Advertisement

ಮೇಗದ್ದೆ ಶಾಲೆಗೆ ಖಾಯಂ ಶಿಕ್ಷಕರ ನೇಮಕ

01:52 AM Mar 19, 2020 | Sriram |

ಹೆಬ್ರಿ: ಮುಚ್ಚಿದ್ದ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಮೇಗದ್ದೆ ಸ.ಕಿ.ಪ್ರಾ. ಶಾಲೆ ಗ್ರಾಮಸ್ಥರ ಸತತ ಪ್ರಯತ್ನದಿಂದ ಕೊನೆಗೂ ತೆರೆದು 9 ತಿಂಗಳ ಬಳಿಕ ಖಾಯಂ ಶಿಕ್ಷಕರ ನೇಮಕವಾಗಿದ್ದು, ಪೋಷಕರ ಹಾಗೂ ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ ಬಿದ್ದಿದೆ.

Advertisement

ಅತಿಥಿ ಶಿಕ್ಷಕರು
ಮಕ್ಕಳಿಲ್ಲವೆಂದು ಮೂರು ವರ್ಷಗಳಿಂದ ಮುಚ್ಚಿದ್ದ ಸುಮಾರು 40 ವರ್ಷಗಳ ಇತಿಹಾಸವಿರುವ ಸರಕಾರಿ ಶಾಲೆ ಜೂನ್‌ ತಿಂಗಳಲ್ಲಿ ಆರಂಭಗೊಂಡು 8 ತಿಂಗಳು ಕಳೆದರೂ ಅತಿಥಿ ಶಿಕ್ಷಕರಿಂದಲೇ ಶಾಲೆ ನಡೆಯುತ್ತಿದೆ. ಈ ಬಗ್ಗೆ ಉದಯವಾಣಿ ಸಮಗ್ರ ಸರಣಿ ಲೇಖನಗಳನ್ನು ಪ್ರಕಟಿಸುತ್ತಲೇ ಇದ್ದು ಇಲಾಖೆ ಸ್ಪಂದಿಸಿ ಖಾಯಂ ಹುದ್ದೆ ನೇಮಕ ಮಾಡಿದ್ದು ಶಿಕ್ಷಕರು ಇನ್ನಷ್ಟೇ ಶಾಲೆಗೆ ನಿಯೋಜನೆಗೊಳ್ಳಬೇಕಾಗಿದೆ.

ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ
ಗ್ರಾಮಸ್ಥರ ಸತತ ಪ್ರಯತ್ನದಿಂದ ಈಗಾಗಲೇ 11 ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದು ಖಾಯಂ ಶಿಕ್ಷಕರಿಲ್ಲದೆ ಪೋಷಕರು ಮಕ್ಕಳ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದರು. ಈ ಭಾಗದಲ್ಲಿ 60ಕ್ಕೂ ಮಿಕ್ಕಿ ಮನೆಗಳಿವೆ. ಸ್ವಲ್ಪ ದೂರದಲ್ಲಿರುವ ಪ್ರವಾಸಿ ತಾಣ ಪ್ರದೇಶ ಕೂಡ್ಲು ಪರಿಸರದಲ್ಲಿ ಸುಮಾರು 15ಕ್ಕೂ ಮಿಕ್ಕಿ ಪರಿಶಿಷ್ಟ ಜಾತಿ, ಪಂಗಡದವರಿದ್ದು ಹತ್ತಿರದ ಶಾಲೆ ಅಭಿವೃದ್ಧಿಗೊಂಡರೆ ಮಕ್ಕಳ ವಿದ್ಯಾಭ್ಯಾಸಕ್ಕೆ ಅನೂಕೂಲ ವಾಗುತ್ತದೆ ಎನ್ನುವುದು ಸ್ಥಳೀಯರ ಅನಿಸಿಕೆ.

ಶಾಲೆ ಆರಂಭವಾಗಿ 8 ತಿಂಗಳಿಂದ ಮಕ್ಕಳಿಗೆ ಸಮಸ್ಯೆಯಾಗಬಾರದೆಂದು ನಿಟ್ಟಿನಲ್ಲಿ ಗೌರವ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು ಕೊನೆಗೆ ಇಲಾಖೆ ವಿಶೇಷ ಮುತುವರ್ಜಿ ವಹಿಸಿ ವೇತನವನ್ನು ನೀಡಿದೆ.ತೀರಾ ಗ್ರಾಮೀಣ ಪ್ರದೇಶದಲ್ಲಿರುವ ಶಾಲೆಗೆ ಇನ್ನೂ ಸರಕಾರ ವತಿಯಿಂದ ಶಿಕ್ಷಕರ ನೇಮಕವಾಗದೆ ಅತಂತ್ರ ಸ್ಥಿತಿಯಲ್ಲಿರುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಬಾರದು ಎಂಬ ನಿಟ್ಟಿನಲ್ಲಿ ಈ ಭಾಗದ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಇಲಾಖಾ ಅಧಿಕಾರಿಗಳಿಗೆ ನಿರಂತರ ಮನವಿ ನೀಡುವುದರ ಮೂಲಕ ತಮ್ಮೂರಿನ ಶಾಲೆಯನ್ನು ಉಳಿಸಬೇಕು, ಈ ಭಾಗದ ಬಡ ವಿದ್ಯಾರ್ಥಿಗಳಿಗೆ ನೆರವಾಗಬೇಕು ಎಂಬ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡಿದ ಫಲವಾಗಿ ಖಾಯಂ ಶಿಕ್ಷಕರ ನೇಮಕವಾಗಿದ್ದು ಸಂತಸ ತಂದಿದೆ.

ಗ್ರಾಮಸ್ಥರ ಸತತ ಪ್ರಯತ್ನದಿಂದ ಮತ್ತೆ ತೆರೆದ ಶಾಲೆಗೆ ಖಾಯಂ ಶಿಕ್ಷಕರ ನಿಯೋಜನೆಯಾಗಿದೆ. ಸದ್ಯಕ್ಕೆ ಅಡ್ಡಿ ದೂರಾಗಿದೆಯಾದರೂ ನಿಯೋಜಿತರು ಕೆಲಸ ಆರಂಭಿಸಬೇಕಷ್ಟೆ. ಶಾಲೆಯ ಸಮಸ್ಯೆಗಳು ದೂರವಾಗುವ ಆಶಾಭಾವ ಜನರದ್ದು.

Advertisement

ಇಲಾಖೆ ಕ್ರಮ ವಹಿಸಲಿ
ಖಾಯಂ ಶಿಕ್ಷಕರ ನೇಮಕವಾದರೂ ಅವರು ಈ ಶಾಲೆಗೆ ಬರಲು ಹಿಂಜರಿಯುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಸರಕಾರ ಹಾಗೂ ಇಲಾಖೆ ಕಟ್ಟುನಿಟ್ಟಿನ ಕ್ರಮ ಪಾಲಿಸಬೇಕು. ಇಲ್ಲದಿದ್ದಲ್ಲಿ ಇಲ್ಲಿ ಕೆಲಸ ಮಾಡಲು ಆಸಕ್ತಿ ಇರುವವರಿಗೆ ಅವಕಾಶ ಕಲ್ಪಿಸಬೇಕು ಎಂದು ಈ ಭಾಗದ ಶಿಕ್ಷಣ ಪ್ರೇಮಿಗಳು ತಿಳಿಸಿದ್ದಾರೆ.

ಸಮಸ್ಯೆ ಬಗೆಹರಿಯಲಿದೆ
ಗ್ರಾಮೀಣ ಪ್ರದೇಶವಾದ್ದರಿಂದ ಸಮಸ್ಯೆಯಾಗಿದೆ. ಮುಚ್ಚಿದ್ದ ಶಾಲೆಯನ್ನು ಶೀಘ್ರವಾಗಿ ತೆರೆದಿದ್ದರಿಂದ ಅಲ್ಲಿ ಹುದ್ದೆ ಸೃಷ್ಟಿಯಾಗಿರಲಿಲ್ಲ. ಇದೀಗ ಸಮಸ್ಯೆ ಬಗೆಹರಿದಿದ್ದು ಇಬ್ಬರು ಶಿಕ್ಷಕಿಯರನ್ನು ನೇಮಕ ಮಾಡಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸಮಸ್ಯೆ ಸಂಪೂರ್ಣ ಬಗೆಹರಿಯಲಿದ್ದು, ಈ ಬಗ್ಗೆ ಪೋಷಕರು ಯಾವುದೇ ಗೊಂದಲ ಪಡುವ ಆವಶ್ಯಕತೆ ಇಲ್ಲ.
-ಶಶಿಧರ್‌, ಕ್ಷೇತ್ರ ಶಿಕ್ಷಣಾಧಿಕಾರಿ, ಕಾರ್ಕಳ

ವಿಶೇಷ ಮುತುವರ್ಜಿ ಅಗತ್ಯ
40 ವರ್ಷಗಳ ಇತಿಹಾಸವಿರುವ ಮುಚ್ಚಿಹೋದ ಮೇಗದ್ದೆ ಸರಕಾರಿ ಶಾಲೆಯನ್ನು ಗ್ರಾಮಸ್ಥರ ನಿರಂತರ ಪ್ರಯತ್ನದಿಂದ ಇಲಾಖೆ ಪುನರಾರಂಭಿಸಿರುವುದು ಸಂತೋಷದ ಸಂಗತಿ. ಖಾಯಂ ಶಿಕ್ಷಕರ ನೇಮಕ ಈ ಹಿಂದೆಯೇ ಆಗಬೇಕಿತ್ತು. ತಡವಾಗಿ ಆದರೂ ಇನ್ನೂ ಯಾರು ಕರ್ತವ್ಯಕ್ಕೆ ಹಾಜರಾಗಿಲ್ಲ. ಮುಂದಿನ ವರ್ಷದಿಂದ ಈ ಶಾಲೆಗೆ ಸೇರಲು ಹಲವಾರು ವಿದ್ಯಾರ್ಥಿಗಳಿದ್ದು, ನೇಮಕವಾದ ಶಿಕ್ಷಕರಿಗೆ ಶೀಘ್ರ ಕರ್ತವ್ಯಕ್ಕೆ ಹಾಜರಾಗುವಂತೆ ಇಲಾಖೆ ಆದೇಶ ನೀಡಿ ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಇಲಾಖೆ ಹಾಗೂ ಜನಪ್ರತಿನಿಧಿಗಳು ವಿಶೇಷ ಮುತುವರ್ಜಿ ವಹಿಸಬೇಕಾಗಿದೆ.
-ರಮೇಶ್‌ ಮೇಗದ್ದೆ ,
ಸಾಮಾಜಿಕ ಕಾರ್ಯಕರ್ತರು

Advertisement

Udayavani is now on Telegram. Click here to join our channel and stay updated with the latest news.

Next