Advertisement

ಸಭಾಭವನ ನಿರ್ಮಾಣಕ್ಕೆ ಬಳಕೆಯಾಗದ ಅನುದಾನ 

04:33 AM Mar 18, 2019 | |

ಪಡುಪೆರಾರ : ಪಡು ಪೆರಾರ ಗ್ರಾಮ ಪಂಚಾಯತ್‌ ಗ್ರಾಮ ಸಭೆ ನಡೆಸಲು ಖಾಸಗಿ ಸಭಾಭವನಗಳನ್ನೇ ನೆಚ್ಚಿಕೊಂಡಿದೆ. ಇದು ಹೀಗೆ ಮುಂದುವರಿಯುವ ಸಾಧ್ಯತೆ ಇದೆ. ಯಾಕೆಂದರೆ ಅನುದಾನವಿದ್ದರೂ ಬಳಸದೇ ಇರುವುದರಿಂದ ಮಾರ್ಚ್‌ ತಿಂಗಳ ಅಂತ್ಯಕ್ಕೆ ಅನುದಾನ ಹಿಂದಕ್ಕೆ ಹೋಗುವುದು ಖಚಿತ.

Advertisement

ಮಂಗಳೂರು ತಾಲೂಕಿನ ಹೆಚ್ಚಿನ ಗ್ರಾ.ಪಂ. ಗಳಲ್ಲಿ ಸಭಾಭವನಗಳು ಈಗಾಗಲೇ ನಿರ್ಮಾಣಗೊಂಡಿದ್ದರೂ ಪಡು ಪೆರಾರ ಗ್ರಾ.ಪಂ. ಪಂಚಾಯತ್‌ ನಲ್ಲಿ ಮಾತ್ರ ಸಭಾಭವನವೇ ಇಲ್ಲ. ಗ್ರಾ.ಪಂ. ನ ಮೂಲ ಸೌಕರ್ಯಗಳಲ್ಲಿ ಒಂದಾದ ಸಭಾಭವನ ಇಲ್ಲದೆ ಖಾಸಗಿ ಸಭಾಭವನಗಳಲ್ಲೇ ಗ್ರಾಮ ಸಭೆಗಳನ್ನು ನಡೆಸಬೇಕಾಗಿದೆ.

ಪಡುಪೆರಾರ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಎರಡು ಗ್ರಾಮಗಳಿವೆ. ಪಡುಪೆರಾರ ಮತ್ತು ಮೂಡು ಪೆರಾರ. ಸುಮಾರು 8,553 ಜನಸಂಖ್ಯೆಯನ್ನು ಹೊಂದಿದ್ದು, 24 ಗ್ರಾ.ಪಂ. ಸದಸ್ಯರಿದ್ದಾರೆ. ಪ್ರತಿ ಗ್ರಾಮ ಪಂಚಾಯತ್‌ನಲ್ಲಿ ವರ್ಷದಲ್ಲಿ ಎರಡು ಗ್ರಾಮ ಸಭೆಗಳು, ಒಂದು ಮಹಿಳಾ ಗ್ರಾಮ ಸಭೆ, ಒಂದು ಮಕ್ಕಳ ಗ್ರಾಮ ಸಭೆ, ಎರಡು ನರೇಗಾ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನ ಗ್ರಾಮ ಸಭೆಗಳು ನಡೆಯುತ್ತದೆ. ಅದಲ್ಲದೆ ಮಾಹಿತಿ, ತರಬೇತಿ ಕಾರ್ಯಕ್ರಮಗಳು ನಡೆಯುತ್ತವೆ.

9 ಲಕ್ಷ ರೂ. ಅನುದಾನ ಮೀಸಲು
ಪಡುಪೆರಾರ ಗ್ರಾಮ ಪಂಚಾಯತ್‌ಗೆ 2015- 16ರಲ್ಲಿ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ 75 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿದೆ. ಇದರಲ್ಲಿ ರಸ್ತೆ, ಗ್ರಾಮ ಪಂಚಾಯತ್‌ ಸಭಾಭವನ, ಜಿಮ್‌ ಕೇಂದ್ರ, ತ್ಯಾಜ್ಯ ವಿಲೇವಾರಿ ಘಟಕ ಹಾಗೂ ಪಂಚಾಯತ್‌ ನಡಾವಳಿಯನ್ನು ನೇರ ಪ್ರಸಾರ ಮಾಡುವ ಬಗ್ಗೆ ಕ್ರಿಯಾ ಯೋಜನೆಗೆ ಅನು ಮೋ ದನೆ ನೀಡಲಾಗಿತ್ತು. ಈ ಬಗ್ಗೆ ಗ್ರಾಮ ಪಂಚಾಯತ್‌ ಸಭಾಭವನಕ್ಕೆ 9 ಲಕ್ಷ ರೂ. ಮತ್ತು ಜಿಮ್‌ ಕೇಂದ್ರಕ್ಕೆ 9 ಲಕ್ಷ ರೂ. ಮೀಸಲಿಡಲಾಗಿತ್ತು. ಕ್ರಿಯಾ ಯೋಜನೆಯಲ್ಲಿದ್ದ ರಸ್ತೆ ಕಾಮಗಾರಿಗಳು ಪೂರ್ಣಗೊಂಡಿವೆ. ಬಾಕಿ ಕಾಮಗಾರಿಗಳು ಮಾತ್ರ ನಡೆದಿಲ್ಲ. ಇದರ ಅನುದಾನವನ್ನೂ ಗ್ರಾಮ ಪಂಚಾಯತ್‌ ಇನ್ನೂ ಬಳಕೆ ಮಾಡಿಲ್ಲ. ಈಗಾಗಲೇ ಲೋಕಸಭಾ ಚುನಾವಣೆ ಘೋಷಣೆಯಾಗಿದ್ದು, ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಇನ್ನು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು ಅಸಾಧ್ಯ.

ಅನುದಾನ ಬಂದು ನಾಲ್ಕು ವರ್ಷವಾಗಿರುವುದರಿಂದ ಮತ್ತು ಬಳಕೆಯಾಗದೇ ಉಳಿದಿರುವುದರಿಂದ ಮಾರ್ಚ್‌ ಅಂತ್ಯಕ್ಕೆ ಈ ಅನುದಾನ ಹಿಂದಕ್ಕೆ ಹೋಗುತ್ತದೆ. ಅಗತ್ಯವಿದ್ದ ಗ್ರಾಮ ಪಂಚಾಯತ್‌ ಸಭಾಭವನ ನಿರ್ಮಾಣಕ್ಕೆ ಯಾವುದೇ ಕ್ರಮಕೈಗೊಂಡಿಲ್ಲ. ಖಾಸಗಿ ಸಭಾಭವನಕ್ಕೆ ಸಭೆಯೊಂದಕ್ಕೆ ಪಂಚಾಯತ್‌ ಒಂದು ಸಾವಿರ ರೂ. ವೆಚ್ಚ ಮಾಡುತ್ತಿದೆ.

Advertisement

ಗ್ರಾಮ ಪಂಚಾಯತ್‌ ನಲ್ಲೇ ನರೇಗಾ ಸಭೆ
ನರೇಗಾ ಯೋಜನೆಯ ಗ್ರಾಮ ಸಭೆಗಳು ಗ್ರಾಮ ಪಂಚಾಯತ್‌ ಕಚೇರಿಯಲ್ಲಿ ನಡೆಯುತ್ತದೆ. ಈ ಸಭೆ ಇದ್ದಾಗ ಕಚೇರಿಯ ಒಂದು ಭಾಗದಲ್ಲಿ ಸಭೆ, ಇನ್ನೊಂದು ಭಾಗದಲ್ಲಿ ಕಚೇರಿ ಕಾರ್ಯ ನಡೆಯುತ್ತದೆ. ಆದರೆ ಸಭೆ ನಡೆಯುವಾಗ ಗ್ರಾಮಸ್ಥರು ಕಚೇರಿ ಕಾರ್ಯಕ್ಕೆ ಬರಲು ಸಾಧ್ಯವಿಲ್ಲದಂತಾಗಿದೆ. ಇಕಟ್ಟಾದ ಕಟ್ಟಡದಲ್ಲಿ ಬಂದವರು ಸಭೆ ಮುಗಿಯುವವರೆಗೆ ಕಾದುಕುಳಿತುಕೊಳ್ಳಬೇಕು.

ಗ್ರಾಮಸ್ಥರಿಂದಲೂ ಮನವಿ
ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ, ಗ್ರಾಮಸಭೆಯಲ್ಲಿ ಸಭಾಭವ ನದ ಬಗ್ಗೆ ಗ್ರಾಮಸ್ಥರ ಮನವಿ ಕೂಡ ಬಂದಿತ್ತು. ಶಾಸಕರು ಕೂಡ ಈ ಬಗ್ಗೆ ಗ್ರಾ. ಪಂ.ಸಭೆಯಲ್ಲಿ ಇಟ್ಟು ನಿರ್ಣಯ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ.

ಸಭೆಗೆ ಹಾಜರಾಗದ ಕೆಐಆರ್‌ ಡಿಎಲ್‌
ಗ್ರಾ.ಪಂ.ನ ಪಾರದರ್ಶಕ ಆಡಳಿತಕ್ಕೆ ಸಭಾಭವನ ಇರಬೇಕು. ಕಟ್ಟಡ ನಿರ್ಮಾಣಕ್ಕೆ ಅನುದಾನದ ಕೊರತೆ ಇಲ್ಲ. ಈ ಬಗ್ಗೆ ಗ್ರಾ.ಪಂ. ನಿಂದ ಕೆಐಆರ್‌ಡಿಎಲ್‌ ಸಂಸ್ಥೆಗೆ ಈಗಾಗಲೇ ಮನವಿ ಮಾಡಲಾಗಿದೆ. ಮಾ. 31ಕ್ಕೆ ಗ್ರಾಮ ವಿಕಾಸ ಯೋಜನೆಯ ಅನುದಾನಕ್ಕೆ ಅವಧಿ ಪೂರ್ಣಗೊಳ್ಳುವ ಮುನ್ನವೇ ಕಾಮಗಾರಿ ಆರಂಭಿಸಬೇಕಿತ್ತು. ಸಭಾಭವನ ನಿರ್ಮಾಣಕ್ಕೆ ಹಳೆ ಪಂಚಾಯತ್‌ ಕಟ್ಟಡವನ್ನೂ ಕೆಡವಬೇಕಾಗಿತ್ತು. ಫೆ. 25ರಂದು ನಡೆದ ನಿರ್ಣಾಯಕ ಸಭೆಗೆ ಕೆಐಆರ್‌ ಡಿಎಲ್‌ ನವರು ಸಭೆಗೆ ಹಾಜರಾಗದೇ ಇರುವುದರಿಂದ ಯಾವುದೇ ನಿರ್ಣಯ ಕೈಗೊಳ್ಳಲು ಸಾಧ್ಯವಾಗಿಲ್ಲ.
– ಮಹಾಂತೇಶ್‌ ಭಜಂತ್ರಿ, 
ಪಿಡಿಒ, ಪಡು ಪೆರಾರ ಗ್ರಾ.ಪಂ.

ಸುಬ್ರಾಯ ನಾಯಕ್‌, ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next