ಉಪ್ಪಿನಂಗಡಿ: ಘನ ತ್ಯಾಜ್ಯವನ್ನು ಪಂಚಾಯತ್ನ ಕೂಗೆಳೆತ ದೂರದಲ್ಲಿ ನದಿಗೆ ಎಸೆದು ಮಲಿನ ಹಾಗೂ ಸಾಂಕ್ರಾಮಿಕ ರೋಗ ಹರಡುವ ಕುರಿತು ಮುನ್ನೆಚ್ಚರಿಕೆ ವಹಿಸಬೇಕಾದ 34ನೇ ನೆಕ್ಕಿಲಾಡಿ ಪಂಚಾಯತ್ ಮೌನಕ್ಕೆ ಶರಣಾಗಿದೆ.
ಪುತ್ತೂರು ತಾಲೂಕಿನ 34ನೇ ನೆಕ್ಕಿಲಾಡಿ ಪಂಚಾಯತ್ ಕಚೇರಿಯು ಕುಮಾರಾಧಾರಾ ನದಿಯಿಂದ ಕೇವಲ 50 ಮೀಟರ್ ದೂರದಲ್ಲಿದೆ. ಹಳೇ ಸೇತುವೆ ಹಾಗೂ ಹೊಸ ಸೇತುವೆ ಪಕ್ಕ ಕಣ್ಣು ಹಾಯಿಸಿದರೆ ಕಾಣ ಸಿಗುವುದೇ ಘನ ತ್ಯಾಜ್ಯ ಸಹಿತ ಪ್ಲಾಸ್ಟಿಕ್ ಹರಿದಾಡುವ ದೃಶ್ಯ.
ರಾಷ್ಟ್ರೀಯ ಹೆದ್ದಾರಿ ಸನಿಹದಲ್ಲಿದ್ದ ಗತ ಕಾಲದಿಂದಲೂ ಸೇವೆ ನೀಡಿ ಇದೀಗ ಸೇವೆಯಿಂದ ಮುಕ್ತಗೊಂಡ ವಾಹನ ಸಂಚಾರ ಬೆರಳೆಣಿಕೆಯಲ್ಲಿರುವ ಹಳೇ ಸೇತುವೆಯತ್ತ ದೃಷ್ಟಿ ಹಾಯಿಸಿದರೆ ಪ್ರಾಣಿ, ಪಕ್ಷಿಗಳು ತ್ಯಾಜ್ಯವನ್ನು ಎಳೆದಾಟ ನಡೆಸುತ್ತವೆ. ಪಾದ ಚಾರಿಗಳು ಇದೇ ದುರ್ನಾತ ಸ್ಥಳದಲ್ಲೇ ನಡೆದಾಡಬೇಕಿದೆ.
ಪಂಚಾಯತ್ಗೆ ಪ್ರತ್ಯೇಕ ಘನ ತ್ಯಾಜ್ಯ ಘಟಕವಿದ್ದರೂ ಕೆಲ ಗ್ರಾಮಸ್ಥರು ಹಾಗೂ ಉದ್ಯಮಿಗಳು ಪಂಚಾಯತ್ ಕಚೇರಿ ಮುಂದೆ ಹಾದು ಹೋಗಿ ತ್ಯಾಜ್ಯ ಎಸೆದು ತಮ್ಮ ಪಾಡಿಗೆ ಹೋಗುತ್ತಿದ್ದಾರೆ. ಪಂಚಾಯತ್ ಆಡಳಿತ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಮಳೆಯ ನೀರಿಗೆ ನದಿ ನೀರು ಸೇರಿ ಮಲಿನವಾಗುವುದರಲ್ಲಿ ಸಂಶಯವಿಲ್ಲ. ಮದುವೆ ಮಂಟಪಗಳ ತ್ಯಾಜ್ಯ ವಾಹನಗಳಲ್ಲಿ ತಂದು ನದಿಗೆ ಎಸೆದು ನದಿ ನೀರು ಮಲಿನ ಮಾಡುತ್ತಿದ್ದಾರೆ. ಗ್ರಾಮಸ್ಥರ ತ್ಯಾಜ್ಯ ಸಂಗ್ರಹಕ್ಕೆ ಸಂತೆಕಟ್ಟೆ ಬಳಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ಸ್ಥಳೀಯರಾದ ಸದಾನಂದ ತಿಳಿಸಿದ್ದಾರೆ.
ತ್ಯಾಜ್ಯವನ್ನು ನದಿ ಬದಿ ಎಸೆಯುತ್ತಿದ್ದು, ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಪಂಚಾಯತ್ ಸಾಮಾನ್ಯ ಸಭೆ ಕರೆದಾಗ ಸಿಸಿ ಕೆಮರಾ ಮೂಲಕ ಪತ್ತೆ ಹಚ್ಚಿ ಪೊಲೀಸ್ ದೂರು ನೀಡಲು ಒತ್ತಾಯಿಸುವೆ ಎಂದು ಗ್ರಾಂ.ಪಂ. ಸದಸ್ಯ ಎನ್. ಶೇಕಬ್ಬ ತಿಳಿಸಿದ್ದಾರೆ.