Advertisement

ವಿಶ್ವದ ಅಶಾಂತಿಗೆ ಪಾಕಿಸ್ಥಾನದ ಮಹತ್ವದ ಕೊಡುಗೆ!

12:36 AM Jan 04, 2023 | Team Udayavani |

ಪಾಕಿಸ್ಥಾನ ಪದೇಪದೆ ಅಣುಬಾಂಬಿನ ಬೆದರಿಕೆ ಒಡ್ಡುವುದು ಭಾರತಕ್ಕೇನೂ ಹೊಸದಲ್ಲ. ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿತ್ವದಲ್ಲಿ ಭಾರತ ಅಣುಶಕ್ತ ರಾಷ್ಟ್ರವಾಗಿ ಎದ್ದು ನಿಂತಾಗ ಜಗತ್ತಿನ ಬಹುತೇಕ ರಾಷ್ಟ್ರಗಳು ನಮ್ಮನ್ನು ಖಾರವಾಗಿಯೇ ಪ್ರಶ್ನಿಸಿದವು.

Advertisement

“ನೆರೆಯ ರಾಷ್ಟ್ರಗಳೆರಡು ಅಣುಬಾಂಬು ಸಜ್ಜಿತವಾದಾಗ ಭಾರತ ತನ್ನ ಸ್ವಂತ ಬಲದಲ್ಲೆನಿಲ್ಲ ಬೇಕಾದುದು ಅನಿವಾರ್ಯ’ ಎಂಬ ದಿಟ್ಟ ಉತ್ತರವನ್ನು ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ 1998ರಲ್ಲಿ ನೀಡಿ ದ್ದರು. ಹೀಗೆ 1974ರ ಪ್ರಧಾನಿ ಇಂದಿರಾ ಗಾಂಧಿ ಅವರ ನೇತಾರಿಕೆಯ “ನಗುವ ಬುದ್ಧ’ (Smiling Buddha) ನಿಂದ ಪ್ರಬುದ್ಧ ಸನ್ನದ್ಧತೆಯ ಸಶಕ್ತ ಭಾರತವವನ್ನು ಇಸ್ಲಾಮಾಬಾದ್‌ ಮರೆತಂತಿದೆ. “ತಿರುವನಂತಪುರದವರೆಗೆ ನಮ್ಮ ಅಣುಶಸ್ತ್ರ ರಾಡಾರ್‌ ಇದೆ’ ಎಂಬುದಾಗಿ ಪಾಕ್‌ ಸರಕಾರ ಹಿಂದೊಮ್ಮೆ ಅಬ್ಬರಿಸಿತು. ತತ್‌ಕ್ಷಣವೇ ಇದಕ್ಕೆ ಪ್ರತಿಯಾಗಿ “ಸಮಗ್ರ ಪಾಕಿಸ್ಥಾನವೇ ನಮ್ಮ ರಾಡಾರ್‌ ಗ್ರಂಥಿಯೊಳಗಿದೆ ಎಂಬುದು ನೆನಪಿರಲಿ’ ಎಂಬ ಹೊಸ ದಿಲ್ಲಿಯ ರಕ್ಷಣ ಖಾತೆಯ ಉತ್ತರಕ್ಕೆ ಆ “ವೈರಿ ರಾಷ್ಟ್ರ’ ಬಾಲ ಮಡಚಿತ್ತು. ಇದೀಗ ಮತ್ತೊಮ್ಮೆ ಬಿಲಾ ವಲ್‌ ಭುಟ್ಟೋ ಇತ್ಯಾದಿ “ಇಲಿಗಳು’ ಬಿಲದಿಂದ ಹೊರಗೆ ಬಂದು ಪ್ರಧಾನಿ ಮೋದಿ ಹಾಗೂ ಭಾರತದ ಬಗ್ಗೆ ನಾಲಗೆ ಹರಿಯ ಬಿಟ್ಟು ನಾವೇನೂ ಸಾಮಾನ್ಯರಲ್ಲ; “ಅಣುಬಾಂಬು ಹೊಂದಿದ ನಮ್ಮನ್ನು ಗೌಣವಾಗಿ ಕಾಣ ಬೇಡಿ’ ಎಂದು ಕನವರಿಸಿವೆ. ಆದರೆ ಇಂತಹ “ಅಣು ಶಸ್ತ್ರ ಬೆದರಿಕೆ’ (Nuclear Threat)ಯ ಒಣನುಡಿ ಸಿಡಿದುದರ ಬಗ್ಗೆ ಅಮೆರಿಕ ಸಹಿತ ವಿಶ್ವಕುಟುಂಬದಿಂದ ಎಚ್ಚರಿಕೆ ಹರಿದು ಬಂದಾಗ ಮತ್ತೆ ಇಸ್ಲಾಮಾಬಾದ್‌ ಸರಕಾರ ತೆಪ್ಪಗಾಗಿದೆ.
ಪ್ರತಿಯೊಂದು ಯುದ್ಧದಲ್ಲಿಯೂ 1947ರಿಂದ ಈ ತನಕ ಸೋಲು ಸವಿದ ಪಾಕಿಸ್ಥಾನ ಇದೀಗ ಚೀನದ ಒಂದಿಷ್ಟು ಟಾನಿಕ್‌ ಸೇವಿಸಿ ಈ ರೀತಿ ಗರ್ಜಿಸುವುದರಿಂದ ವಿಶ್ವ ಮಾರುಕಟ್ಟೆಯಲ್ಲಿ ತನ್ನನ್ನೇ ಹರಾಜು ಮಾಡಿಕೊಳ್ಳುವಂತಾಗಿದೆ.

ವಿಶ್ವಸಂಸ್ಥೆಯ ಒಳಾಂಗಣದಲ್ಲಿಯೂ “ಉಗ್ರಗಾಮಿಗಳನ್ನು ತನ್ನ ಮಡಿಲಲ್ಲಿ ಪೋಷಿಸುತ್ತಿರುವ ರಾಷ್ಟ್ರ ಪಾಕಿಸ್ಥಾನ’ ಎಂಬುದಾಗಿ ಭಾರತ ನೇರವಾಗಿ ಮತ್ತು ಅಷ್ಟೇ ಖಾರವಾಗಿ ಪ್ರಸ್ತಾವಿಸಿದೆ. ಮಾತ್ರವಲ್ಲ ಈ ತೆರನಾಗಿ ಜಾಗತಿಕ ವಲಯದಲ್ಲಿ “ಭಯೋತ್ಪಾದಕತೆಯನ್ನು ನೀರುಣಿಸಿ ಸಾಕುವ ರಾಷ್ಟ್ರದ ಪಟ್ಟಿಗೆ ಪಾಕ್‌ ಸರಕಾರವನ್ನು ಸೇರಿಸಬೇಕು’ ಎಂಬ ಭಾರತದ ಆಗ್ರಹಕ್ಕೆ ಹಲವಾರು ರಾಷ್ಟ್ರಗಳು ಸಹಮತ ವ್ಯಕ್ತಪಡಿಸಿವೆ. ಇದೀಗ ಜಿ-20 ಶೃಂಗಸಭೆಗೂ ಭಾರತದ ಅಧಿಪತ್ಯ “ನುಂಗಲಾರದ ತುತ್ತು’ ಎಂಬಂತಾಗಿದೆ ಪಾಕಿಸ್ಥಾನದ ಪಾಲಿಗೆ. ಇದಕ್ಕೆ ಪ್ರತಿ ಯಾಗಿ “ಕಾಶ್ಮೀರದ ಮುಗಿದ ಅಧ್ಯಾಯ’ವನ್ನು ಪುನಃ ವಿಶ್ವಸಂಸ್ಥೆಯಲ್ಲಿ ತೆರೆಯುವ ಹಾಗೂ ತನ್ಮೂಲಕ ಭಾರತದೊಂದಿಗೆ ಕಾಲು ಕೆರೆಯುವ “ಗುಪ್ತ ಅಜೆಂಡಾ’ವನ್ನು ಪ್ರಚುರ ಪಡಿಸುವ ಯತ್ನ ವನ್ನು ಪಾಕಿಸ್ಥಾನ ನಡೆಸುತ್ತಿದೆ.

ವಿದೇಶಿ ವ್ಯವಹಾರ ಹಾಗೂ ವಿಶ್ವ ರಾಜಕೀಯದಲ್ಲಿ ಪ್ರಚಾರ- ಪ್ರಸಾರ (Propaganda- Publicity) ಅತ್ಯಂತ ಗಣನೀಯ. ಇದರಲ್ಲಿ ಸುದ್ದಿ ಪ್ರಸರಣ (Pub-licity) ಒಂದು ನಿಟ್ಟಿನಲ್ಲಿ ಕೇವಲ ಔಪಚಾರಿಕ ಹಾಗೂ ವಿಷಯ ತಲುಪಿಸುವ ಪ್ರಕ್ರಿಯೇ ಅಷ್ಟೆ. ಆದರೆ ಪ್ರಚಾರ (Propaganda)ದಲ್ಲಿ ತೀವ್ರತೆ ಇದೆ; ತಾರ್ಕಿಕ ಅಂತ್ಯ (logical End)ದ ವರೆಗೆ ತಾವು ಬಿತ್ತರಿಸುವ ವಿಚಾರವನ್ನು ರಾಷ್ಟ್ರಗಳ ಬಾಗಿಲಿನವರೆಗೆ ಮುಟ್ಟಿಸಿ. ವಿಶ್ವಕುಟುಂಬದ ಆ ಸದಸ್ಯರು ಕದ ತೆರೆದು ತಮ್ಮ ಸಹಮತದ ಮೊಹರು ಹಾಕುವವರೆಗೆ ಅದು ಪ್ರಭಾವಿ ಎನಿಸಬೇಕು. ಆ ಚಾಕಚಕ್ಯತೆಯಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿ ಹಾಗೂ ಸ್ವತಃ ವಿದೇಶಾಂಗ ಖಾತೆಯ ಕಾರ್ಯದರ್ಶಿತ್ವ ನಿಭಾಯಿಸಿದ ಹಾಲಿ ವಿದೇಶಾಂಗ ಸಚಿವ ಜೈ ಶಂಕರ್‌ ಜಯಶಾಲಿ ಎಂದೇ ಶ್ರುತ ಪಡಿಸಬಹುದಾಗಿದೆ. ಏಕೆಂದರೆ “ಉಗ್ರಗಾ ಮಿತ್ವದ ಪೋಷಕ ರಾಷ್ಟ್ರ’ ಎಂಬ ಕೆಂಪು ಪಟ್ಟಿಗೆ ನಿಖರವಾದ ಷರಾದೊಂದಿಗೆ ನಮ್ಮ ಆ ನೆರೆರಾಷ್ಟ್ರ ಈಗಾಗಲೇ ಸೇರಿಕೊಂಡಿದೆ. ಅದರೊಂದಿಗೇ ಆರ್ಥಿಕ ಕುಸಿತದ ಕಂಪನವು ಆ ದೇಶದ ಬಲ ಕುಂದಿಸಿದೆ. ಆದರೂ “ತಾವು ಭಾರತಕ್ಕೆ ಸರಿ ಮಿಗಿಲು’ ಎಂಬ ಉಡಾಫೆಯ ಮಾತುಗಳಿಂದ ಪಾಕಿಸ್ಥಾನ ಹೊಸ ಗೌರವದ ಪೀಠಕ್ಕೆ ಏರುವ ಸಾಧ್ಯತೆಯೇ ಶೂನ್ಯ. ಇನ್ನು ಆರ್ಥಿಕತೆಯಲ್ಲಿ ಸವಕಲು ನಾಣ್ಯ ಎನಿಸಿದ ಪಾಕಿಸ್ಥಾನ ಚೀನಕ್ಕೆ ದುಂಬಾಲು ಬಿದ್ದು ಅದು ನೀಡಿದ “ಆಮ್ಲಜನಕ’ದಿಂದ ಉಸಿರಾಡುವ ಪರಿಸ್ಥಿತಿ ಎದುರಾಗಿದೆ. ತತ#ಲವಾಗಿ ಶ್ರೀಲಂಕಾ, ನೇಪಾಲ, ಮ್ಯಾನ್ಮಾರ್‌ನ ಹಾದಿಯಲ್ಲಿ, ತನ್ನ ಪ್ರಜೆಗಳ ಬದುಕಿಗೂ ನೆಮ್ಮದಿ ಕಲ್ಪಿಸುವ ಸಾಧ್ಯತೆಯನ್ನು ಕ್ಷೀಸಿಕೊಂಡಿದೆ. “ಭಾರತ ವಿರೋಧಿ’ ಎನ್ನುವ ಜನ್ಮದಿಂದಲೇ ಹಣೆಪಟ್ಟಿ ಧರಿಸಿದ “ಏಕ ಅಂಶ ಕಾರ್ಯಪಟ್ಟಿ’ ಹೊಂದಿದ ಇಸ್ಲಾಮಾಬಾದ್‌ ಗಳಿಸು ವಂಥದ್ದೇನೂ ಇಲ್ಲ. “ನಾವು ಅಣುಬಾಂಬು ಹೊಂದಿ ದವರು’ ಎಂದು ನಾಲಗೆ ಚಾಚಿಕೊಂಡಾಗ ಜಾಗತಿಕ ಕುಟುಂಬದಲ್ಲಿ ತನ್ನ ಬೌದ್ಧಿಕ ಕುಬjತೆ, ಆರ್ಥಿಕ ನಿತ್ರಾಣ, ಮೈತ್ರಿ ಹೀನತೆ, ಉಗ್ರ ಪೋಷಕತ್ವ- ಈ ಎಲ್ಲ ಪೋಷಾಕುಗಳನ್ನು ಪ್ರದರ್ಶಿಸಿದಂತೆಯೇ ಸರಿ.

ಇನ್ನೊಂದೆಡೆ ಅಫ್ಘಾನಿಸ್ಥಾನದೊಂದಿಗೂ ಘರ್ಷಣೆಯ ತಲೆಮಾರುಗಳ ಚರಿತ್ರೆಗೆ ಪಾಕ್‌ ಐ.ಎಸ್‌.ಐ. ಹಾಗೂ ಮಿಲಿಟರಿಶಾಹಿತ್ವ ಹೊಸ ಹೊಸ ಪುಟಗಳನ್ನು ಸೇರಿಸುತ್ತಲೇ ಇವೆ. ಹೀಗೆ ತಾಲಿಬಾನ್‌- ಐ.ಎಸ್‌.ಐ. ಘರ್ಷಣೆಯ ಹೊಸ ಅಧ್ಯಾಯ ಈಗಾಗಲೇ “ಶುಭಾರಂಭ’ಗೊಂಡಿದೆ. ಈ ಸಂದರ್ಭದಲ್ಲೇ ಕಾಶ್ಮೀರದಲ್ಲಿನ ಉಗ್ರಗಾಮಿತ್ವದ ಮುಳ್ಳುಗಿಡಗಳಿಗೆ ನೀರುಣಿಸುವ ಪಾಕ್‌ ಕಾಯಕಕ್ಕೆ ಭಾರತ ಖಂಡಿತಾ ಜಗ್ಗುವಂತಿಲ್ಲ. ಪಂಡಿತರ ಮಾರಣಹೋಮ, ಕಾಶ್ಮೀರದ ಕಣಿವೆಯಿಂದ ಹೊಡೆದೋಡಿಸುವ ಯತ್ನ- ಇವೆಲ್ಲ ಛದ್ಮ ಸಮರಕ್ಕೆ ಇಂತಹ ಬೇಜವಾಬ್ದಾರಿತನದ ಕ್ಷುದ್ರ ಹೇಳಿಕೆಗಳೇ ಸಾಕ್ಷಿ. ನಮ್ಮ ಪ್ರಧಾನಿ ಬಗೆಗೂ ಅಲ್ಲಿನ ರಾಜಕೀಯ ನೇತಾರರೆನಿಸಿದ ಪುಢಾರಿಗಳಿಂದ ಪುಂಖಾ ನುಪುಂಖವಾಗಿ ಬರುತ್ತಿರುವ ಕೀಳು ಮಟ್ಟದ ಹೇಳಿಕೆ ಖಂಡನೀಯ. ಯಾವುದೇ ಕಾರಣಕ್ಕೂ ಜಮ್ಮು- ಕಾಶ್ಮೀರದಲ್ಲಿ ಆತಂಕವಾದದ ಹಾಗೂ ಪ್ರತ್ಯೇಕವಾದದ ಬೀಜ ಮೊಳೆಯದಂತೆ 370ನೇ ವಿಧಿಯನ್ನೂ ಇಲ್ಲವಾಗಿಸಿ ಕೇಂದ್ರ ಸರಕಾರ ಯತ್ನಿಸುತ್ತಿದೆ ಹಾಗೂ ಒಂದಲ್ಲ ಒಂದು ದಿನ ಕಾಶ್ಮೀರ ಕಣಿವೆಯ ಸುಮಾರು 5,400 ಚ.ಕಿ.ಮೀ. ಅಷ್ಟು ವಿಸ್ತಾರ ಹೊಂದಿದ ಪಾಕ್‌ ಆಕ್ರಮಿಕ ಕಾಶ್ಮೀರ (POK) ವನ್ನೂ ಮರು ಪಡೆಯುವ ನಡೆ ನಮ್ಮದಾಗಬೇಕಾಗಿದೆ.

Advertisement

ಈ ಕಾಲಘಟ್ಟದಲ್ಲಿ ಭಾರತದೊಳಗೆ ಆಂತರಿಕ ಕ್ಷೋಭೆ ಸೃಷ್ಟಿಸುವ ಹುನ್ನಾರವಿದು. ರಾಷ್ಟ್ರೀಯ ಏಕತೆ ಕದಡುವ ರೀತಿಯಲ್ಲಿ ಬೇಜವಾಬ್ದಾರಿ ಹೇಳಿಕೆ ಹಾಗು ಕುಟಿಲ ಕಾರ್ಯಶೈಲಿ ಬಗ್ಗೆ ತಕ್ಕ ಉತ್ತರ ನೀಡಲು ಪ್ರಸಕ್ತ ಭಾರತ ಶಕ್ತವಾಗಿದೆ. ಇದರೊಂದಿಗೇ ಅರುಣಾಚಲ ಪ್ರದೇಶದ ಹಿಮಗಿರಿಯಲ್ಲಿ ಡ್ರ್ಯಾಗನ್ ನುಸುಳದಂತೆ ಹಾಗೂ ಬೀಜಿಂಗ್‌- ಇಸ್ಲಾಮಾಬಾದ್‌ ಸಮೀಕರಣದ ವಿರುದ್ಧ ಜಾಗತಿಕ ಮಟ್ಟದಲ್ಲಿ ಮಿತ್ರ ರಾಷ್ಟ್ರಗಳನ್ನು ಎಚ್ಚರಿಸುವ ತಂತ್ರಗಾರಿಕೆ ಕೂಡ ಇಂದಿನ ಆವಶ್ಯಕತೆ.

-ಡಾ| ಪಿ.ಅನಂತಕೃಷ್ಣ ಭಟ್‌, ಮಂಗಳೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next