Advertisement

ಪಾರ್ಕಿನ್ಸನ್ಸ್‌ ಕಾಯಿಲೆಗೆ ನೂತನ ಚಿಕಿತ್ಸೆ : ಡೀಪ್‌ ಬ್ರೈನ್‌ ಸ್ಟಿಮ್ಯುಲೇಶನ್‌

04:13 PM Feb 06, 2022 | Team Udayavani |

ಪಾರ್ಕಿನ್ಸನ್ಸ್‌ ಕಾಯಿಲೆಯು ನರವ್ಯವಸ್ಥೆಯನ್ನು ಬಾಧಿಸುವ ಒಂದು ಪ್ರಗತಿಶೀಲ ಅನಾರೋಗ್ಯವಾಗಿದ್ದು, ರೋಗಪೀಡಿತನ ಚಲನೆಗೆ ತೊಂದರೆಯನ್ನು ಉಂಟುಮಾಡುತ್ತದೆ. ಪಾರ್ಕಿನ್ಸನ್ಸ್‌ ಕಾಯಿಲೆಯ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತವೆ. ಪ್ರಾರಂಭಿಕವಾಗಿ ಕಂಡುಬರುವ ಲಕ್ಷಣಗಳು ಲಘು ಸ್ವರೂಪದ್ದಾಗಿರಬಹುದು ಮತ್ತು ವ್ಯಕ್ತಿಗೆ ವಯಸ್ಸಾಗುತ್ತಿದ್ದಂತೆ ಅವು ಉಲ್ಬಣಿಸುತ್ತವೆ. ನಡುಕ, ಚಲನೆ ನಿಧಾನಗತಿಯದಾಗುವುದು, ಸ್ನಾಯುಗಳು ಬಿಗಿದುಕೊಳ್ಳುವುದು, ಬಾಗಿ ಬಿಗಿಹಿಡಿದಂತೆ ನಡೆಯುವುದು, ಮುಖದಲ್ಲಿ ಭಾವನೆಗಳ ಅಭಿವ್ಯಕ್ತಿ ನಷ್ಟವಾಗುವುದು ಈ ಕಾಯಿಲೆಯ ಕೆಲವು ಲಕ್ಷಣಗಳು. ಪಾರ್ಕಿನ್ಸನ್ಸ್‌ ಕಾಯಿಲೆಯನ್ನು ಆದ್ಯತೆಯಲ್ಲಿ ವೈದ್ಯಕೀಯ ಚಿಕಿತ್ಸೆಗೊಳಪಡಿಸಬೇಕು. ಕಾಯಿಲೆಯ ಆರಂಭಿಕ ಹಂತದಲ್ಲಿ ಲೆವೊಡೋಪಾದಂತಹ ಔಷಧಗಳು ತುಂಬಾ ಪರಿಣಾಮಕಾರಿಯಾಗಿದ್ದು, ಲಕ್ಷಣಗಳನ್ನು ಸಂಪೂರ್ಣವಾಗಿ ಕಡಿಮೆ ಮಾಡಬಲ್ಲವಾಗಿವೆ. ಆದರೆ ಕಾಯಿಲೆ ಪ್ರಗತಿ ಹೊಂದುತ್ತಿದ್ದಂತೆ ಬಹುತೇಕ ರೋಗಿಗಳು ಔಷಧಗಳನ್ನು ತಿರಸ್ಕರಿಸುತ್ತಾರೆ ಮಾತ್ರವಲ್ಲದೆ, ಹೆಚ್ಚು ಡೋಸ್‌ ಔಷಧಗಳು ಕೆಲವು ವರ್ಷಗಳ ಹಿಂದೆ ಒದಗಿಸುತ್ತಿದ್ದಂತಹ ಪ್ರಮಾಣದಲ್ಲಿ ರೋಗಲಕ್ಷಣಗಳಿಂದ ಉಪಶಮನ ನೀಡುವಲ್ಲಿ ವಿಫ‌ಲವಾಗುತ್ತವೆ. ಇಂತಹ ಹೆಚ್ಚು ಡೋಸ್‌ ಔಷಧಗಳನ್ನು ನೀಡುವುದರಿಂದ ಅಸಹಜ ಚಲನೆಗಳು ಉಂಟಾಗುವ ಡಿಸ್‌ಕೈನೇಸಿಯಾದಂತಹ ಅಡ್ಡ ಪರಿಣಾಮಗಳು ಕೂಡ ಉಂಟಾಗುತ್ತವೆ.

Advertisement

ಪಾರ್ಕಿನ್ಸನ್ಸ್‌ ಕಾಯಿಲೆಯ ಈ ಹಂತದಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ರೋಗ ಲಕ್ಷಣಗಳಿಂದ ಉತ್ತಮ ಉಪಶಮನವನ್ನು ಪಡೆಯಬಹುದಾಗಿದೆ ಮತ್ತು ಔಷಧಗಳ ಡೋಸ್‌ಗಳನ್ನು ತಗ್ಗಿಸಲು ಸಹಾಯ ಮಾಡುತ್ತದೆ. ಪಾರ್ಕಿನ್ಸನ್ಸ್‌ ಕಾಯಿಲೆಗೆ ಶಸ್ತ್ರಚಿಕಿತ್ಸೆಯನ್ನು ನೀಡುವುದು ಹೊಸ ವಿಚಾರವೇನೂ ಅಲ್ಲ; ಹಾಗೆ ಹೇಳುವುದಾದರೆ 1960ರ ಸಮಯದಲ್ಲಿ ಲೆವೊಡೋಪಾದಂತಹ ಔಷಧಗಳ ಪರಿಚಯವಾಗುವುದಕ್ಕೆ ಮುನ್ನ ಶಸ್ತ್ರಚಿಕಿತ್ಸೆಯೇ ಪಾರ್ಕಿನ್ಸನ್ಸ್‌ ಕಾಯಿಲೆಯ ನಿರ್ವಹಣ ವಿಧಾನವಾಗಿತ್ತು. ಹಿಂದಿನ ಕಾಲದಲ್ಲಿ ಈ ಶಸ್ತ್ರಚಿಕಿತ್ಸೆಯ ಮೂಲಕ ರೋಗಿಯಲ್ಲಿ ರೋಗ ಲಕ್ಷಣಗಳು ಉಂಟಾಗಲು ಕಾರಣವಾಗುವ ಮಿದುಳಿನ ಸಣ್ಣ ಭಾಗವನ್ನು ನಾಶಪಡಿಸುವುದು ಸೇರಿತ್ತು. ಆದರೆ ಪ್ರಸ್ತುತ ವೈದ್ಯಕೀಯ ಜಗತ್ತು ತಾಂತ್ರಿಕವಾಗಿ, ಶಸ್ತ್ರಚಿಕಿತ್ಸಾತ್ಮಕವಾಗಿ ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದು, ಡೀಪ್‌ ಬ್ರೈನ್‌ ಸ್ಟಿಮ್ಯುಲೇಶನ್‌ ಮೂಲಕ ಹೆಚ್ಚು ಉತ್ತಮ ಫ‌ಲಿತಾಂಶವನ್ನು ಪಡೆಯಲು ಸಾಧ್ಯವಾಗುತ್ತಿದೆ. ಆಧುನಿಕ ನರವಿಜ್ಞಾನದಲ್ಲಿ ಡೀಪ್‌ ಬ್ರೈನ್‌ ಸ್ಟಿಮ್ಯುಲೇಶನ್‌ ಎಂಬುದು ಅತ್ಯುಚ್ಚ ಬೆಳವಣಿಗೆಗಳಲ್ಲಿ ಒಂದಾಗಿದ್ದು, ಪಾರ್ಕಿನ್ಸನ್ಸ್‌ ಕಾಯಿಲೆಯಂತಹ ಚಲನೆಗೆ ಸಂಬಂಧಿಸಿದ ಅನಾರೋಗ್ಯಗಳ ಚಿಕಿತ್ಸೆಯಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ಉಂಟುಮಾಡಿದೆ. ಈ ಶಸ್ತ್ರಚಿಕಿತ್ಸೆಯ ಅತೀ ದೊಡ್ಡ ಪ್ರಯೋಜನ ಎಂದರೆ ಇದರಲ್ಲಿ ಮಿದುಳಿನ ಯಾವುದೇ ಭಾಗವನ್ನು ನಾಶಪಡಿಸುವುದು ಒಳಗೊಂಡಿಲ್ಲ ಮತ್ತು ಕನಿಷ್ಠ ಅಡ್ಡಪರಿಣಾಮಗಳೊಂದಿಗೆ ಸುಲಭವಾಗಿ ಸಹಜ ಸ್ಥಿತಿಗೆ ಮರಳಬಹುದಾಗಿದೆ.

ನಡುಕ, ಬಿಗಿತ ಮತ್ತು ನಡೆಯಲು ತೊಂದರೆ ಇಂತಹ ರೋಗಲಕ್ಷಣಗಳನ್ನು ಹೊಂದಿರುವ ಪಾರ್ಕಿನ್ಸನ್ಸ್‌ ಕಾಯಿಲೆಗೆ ಡೀಪ್‌ ಬ್ರೈನ್‌ ಸ್ಟಿಮ್ಯುಲೇಷನ್‌ (ಡಿಬಿಎಸ್‌) ಅಥವಾ ಮಿದುಳಿನ ಆಳವಾದ ಉತ್ತೇಜನವು ಚಿಕಿತ್ಸೆಯಾಗಿರುತ್ತದೆ. ಇದು ಪಾರ್ಕಿನ್ಸನ್ಸ್‌ ಕಾಯಿಲೆಯ ಔಷಧಗಳಿಂದಾಗುವ ಅಡ್ಡ ಪರಿಣಾಮಗಳನ್ನೂ ಉಪಶಮನಗೊಳಿಸುತ್ತದೆ. ಇದು ಪಾರ್ಕಿನ್ಸನ್ಸ್‌ ಗುಣಪಡಿಸುವುದಿಲ್ಲ ಮತ್ತು ಅದು ಹದಗೆಡುವುದನ್ನು ನಿಯಂತ್ರಿಸುವುದಿಲ್ಲ. ಆದರೆ ಕನಿಷ್ಠ 5 ವರ್ಷಗಳಿಂದ ನೀವು ಈ ಕಾಯಿಲೆಯನ್ನು ಹೊಂದಿದ್ದು ಔಷಧಗಳಿಂದ ನಿಮಗೆ ಸಾಕಷ್ಟು ಉಪಶಮನ ಸಿಗದಿದ್ದಲ್ಲಿ ಇದು ನಿಮಗಿರುವ ಆಯ್ಕೆಯಾಗಿರಬಹುದು.

ಮಿದುಳಿನ ಆಳವಾದ ಉತ್ತೇಜನ ಚಿಕಿತ್ಸೆಯಲ್ಲಿ, ಮಿದುಳಿನ ನಿರ್ದಿಷ್ಟ ಪ್ರದೇಶಗಳಲ್ಲಿ ಇಲೆಕ್ಟ್ರೋಡ್‌ಗಳನ್ನು ಇಟ್ಟಿರುತ್ತಾರೆ. ಈ ಇಲೆಕ್ಟ್ರೋಡ್‌ಗಳನ್ನು ಕುತ್ತಿಗೆ ಮೂಳೆಯ ಕೆಳಗಿನ ಎದೆಯ ಚರ್ಮದ ಕೆಳಭಾಗದಲ್ಲಿರುವ ಒಂದು ವಿಧದ ಪೇಸ್‌ಮೇಕರ್‌ ಸಾಧನ (ಇದನ್ನು ಇಂಪ್ಲಾಂಟೇಬಲ್‌ ಪಲ್ಸ್‌ ಜನರೇಟರ್‌ ಎನ್ನುತ್ತಾರೆ)ಕ್ಕೆ ವಯರ್‌ ಗಳ ಮೂಲಕ ಸಂಪರ್ಕಿಸಿರುತ್ತಾರೆ.
ಒಮ್ಮೆ ಸಕ್ರಿಯಗೊಳಿಸಿದ ಬಳಿಕ, ಪಲ್ಸ್‌ ಜನರೇಟರ್‌ ಮಿದುಳಿನ ನಿರ್ದಿಷ್ಟ ಪ್ರದೇಶಗಳಿಗೆ ವಿದ್ಯುತ್‌ ಕಂಪನಗಳನ್ನು ಕಳುಹಿಸುತ್ತದೆ ಮತ್ತು ಮಿದುಳಿನ ಆ ಪ್ರದೇಶದಲ್ಲಿ ಬ್ರೈನ್‌ ಸರ್ಕ್ನೂಟ್‌ಗಳನ್ನು ಮಾರ್ಪಡಿಸುತ್ತದೆ. ಮಿದುಳಿನ ಆಳ ಉತ್ತೇಜನ ವ್ಯವಸ್ಥೆಯು ಹೃದಯದ ಪೇಸ್‌ಮೇಕರ್‌ ಕೆಲಸ ಮಾಡುವ ರೀತಿಯಲ್ಲೇ ಕಾರ್ಯನಿರ್ವಹಿಸುತ್ತದೆ. ವಾಸ್ತವದಲ್ಲಿ, ಮಿದುಳಿನ ಆಳ ಉತ್ತೇಜನವನ್ನು “ಮಿದುಳಿನ ಪೇಸ್‌ ಮೇಕರ್‌’ ಎಂದು ಕರೆಯಲಾಗುತ್ತದೆ.

ಮುಂದುವರಿದ ಪಾರ್ಕಿನ್ಸನ್ಸ್‌ ಕಾಯಿಲೆಯ ರೋಗಲಕ್ಷಣಗಳು ಯಾವುವು?
ರೋಗಿಗಳು ಮೊದಲ ಬಾರಿಗೆ ತಮ್ಮ ಪಾರ್ಕಿನ್ಸನ್ಸ್‌ ಕಾಯಿಲೆ (ಪಿಡಿ)ಯ ಔಷಧಗಳನ್ನು ತೆಗೆದುಕೊಳ್ಳಲು ಆರಂಭಿಸಿದಾಗ, ದಿನವಿಡೀ ಅದರ ಪ್ರಯೋಜನಗಳ ಅನುಭವ ಪಡೆದುಕೊಳ್ಳುತ್ತಾರೆ. ಆದರೆ ಪಿಡಿ ಹದಗೆಟ್ಟಾಗ, ಔಷಧದಿಂದ ಪಡೆದ ಪ್ರಯೋಜನ ಮುಂದಿನ ಡೋಸ್‌ ತನಕ ಉಳಿಯುವುದಿಲ್ಲ ಎಂಬುದನ್ನು ರೋಗಿ ಗಮನಿಸಬಹುದು, ಇದನ್ನು “ವೇರಿಂಗ್‌ ಆಫ್ (wearing off)’ ಎಂದು ಕರೆಯುತ್ತಾರೆ. ಔಷಧದ ವೇರಿಂಗ್‌ ಆಫ್ ಅವಧಿಯಲ್ಲಿ, ಪಿಡಿಯ ರೋಗಲಕ್ಷಣಗಳು ಅಂದರೆ ನಡುಕ, ನಿಧಾನಗತಿ, ನಡೆಯಲು ಕಷ್ಟವಾಗುವಿಕೆ ಇವು ಪುನಃ ಕಾಣಿಸಿಕೊಳ್ಳಬಹುದು. ಔಷಧವನ್ನು ಪುನಃ ತೆಗೆದುಕೊಂಡಾಗ ರೋಗಲಕ್ಷಣಗಳು ಪುನಃ ಸುಧಾರಿಸುತ್ತವೆ ಮತ್ತು ಈ ಉತ್ತಮ ಅವಧಿಯನ್ನು “ಆನ್‌’ ಅವಧಿ ಎಂದು ಕರೆಯುತ್ತಾರೆ ಹಾಗೂ ಕೆಟ್ಟ ಅವಧಿಯನ್ನು “ಆಫ್’ ಎಂದು ಕರೆಯುತ್ತಾರೆ. ಈ ಔಷಧಗಳ ಅಡ್ಡಪರಿಣಾಮವಾಗಿ ರೋಗಿಗಳು ಡಿಸ್‌ಕೈನೇಸಿಯಾ ಎಂದು ಕರೆಯಲಾಗುವ ಅನೈಚ್ಛಿಕ ಚಲನೆಗಳನ್ನು (ತಿರುಚುವಿಕೆ ಮತ್ತು ತಿರುಗುವಿಕೆ) ಕೂಡ ಅನುಭವಿಸಬಹುದು ಮತ್ತು ಇವು ತೊಂದರೆಯನ್ನು ಹೆಚ್ಚಿಸುತ್ತವೆ.

Advertisement

ಡಿಬಿಎಸ್‌ನಿಂದ ಯಾವ ರೋಗಲಕ್ಷಣಗಳಿಗೆ ಪ್ರಯೋಜನವಾಗುವುದಿಲ್ಲ?
ಲೆವೊಪಾಡ್‌ ಔಷಧದಿಂದ ಸುಧಾರಣೆ ಕಾಣದ, ಯಾವುದೇ ರೋಗಲಕ್ಷಣಗಳನ್ನು ಮಿದುಳಿನ ಆಳ ಉತ್ತೇಜನದಿಂದ ಸುಧಾರಿಸುವ ಸಾಧ್ಯತೆ ಇಲ್ಲದೆ ಇರುವಾಗ ಡಿಬಿಎಸ್‌ನಿಂದ ಪ್ರಯೋಜನವಾಗುವುದಿಲ್ಲ. ಪಾರ್ಕಿನ್ಸನ್ಸ್‌ ಇರುವ ಕೆಲವು ಮಂದಿ ಔಷಧಕ್ಕೆ ಸ್ಪಂದಿಸದ ಸಂತುಲನೆಯ ಸಮಸ್ಯೆಗಳು ಮತ್ತು ಮಾತಿನ ಸಮಸ್ಯೆಗಳನ್ನು ಹೊಂದಿರುತ್ತಾರೆ. ಈ ತರದ ಸಮಸ್ಯೆಗಳನ್ನು “ಚಿಕಿತ್ಸೆಯನ್ನು ಪ್ರತಿರೋಧಿಸುವ ರೋಗಲಕ್ಷಣಗಳು’ ಎಂದು ಕರೆಯುತ್ತಾರೆ ಮತ್ತು ಮಿದುಳಿನ ಆಳ ಉತ್ತೇಜನದಿಂದ ಇವು ಇನ್ನೂ ಹದಗೆಡಬಹುದು. ಶಸ್ತ್ರಚಿಕಿತ್ಸೆಗೆ ಪರಿಗಣಿಸುವ ಮೊದಲು ತಜ್ಞರು ಈ ಸಮಸ್ಯೆಗಳನ್ನು ಎಚ್ಚರದಿಂದ ಪರಿಶೀಲಿಸುತ್ತಾರೆ. ಪಾರ್ಕಿನ್ಸನ್ಸ್‌ ಇರುವ ಕೆಲವರು ನೆನಪಿನ ಶಕ್ತಿಯ ತೊಂದರೆಗಳು ಮತ್ತು ಕಾಯಿಲೆಯ ಸ್ಥಿತಿಗೆ ಸಂಬಂಧಿಸಿದ ಅರಿವಿನ (ಕೊಗ್ನಿಟಿವ್‌) ಸಮಸ್ಯೆಗಳನ್ನು ಹೊಂದಿರುತ್ತಾರೆ.

ಈ ಬಗೆಯ ಸಮಸ್ಯೆಗಳು ಮಿದುಳಿನ ಆಳ ಉತ್ತೇಜನದ ಬಳಿಕ ಇನ್ನೂ ಹದಗೆಡಬಹುದು. ಹಾಗಾಗಿ ಶಸ್ತ್ರಚಿಕಿತ್ಸೆಯನ್ನು ಪರಿಗಣಿಸುವ ಮೊದಲು ಈ ಸಮಸ್ಯೆಗಳನ್ನು ಹೊರಗಿಡುವುದು ಬಹಳ ಮುಖ್ಯ. ಲೆವೊಪಾಡ್‌ ಔಷಧದಿಂದ ಸುಧಾರಣೆ ಕಾಣದ ಯಾವುದೇ ರೋಗಲಕ್ಷಣಗಳನ್ನು ಮಿದುಳಿನ ಆಳ ಉತ್ತೇಜನದಿಂದ ಸುಧಾರಿಸುವ ಸಾಧ್ಯತೆ ಇಲ್ಲ.

ಶಸ್ತ್ರಚಿಕಿತ್ಸೆ ಸುರಕ್ಷಿತವೇ?
ಸಾಮಾನ್ಯವಾಗಿ, ಡಿಬಿಎಸ್‌ ಒಂದು ಸುರಕ್ಷಿತ ಕಾರ್ಯವಿಧಾನವಾಗಿದೆ. ಯಾವುದೇ ಶಸ್ತ್ರಚಿಕಿತ್ಸೆಯಲ್ಲಿರುವಂತೆ, ಇದರಲ್ಲೂ ಕೆಲವು ಅಪಾಯಗಳಿವೆ. ಡಿಬಿಎಸ್‌ನ ಕೆಲವು ಅಪಾಯಗಳೆಂದರೆ ಸಾಧನದ ಸುತ್ತ ಸೋಂಕು ಕಾಣಿಸಿಕೊಳ್ಳುವುದು ಮತ್ತು ಮಿದುಳಿನಲ್ಲಿ ಅಥವಾ ಇಂಪ್ಲಾಂಟ್‌ ಜಾಗದಲ್ಲಿ ರಕ್ತಸ್ರಾವ ಕಂಡುಬರುವುದು. ನಿಮ್ಮ ನ್ಯೂರೋಸರ್ಜನ್‌ ಹೆಚ್ಚುವರಿ ಅಪಾಯಗಳ ಬಗ್ಗೆ ನಿಮ್ಮೊಂದಿಗೆ ಚರ್ಚಿಸುತ್ತಾರೆ. ಅಪಾಯಗಳು ಗಮನಾರ್ಹವಾಗಿ ಸಣ್ಣಮಟ್ಟದಲ್ಲಿರುತ್ತವೆ ಎಂದು ಅಧ್ಯಯನಗಳು ತೋರಿಸಿಕೊಟ್ಟಿವೆ, ಆದರೂ ಡಿಬಿಎಸ್‌ನ್ನು ಪರಿಗಣಿಸುವಾಗ ಅವುಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಹೆಚ್ಚಿನ ಅಡ್ಡ ಪರಿಣಾಮಗಳು ಸೌಮ್ಯ ಮತ್ತು ತಾತ್ಕಾಲಿಕವಾಗಿರುತ್ತವೆ. ಅವೆಂದರೆ: ತೂಕ ಹೆಚ್ಚಳ, ಶಬ್ದಗಳು ಸಿಗದಿರುವುದು, ಮಾತಿನ ಪ್ರಮಾಣ ಕಡಿಮೆಯಾಗುವುದು ಮತ್ತು ಪೇಸ್‌ಮೇಕರ್‌ ಅಥವಾ ಇಲೆಕ್ಟ್ರೋಡ್‌ ಸೋಂಕುಗಳು.

ಡೀಪ್‌ ಬ್ರೈನ್‌ ಸ್ಟಿಮ್ಯುಲೇಷನ್‌ ಶಸ್ತ್ರಚಿಕಿತ್ಸೆ ಯಾರಿಗೆ ಅಗತ್ಯ?
ಪಾರ್ಕಿನ್ಸನ್ಸ್‌ ರೋಗಿ ಔಷಧದಿಂದ ಉತ್ತಮ ಪ್ರಯೋಜನ ಪಡೆಯುವ ಸಾಧ್ಯತೆ ಇನ್ನೂ ಇದೆ; ಆದರೂ ಔಷಧ ಡೋಸಿಂಗ್‌ ಮತ್ತು ಅವಧಿಯಲ್ಲಿ ಬದಲಾವಣೆಯ ಹೊರತಾಗಿಯೂ ಔಷಧ ಕೆಲಸ ಮಾಡದ ಕೆಟ್ಟ ಅವಧಿಗಳು ಮತ್ತು/ಅಥವಾ ತೊಂದರೆ ಕೊಡುವ ಅಸಹಜ ಐಚ್ಛಿಕ ಚಲನೆಗಳು (ಡಿಸ್‌ಕೈನೇಸಿಯಾ) ಕೂಡ ಕಂಡುಬಂದಲ್ಲಿ, ಆಗ ಡಿಬಿಎಸ್‌ ಒಂದು ಆಯ್ಕೆಯಾಗಬಹುದು. ಉತ್ತಮ ಅಭ್ಯರ್ಥಿಗಳಿಗೆ ಉತ್ತಮ ಸಾಮಾಜಿಕ ಬೆಂಬಲದ ಆವಶ್ಯಕತೆ ಕೂಡ ಇದೆ. ಉತ್ತಮ ಅಭ್ಯರ್ಥಿಗಳಲ್ಲದ ರೋಗಿಗಳೆಂದರೆ: ನೆನಪಿನ ಶಕ್ತಿಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳು, ಭ್ರಾಂತಿ, ತೀವ್ರ ಖನ್ನತೆ ಮತ್ತು ಔಷಧ ಕೆಲಸ ಮಾಡುತ್ತಿದ್ದಾಗಲೂ ನಡೆಯುವಾಗ ಗಮನಾರ್ಹ ಅಸಂತುಲನೆ ಹೋಂದಿರುವ ರೋಗಿಗಳು.

– ಡಾ| ಅಜಯ್‌ ಹೆಗ್ಡೆ
ಅಸಿಸ್ಟೆಂಟ್‌ ಪ್ರೊಫೆಸರ್‌, ನ್ಯುರೋಸರ್ಜರಿ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next