Advertisement

ಗ್ರಾಮ ಮಟ್ಟದಲ್ಲಿ ಪೌತಿ ಖಾತೆ ಆಂದೋಲನ

01:53 PM Nov 09, 2020 | Suhan S |

ಬೆಂಗಳೂರು: ಕೃಷಿ ಜಮೀನಿದ್ದರೂ ಹಕ್ಕು ಪತ್ರ ಇಲ್ಲದೆ ಹಲವು ರೈತರು ಸರ್ಕಾರದ ಸಾಲ ಸೌಲಭ್ಯ, ಬೆಳೆಪರಿಹಾರ ಸೇರಿದಂತೆ ಇನ್ನಿತರ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.

Advertisement

ಇದನ್ನು ಗಂಭೀರವಾಗಿ ಪರಿಗಣಿಸಿರುವ ಕಂದಾಯ ಇಲಾಖೆ ಈಗಾಗಲೇ “ಪೌತಿ/ ವಾರಸಾಖಾತೆ ಆಂದೋಲನ’ರೂಪಿಸಿದ್ದು ಶೀಘ್ರದಲ್ಲೆ ಬೆಂಗಳೂರು ನಗರ ಜಿಪಂ ವ್ಯಾಪ್ತಿಯ ಗ್ರಾಮಮಟ್ಟದಲ್ಲಿ ನಡೆಸಲು ನಿರ್ಧರಿಸಿದೆ. ಕೃಷಿ ಜಮೀನಿನ ಮಾಲೀಕರು ಮರಣಹೊಂದಿದ ನಂತರ ವಾರಸಾ ರೀತ್ಯಾ ಮಾಲೀಕತ್ವವು ಉತ್ತರಾಧಿಕಾರಿಗಳ ಹೆಸರಿಗೆ ಬದಲಾವಣೆಯಾಗದೇ ಇದ್ದಲ್ಲಿ ಅಂತಹ ಜಮೀನುಗಳ ಸ್ವಾಧೀನ ಹೊಂದಿದ್ದರೂ ಕುಟುಂಬಸ್ಥರಿಗೆ ಆ ಜಮೀನು ಅಭಿವೃದ್ಧಿಪಡಿಸಲು ಸಾಧ್ಯವಾಗುವುದಿಲ್ಲ. ಜತೆಗೆ ಸರ್ಕಾರ ದಿಂದ ದೊರೆಯುವಂತಹ ಸಾಲ ಸೌಲಭ್ಯಗಳನ್ನು ಪಡೆಯಲಾಗದು. ಅಲ್ಲದೆ ಪ್ರಕೃತಿ ವಿಕೋಪದಂತಹ ವೇಳೆ ಬೆಳೆನಾಶವಾದಾಗ, ಬೆಳೆವಿಮೆ ಪರಿಹಾರ ಪಡೆಯಲು ಕಷ್ಟವಾಗುತ್ತದೆ. ಹಾಗೆ ಸರ್ಕಾರ ಸಾರ್ವಜನಿಕ ಉದ್ದೇಶಕ್ಕೆ ಭೂ ಸ್ವಾಧೀನ ಕಾಯ್ದೆಯಂತೆ ಭೂಮಿ ವಶಪಡಿಸಿಕೊಂಡಾಗಲೂ ಪರಿಹಾರದ ಹಣ ಪಡೆಯಲುವಿವಿಧಕಚೇರಿಗೆಅಲೆಯಬೇಕಾಗುತ್ತದೆ. ಈ ಎಲ್ಲಾ ಅಂಶಗಳನ್ನು ಮನಗಂಡು ಸರ್ಕಾರ ರೈತಾಪಿ ವರ್ಗದ ಸಮಸ್ಯೆ ಪರಿಹರಿಸಲು “ವಾರಸಾ ಖಾತೆ ಆಂದೋಲನ’ ರೂಪಿಸಿದೆ. ಅಲ್ಲದೆ ಈ ಸಂಬಂಧ ಕಂದಾಯ ಇಲಾಖೆ (ಭೂ ಕಂದಾಯ) ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದೆ.

ಆಯಾ ತಾಲೂಕುಗಳ ತಹಶೀಲ್ದಾರ್‌ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಲಕಾಲಕ್ಕೆ “ಪೌತಿ ವಹಿವಾಟುಗಳ ಆಂದೋಲನ’ದ ನೇತೃತ್ವ ವಹಿಸಿ ಆಂದೋಲನ ಹಮ್ಮಿಕೊಳ್ಳುವ ದಿನಾಂಕಗಳನ್ನು ಸಾರ್ವಜನಿಕರಿಗೆಪ್ರಚಾರ ಪಡಿಸುವಂತೆ ಕಂದಾಯ ಇಲಾಖೆ

ಹೊರಡಿಸಿರುವ ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ಅರ್ಜಿ ಸಲ್ಲಿಸುವುದು ಹೇಗೆ?: ಭೂ ಮಾಲೀಕರು ಮರಣವಾಗಿ ಒಂದು ವರ್ಷ ಮೀರಿದ್ದರೂ ಮರಣ ನೋಂದಾಣಿಯಾಗಿರದಿದ್ದಲ್ಲಿ ಸಂಬಂಧ ಪಟ್ಟ ಜೆಎಂಎಫ್ ನ್ಯಾಯಾಲಯದಲ್ಲಿ ಮರಣ ಆದೇಶ ಕುರಿತ ಪತ್ರ ಪಡೆದು, ಆ ನಂತರ ತಹಶೀಲ್ದಾರ್‌ ಅವರ ಕಾರ್ಯಾಲಯದಲ್ಲಿ ಮರಣ ಪತ್ರ ಪಡೆಯಬಹುದು. ಬಳಿಕ ಪೌತಿ ಖಾತೆ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು. ಹಾಗೆಯೇ ಆಧಾರ್‌ ಮತ್ತು ಪಡಿತರ ಚೀಟಿ ದಾಖಲೆಗಳನ್ನು ಪರಿಶೀಲಿಸಿಕೊಂಡು ಗ್ರಾಮಲೆಕ್ಕಿಗರು ಮತ್ತು ರಾಜಸ್ವ ನಿರೀಕ್ಷಕರು ಸ್ಥಳ ತನಿಖೆ/ಮಹರ್‌ಮಾಡಿ ಮೃತ ಖಾತೆದಾರರು ಮರಣ ಹೊಂದಿರುವ ಬಗ್ಗೆ ಸಂಬಂಧಪಟ್ಟ ವಾರಸುದಾರರಿಂದ ಅಫಿಡವಿಟ್‌ ಪಡೆದು, ಪೌತಿ ಖಾತೆಗಾಗಿ ಅರ್ಜಿ ದಾಖಲಿಸಬಹುದು.

ಮ್ಯುಟೇಶನ್‌ ಶುಲ್ಕ35ರೂ.ಆಗಿದ್ದು ಸಂಬಂಧ ಪಟ್ಟವರಿಂದ ಅರ್ಜಿಯನ್ನು ಪಡೆದು ಸ್ವೀಕೃತಿಯನ್ನು ಅರ್ಜಿ ದಾರರಿಗೆ ಗ್ರಾಮ ಲೆಕ್ಕಿಗರು ತಲುಪಿಸಬೇಕು. ಅಥವಾ ಸೂಕ್ತವಾಗಿ ಭರ್ತಿ ಮಾಡಿ, ಸಹಿ ಮಾಡಲ್ಪಟ್ಟ ಅರ್ಜಿಗಳನ್ನು (ನಮೂನೆ-1ರಂತೆ) ಸಂಬಂಧ ಪಟ್ಟನಾಡ ಕಚೇರಿಗಳಲ್ಲಿ ಅರ್ಜಿದಾರಾರು ದಾಖಲಿಸಬಹುದು.

Advertisement

ಮ್ಯುಟೇಶನ್‌ ವಿಲೇವಾರಿ 30 ದಿನಗಳ ಅವಕಾಶ :  ಮ್ಯುಟೇಶನ್‌ ವಿಲೇವಾರಿಗೆ ಮೂವ್ವತ್ತು ದಿನಗಳ ಅವಕಾಶ ನೀಡಲಾಗಿದೆ. ಇಂತಹ ಪ್ರಕರಣಗಳಲ್ಲಿ ಆಸಕ್ತರು ತಕರಾರು ಅರ್ಜಿಗಳನ್ನೂ ಸಲ್ಲಿಸಬಹುದಾಗಿದೆ. ತಕರಾರು ಬಂದರೆ ವಹಿವಾಟು ವಿವಾದಸ್ಪದ ಪ್ರಕರಣಗಳ ಪಟ್ಟಿಗೆ ಸೇರಿಸಲ್ಪಡುತ್ತದೆ. ಸದರಿ ಆಂದೋಲನದಲ್ಲಿ ಸ್ವೀಕೃತವಾಗುವ ತಕರಾರುಗಳನ್ನು ಖುದ್ದಾಗಿ ತಹಶೀಲ್ದಾರ್‌ ಗ್ರೇಡ್‌-1(ಕಸಬಾ ಹೋಬಳಿಗಳಿಗೆ),ತಹಶೀಲ್ದಾರ್‌ ಗ್ರೇಡ್‌- 2 (ಇತರೆ ಹೋಬಳಿಗಳಲ್ಲಿ) ಒಂದು ತಿಂಗಳ ಒಳಗೆ ಕ್ಯಾಂಪ್‌ ಮಾಡುವ ಮುಖಾಂತರ ಪರಿಹಾರ ಮಾಡಬಹುದಾಗಿದೆ.

ಗ್ರಾಮಲೆಕ್ಕಿಗರಿಂದ ಸಂದರ್ಶನ :  ಗ್ರಾಮಲೆಕ್ಕಿಗರೂ ಕೂಡ ಮರಣ ಹೊಂದಿದ ಖಾತೆದಾರರುಗಳ ವಿವರಗಳನ್ನು ಮರಣ ನೋಂದಣಿ ರಿಜಿಸ್ಟ್ರಾರ್‌, ಪರಿಹಾರ ತಂತ್ರಾಂಶ ಹಾಗೂ ಮನೆ ಮನೆಗಳನ್ನು ಸಂದರ್ಶಿಸುವ ಮೂಲಕ ಪಡೆಯಬಹುದಾಗಿದೆ. ಮರಣ ಪ್ರಮಾಣ ಪತ್ರ ಹಾಗೂ ವಂಶವೃಕ್ಷವನ್ನು ಮೃತಪಟ್ಟಿರುವಕುಟುಂಬದವರಿಂದ ಪಡೆದು ಭೂಮಿ ತಂತ್ರಾಂಶದಲ್ಲಿ ಪೌತಿ ಖಾತೆಗಾಗಿ ನಮೂನೆ-1ರಲ್ಲಿ ಅರ್ಜಿ ದಾಖಲಿಸಬಹುದು.

ಈಗಾಗಲೇ ಕಂದಾಯ ಇಲಾಖೆ “ಪೌತಿ ಖಾತೆ ಆಂದೋಲನ’ಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಶೀಘ್ರದಲ್ಲೆ ನಗರ ಜಿಪಂ ವ್ಯಾಪ್ತಿಯಲ್ಲಿಈ ಆಂದೋಲನ ನಡೆಯುವ ಸಾಧ್ಯತೆ ಇದೆ. ಜೆ. ದಿನಕರ್‌, ಆನೇಕಲ್‌ ತಾಪಂ ಕಂದಾಯ ಇಲಾಖೆ ಅಧಿಕಾರಿ

 

ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next