Advertisement

ಪರ್ಯಾಯ ಮಹೋತ್ಸವ: ನಾಡಹಬ್ಬ ಸಡಗರಕ್ಕೆ ಅಣಿಯಾದ ಉಡುಪಿ

11:05 AM Jan 17, 2018 | Team Udayavani |

ಉಡುಪಿ: ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಉಡುಪಿ ಶ್ರೀಕೃಷ್ಣನ ಪೂಜೆಗಾಗಿ ಜ. 18ರಂದು ಸರ್ವಜ್ಞ ಪೀಠಾರೋಹಣಗೈಯಲಿದ್ದು ಈ ಪರ್ಯಾಯ ಮಹೋತ್ಸವಕ್ಕೆ ಪೊಡವಿಗೊಡೆಯನ ನಾಡು ಅಲಂಕೃತಗೊಂಡು ಅಣಿಯಾಗಿದೆ.

Advertisement

ಜ. 3ರಂದು ಪುರಪ್ರವೇಶಗೈದ ಅನಂತರ ಉಡುಪಿ ಪೂರ್ಣಪ್ರಮಾಣದಲ್ಲಿ ಪರ್ಯಾಯಕ್ಕೆ ಸಿದ್ಧ ವಾಗಿತ್ತು. ಜ. 5ರಂದು ಶ್ರೀಗಳ ಪರ್ಯಾಯಕ್ಕೆ ಹೊರೆಕಾಣಿಕೆ ಸಮರ್ಪಣೆ ಆರಂಭಗೊಂಡು ಜ. 16ರ ವರೆಗೂ ಹೊರೆಕಾಣಿಕೆ ಸಲ್ಲಿಕೆಯಾಗಿದೆ. ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದವರು ಕೂಡ ಹೊರೆಕಾಣಿಕೆ ಸಲ್ಲಿಸಿ ಸೌಹಾರ್ದ ಮೂಡುವಂತೆ ಮಾಡಿದ್ದಾರೆ.

ಎಲ್ಲರ ಪರ್ಯಾಯ
ಶ್ರೀಕೃಷ್ಣ ಮಠದ ಪೂಜಾ ಕೈಂಕರ್ಯಕ್ಕಾಗಿ ಸರ್ವಜ್ಞ ಪೀಠಾ ರೋಹಣಗೈಯುವ ನನಗೆ ಮಾತ್ರವೇ ಪರ್ಯಾಯ ವಲ್ಲ. ನಾಡಹಬ್ಬ ವಾಗಿರುವ ಪರ್ಯಾಯ ಪ್ರತಿ ಯೊಬ್ಬರದ್ದು. ಎಲ್ಲರಿಗೂ ಶ್ರೀಕೃಷ್ಣನ ಅನುಗ್ರಹ ದೊರೆಯ ಬೇಕು ಎಂಬ ಪಲಿಮಾರು ಶ್ರೀಗಳ ನುಡಿ ಯಂತೆಯೇ ಭಕ್ತವರ್ಗ ಸಿದ್ಧತೆಗಾಗಿ ತೊಡ ಗಿಸಿ ಕೊಂಡಿದ್ದು ಇದೀಗ ಸಿದ್ಧತೆ ಬಹುತೇಕ ಪೂರ್ಣ ಹಂತಕ್ಕೆ ಬಂದಿದೆ. ವಿವಿಧ ಸಂಘ-ಸಂಸ್ಥೆಗಳು ಕೂಡ ಪರ್ಯಾಯ ಸಂಭ್ರಮದ ಯಶಸ್ಸಿಗೆ ಕೈಜೋಡಿಸಿವೆ.

ಸಾಂಪ್ರದಾಯಿಕತೆಯೊಂದಿಗೆ ಹೊಸತನ 
ಪರ್ಯಾಯ ಮಹೋತ್ಸವ ಎಂದರೆ ಅದು ಶ್ರೀಕೃಷ್ಣ ಮಠದಲ್ಲಿ ಅಷ್ಟಮಠಾಧೀಶರ ಪೈಕಿ ಒಂದು ಮಠದ ಶ್ರೀಗಳ ಅಧಿಕಾರದಡಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಆರಂಭವೆಂದೇ ತಿಳಿಯಲಾಗುತ್ತದೆ. ಈ ಬಾರಿ ಸಂಪ್ರದಾಯ, ಸಂಸ್ಕೃತಿಯ ಉತ್ಸವಕ್ಕೆ ಆದ್ಯತೆ ನೀಡಲು ಪರ್ಯಾಯ ಸ್ವಾಗತ ಸಮಿತಿ ನಿರ್ಧರಿಸಿದೆ. ಅದರಂತೆಯೇ ಪರ್ಯಾಯ ಮೆರವಣಿಗೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಸಂಪ್ರದಾಯದೊಂದಿಗೆ ಹೊಸತನದ ಸ್ಪರ್ಶದಲ್ಲಿ ನೆರವೇರುತ್ತಿವೆ.

ಒಂದೆಡೆ ಪಲಿಮಾರು ಶ್ರೀಗಳ ದ್ವಿತೀಯ ಪರ್ಯಾಯ ವಾದರೆ ಇನ್ನೊಂದೆಡೆ ಐತಿಹಾಸಿಕ ಪಂಚಮ ಪರ್ಯಾಯ ಪೀಠವನ್ನು ಯಶಸ್ವಿಯಾಗಿ ಪೂರೈಸಿರುವ ಪೇಜಾವರ ಶ್ರೀ ವಿಶ್ವೇಶತೀರ್ಥರು ಶ್ರೀಕೃಷ್ಣನ ಪೂಜೆ ಮತ್ತು ಮಠದ ಅಧಿಕಾರವನ್ನು ಹಸ್ತಾಂತರಿಸುವ ಅಪೂರ್ವ ಸಂದರ್ಭ. ಇದು ಈ ಬಾರಿಯ ಪರ್ಯಾಯವನ್ನು ವಿಶೇಷವಾಗಿ ಗುರು ತಿಸುವಂತೆ ಮಾಡಿದೆ. 32ನೇ  ಪರ್ಯಾಯ ಚಕ್ರವೂ ಜ. 18ರಂದು ಆರಂಭಗೊಳ್ಳುತ್ತಿದೆ.

Advertisement

ಪವಿತ್ರಸ್ನಾನದಿಂದ ಮಹಾಪೂಜೆಯ ವರೆಗೆ 
ಪರ್ಯಾಯ ಉತ್ಸವದ ಪ್ರಮುಖ ವಿಧಿವಿಧಾನ ಗಳಾದ ಬಾಳೆಮುಹೂರ್ತ, ಕಟ್ಟಿಗೆ ಮುಹೂರ್ತ, ಪುರಪ್ರವೇಶ ಮೊದಲಾದವುಗಳ ಅನಂತರ ಅತ್ಯಂತ ಮುಖ್ಯ ಕಾರ್ಯಕ್ರಮಗಳು ಆರಂಭಗೊಳ್ಳುವುದು ಕಾಪು ದಂಡತೀರ್ಥದಲ್ಲಿ ಪವಿತ್ರಸ್ನಾನದ ಅನಂತರ. ಜ. 18ರಂದು ಬೆಳಗಿನ ಜಾವ ಕಾಪು ದಂಡತೀರ್ಥ ದಲ್ಲಿ ಪವಿತ್ರ ಸ್ನಾನ ಮಾಡುವ ಭಾವೀ ಪರ್ಯಾಯ ಶ್ರೀಗಳು 3 ಗಂಟೆಯ ವೇಳೆಗೆ ಜೋಡುಕಟ್ಟೆ ಮಂಟಪದಲ್ಲಿ ಪಟ್ಟದ ದೇವರಿಗೆ ಪೂಜೆ ನೆರವೇರಿಸಿ ಮೆರವಣಿಗೆಯಲ್ಲಿ ರಥಬೀದಿಗೆ ಆಗಮಿಸಿ 5.30ರ ವೇಳೆಗೆ ಕನಕನಕಿಂಡಿಯಲ್ಲಿ ಕೃಷ್ಣದರ್ಶನ, ಅನಂತೇಶ್ವರ ಚಂದ್ರಮೌಳೇಶ್ವರ ದೇವರ ದರ್ಶನ ಮಾಡು ತ್ತಾರೆ. ಅನಂತರ ಶ್ರೀಕೃಷ್ಣ ಮಠ ಪ್ರವೇಶಿಸಿ ಅಕ್ಷಯಪಾತ್ರೆ ಸ್ವೀಕರಿಸಿ ಪವಿತ್ರ ಸರ್ವಜ್ಞ ಪೀಠಾರೋಹಣ ಗೈಯು ತ್ತಾರೆ. 6.50ರ ಸುಮಾರಿಗೆ ರಾಜಾಂಗಣದಲ್ಲಿ ಪರ್ಯಾಯ ದರ್ಬಾರ್‌ ನಡೆಸಲಿದ್ದಾರೆ. ಬೆಳಗ್ಗೆ 11ಕ್ಕೆ ಮಹಾಪೂಜೆ ನೆರವೇರಲಿದೆ. ಇದಕ್ಕೂ ಮುನ್ನ ಪರ್ಯಾಯದ ಮೊದಲ ಲಕ್ಷ ತುಳಸೀ ಅರ್ಚನೆ ನಡೆಯಲಿದೆ. ಮಧ್ಯಾಹ್ನ ಅನ್ನಪ್ರಸಾದ ವಿತರಣೆ ನಡೆಯಲಿದೆ. ಈ ಬಾರಿ ಜ.17ರ ರಾತ್ರಿ ಕೂಡ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದೆ.

ಭವ್ಯ ಮೆರವಣಿಗೆ
ಜ. 17ರಂದು ರಾತ್ರಿ ನಾಡಿನ ವಿವಿಧೆಡೆಯಿಂದ ಆಗಮಿಸುವ ಸಾವಿರಾರು ಮಂದಿ ಶ್ರೀಕೃಷ್ಣನ ದರ್ಶನಗೈದು ಅನಂತರ ಭವ್ಯ ಮೆರವಣಿಗೆ ಕಣ್ತುಂಬಿ ಕೊಳ್ಳಲು ಕಾತರಿಸುತ್ತಾರೆ. ಈ ವೇಳೆ ರಥಬೀದಿ ಸೇರಿ ದಂತೆ ನಗರದ ವಿವಿಧೆಡೆ ಆಯೋ ಜನೆ ಯಾಗುವ ಆಕರ್ಷಕ ಸಾಂಸ್ಕೃತಿಕ ಕಾರ್ಯ ಕ್ರಮಗಳು ಹೊಸ ಲೋಕವೊಂದನ್ನೇ ಸೃಷ್ಟಿಸಿ ದಂತಿರುತ್ತದೆ. ಈ ಬಾರಿಯ ಮೆರವಣಿಗೆ ಯಲ್ಲಿಯೂ ಹೊಸತನವನ್ನು ಅಳವಡಿಸಿ ಕೊಳ್ಳುವ ಪ್ರಯತ್ನ ನಡೆಸಲಾಗಿದೆ. ಸ್ತಬ್ಧಚಿತ್ರ ಗಳು, ಕಲಾತಂಡಗಳು, ಸಂಕೀರ್ತನೆ, ಭಜನಾ ತಂಡ ಗಳು ಒಳಗೊಂಡ ಅಪೂರ್ವ ಶೋಭಾಯಾತ್ರೆ ಯನ್ನು ಆಯೋಜಿಸಲಾಗಿದೆ. ಶೋಭಾಯಾತ್ರೆ ಸಾಗುವ ಜೋಡುಕಟ್ಟೆ – ಕೆ.ಎಂ. ಮಾರ್ಗ – ಕನಕದಾಸ ರಸ್ತೆ ಗಳು ವಿದ್ಯುತ್‌ ದೀಪಗಳಿಂದ ಅಲಂಕೃತವಾಗಿವೆ. ನಗರದ ಕಟ್ಟಡಗಳು ಕೂಡ ವಿದ್ಯುತ್‌ ಬೆಳಕಿನಲ್ಲಿ  ಕಂಗೊಳಿಸುತ್ತಿವೆ.

ಪಲಿಮಾರು ಶ್ರೀಗಳ ಸಂಕಲ್ಪ
ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ತಮ್ಮ ಪರ್ಯಾಯ ಅವಧಿಯಲ್ಲಿ ಶ್ರೀಕೃಷ್ಣ ಮಠದ ಗರ್ಭಗುಡಿಯ ಮೇಲ್ಛಾವಣಿಗೆ ಚಿನ್ನದ ಹೊದಿಕೆ, ಪ್ರತಿದಿನವೂ ಲಕ್ಷ ತುಳಸಿ ಅರ್ಚನೆ, ಎರಡು ವರ್ಷವೂ ಅಖಂಡ ಭಜನೆ ಮೊದಲಾದ ಸಂಕಲ್ಪಗಳನ್ನು ಮಾಡಿದ್ದು ಈ ಕಾರಣಕ್ಕಾಗಿಯೂ ಪಲಿಮಾರು ಪರ್ಯಾಯ ವಿಶಿಷ್ಟವೆನಿಸಲಿದೆ. ನಾಡಿನ ಪ್ರಮುಖ ಶ್ರದ್ಧಾ ಕೇಂದ್ರವಾಗಿರುವ ಶ್ರೀಕೃಷ್ಣ ಮಠ ತಮ್ಮ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಮಾಜಿಕ ಸೇವಾ, ಸಾಂಸ್ಕೃತಿಕ ಕಾರ್ಯಗಳಿಗೂ ವಿಶೇಷವಾಗಿ ಗುರುತಿಸಿಕೊಂಡಿದೆ. ಪ್ರತಿ ಪರ್ಯಾಯಗಳು ಕೂಡ ನಾಡಿಗೆ ಮಹತ್ವದ ಕೊಡುಗೆಗಳನ್ನು ನೀಡುತ್ತಾ ಬಂದಿರುವುದು ಉಲ್ಲೇಖನೀಯ. 

ಇಂದು ರಾತ್ರಿ ಪೇಜಾವರ ಶ್ರೀಗಳಿಗೆ ಅಭಿವಂದನೆ
ಐತಿಹಾಸಿಕ ಪರ್ಯಾಯ ಪೂರೈಸಿ ಯತಿಶ್ರೇಷ್ಠರೆನಿಸಿಕೊಂಡಿರುವ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮತ್ತು ಅವರ ಶಿಷ್ಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರನ್ನು ಅಭಿನಂದಿಸುವ ಅಪೂರ್ವ ಗಳಿಗೆಗೆ ಜ. 17ರಂದು ರಾತ್ರಿ 7 ಗಂಟೆಯ ಸುಮಾರಿಗೆ ರಥಬೀದಿಯ ಶ್ರೀ ಪರವಿದ್ಯಾ ಮಂಟಪ ಸಾಕ್ಷಿಯಾಗಲಿದೆ. ಜ. 18ರಂದು ದರ್ಬಾರ್‌ ಸಮಾರಂಭದಲ್ಲಿ ಪಲಿಮಾರು ಶ್ರೀಗಳು ಪೇಜಾವರ ಶ್ರೀಗಳನ್ನು ಮತ್ತು ಡಾ| ಡಿ. ವೀರೇಂದ್ರ ಹೆಗ್ಗಡೆ ಅವರನ್ನು ವಿಶೇಷವಾಗಿ ಗೌರವಿಸಲಿದ್ದಾರೆ. ಇತರ 14 ಮಂದಿ ಸಾಧಕರಿಗೆ ದರ್ಬಾರ್‌ ಸಮ್ಮಾನ ದೊರೆಯಲಿದೆ. ದರ್ಬಾರ್‌ ಸಭಾಂಗಣಕ್ಕೆ ಪಾಸ್‌ ಹೊಂದಿದವರಿಗೆ ಅವಕಾಶ ನೀಡಲಾಗುತ್ತದೆ.

ಅಕ್ಷಯ ಪಾತ್ರೆ, ಕೀಲಿಕೈ
ಶ್ರೀಕೃಷ್ಣನ ದರ್ಶನ ಮಾಡುವ ಭಾವೀ ಪರ್ಯಾಯ ಶ್ರೀಗಳಿಗೆ ಪೀಠ ತೆರವುಗೊಳಿಸುವ ಸ್ವಾಮೀಜಿಯವರು ಅಕ್ಷಯಪಾತ್ರೆ, ಸಟ್ಟುಗ ಮತ್ತು ಶ್ರೀಕೃಷ್ಣ ಮಠದ ಬೀಗದ ಕೈಗೊಂಚಲನ್ನು ನೀಡುತ್ತಾರೆ. ಇದು ಪರ್ಯಾಯದ ಅತ್ಯಂತ ಪ್ರಮುಖ ಘಟ್ಟ. ಮಧ್ವಾಚಾರ್ಯರ ಕಾಲದಿಂದಲೂ ಸಂರಕ್ಷಿಸಿಕೊಂಡು ಬಂದ ಈ ಪಾತ್ರೆ, ಸಟ್ಟುಗ ಅಧಿಕಾರ ಹಸ್ತಾಂತರದ ಒಂದು ಸಂಕೇತ. ಈ ಪಾತ್ರೆ ಇದ್ದಲ್ಲಿ ಅನ್ನದಾನ ಅಕ್ಷಯವಾಗುತ್ತದೆ ಎನ್ನುವುದು ನಂಬಿಕೆ. ಅಂತೆಯೇ ಉಡುಪಿ ಶ್ರೀಕೃಷ್ಣನನ್ನು ಅನ್ನಬ್ರಹ್ಮ ಎಂಬುದಾಗಿಯೂ ಕರೆಯಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next