Advertisement

Padavinangady: 2 ಕಡೆ ಕಳವಿಗೆ ಯತ್ನ ಮನೆಮಂದಿ ಇದ್ದಾಗಲೇ ಬಾಗಿಲು ಒಡೆಯಲು ಯತ್ನಿಸಿದ ಕಳ್ಳರು

08:57 PM Jul 21, 2024 | Team Udayavani |

ಮಂಗಳೂರು: ನಗರದಲ್ಲಿ ಮತ್ತೆ ಕಳ್ಳರ ಹಾವಳಿ ಕಂಡುಬಂದಿದ್ದು ಪದವಿನಂಗಡಿಯ ಎರಡು ಕಡೆ ಕಳ್ಳತನಕ್ಕೆ ಯತ್ನಿಸಿರುವ ಘಟನೆ ನಡೆದಿದೆ.

Advertisement

ರವಿವಾರ 1.45ರ ವೇಳೆಗೆ ಪದವಿನಂಗಡಿಯ ಮಹಾತ್ಮನಗರ ಬಡಾವಣೆಯ ಮನೆಯೊಂದರ ಮುಖ್ಯಗೇಟ್‌ ತೆಗೆದು ಒಳನುಗ್ಗಿರುವ ಕಳ್ಳರು ಬಾಗಿಲಿನ ಬಳಿ ಇದ್ದ ಇನ್ನೊಂದು ಸ್ಟೀಲ್‌ ಗೇಟ್‌ ತೆರೆದು ಮನೆಯ ಬಾಗಿಲನ್ನು ರಾಡ್‌ನಿಂದ ಒಡೆಯಲು ಯತ್ನಿಸಿದ್ದಾರೆ. ಆಗ ಮನೆಯವರು ಎಚ್ಚರಗೊಂಡು ಬೊಬ್ಬೆ ಹಾಕಿ ಎಲ್ಲ ಲೈಟ್‌ಗಳನ್ನು ಹಾಕಿದರು. ಆ ವೇಳೆ ಕಳ್ಳರು ಓಡಿ ಹೋಗಿದ್ದಾರೆ. ಮನೆಯವರು ಪೊಲೀಸರು ಹಾಗೂ ನೆರೆಮನೆಯವರಿಗೆ ಮಾಹಿತಿ ನೀಡಿದ್ದಾರೆ.

ಕಾವೂರು ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ದೇವಸ್ಥಾನದಲ್ಲಿ ಕಳವಿಗೆ ಯತ್ನ
ಶನಿವಾರ ತಡರಾತ್ರಿ ಸುಮಾರು ನಾಲ್ವರ ತಂಡ ಪದವಿನಂಗಡಿಯ ಪೆರ್ಲಗುರಿಯ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಕಳವಿಗೆ ಯತ್ನಿಸಿದೆ. ದೇವಸ್ಥಾನದ ಬಳಿ ಓಡಾಡುತ್ತಿದ್ದ ಕಳ್ಳರ ಕೈಯಲ್ಲಿದ್ದ ಟಾರ್ಚ್‌ನ ಬೆಳಕು ದೇವಸ್ಥಾನದ ಪಕ್ಕದ ಮನೆಯವರಿಗೆ ಕಂಡು ಅವರು ಎಚ್ಚರಗೊಂಡರು. ಮನೆಯ ಹೊರಭಾಗದ ಲೈಟ್‌ಗಳನ್ನು ಹಾಕಿದಾಗ ಕೆಲವು ಮಂದಿ ದೇವಸ್ಥಾನದ ಬಳಿಯಿಂದ ಹೋಗುತ್ತಿರುವುದು ಗೊತ್ತಾಗಿದೆ. ಈ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ ಎಂದು ತಿಳಿದುಬಂದಿದೆ.

ಎರಡೂ ಘಟನೆಗಳ ಬಗ್ಗೆ ಕಾವೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇತ್ತೀಚೆಗೆ ನಗರದಲ್ಲಿ ಚಡ್ಡಿಗ್ಯಾಂಗ್‌ನಿಂದ ಒಂದು ಕಡೆ ಕಳ್ಳತನ, ಇನ್ನೊಂದು ಕಡೆ ದರೋಡೆ ನಡೆದಿತ್ತು. ಅನಂತರ ಚಡ್ಡಿಗ್ಯಾಂಗ್‌ನ್ನು ಬಂಧಿಸಲಾಗಿತ್ತು. ಅಲ್ಲದೆ ಮನೆಯೊಂದರಿಂದ ಚಿನ್ನಾಭರಣ ಕಳವು ಮಾಡಿದ್ದ ಕಳ್ಳರ ಮತ್ತೂಂದು ತಂಡವನ್ನು ಕೂಡ ಬಂಧಿಸಲಾಗಿತ್ತು. ಇದೀಗ ಮತ್ತೂಂದು ಕಳ್ಳರ ತಂಡ ಕ್ರಿಯಾಶೀಲವಾಗಿದೆ. ನಿರಂತರ ಮಳೆಯಾಗುತ್ತಿರುವ ಹೊತ್ತಿನಲ್ಲಿ ಕಳ್ಳರು ಇಂತಹ ಕೃತ್ಯಕ್ಕೆ ಮುಂದಾಗುತ್ತಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next