾಗಿದ್ದು, ಮಂಗಳವಾರ ದಕ್ಷಿಣ ಒಳನಾಡು, ಮಲೆನಾಡಿನ ಆಯ್ದ ಭಾಗಗಳಲ್ಲಿ ಗುಡುಗುಸಹಿತ ಮಳೆಯಾಗಿದೆ.

Advertisement

ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಾಮರಾಜನಗರ, ಕೊಡಗು, ತುಮಕೂರು, ಕೋಲಾರ ಸುತ್ತಲಿನ ಭಾಗಗಳಲ್ಲಿ ಧಾರಾಕಾರ ಮಳೆ ಸುರಿದಿದ್ದು, ಬಿಸಿಲಿನ ಧಗೆಗೆ ಕಂಗೆಟ್ಟಿದ್ದ ಜನರಿಗೆ ಪೂರ್ವಮುಂಗಾರು ಮಳೆ ತಂಪೆರೆಯಿತು.

ಸಂಜೆಯಿಂದಲೇ ಶುರುವಾದ ವರುಣನ ಆರ್ಭಟ ಕೆಲವೆಡೆ ರಾತ್ರಿ 9ರವರೆಗೂ ಮುಂದುವರಿದಿತ್ತು. ಇನ್ನೂ ಎರಡು ದಿನಗಳು ಇದೇ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪೂರ್ವಮುಂಗಾರಿನಲ್ಲಿ ಈ ರೀತಿಯ ಗುಡುಗು ಸಹಿತ ಮಳೆ ಸಹಜ. ಈ ಮಧ್ಯೆ, ಕೇರಳದ ಕೆಳಭಾಗದಿಂದ ಮಹಾರಾಷ್ಟ್ರದ ಮಧ್ಯೆ ಕಡಿಮೆ ಒತ್ತಡದ ತಗ್ಗು (ಟ್ರಫ್) ಉಂಟಾಗಿದೆ. ಇದು ಉತ್ತರ ಒಳನಾಡಿನಿಂದ ಹಾದು ಹೋಗಿದೆ. ಹಾಗಾಗಿ, ಅಲ್ಲಿಯೂ ಮಳೆ ಬೀಳುವ ಸಾಧ್ಯತೆಗಳಿವೆ.

ಚಂಡಮಾರುತದಂತಹ ಯಾವುದೇ ಚಟುವಟಿಕೆಗಳು ನಡೆದಿಲ್ಲ. ಈ ಮಳೆ ಇನ್ನೂ ಎರಡು ದಿನಗಳು ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕಚೇರಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Advertisement

ಈ ಮಧ್ಯೆ, ರಾತ್ರಿ 7ರಿಂದ 8ರವರೆಗೆ ಚಾಮರಾಜನಗರದಲ್ಲಿ 73 ಮಿ.ಮೀ., ನೆಲಮಂಗಲದಲ್ಲಿ 66.5, ಮಡಿಕೇರಿ 65.5 ಮಿ.ಮೀ., ಬೆಂಗಳೂರಿನ ಹೊರವಲಯದ ವಿವಿಧೆಡೆ 50ರಿಂದ 100 ಮಿ.ಮೀ.ನಷ್ಟು ಮಳೆ ದಾಖಲಾಗಿದೆ. ಬೆಂಗಳೂರು ಹೊರವಲಯದ ದೇವನಹಳ್ಳಿ ಬಳಿ ಸಿಡಿಲು ಬಡಿದು ಹನ್ನೆರಡು ಕುರಿಗಳು ಸಾವಿಗೀಡಾಗಿವೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ಕರಾವಳಿಯಲ್ಲೂ ಮಳೆ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಿವಿಧೆಡೆ ಮಂಗಳವಾರ ಮಧ್ಯಾಹ್ನದ ಬಳಿಕ ಮಳೆ ಬಂದಿದೆ. ಸುಬ್ರಹ್ಮಣ್ಯ ಸುತ್ತಮುತ್ತ ಗುಡುಗು, ಮಿಂಚು ಸಹಿತ ಸಾಧಾರಣ ಮಳೆಯಾಗಿದೆ. ಪುತ್ತೂರಿನಲ್ಲಿ ಮಧ್ಯಾಹ್ನ ಸುಮಾರು ಒಂದು ಗಂಟೆ ಕಾಲ ಉತ್ತಮ ಮಳೆ ಸುರಿಯಿತು. ಇದೇ ವೇಳೆ, ಕಲಬುರಗಿಯಲ್ಲಿ ರಾಜ್ಯದಲ್ಲಿಯೇ ಗರಿಷ್ಠ 43.1 ಡಿ.ಸೆ.ತಾಪಮಾನ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next