Advertisement

ಅಂಬೇಡ್ಕರ್‌ ಸ್ಪರ್ಧೆಗೆ ವಿರೋಧಿಸಿದ್ದೇಕೆ?

06:00 AM Aug 12, 2018 | Team Udayavani |

ನವದೆಹಲಿ: ದಲಿತ ಪರ ಎಂದು ಹೇಳಿಕೊಳ್ಳುವ ಕಾಂಗ್ರೆಸ್‌, ದಲಿತ ನಾಯಕ ಬಿ.ಆರ್‌.ಅಂಬೇಡ್ಕರ್‌ ಎರಡು ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದಾಗ ವಿರೋಧಿಸಿದ್ದೇಕೆ? ಸಂಸತ್‌ನ ಸೆಂಟ್ರಲ್‌ ಹಾಲ್‌ನಲ್ಲಿ ನೆಹರು ಕುಟುಂಬದ ಮೂವರು ವ್ಯಕ್ತಿಗಳ ಭಾವಚಿತ್ರಗಳಿವೆಯಾದರೂ, ಅಂಬೇಡ್ಕರ್‌ ಚಿತ್ರ ಯಾಕಿಲ್ಲ? ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಸಿನಿಮಾ ನಟರಿಗೆ ಭಾರತ ರತ್ನ ನೀಡಿದ್ದರೂ ಅಂಬೇಡ್ಕರ್‌ಗೆ ಯಾಕೆ ಭಾರತ ರತ್ನ ನೀಡಲಿಲ್ಲ? ಹೀಗೆಂದು ಕಾಂಗ್ರೆಸ್‌ಗೆ ಪ್ರಶ್ನೆಗಳ ಸುರಿಮಳೆಯನ್ನು ಹಾಕಿದ್ದು ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಹಾಗೂ ಕೇಂದ್ರ ಸಚಿವ ರಾಮ ವಿಲಾಸ್‌ ಪಾಸ್ವಾನ್‌. ದಲಿತ ಪರ ಎಂದು ಗುರುತಿಸಿಕೊಳ್ಳುವ ಕಾಂಗ್ರೆಸ್‌ಗೆ ಹದಿನಾಲ್ಕು ಪ್ರಶ್ನೆಗಳನ್ನೂ ಪಾಸ್ವಾನ್‌ ಕೇಳಿದ್ದಾರೆ. 

Advertisement

ಜೊತೆಗೆ, ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ರೂಪಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪಾಸ್ವಾನ್‌, ಈ ಮಸೂದೆಯನ್ನು ಸಮಾಜವಾದಿ ಪಕ್ಷ ವಿರೋಧಿಸಿದ್ದೇಕೆ ಎಂದು ಕೇಳಿದ್ದಾರೆ. ದಲಿತ ಪರ ಮಸೂದೆ ಮಂಡಿಸಿ ಅನುಮೋದನೆ ಪಡೆದರೂ ನಮ್ಮನ್ನು ದಲಿತರ ವಿರೋಧಿ ಎಂದು ಕಾಂಗ್ರೆಸ್‌ ಕರೆಯುತ್ತಿದೆ ಎಂದು ಅವರು ಆಕ್ಷೇಪಿಸಿದ್ದಾರೆ.

ಕೇಂದ್ರದ ವಿರುದ್ಧ ರಾಹುಲ್‌ ಟೀಕೆ: ಇನ್ನೊಂದೆಡೆ, ದಲಿತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳ ಕುರಿತು ಕೇಂದ್ರ ಸರ್ಕಾರವನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ದಲಿತರ ಮೇಲೆ ಹೆಚ್ಚು ದೌರ್ಜನ್ಯಗಳು ನಡೆದಿವೆ ಎಂಬ ಮಾಧ್ಯಮ ವರದಿಯೊಂದನ್ನು ಪ್ರಸ್ತಾಪಿಸಿರುವ ರಾಹುಲ್‌, ಪ್ರಧಾನಿ ಮೋದಿ ಅವರು ಇನ್ನಾದರೂ ಎಚ್ಚೆತ್ತು, ಇಂಥ ದೌರ್ಜನ್ಯಗಳ ತಡೆಗೆ ಮುಂದಾಗುವುರೇ ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next