Advertisement

ಬಿಜೆಪಿ ಹೋರಾಟಕ್ಕೆ ಪರಂ ಗರಂ

02:51 PM Jan 13, 2018 | |

ರಾಯಚೂರು: ಒಂದು ಪಕ್ಷದ ಕಚೇರಿಗೆ ಮುತ್ತಿಗೆ ಹೋರಾಟ ಮಾಡಿದ ನಿದರ್ಶನ ಇತಿಹಾಸದಲ್ಲೇ ಇಲ್ಲ. ಆದರೆ, ಬಿಜೆಪಿಯವರು ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕುವ ಹೋರಾಟ ಮಾಡುತ್ತಿದ್ದಾರೆ. ಆದರೆ, ನಮ್ಮ ಕಾರ್ಯಕರ್ತರು ಮನಸು ಮಾಡಿದರೆ ಎಲ್ಲಿಗೆ ಬೇಕಾದರೂ ನುಗ್ಗಬಲ್ಲರು ಎಂಬುದನ್ನು ಅವರು ಮನಗಾಣಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ತಿಳಿಸಿದರು.

Advertisement

ನಗರದ ಮಹಿಳಾ ಸಮಾಜ ಮೈದಾನದಲ್ಲಿ ಕಾಂಗ್ರೆಸ್‌ ನಡಿಗೆ; ವಿಜಯದ ಕಡೆಗೆ ಕಾರ್ಯಕ್ರಮದ ನಿಮಿತ್ತ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು. ಬಿಜೆಪಿಯವರು ಬೆಂಕಿ ಹಚ್ಚುವ ಕೆಲಸ ಮಾಡಿದರೆ, ನಾವು ಆರಿಸುವ ಕೆಲಸ ಮಾಡುತ್ತೇವೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ರಾಜ್ಯಕ್ಕೆ ಬಂದು ಭ್ರಷ್ಟಾಚಾರ, ಅತ್ಯಾಚಾರದ ಬಗ್ಗೆ ಮಾತನಾಡುತ್ತಾರೆ. ಆದರೆ, ಮೊದಲು ತಮ್ಮ ರಾಜ್ಯದಲ್ಲಿನ ಅರಾಜಕತೆ ನಿಲ್ಲಿಸಲಿ. ನಮ್ಮ ನಾಯಕರು ಮೊದಲಿನಿಂದಲೂ ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡುತ್ತಾರೆ. ಅವರಂತೆ ಕಾವಿ ತೊಟ್ಟು ಮಾಡಬಾರದ್ದನ್ನೆಲ್ಲ ಮಾಡುವುದಿಲ್ಲ ಎಂದು ಟಾಂಗ್‌ ನೀಡಿದರು. 

ಕಾಂಗ್ರೆಸ್‌ ಎಲ್ಲ ಧರ್ಮಿಯರು ಒಪ್ಪುವ ಹಿಂದುತ್ವ ಆಚರಿಸುತ್ತಿದೆ. ಸ್ವಾಮಿ ವಿವೇಕಾನಂದ ಅದನ್ನೇ ಹೇಳಿದ್ದಾರೆ. ಕಾಂಗ್ರೆಸ್ಸಿನದು ಮೃಧು ಹಿಂದುತ್ವ ಎಂದು ಬಿಜೆಪಿ ಹೇಳುತ್ತಿದೆ. ಆದರೆ, ಧರ್ಮಗಳ ಮಧ್ಯೆ ಕಿಚ್ಚು ಹಚ್ಚುವಂಥ ಹಿಂದುತ್ವ
ನಮ್ಮದಲ್ಲ ಎಂದರು. 

ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಟೀಕಿಸುವ ಬಿಜೆಪಿ ನಾಯಕರು, ಯಾವುದಾದರೂ ಒಂದು ದಾಖಲೆ ಕೊಡಲಿ. ಸುಳ್ಳು ಹೇಳಿಕೊಂಡು ಓಡಾಡಿದರೆ ಏನು ಪ್ರಯೋಜನವಿಲ್ಲ. ನಾಲ್ಕೂವರೆ ವರ್ಷದಲ್ಲಿ ಒಂದೇ ಒಂದು ಭ್ರಷ್ಟಾಚಾರವಿಲ್ಲದ ಸರ್ಕಾರ ನಡೆಸಿದ್ದೇವೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌.ಆರ್‌.ಪಾಟೀಲ್‌ ಮಾತನಾಡಿ, 70 ವರ್ಷ ಆಳಿದ ನಾವು ಏನು ಮಾಡಿಲ್ಲವಂತೆ, ಹಾಗಾದ್ರೆ ಎಲ್ಲ ಅಭಿವೃದ್ಧಿ ಬಿಜೆಪಿಯವರು ಮಾಡಿದ್ದಾರಾ? ಕಾಂಗ್ರೆಸ್‌ ಮುಕ್ತ ಭಾರತ ಮಾಡುವುದಾಗಿ ಮೋದಿ ಹೇಳುತ್ತಾರೆ.
ಆದರೆ, ಕಾಂಗ್ರೆಸ್‌ ದೇಶಕ್ಕಾಗಿ ಹೋರಾಡಿದ ಪಕ್ಷವಾಗಿದ್ದು, ಆರೂವರೆ ಲಕ್ಷ ಜನ ತ್ಯಾಗ ಬಲಿದಾನ ಮಾಡಿದ್ದಾರೆ. ಆದರೆ, ಬಿಜೆಪಿಯವರು ದೇಶಕ್ಕಾಗಿ ಏನು ತ್ಯಾಗ ಮಾಡಿದ್ದಾರೆ ಹೇಳಲಿ ಎಂದರು.

Advertisement

ನಾಲ್ಕೂವರೆ ವರ್ಷದ ಆಡಳಿತದಲ್ಲಿ ನಮ್ಮ ಸರ್ಕಾರವ ವಿರುದ್ಧ ಒಂದೇ ಒಂದು ಭ್ರಷ್ಟಾಚಾರದ ಆರೋಪಗಳಿಲ್ಲ. ಸ್ವತ್ಛ ಆಡಳಿತ ನೀಡಿದ್ದೇವೆ. ನೀಡಿದ್ದ ಭರವಸೆಗಳೆಲ್ಲ ಈಡೇರಿಸಿದ್ದೇವೆ. ನಾವು ರೈತರ ಸಾಲ ಮನ್ನಾ ಮಾಡಿದ್ದೇವೆ. ಆದರೆ, ಬಿಜೆಪಿ ನಾಯಕರು ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ರಾಜ್ಯ ಬರದಿಂದ ನರಳುತ್ತಿದ್ದರೂ ಕೇಂದ್ರ ಒತ್ತಡ ಹಾಕಲು ರಾಜ್ಯದ 17 ಬಿಜೆಪಿ ಸಂಸದರಿಗೆ ಏನಾಗಿತ್ತು ಎಂದು ಪ್ರಶ್ನಿಸಿದರು.

ಸಂಸದ ಕೆ.ಎಚ್‌.ಮುನಿಯಪ್ಪ ಮಾತನಾಡಿ, ಇಂದು ಸಂವಿಧಾನಕ್ಕೆ ಮಾರಕವಾಗುವಂಥ ಸನ್ನಿವೇಶ ನಿರ್ಮಾಣವಾಗಿದೆ. ಸಂಸದ ಅನಂತಕುಮಾರ್‌ ಹೆಗಡೆ ಸಂವಿಧಾನ ಬದಲಿಸುವ ಮಾತನ್ನಾಡುತ್ತಾರೆ. ಇದು ನಿಜಕ್ಕೂ ಖೇದಕರ. ಸಂವಿಧಾನ ರಕ್ಷಿಸುವ ಕೆಲಸ ಕಾಂಗ್ರೆಸ್‌ ಎದುರಿಗಿದೆ. ಅಮಿತ್‌ ಶಾ, ಪ್ರಧಾನಿ ಮೋದಿಯವರು ಕೋಮು ಗಲಭೆ ಸೃಷ್ಟಿಸಿ ರಾಜ್ಯದಲ್ಲಿ ಸರ್ಕಾರ ತರಲು ಓಡಾಡುತ್ತಿದ್ದಾರೆ. ಆದರೆ, ರಾಜ್ಯದ ಮತದಾರರು ಬುದ್ಧಿವಂತರು. ಯಾರಿಗೆ ಮತ ನೀಡಬೇಕು ಎಂಬುದು ಗೊತ್ತಿದೆ ಎಂದರು.

ಬಿ.ವಿ.ನಾಯಕ, ಎಂಎಲ್‌ಸಿ ಎನ್‌.ಎಸ್‌ .ಬೋಸರಾಜು, ಶರಣಪ್ಪ ಮಟ್ಟೂರ್‌, ಶಾಸಕರಾದ ಹಂಪನಗೌಡ ಬಾದರ್ಲಿ, ಪ್ರತಾಪಗೌಡ ಪಾಟೀಲ್‌, ಹಂಪಯ್ಯ ನಾಯಕ, ಜಿಲ್ಲಾಧ್ಯಕ್ಷ ರಾಮಣ್ಣ ಇರಬಗೇರಾ, ಮುಖಂಡರಾದ ವಸಂತಕುಮಾರ್‌,
ಬಸವನಗೌಡ ಪಾಟೀಲ ಇತರರಿದ್ದರು. 

ಬ್ಯಾನರ್‌ನಲ್ಲೂ ಭಿನ್ನಮತ ನಗರ ಮತ್ತು ಗ್ರಾಮೀಣ ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು ನಗರದ ಮಹಿಳಾ
ಸಮಾಜ ಆವರಣದಲ್ಲಿ ಕಾಂಗ್ರೆಸ್‌ ಸಮಾವೇಶ ಆಯೋಜಿಸಲಾಗಿತ್ತು. ಆದರೆ, ಅಲ್ಲೂ ಭಿನ್ನಮತದ ಎಳೆ ಎದ್ದು ಕಂಡಿತು. ವೇದಿಕೆ ಹಿಂಭಾಗದಲ್ಲಿ ಅವಳಡಿಸಿದ್ದ ಬ್ಯಾನರ್‌ನಲ್ಲಿ ಜಿಲ್ಲೆಯ ಪ್ರಮುಖರ ಭಾವಚಿತ್ರವಿದ್ದರೂ ಎಂಎಲ್‌ಸಿ ಎನ್‌.ಎಸ್‌,ಬೋಸರಾಜ್‌ ಅವರ ಚಿತ್ರ ಕಾಣಿಸಲಿಲ್ಲ. ಆದರೆ, ಭಾವಚಿತ್ರದಲ್ಲಿ ರಾರಾಜಿಸುತ್ತಿದ್ದ ಸೈಯದ್‌ ಯಾಸಿನ್‌
ಅವರು ಕಾರ್ಯಕ್ರಮದಲ್ಲಿರಲಿಲ್ಲ. ಬದಲಿಗೆ ಎನ್‌.ಎಸ್‌.ಬೋಸರಾಜ್‌ ಅವರು ಭಾಗವಹಿಸಿದ್ದರು. ಇನ್ನೂ ಸುತ್ತಲೂ ಅಳವಡಿಸಲಾಗಿದ್ದ ಬ್ಯಾನರ್‌ಗಳಲ್ಲಿ ಯಾಸಿನ್‌ ಅವರ ಭಾವಚಿತ್ರಗಳೇ ಹೆಚ್ಚಾಗಿ ಕಂಡು ಬಂದವು.

Advertisement

Udayavani is now on Telegram. Click here to join our channel and stay updated with the latest news.

Next