Advertisement

ಮುಂದಿನ ತಿಂಗಳ 14ರಿಂದ ಅ.1ರ ವರೆಗೆ ನಡೆಯಲಿವೆ‌ ಒಟ್ಟು 18 ಕಲಾಪಗಳು

03:00 AM Aug 29, 2020 | Hari Prasad |

ಹೊಸದಿಲ್ಲಿ: ಕೋವಿಡ್ 19 ಆತಂಕದ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಸಂಸತ್‌ನ ಮುಂಗಾರು ಅಧಿವೇಶನಕ್ಕೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ.

Advertisement

ಸೆ.14ರಂದು ಆರಂಭವಾಗಲಿರುವ ಅಧಿವೇಶನ ಒಂದು ದಿನವೂ ವಿರಾಮ ತೆಗೆದುಕೊಳ್ಳದೆ ಅಕ್ಟೋಬರ್‌ 1ರವರೆಗೆ ನಡೆಯಲಿದೆ.

ಉಭಯ ಸದನಗಳಲ್ಲಿ ಒಟ್ಟು 18 ಕಲಾಪಗಳು ನಡೆಯಲಿವೆ. ಪ್ರತಿ ಸದನವೂ ನಿತ್ಯ 4 ಗಂಟೆಗಳ ಕಾಲ ನಡೆಯಲಿದೆ. ರಾಜ್ಯಸಭೆ ಅಧಿವೇಶನ ದಿನದ ಆರಂಭದ 4 ಗಂಟೆ, ಬಳಿಕ ಲೋಕಸಭೆಯ ಕಲಾಪಗಳು 4 ಗಂಟೆ ನಡೆಯಲಿವೆ.

ನೋ ಬ್ರೇಕ್‌: ಕಲಾಪ ಸಂಬಂಧ ಮಾಹಿತಿ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ, ‘ಒಟ್ಟು 18 ಕಲಾಪಗಳ ನಡುವೆ ಯಾವುದೇ ವಿರಾಮಗಳು ಇರುವುದಿಲ್ಲ. ವಾರಾಂತ್ಯದ ರಜೆಗಳನ್ನು ನೀಡಿದರೆ ಸಂಸದರು ಬೇರೆ ಸ್ಥಳಗಳಿಗೆ ಪ್ರಯಾಣಿಸುವ ಸಾಧ್ಯತೆ ಇರುತ್ತದೆ. ಇದರಿಂದ ಸೋಂಕಿನ ಅಪಾಯ ಹೆಚ್ಚಾಗಬಹುದು. ವೀಕೆಂಡ್‌ನ‌ ಬಿಡುವು ನೀಡಿದರೆ ಅ. 1ರ ಆಚೆಗೂ ಅಧಿವೇಶನ ಮುಂದುವರಿಸಬೇಕಾಗುತ್ತದೆ. ಹೀಗೆ ಕಲಾಪ ವಿಸ್ತರಿಸುವುದು ಈ ಸಂದರ್ಭದಲ್ಲಿ ಸುರಕ್ಷಿತವಲ್ಲ’ ಎಂದು ಹೇಳಿದರು.

11 ಅಧ್ಯಾದೇಶ: ಉಭಯ ಸದನಗಳ ಅಂಗೀಕಾರಕ್ಕಾಗಿ ಕೇಂದ್ರ ಸರಕಾರ 11 ಅಧ್ಯಾದೇಶಗಳನ್ನು ತರಲು ಸಜ್ಜಾಗಿದೆ. ಇವು ಸಂಸದೀಯ ವ್ಯವಹಾರ, ಆರೋಗ್ಯ, ಹಣಕಾಸು, ಕೃಷಿ ಸಚಿವಾಲಯಕ್ಕೆ ಸಂಬಂಧಿಸಿವೆ.

Advertisement

ಕಾಂಗ್ರೆಸ್‌ ಸದನ ತಂತ್ರ: ಸರಕಾರ ಪ್ರಕಟಿಸುವ ಅಧ್ಯಾದೇಶ ಚರ್ಚೆಗೆ ಹಾಗೂ ಆಡಳಿತ ವೈಫ‌ಲ್ಯಗಳನ್ನು ಪ್ರಶ್ನಿಸಲು ಪ್ರಮುಖ ವಿಪಕ್ಷ ಕಾಂಗ್ರೆಸ್‌ ಹಿರಿಯ ನಾಯಕರನ್ನು ಮುಂದೆ ಬಿಟ್ಟಿದೆ. ಪಿ. ಚಿದಂಬರಂ, ದಿಗ್ವಿಜಯ ಸಿಂಗ್‌, ಜೈರಾಮ್‌ ರಮೇಶ್‌, ಅಮರ್‌ ಸಿಂಗ್‌, ಗೌರವ್‌ ಗೊಗೊಯ್‌ ಅವರನ್ನೊಳಗೊಂಡ 5 ಸದಸ್ಯರ ಸಮಿತಿಯನ್ನು ಕಾಂಗ್ರೆಸ್‌ ರಚಿಸಿದೆ.

ಲಡಾಖ್‌ ಗಡಿ ಬಿಕ್ಕಟ್ಟು, ವಲಸೆ ಕಾರ್ಮಿಕರ ಸಮಸ್ಯೆ, ಕೋವಿಡ್ 19 ಆರ್ಥಿಕ ಬಿಕ್ಕಟ್ಟು ನಿರ್ವಹಣೆ ಕುರಿತು ಪ್ರಶ್ನೆಗಳ ದಾಳಿ ನಡೆಸಲು ಕಾಂಗ್ರೆಸ್‌ ತಂತ್ರ ಹೆಣೆದಿದೆ. ಕೋವಿಡ್ 19 ಪ್ರೊಟೋಕಾಲ್‌ ಅನ್ವಯ ಉಭಯ ಸದನಗಳ ಕಲಾಪಗಳು ನಡೆಯಲಿವೆ.

ಮುಂಗಾರು ಅಧಿವೇಶನ ಆರಂಭವಾಗುವ 72 ಗಂಟೆಗಳ ಮುಂಚೆ ಎಲ್ಲ ಸಂಸದರು, ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು ಮತ್ತು ಸಿಬಂದಿ ಕೋವಿಡ್ 19 ಪರೀಕ್ಷೆ ಮಾಡಿಸಿಕೊಳ್ಳಬೇಕು.
– ಓಂ ಬಿರ್ಲಾ, ಲೋಕಸಭೆ ಸ್ಪೀಕರ್‌

Advertisement

Udayavani is now on Telegram. Click here to join our channel and stay updated with the latest news.

Next