Advertisement

ಸಾಧಕರ ಸನ್ಮಾನಕ್ಕಾಗಿ ಹಲವು ಪ್ರಶಸ್ತಿ, ಪುರಸ್ಕಾರಗಳ ಘೋಷಣೆ

01:23 AM Jan 26, 2021 | Team Udayavani |

ಗಣರಾಜ್ಯೋತ್ಸವವೆಂದಾಕ್ಷಣ ಎಲ್ಲರ ಮನದಲ್ಲೂ ಮೂಡುವ ಚಿತ್ರವೆಂದರೆ, ಸೇನಾ ಕವಾಯತು, ಸ್ತಬ್ದಚಿತ್ರಗಳ ಪ್ರದರ್ಶನ, ಶಸ್ತ್ರಾಸ್ತ್ರ ಪ್ರದರ್ಶನ ಇತ್ಯಾದಿ. ಆದರೆ ಗಣರಾಜ್ಯೋತ್ಸವದ ಮುನ್ನಾದಿನ ಹುತಾತ್ಮರಿಗೆ, ದೇಶದ ಧೀರ ನಾಗರಿಕರಿಗೆ, ಸಾಧಕರಿಗಾಗಿ ಘೋಷಿಸಲಾಗುವ ಪ್ರಶಸ್ತಿಗಳೂ ಅಷ್ಟೇ ಮಹತ್ವ ಪಡೆದಿವೆ.

Advertisement

ಭಾರತರತ್ನ: ದೇಶದ ಅತ್ಯುನ್ನತ ಗೌರವ ಪ್ರಶಸ್ತಿಯಾಗಿರುವ ಭಾರತರತ್ನವನ್ನು ಗಣರಾಜ್ಯೋತ್ಸವದಂದು ಘೋಷಿಸಲಾಗುತ್ತದೆ. ಆದರೆ ಪ್ರತಿ ವರ್ಷವೂ ಭಾರತ ರತ್ನ ಘೋಷಿಸಬೇಕೆನ್ನುವುದು ಕಡ್ಡಾಯವಲ್ಲ.

ಪದ್ಮ ಪ್ರಶಸ್ತಿಗಳು: ಪದ್ಮಪ್ರಶಸ್ತಿಗಳು ಸಾಧನೆಯ ಮಾನದಂಡದ ಮೇಲೆ 3 ಹಂತದಲ್ಲಿ ವಿಂಗಡಿತವಾಗಿವೆ. ಇದರಲ್ಲಿ ಅತ್ಯುನ್ನತ ಕ್ರಮದಲ್ಲಿ ಪದ್ಮ ವಿಭೂಷಣ. ಎರಡನೇ ಉನ್ನತ ಕ್ರಮಾಂಕದಲ್ಲಿ ಪದ್ಮಭೂಷಣ ಹಾಗೂ ಮೂರನೆಯದಾಗಿ ಪದ್ಮಶ್ರೀ ಪ್ರಶಸ್ತಿ ನೀಡಲಾಗುತ್ತದೆ.

ಶೌರ್ಯ ಪ್ರಶಸ್ತಿ: ದೇಶಕ್ಕಾಗಿ ಪರಾಕ್ರಮ ಮೆರೆದ ಭಾರತೀಯ ಯೋಧರಿಗೆ ಆರು ರೀತಿಯ ಶೌರ್ಯ ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ. ಇದರಲ್ಲಿ ಪರಮವೀರ ಚಕ್ರವನ್ನು ಅತ್ಯುನ್ನತ ಮಿಲಿಟರಿ ಗೌರವ ಎಂದು ಪರಿಗಣಿಸಲಾಗುತ್ತದೆ. ಯುದ್ಧದ ವೇಳೆ ಅಪ್ರತಿಮ ಸಾಧನೆ ಮಾಡಿದವರಿಗೆ ಸಲ್ಲುವ ಪ್ರಶಸ್ತಿ. ಮರಣೋತ್ತರವಾಗಿಯೂ ಇದನ್ನು ಘೋಷಿಸಲಾಗುತ್ತದೆ. ನಂತರದಲ್ಲಿ ಅಶೋಕ್‌ ಚಕ್ರ, ಮಹಾವೀರ ಚಕ್ರ, ಕೀರ್ತಿ ಚಕ್ರ, ವೀರ ಚಕ್ರವನ್ನು ಘೋಷಿಸಲಾಗುತ್ತದೆ.

ರಾಷ್ಟ್ರಪತಿ ಪೊಲೀಸ್‌ ಪದಕ: ಪೊಲೀಸ್‌ ಸೇವೆಯಲ್ಲಿ ಗಮನಾರ್ಹ ಸಾಧನೆ ಮಾಡಿದವರಿಗೆ  ಜನವರಿ 25ರಂದು ರಾಷ್ಟ್ರಪತಿಗಳಿಂದ ಸೇವಾ ಮತ್ತು ಶೌರ್ಯ ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ. ಮೆಡಲ್‌ ಫಾರ್‌ ಗ್ಯಾಲಂಟರಿ, ಮೆಡಲ್‌ ಫಾರ್‌ ಡಿಸ್ಟಿಂಗ್‌ವಿÐx… ಸರ್ವೀಸ್‌, ಪೊಲೀಸ್‌ ಮೆಡಲ್‌ ಫಾರ್‌ ಮೆರಿಟೋರಿಯಲ್‌ ಸರ್ವೀಸ್‌ ಪ್ರಶಸ್ತಿಗಳನ್ನು ಇದು ಒಳಗೊಂಡಿದೆ.

Advertisement

ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ: ಕ್ರೀಡೆ,ಆವಿಷ್ಕಾರ, ಸಾಮಾಜಿಕ ಸೇವೆ, ಧೈರ್ಯ ಸಾಹಸ ಪ್ರದರ್ಶನ, ಕಲೆ, ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 5-18 ವಯೋಮಾನದ ಮಕ್ಕಳಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಘೋಷಿಸಲಾಗುತ್ತದೆ. ಈ ಬಾರಿ ಆವಿಷ್ಕಾರ ವಿಭಾಗದಲ್ಲಿ ದ.ಕನ್ನಡದ ರಾಕೇಶ್‌ಕೃಷ್ಣ ಹಾಗೂ ಬೆಂಗಳೂರಿನ ವೀರ ಕಶ್ಯಪ್‌ ಈ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಬಾಲಕರು.

ಜೀವನ ರಕ್ಷಾ ಪದಕ: ಪ್ರಾಣಾಪಾಯದಲ್ಲಿರುವವರನ್ನು ಜೀವದ ಹಂಗು ತೊರೆದು ರಕ್ಷಿಸುವ ನಾಗರಿಕರಿಗೆ, ಪೊಲೀಸರಿಗೆ, ಸೈನಿಕರಿಗೆ ಈ ಪದಕಗಳನ್ನು ಘೋಷಿಸಲಾಗುತ್ತದೆ. 1961ರಿಂದಲೂ ಜೀವನ ರಕ್ಷಾ ಪದಕವನ್ನು ನೀಡಲಾಗುತ್ತಿದೆ.

ಅನನ್ಯ ಸಾಧಕರಿಗೆ ಸಂದ ಗೌರವ :

ಡಾ| ಚಂದ್ರಶೇಖರ ಕಂಬಾರ :

ರಾಜ್ಯದ ಪ್ರಮುಖ ಸಾಹಿತಿಯಾಗಿರುವ ಡಾ| ಚಂದ್ರಶೇಖರ ಕಂಬಾರ ಅವರು 1937ರ ಜ. 2ರಂದು ಬೆಳಗಾವಿಯ ಘೋಡಿಗೇರಿಯಲ್ಲಿ ಜನಿಸಿದವರು.  ಅವರು ಅನೇಕ ಕತೆ, ಕಾದಂಬರಿ, ನಾಟಕ ಸಹಿತ ಸಾಹಿತ್ಯ ಲೋಕದ ವಿವಿಧ ಪ್ರಕಾರಗಳಲ್ಲಿ  ಅಮೂಲ್ಯ ಕೃತಿಗಳನ್ನು ಬರೆದಿದ್ದಾರೆ. ಅವೆಲ್ಲವುಗಳಲ್ಲೂ  ಕಾವ್ಯದ  ಸ್ಪರ್ಶವನ್ನು ಕಾಣಬಹುದು. ಜೋಕುಮಾರಸ್ವಾಮಿ, ಋಷ್ಯಶೃಂಗ, ಸಂಗ್ಯಾಬಾಳಾÂ, ಅನ್ಬೇಕೊ ನಾಡೊಳಗ, ಜೈಸಿದನಾಯಕ, ಮಹಾಮಾಯಿ, ಕಾಡುಕುದುರೆ, ಕಾದಂಬರಿಗಳಾದ ಶಿವನ ಡಂಗುರ, ಶಿಖರಸೂರ್ಯ, ಕರಿಮಾಯಿ ಮತ್ತಿತರ ಕೃತಿಗಳು ಪ್ರಮುಖ.  2001ರಲ್ಲಿ ಕಂಬಾರ ಅವರಿಗೆ “ಪದ್ಮಶ್ರೀ’, 2004ರಲ್ಲಿ “ನಾಡೋಜ’ ಮತ್ತು “ಪಂಪ’, 2010ರಲ್ಲಿ “ಜ್ಞಾನಪೀಠ’ ಸೇರಿದಂತೆ ಹತ್ತುಹಲವು ಗೌರವಗಳು ಸಂದಿವೆ.  ಧಾರವಾಡದಲ್ಲಿ  ಜರಗಿದ್ದ  ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.ವಿಧಾನ ಪರಿಷತ್‌ ಸದಸ್ಯರಾಗಿ,  ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಹಾಗೂ  ಹಂಪಿ ಕನ್ನಡ ವಿಶ್ವವಿದ್ಯಾಲಯದ  ಕುಲಪತಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.

 

ಡಾ| ಆರ್‌.ಎಲ್‌. ಕಶ್ಯಪ್‌ :

ಅರವಿಂದೋ ಕಪಾಲಿ ಶಾಸ್ತ್ರೀಯ ವೇದಿಕ್‌ ಕಲ್ಚರ್‌ ಸಂಸ್ಥೆಯ ನಿರ್ದೇಶಕರಾಗಿರುವ ಪ್ರಾಧ್ಯಾಪಕ ಹಾಗೂ ಹಿರಿಯ ಸಾಹಿತಿ ಬೆಂಗಳೂರು ಮೂಲದ  ಡಾ| ರಂಗಸ್ವಾಮಿ ಲಕ್ಷ್ಮೀನಾರಾಯಣ ಕಶ್ಯಪ್‌ ಅವರು ಈ ವರ್ಷದ ಪದ್ಮ ಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಯುಎಸ್‌ಎನಲ್ಲಿರುವ ಪರ್ಡ್ಯೊ

ವಿಶ್ವವಿದ್ಯಾನಿಲಯದ ಎಲೆಕ್ಟ್ರಿಕಲ್‌ ಮತ್ತು ಕಂಪ್ಯೂಟರ್‌ ಎಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕರೂ ಆಗಿದ್ದಾರೆ. ಕಂಪ್ಯೂಟರ್‌ ಪ್ಯಾಟರ್ನ್ ರಿಕಾಗ್ಲೇಷನ್‌ ಮತ್ತು ಮಷಿನ್‌ ಇಂಟೆಲಿಜೆನ್ಸಿ ಹಾಗೂ ವೇದಾಧ್ಯಯನ ವಿಭಾಗಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಕಂಪ್ಯೂಟರ್‌ ಪ್ಯಾಟರ್ನ್ ರಿಕಾಗ್ಲೇಷನ್‌ ವಿಭಾಗದ ಸಾಧನೆಗಾಗಿ 1990ರಲ್ಲಿ ಅಂತಾರಾಷ್ಟ್ರೀಯ ಪ್ಯಾಟರ್ನ್ ರಿಕಾಗ್ಲೇಷನ್‌ ಸಂಘಟನೆಯಿಂದ ಕಿಂಗ್‌-ಸನ್‌ ಫ‌ು ಪ್ರಶಸ್ತಿ ಪಡೆದಿದ್ದರು. ಸಂಸ್ಕೃತದಲ್ಲಿರುವ ಸಾಮವೇದ, ಋಗ್‌ವೇದ ಸಂಹಿತಾ, ಕೃಷ್ಣಯಜುರ್ವೇದ ಸಂಹಿತಾ ಹಾಗೂ ಅಥರ್ವವೇದ(ಒಂದು ಭಾಗ) ವನ್ನು ಇಂಗ್ಲಿಷ್‌ಗೆ ಭಾಷಾಂತರ ಮಾಡಿದ್ದಾರೆ. ಅರವಿಂದೋ ಕಪಾಲಿ ಶಾಸ್ತ್ರೀಯ ವೇದಿಕ್‌ ಕಲ್ಚರ್‌ ಸಂಸ್ಥೆಯಲ್ಲಿ ವೇದ ಮಂತ್ರಗಳ ಅರ್ಥಕ್ಕೆ ಸಂಬಂಧಿಸಿದ್ದಂತೆ ವಿಶೇಷ ಸಂಶೋಧನಾ ಕಾರ್ಯಗಳನ್ನು  ನಡೆಸುತ್ತಿದ್ದಾರೆ. ವೇದಾಂಗ ವಿದ್ವಾನ್‌, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಡಾ. ಆರ್‌.ಎಲ್‌.ಕಶ್ಯಪ್‌ ಅವರು ಬೆಂಗಳೂರಿನ ನ್ಯಾಷನಲ್‌ ಕಾಲೇಜು, ಸೆಂಟ್ರಲ್‌ ಕಾಲೇಜು ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಹಾರ್ವರ್ಡ್‌ ವಿಶ್ವವಿದ್ಯಾನಿಲಯದಿಂದ ಅವರು ಪಿಎಚ್‌.ಡಿ. ಪಡೆದಿದ್ದರು.

ಕೆ.ವೈ. ವೆಂಕಟೇಶ್‌ :

4 ಅಡಿ 2 ಇಂಚು ಎತ್ತರದ ವೆಂಕಟೇಶ್‌ ಅವರು, ಪೋಲಿಯೊ ಪೀಡಿತ ಸಿ.ಎನ್‌.ಜಾನಕಿ ಎಂಬ ಮಹಿಳೆ 1992ರಲ್ಲಿ ಇಂಗ್ಲಿಷ್‌ ಕಡಲ್ಗಾಲುವೆಯನ್ನು ಈಜಿದ ಘಟನೆಯನ್ನು ಕೇಳಿ ಪ್ರೇರಿತರಾದರು. 1994ರಿಂದ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಆರಂಭಿಸಿದರು. 2005ರಲ್ಲಿ ಫ್ರಾನ್ಸ್‌ನಲ್ಲಿ ನಡೆದ ವಿಶ್ವ ಕುಬjರ ಕ್ರೀಡಾಕೂಟದಲ್ಲಿ ಪಾಲ್ಗೊಂಡರು. ಬಹುಕ್ರೀಡೆಗಳಲ್ಲಿ ನಿಷ್ಣಾತರಾಗಿದ್ದ ಅವರು, ಫ್ರಾನ್ಸ್‌ನಲ್ಲಿ ಹಲವು ಕ್ರೀಡಾವಿಭಾಗದಲ್ಲಿ ಸ್ಪರ್ಧಿಸಿದರು. ಅಥ್ಲೆಟಿಕ್ಸ್‌ ವಿಭಾಗದಲ್ಲಿ ಶಾಟ್‌ಪುಟ್‌ (ಕಂಚು), ಡಿಸ್ಕಸ್‌ (ಚಿನ್ನ), ಜಾವೆಲಿನ್‌ (ಪದಕ ಇಲ್ಲ), ತಂಡ ವಿಭಾಗದ ಕ್ರೀಡೆಗಳಾದ  ಬ್ಯಾಡ್ಮಿಂಟನ್‌ ಡಬಲ್ಸ್‌ (ಕಂಚು), ಹಾಕಿ (ಚಿನ್ನ), ಫ‌ುಟ್‌ಬಾಲ್‌ (ಬೆಳ್ಳಿ), ವಾಲಿಬಾಲ್‌ನಲ್ಲಿ (ಕಂಚು) ಸೇರಿ ಒಟ್ಟು 6 ಪದಕ ಪಡೆದರು. ಇದರ ಪರಿಣಾಮ ಅವರ ಹೆಸರು ಲಿಮ್ಕಾ ದಾಖಲೆ ಪುಸ್ತಕಕ್ಕೆ ಸೇರ್ಪಡೆಯಾಯಿತು. 2012ರಲ್ಲಿ ಕ್ರೀಡೆಯಿಂದ ನಿವೃತ್ತರಾದರು. ಪ್ರಸ್ತುತ ಕರ್ನಾಟಕ ಪ್ಯಾರಾ ಬ್ಯಾಡ್ಮಿಂಟನ್‌ ಸಂಸ್ಥೆಯಲ್ಲಿ ಕಾರ್ಯದರ್ಶಿಯಾಗಿದ್ದಾರೆ.

ಕೇಂದ್ರ ಸರಕಾರ ನನ್ನ ಸಾಧನೆಯನ್ನು ಗುರುತಿಸಿರುವುದು ತುಂಬಾ ಸಂತೋಷ ಉಂಟು ಮಾಡಿದೆ.  ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವಾಲಯಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ನನಗೆ ಸಂದಿರುವ ಗೌರವದಿಂದ ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ.- ಕೆ.ವೈ.ವೆಂಕಟೇಶ್‌,  ಪ್ಯಾರಾ ಕ್ರೀಡಾಪಟು

ಮಂಜಮ್ಮ ಜೋಗತಿ :

ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರೂ ಆಗಿರುವ ಬಿ.ಮಂಜಮ್ಮ ಜೋಗತಿ ಅವರು ಬಳ್ಳಾರಿ ಜಿಲ್ಲೆಯ ಕಲ್ಲುಕಂಬದವರು. ಶಾಲೆ ದಾಖಲಾತಿಗಳಲ್ಲಿ ಇವರ ಹೆಸರು ಬಿ.ಮಂಜುನಾಥ ಶೆಟ್ಟಿ ಎಂದಿದೆ. ತೃಂತೀಯಲಿಂಗಿ ಆಗಿ ರೂಪಾಂತರಗೊಳ್ಳುವ ಸಂದರ್ಭದಲ್ಲಿ ಕೌಟುಂಬಿಕ ಬಹಿಷ್ಕಾರಕ್ಕೆ ಒಳಗಾಗಿ ಆ ನಂತರ ಬದುಕಿಗೆ “ಜೋಗತಿ’ ವೃತ್ತಿಯನ್ನೇ ಆಧಾರ ಮಾಡಿಕೊಂಡರು.  ತಮ್ಮ 18ನೇ ವರ್ಷಕ್ಕೆ ಕಲಾ ಸೇವೆ ಮಾಡುತ್ತಾ ಜನಪದ ನೃತ್ಯದ ಮೂಲಕ ಗ್ರಾಮ, ಜಾತ್ರೆ, ಸಂತೆ, ವೇದಿಕೆ ಮುಂತಾದ ಸ್ಥಳಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಸಾವಿರಾರು ಪ್ರದರ್ಶನಗಳ ಮೂಲಕ ರಾಜ್ಯಾದ್ಯಂತ ಮನೆ ಮಾತಾದರು.ಬಳಿಕ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾಗಿ ಇದೇ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆ ಆಗುವ ಮೂಲಕ ಹೊಸ ಇತಿಹಾಸ ಬರೆದರು.

ಪ್ರಶಸ್ತಿ ಬಂದಿರುವುದು ಒಂದು ಕಡೆ ಖುಷಿ  ಹಾಗೂ ಮತ್ತೂಂದು ಕಡೆ ಅಚ್ಚರಿ ತಂದಿದೆ. ಈ ಹೊತ್ತಿಗೆ ನಾನು ಪಟ್ಟಂಥ ಕಷ್ಟಗಳು ನೆನಪಿಗೆ ಬರುತ್ತಿವೆ.  ಈಗ ಸಂದಿರುವ ಈ ಪ್ರಶಸ್ತಿಯನ್ನು ನನ್ನ ಈ ಸಾಧನಗೆಗೆ ಕಾರಣವಾದ ಗುರುಗಳಿಗೆ ಮತ್ತು  ತಂದೆ -ತಾಯಿಗೆ ಅರ್ಪಿಸುತ್ತೇನೆ.-ಮಂಜಮ್ಮ ಜೋಗತಿ,  ಜಾನಪದ ಅಕಾಡೆಮಿ ಅಧ್ಯಕ್ಷರು.

Advertisement

Udayavani is now on Telegram. Click here to join our channel and stay updated with the latest news.

Next