Advertisement

ಅವರೆಕಾಯಿ : ಕಡಿಮೆ ಖರ್ಚು ಅಧಿಕ ಲಾಭ

12:30 AM Feb 25, 2019 | |

ಮಿಶ್ರಬೆಳೆಯಾಗಿ ಅವರೆಕಾಯಿ ಬೆಳೆದರೆ ಲಾಭ ಹೆಚ್ಚು. ಶ್ರಮ, ಖರ್ಚು ಬೇಡದ ಅವರೇಕಾಯಿ ಬೆಳೆಯನ್ನು ಸಾವಯವ ಪದ್ಧತಿಯಲ್ಲಿ ಬೆಳೆದರೆ ಲಾಭ ಹೆಚ್ಚು. 

Advertisement

ಜಾಸ್ತಿ ಗೊಬ್ಬರ ಬೇಡದ, ನೀರು ಕೇಳದ ಹೆಚ್ಚಿನ ಶ್ರಮವಿಲ್ಲದೆ ಬೆಳೆದುಬಿಡಬಹುದಾದ ತರಕಾರಿ ಯಾವುದು?ಉತ್ತರ ಸುಲಭ. ಅದುವೇ ಅವರೇಕಾಯಿ. 

ಅವರೆಕಾಯಿ ದ್ವಿದಳ ಧಾನ್ಯದ ಬೆಳೆ. ಹೀಗಾಗಿ, ಹೆಚ್ಚು ಮೇಲ್ಗೊಬ್ಬರ ಕೊಡುವ ಅವಶ್ಯಕತೆ ಇಲ್ಲ, ಮಣ್ಣು ಫ‌ಲವತ್ತಾಗಿದ್ದರೆ ಅಷ್ಟೇ ಸಾಕು. ಆದರೆ ತುಂಬಾ ಜನ ರೈತರು ಇದಕ್ಕೂ ಮೂಟೆಗಟ್ಟಲೆ ರಾಸಾಯನಿಕ ಗೊಬ್ಬರ ಸುರಿಯುತ್ತಾರೆ. ಇದರಿಂದ ಬೆಳೆ ವಿಷಕಾರಿಯಾಗುವುದರ ಜೊತೆಗೆ ಸುಮ್ಮನೆ ಗೊಬ್ಬರಕ್ಕೆ ಹಾಕಿದ ದುಡ್ಡು ಹಾಳು; ರೋಗ ಹೆಚ್ಚು.  ಸಾವಯವದಲ್ಲಿ ಬೆಳೆದರೆ ಗಿಡಗಳು ಸದೃಢವಾಗಿ ಬೆಳೆದು,  ಸಣ್ಣ ಪುಟ್ಟ ರೋಗಗಳನ್ನು ಮೆಟ್ಟಿ ನಿಂತು ಸಿಂಪರಣೆಗಾಗಿ ಮಾಡುವ ಖರ್ಚು ಉಳಿಸುತ್ತವೆ.

ಬಿತ್ತನೆ ಕಾಲ 
ಅವರೆಯನ್ನು ವರ್ಷದಲ್ಲಿ ಎರಡು ಸಲ ಬೆಳೆಯಬಹುದು, ಏಪ್ರಿಲ್‌, ಮೇ, ಜೂನ್‌ ಹಾಗೂ ಡಿಸೆಂಬರ್‌-ಜನವರಿ ಅವರೆ ಬಿತ್ತನೆಗೆ ಸೂಕ್ತ.  ಒಂದು ಎಕರೆ ಅವರೆ ಬೆಳೆಯಲು 12 ರಿಂದ 15 ಕೆ.ಜಿಯಷ್ಟು ಬೀಜ ಬೇಕಾಗುತ್ತದೆ. ಒಂದೂವರೆ ಅಡಿಯ ಸಾಲು ಬಿಟ್ಟು ಅರ್ಧ ಅಡಿಗೊಂದು ಬೀಜ ಬರುವಂತೆ ಬಿತ್ತನೆ ಮಾಡಬೇಕು. ಬಿತ್ತನೆಗೂ ಮೊದಲು ಒಂದು ಎಕರೆ ಜಮೀನಿಗೆ ಸುಮಾರು ಎಂಟು ಟನ್‌ನಷ್ಟು ಕೊಟ್ಟಿಗೆ ಗೊಬ್ಬರ ಹಾಕಬೇಕು.  ಅದು ಲಭ್ಯವಿಲ್ಲದಿದ್ದರೆ ಹಾಗೇ ಬಿತ್ತನೆ ಮಾಡಿ ನಂತರ ಮೊದಲ ಸಲ ಉಳುಮೆ ಮಾಡುವಾಗ ಒಂದು ಟನ್‌ನಷ್ಟು ಒಳ್ಳೆ ಗುಣಮಟ್ಟದ ಎರೆಹುಳು ಗೊಬ್ಬರ ಕೊಡಬೇಕು.  ಹೊಲ ತೀರ ಫ‌ಲವತ್ತಾಗಿರದೇ ಹೋದಲ್ಲಿ ಮಾತ್ರ ಬಿತ್ತನೆ ಮಾಡುವಾಗ 10 ಕೆ.ಜಿ ಯೂರಿಯಾ, 20 ಕೆ.ಜಿ ಡಿ….ಎ.ಪಿ, 10 ಕೆ.ಜಿ ಪೊಟ್ಯಾಶ್‌ ಗೊಬ್ಬರ ಕೊಡಿ. ಇದಕ್ಕೂ ಹೆಚ್ಚಿಗೆ ಬೇಡ. ಅರ್ಕಾ ಜಯ್‌ ಹೆಬ್ಟಾಳ,  ಅರ್ಕಾ ವಿಜಯ್‌ ಪ್ರಮುಖ ಅವರೆ ತಳಿ. ಇದರ ಜೊತೆಗೆ ಅರ್ಕಾ ಸಂಭ್ರಮ್‌, ಶಿಲ್ಪ, ಹೆಚ್‌.ಎ ಹಲವಾರು ಖಾಸಗಿ ಕಂಪನಿಯ ಅಧಿಕ ಇಳುವರಿ ಕೊಡುವ ಬೀಜಗಳು ಈಗ ಲಭ್ಯ.

ನಿರ್ವಹಣೆ 
ಸಾವಯದಲ್ಲಿ ಬೆಳೆಯುವುದಾದರೆ, ಅವರೆ ಒಂದು ತಿಂಗಳಿಗೂ ಮೊದಲು ಸಾಲಿನಲ್ಲಿ ಎರೆಹುಳು ಗೊಬ್ಬರ ಹಾಕಿ, ಮಣ್ಣು ಬುಡಕ್ಕೆ ಏರುವ ಹಾಗೆ ಸಾಲು ಮಾಡಿ ನೀರು ಕೊಡಿ. ಹಾಗೆಯೇ 15 ದಿನಕ್ಕೊಮ್ಮೆ ಜೀವಾಮೃತ ಸಿಂಪರಣೆ ಮಾಡಿ.

Advertisement

ಅವರೆಕಾಯಿ ಬೆಳೆಯನ್ನು ಕಾಡುವುದು ಕಾಯಿ ಕೊರೆಯುವ ಹುಳ ಹಾಗೂ ಸಸ್ಯ ಹೇನು ಮಾತ್ರ. ಸಾವಯವದಲ್ಲಿ ಇವೆರಡೂ ಕೀಟಬಾಧೆ ಹತೋಟಿ ಮಾಡುವುದಾದರೆ : ಪ್ರತಿ ಹದಿನೈದು ದಿನಕ್ಕೊಮ್ಮೆ ಹಸುವಿನ ಗಂಜಲ  ಅರಿಷಿಣ ಪುಡಿ  ಹಸಿ ಮೆಣಸಿನಕಾಯಿ ಕಷಾಯ ಹಾಗೂ ಜಜ್ಜಿ ಹಿಂಡಿದ ಬೆಳ್ಳುಳ್ಳಿ ಕಷಾಯ ಮಿಕ್ಸ್‌ ಮಾಡಿ ಸಿಂಪರಣೆ ಮಾಡಿ. ಇದರಿಂದ ಸಸ್ಯ ಹೇನು ಹಾಗೂ ಕಾಯಿಕೊರಕ ಹತ್ತಿರ ಸುಳಿಯುವುದಿಲ್ಲ. ಹಸಿಮೆಣಸಿನಕಾಯಿ ಹಾಗೂ ಸೋಪಿನ ಪುಡಿ ದ್ರಾವಣವನ್ನೂ ಸಿಂಪಡಿಸಿ ಕೀಟಗಳ ಹಾವಳಿ ತಡೆಯಬಹುದು. ಅಷ್ಟಾಗಿಯೂ ಕೀಟ ಕಾಡತೊಡಗಿದರೆ ಸಾವಯವ ಕೀಟನಾಶಕ ಕೊಂಡು ತಂದು ಬಳಸಿ.

ಲಾಭ ಜಾಸ್ತಿ
ಒಂದು ಎಕರೆಯಿಂದ ಗರಿಷ್ಠ ಆರು ಟನ್‌ ಅವರೆಕಾಯಿ ಇಳುವರಿ ಪಡೆಯಬಹುದು. ತೆಂಗಿನ, ಇತರೆ ತೋಟಗಾರಿಕಾ ಗಿಡಗಳ ನಡುವೆ ಮಿಶ್ರಬೆಳೆಯಾಗಿಯೂ ಅವರೆ ಬೆಳೆಯಬಹುದು. ಇದರಿಂದ ಒಂದೇ ಖರ್ಚಿನಲ್ಲಿ ಎರಡು ಆದಾಯ ಪಡೆಯುವುದರ ಜೊತೆಗೆ ಅವರೆ ಬೆಳೆಯುವುದರಿಂದ ಭೂಮಿ ಫ‌ಲವತ್ತಾಗುವುದು.

– ಎಸ್‌.ಕೆ ಪಾಟೀಲ್‌

Advertisement

Udayavani is now on Telegram. Click here to join our channel and stay updated with the latest news.

Next