Advertisement

ಕರಾವಳಿ: 72 ಸಾವಿರ ಹೆಕ್ಟೇರ್‌ ಭತ್ತ ಬೇಸಾಯ ಗುರಿ

06:00 AM May 27, 2018 | |

ಮಂಗಳೂರು: ಮುಂಗಾರು ಮಳೆ ಶುರುವಾಗುವುದಕ್ಕೆ ಕೆಲವೇ ದಿನ ಬಾಕಿ ಉಳಿದಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಈ ಹಂಗಾಮಿನಲ್ಲಿ ಅನುಕ್ರಮವಾಗಿ ಒಟ್ಟು 28,000 ಹೆಕ್ಟೇರ್‌ ಹಾಗೂ 44,000 ಹೆಕ್ಟೇರ್‌ಗಳಲ್ಲಿ ಭತ್ತ ಬೆಳೆಯುವ ಗುರಿ ಇರಿಸಿಕೊಳ್ಳಲಾಗಿದೆ. ಈ ಬಾರಿ ನಿರೀಕ್ಷೆಯಂತೆ ಮುಂಗಾರು ಬೇಗ ಆರಂಭಗೊಂಡರೆ ಹೆಚ್ಚಿನ ಪ್ರದೇಶಗಳಲ್ಲಿ ಬೇಸಾಯ ನಡೆಯುವ ಸಂಭವ ಇದೆ. ಕಳೆದ ವರ್ಷ ಒಮ್ಮೆ ಮಳೆ ಬಂದು ಮತ್ತೆ ಕೆಲವು ದಿನ ದೂರವಾಗಿದ್ದರಿಂದ ಹಲವು ರೈತರು ಕೊನೆಯ ಕ್ಷಣದಲ್ಲಿ ಕೃಷಿಯಿಂದ ಹಿಮ್ಮುಖರಾಗಿದ್ದರು. 

Advertisement

ದ. ಕನ್ನಡ ಜಿಲ್ಲೆಯಲ್ಲಿ ಕಳೆದ ಬಾರಿ 28,000 ಹೆ. ಗುರಿಯಲ್ಲಿ 23,000 ಹೆ. ಸಾಧನೆ ಮಾಡಲಾಗಿತ್ತು. ಈ ಬಾರಿ ಮಂಗಳೂರಿನಲ್ಲಿ 8,800 ಹೆ., ಬಂಟ್ವಾಳದಲ್ಲಿ 8,500 ಹೆ., ಬೆಳ್ತಂಗಡಿಯಲ್ಲಿ 7,700 ಹೆ., ಪುತ್ತೂರಿನಲ್ಲಿ 2,500 ಹೆ. ಹಾಗೂ ಸುಳ್ಯದಲ್ಲಿ 500 ಹೆ. ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹಾಕಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಮೇ ತಿಂಗಳಿನಲ್ಲಿ ಸುರಿಯುತ್ತಿರುವ ಮುಂಗಾರುಪೂರ್ವ ಮಳೆ ರೈತರಲ್ಲಿ ಉತ್ಸಾಹ ಮೂಡಿಸಿದ್ದು, ಉತ್ತಮ ಸಾಧನೆ ನಿರೀಕ್ಷಿಸಲಾಗಿದೆ. ಮೇ ತಿಂಗಳಿನಲ್ಲಿ 19ರ ವರೆಗೆ ಜಿಲ್ಲೆಯಲ್ಲಿ ಒಟ್ಟು 158 ಮಿ.ಮೀ. ಮಳೆಯಾಗಿದೆ.  

ಉಡುಪಿ : 44,000 ಹೆ. ಗುರಿ
ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಉಡುಪಿ ತಾಲೂಕಿ ನಲ್ಲಿ 17,750 ಹೆ., ಕುಂದಾಪುರದಲ್ಲಿ 18,250 ಹೆ., ಕಾರ್ಕಳ ತಾಲೂಕಿನಲ್ಲಿ 8,000 ಹೆ. ಸೇರಿದಂತೆ ಒಟ್ಟು 44,000 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೇಸಾಯ ಗುರಿ ಹೊಂದಲಾಗಿದೆ. ಕಳೆದ ಸಾಲಿನಲ್ಲಿ 44,000 ಹೆ. ಗುರಿಯಲ್ಲಿ 42,820 ಹೆ. ಸಾಧಿಸಲಾಗಿತ್ತು. 

ಎಂಒ-4 ಭತ್ತದ ಬೀಜ ಕೊರತೆ
ಮುಂಗಾರು ಹಂಗಾಮಿನಲ್ಲಿ ಹೆಚ್ಚು ಬಳಕೆ ಯಾಗುವ ಎಂಒ-4 ಭತ್ತದ ಬೀಜ ಕೊರತೆ ಕಂಡು ಬಂದಿದೆ. ಇದನ್ನು ನೀಗಿಸಲು ಕೃಷಿ ಇಲಾಖೆ ಪೂರಕ ಕ್ರಮ ಕೈಗೊಂಡಿದ್ದು, ಸ್ಥಳೀಯವಾಗಿ ರೈತರಿಂದ ಬೀಜ ಒದಗಿಸಲು ಮುಂದಾಗಿದೆ. ದ. ಕನ್ನಡ ಜಿಲ್ಲೆಗೆ 115 ಕಿಂಟ್ವಾಲ್‌ ಎಂಒ-4, 90 ಕಿಂಟ್ವಾಲ್‌ ಜಯ, 35 ಕಿಂಟ್ವಾಲ್‌ ಜ್ಯೋತಿ ಹಾಗೂ 60 ಕಿಂಟ್ವಾಲ್‌ ಉಮಾ ಸೇರಿದಂತೆ ಒಟ್ಟು 300 ಕ್ವಿಂಟಾಲ್‌ ಬೀಜ ರಾಜ್ಯ ಬೀಜ ನಿಗಮದಿಂದ ಸರಬರಾಜು ಆಗಿದೆ. ಎಂಒ-4 ಬೀಜಕ್ಕೆ ಹೆಚ್ಚಿನ ಬೇಡಿಕೆ ಇದೆ. ಕಳೆದ ಸಾಲಿನ ಮುಂಗಾರು ಹಂಗಾಮಿನಲ್ಲಿ ಒಟ್ಟು 320 ಕಿಂಟ್ವಾಲ್‌ ಎಂಒ-4 ಬಿತ್ತನೆ ಬೀಜ ಮಾರಾಟವಾಗಿತ್ತು. ಎಂಒ-4 ಬಿತ್ತನೆ ಬೀಜ ಕೊರತೆಯಾಗುವ ಸಾಧ್ಯತೆಗಳನ್ನು ನಿರೀಕ್ಷಿಸಿ ಕೃಷಿ ಇಲಾಖೆ ಎಂಒ-4ಗೆ ಹತ್ತಿರವಿರುವ, ಕೆಂಪು ಅಕ್ಕಿ ತಳಿಯಾಗಿರುವ ಉಮಾ ಬೀಜವನ್ನು ದಾಸ್ತಾನು ಇರಿಸಿ ಕೊಂಡಿದೆ. ಇದಲ್ಲದೆ ಕಳೆದ ವರ್ಷ ಎಂಒ-4 ಭತ್ತ ಬೆಳೆಸಿರುವ ರೈತರನ್ನು ಸಂಪರ್ಕಿಸಿ ಅವರಲ್ಲಿ ಮಿಗತೆ ಇರುವ ಬೀಜದ ವಿವರ ಪಡೆದು, ಬೇಡಿಕೆ ಸಲ್ಲಿಸುವ ರೈತರಿಗೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. 

ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಒಟ್ಟು 685 ಕಿಂ. ಭತ್ತದ ಬೀಜ ಸರಬರಾಜು ಆಗಿದೆ. ಇಲ್ಲೂ ಎಂಒ-4 ಬೀಜದ ಕೊರತೆ ಕಂಡುಬಂದಿದ್ದು, ಉಮಾ ತಳಿಯ ಬೀಜವನ್ನು ದಾಸ್ತಾನು ಇರಿಸಲಾಗಿದೆ. ಅವಿಭಜಿತ ದ.ಕನ್ನಡ ಜಿಲ್ಲೆಗೆ ಎಂಒ-4 ಬೀಜ ಶಿವಮೊಗ್ಗದಿಂದ ಹೆಚ್ಚು ಪ್ರಮಾಣದಲ್ಲಿ ಪೂರೈಕೆಯಾಗುತ್ತಿದೆ. ಈ ಬಾರಿ ಅಲ್ಲಿ ಎಂಒ-4 ಭತ್ತ ಇಳುವರಿ ಕುಸಿತವಾಗಿದ್ದು, ಬೀಜ ನಿಗಮಕ್ಕೆ ಕಡಿಮೆ ಪ್ರಮಾಣದಲ್ಲಿ ಸರಬರಾಜು ಆಗಿದೆ. 
ಜಿಲ್ಲೆಗೆ ಈ ಬಾರಿ 5,800 ಟನ್‌ ರಸಗೊಬ್ಬರ ಬಂದಿದ್ದು, ಪ್ರಸ್ತುತ 4,200 ಟನ್‌ ಸಂಗ್ರಹವಿದೆ. ಇದು 650 ಟನ್‌ ಯೂರಿಯಾ, 1,200 ಟನ್‌ ಸುಫಲಾ, 108 ಟನ್‌ ರಾಕ್‌ ಪಾಸೆ#àಟ್‌ ಹಾಗೂ 460 ಟನ್‌ ಎಂಒಪಿ ರಸಗೊಬ್ಬರ ಒಳಗೊಂಡಿದೆ. 

Advertisement

ಜಾರಿಯಾಗದ ಕೇರಳ ಮಾದರಿ ಪ್ಯಾಕೇಜ್‌ 
ಕೇರಳದಲ್ಲಿ ನೀಡುತ್ತಿರುವಂತೆ ಕರ್ನಾಟಕದಲ್ಲೂ ಕರಾವಳಿ/ ಮಲೆನಾಡು ಜಿಲ್ಲೆಗಳ ಭತ್ತ ಬೆಳೆಯುವ ರೈತರಿಗೆ ಹೆಕ್ಟೇರ್‌ಗೆ 7,500 ರೂ. ಪೋತ್ಸಾಹಧನ ನೀಡಬಹುದಾಗಿದೆ ಎಂದು ಕರ್ನಾಟಕ ಸರಕಾರ ನೇಮಿಸಿದ್ದ ಅಧ್ಯಯನ ತಂಡ 2015-16ರಲ್ಲಿ ಶಿಫಾರಸು ಮಾಡಿತ್ತು. ಆದರೆ ಸರಕಾರ ಇನ್ನೂ ಬಗ್ಗೆ ಪೂರಕ ಸ್ಪಂದನೆ ನೀಡಿಲ್ಲ.

ರಾಜ್ಯದಲ್ಲಿ ಮಳೆಯಾಶ್ರಿತ ಭತ್ತ ಬೇಸಾಯಕ್ಕೆ ಕೇರಳ ಮಾದರಿಯ ಪ್ಯಾಕೇಜ್‌ ನೀಡುವ ಬಗ್ಗೆ ಅಧ್ಯಯನ ನಡೆಸಲು ದ.ಕ. ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ನೇತೃತ್ವದಲ್ಲಿ ರಾಜ್ಯ ಸರಕಾರ ಸಮಿತಿ ನೇಮಿಸಿತ್ತು. ಸಮಿತಿ ಕೇರಳದ ಕಾಸರಗೋಡು ಹಾಗೂ ಕಣ್ಣೂರು ಜಿಲ್ಲೆಗಳಲ್ಲಿ ಅಧ್ಯಯನ ಮಾಡಿ ವರದಿಯನ್ನು ಕೃಷಿ ಬೆಲೆ ಆಯೋಗದ ಆಯುಕ್ತರಿಗೆ ಸಲ್ಲಿಸಿತ್ತು. 

ದ. ಕನ್ನಡ ಜಿಲ್ಲೆಯಲ್ಲಿ ಬಿತ್ತನೆ ಬೀಜ ದಾಸ್ತಾನು ಇದೆ. ಎಂಒ-4 ಬೀಜದ ಕೊರತೆ ನೀಗಿಸುವುದಕ್ಕಾಗಿ ಇದೇ ಮಾದರಿಯ ಉಮಾ ತಳಿಯ ಬೀಜವನ್ನು ದಾಸ್ತಾನು ಇರಿಸಲಾಗಿದೆ. ಇದಲ್ಲದೆ ಎಂಒ-4 ಭತ್ತವನ್ನು ಬೆಳೆಸಿರುವ ರೈತರನ್ನು ಸಂಪರ್ಕಿಸಿ, ಹೆಚ್ಚುವರಿ ಇರುವ ಬೀಜವನ್ನು ರೈತರಿಗೆ ಒದಗಿಸಲು ಕ್ರಮ ವಹಿಸಲಾಗುವುದು.
-ಆ್ಯಂಟನಿ ಇಮ್ಯಾನುವೆಲ್‌, ದ.ಕ. ಕೃಷಿ ಇಲಾಖೆ ಜಂಟಿ ನಿರ್ದೇಶಕರು

ಉಡುಪಿ ಜಿಲ್ಲೆಗೆ 685 ಕ್ವಿಂಟಾಲ್‌ ಬಿತ್ತನೆ ಬೀಜ ಬಂದಿದ್ದು, ಬಹುತೇಕ ವಿತರಣೆಯಾಗಿದೆ. ಎಂಒ-4 ಭತ್ತದ ಬೀಜದ ಕೊರತೆ ಇದೆ. ಪರ್ಯಾಯವಾಗಿ ಉಮಾ ತಳಿಯ ಬೀಜ ನೀಡಲಾಗುತ್ತಿದೆ. 
-ಡಾ| ಕೆಂಪೇ ಗೌಡ, ಉಡುಪಿ ಜಿಲ್ಲಾ ಕೃಷಿ ಇಲಾಖಾ ಕೃಷಿ ನಿರ್ದೇಶಕರು

ದಕ್ಷಿಣ ಕನ್ನಡ 28,000 ಹೆಕ್ಟೇರ್‌
ಉಡುಪಿ 44,000 ಹೆಕ್ಟೇರ…

ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next