Advertisement

ಪಚ್ಚನಾಡಿಯ ತ್ಯಾಜ್ಯರಾಶಿ ಮತ್ತೆ ಬದುಕು ಕಸಿಯದಿರಲಿ

12:57 AM Jun 03, 2020 | Sriram |

ಈ ಬೇಸಗೆಯಲ್ಲಿ ಮಳೆಗಾಲಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಾದ ಬಹುತೇಕ ದಿನಗಳನ್ನು ಕೋವಿಡ್-19 ಲಾಕ್‌ಡೌನ್‌ ನುಂಗಿ ಹಾಕಿದೆ. ನಿರ್ಬಂಧಗಳು ತೆರವಾಗಿ ಜನಜೀವನ ಸಹಜತೆಗೆ ಬರುತ್ತಿರುವ ಸಮಯವಿದು. ಕೆಲವೇ ದಿನಗಳಲ್ಲಿ ಮಳೆಗಾಲದ ಸಿದ್ಧತೆಗಳು ಮುಗಿಯಬೇಕು ಎಂಬ ಆಗ್ರಹ ಈ ಸರಣಿಯದ್ದು.

Advertisement

ಮಂಗಳೂರು: ಕಳೆದ ಆಗಸ್ಟ್‌ನಲ್ಲಿ ಸುರಿದ ಮಳೆಯಿಂದಾಗಿ ಪಚ್ಚನಾಡಿಯ ಡಂಪಿಂಗ್‌ ಯಾರ್ಡ್‌ ಬಲಭಾಗಕ್ಕೆ ಜರಿದು ಮಂದಾರ ಎಂಬ ಪ್ರದೇಶ ತ್ಯಾಜ್ಯಮಯ ವಾಗಿತ್ತು. ಈ ಬಾರಿ ಇದು ಪುನರಾವರ್ತನೆ ಆಗಲಿದೆಯೇ ಎಂಬ ಆತಂಕ ಕಾಡಲು ಆರಂಭಿಸಿದೆ.

ಪಾಲಿಕೆ ವ್ಯಾಪ್ತಿಯ 31ರಿಂದ 45ರ ವರೆಗಿನ 15 ವಾರ್ಡ್‌ಗಳ ಪೈಕಿ 36ನೇ ವಾರ್ಡ್‌ ಪದವು (ಪೂರ್ವ)ಗೆ ಸೇರಿದ ಪಚ್ಚನಾಡಿಯ ಡಂಪಿಂಗ್‌ ಯಾರ್ಡ್‌ನ ಕಸ ಕೆಳಕ್ಕೆ ಜಾರದಂತೆ ನಿರ್ಮಾಣವಾಗುತ್ತಿರುವ ತಡೆಗೋಡೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಜತೆಗೆ, ಈಗಾಗಲೇ ಕೆಳಕ್ಕೆ ಜಾರಿರುವ ಕಸದ ರಾಶಿ ಈ ಬಾರಿಯ ಮಳೆಗಾಲದಲ್ಲಿ ಮತ್ತಷ್ಟು ಖಾಸಗಿ ಜಮೀನಿಗೆ ವ್ಯಾಪಿಸುವ ಅಪಾಯವಿದೆ.

ಕಳೆದ ವರ್ಷ ತ್ಯಾಜ್ಯರಾಶಿಯಿಂದಾಗಿ 27 ಮನೆಯವರನ್ನು ತಾತ್ಕಾಲಿಕವಾಗಿ ಬೇರೆಡೆ ಸ್ಥಳಾಂತರಿಸಲಾಗಿದ್ದು, ಈಗಲೂ ಅಲ್ಲೇ ಇದ್ದಾರೆ. ಒಂದೆರಡು ದೈವಸ್ಥಾನ ಹಾಗೂ ನಾಗಬನಗಳು ತ್ಯಾಜ್ಯ ರಾಶಿಯೊಳಗೆ ಬಂಧಿಯಾಗಿವೆ. ಸುಮಾರು 5000ಕ್ಕೂ ಅಧಿಕ ಅಡಿಕೆ-ತೆಂಗಿನ ಮರಗಳು ನಾಶವಾ ಗಿವೆ. ಪರಿಸರದ ಕುಡಿಯುವ ನೀರು ಹಾಳಾಗಿದ್ದು, ತೋಡಿನಲ್ಲಿ ತ್ಯಾಜ್ಯ ತುಂಬಿಕೊಂಡಿದೆ.

ಈಗ ಮಳೆನೀರು ಬೀಳುತ್ತಿರುವ ಹಿನ್ನೆಲೆಯಲ್ಲಿ ತೋಡಿನಲ್ಲಿರುವ ತ್ಯಾಜ್ಯ ಮುಂದೆ ಚಲಿಸುವ ಅಪಾಯದಲ್ಲಿದೆ. ಕಸ ಮತ್ತಷ್ಟು ಕೆಳಕ್ಕೆ ಜಾರಿದರೆ ಮುಂಭಾಗದಲ್ಲಿ ಮಳೆನೀರು ಹರಿಯುವ ದೊಡ್ಡ ತೋಡು ಇದ್ದು, ಅದು ಮುಚ್ಚುವ ಭೀತಿಯಿದೆ.

Advertisement

ಹೀಗಾದರೆ ಮಂದಾರ ಪ್ರದೇಶ
ಕೃತಕ ತ್ಯಾಜ್ಯ ನೆರೆಯಿಂದ ನಲುಗಲಿದೆ.ಸದ್ಯ ಡಂಪಿಂಗ್‌ ಯಾರ್ಡ್‌ನಿಂದ ತ್ಯಾಜ್ಯ ಮತ್ತೆ ಜಾರದಂತೆ ತಡೆಗೋಡೆ ನಿರ್ಮಿಸಲಾಗುತ್ತಿದೆ. ಆದರೆ, ಜರಿದಿರುವ ತ್ಯಾಜ್ಯದ ವಿಲೇವಾರಿ ಇನ್ನೂ ಆಗದ ಕಾರಣ ಅದು ಮತ್ತೆ ಮುಂದೆ ಹೋಗುವ ಅಪಾಯದಲ್ಲಿದೆ.

ಎಕರೆಗಟ್ಟಲೆಯಲ್ಲಿದೆ ಭೂಗತ ತ್ಯಾಜ್ಯ!
ಮಂಗಳೂರು ವ್ಯಾಪ್ತಿಯಿಂದ ಪ್ರತಿನಿತ್ಯ ಸುಮಾರು 250ರಿಂದ 300 ಟನ್‌ನಷ್ಟು ಕಸ ಸಂಗ್ರಹಿಸಲಾಗುತ್ತದೆ. ಇದನ್ನು ಸಂಸ್ಕರಣಾ ಘಟಕಕ್ಕೆ ತಂದು ಸಂಸ್ಕರಿಸಿ ಬಾಕಿಯಾಗುವ ಸುಮಾರು 50 ಟನ್‌ನಷ್ಟು ತ್ಯಾಜ್ಯವನ್ನು ಪಚ್ಚನಾಡಿಯಲ್ಲಿ ಎಸೆಯಲಾಗುತ್ತದೆ. ಇಲ್ಲಿ ಸುಮಾರು 77.93 ಎಕರೆ ಜಾಗವಿದ್ದು, ಇದರಲ್ಲಿ 10 ಎಕರೆ ವ್ಯಾಪ್ತಿಯಲ್ಲಿ ಕಸ ತುಂಬಿಸಿ, ಮಣ್ಣು ಹಾಕಿ ಸಮತಟ್ಟು ಮಾಡಲಾಗಿದೆ. ಅದರ ಬಳಿಯಲ್ಲಿಯೇ ಈಗ ಸುಮಾರು 12 ಎಕರೆ ಜಾಗದಲ್ಲಿ 10 ವರ್ಷಗಳಿಂದ ತ್ಯಾಜ್ಯ ಸುರಿದು ಮಣ್ಣು ಹಾಕ ಲಾಗುತ್ತಿದೆ. ಇದೇ ಕಾರಣದಿಂದ ಮಂದಾರ ಪ್ರದೇಶ ತ್ಯಾಜ್ಯ ರಾಶಿಗೆ ಸಿಲುಕಿದ್ದು!

ಅಲ್ಲಲ್ಲಿ ಕಾಮಗಾರಿ: ಮಳೆ ಅಪಾಯ
ಮಂಗಳೂರಿನ ಸೆಂಟ್ರಲ್‌ ಮಾರುಕಟ್ಟೆ ವ್ಯಾಪ್ತಿಯ ವಿವಿಧೆಡೆ ಸ್ಮಾರ್ಟ್‌ಸಿಟಿ, ಒಳಚರಂಡಿ, ತಾತ್ಕಾಲಿಕ ಮಾರುಕಟ್ಟೆ ಸಹಿತ ವಿವಿಧ ಕಾಮಗಾರಿ ನಡೆಯುತ್ತಿದೆ. ಇದು ಮಳೆಗಾಲದಲ್ಲಿ ಸಂಚಾರ ಸಹಿತ ಹಲವು ಸಮಸ್ಯೆ ಸೃಷ್ಟಿಸುವ ಸಾಧ್ಯತೆಗಳಿವೆ. ಸಿಟಿ ಸೆಂಟರ್‌ ಮುಂಭಾಗದಲ್ಲಿ ನೀರು ನಿಲ್ಲುವ ಸಮಸ್ಯೆಗಿನ್ನೂ ಪರಿಹಾರ ದೊರಕಿಲ್ಲ. ಅಶೋಕನಗರ ವ್ಯಾಪ್ತಿಯ ರಸ್ತೆಯಲ್ಲಿ ಕೆಲವು ಕಾಮಗಾರಿ ನಡೆಯುತ್ತಿದ್ದು, ಮಳೆಗಾಲಕ್ಕೆ ಸಮಸ್ಯೆ ಆಗಲಿದೆ. ಸುಲ್ತಾನ್‌ಬತ್ತೇರಿ, ಬಂದರು ಸಹಿತ ಫಲ್ಗುಣಿ ನದಿ ಹರಿಯುವ ದಡದಲ್ಲಿ ಮಳೆಗಾಲದಲ್ಲಿ ಮುನ್ನೆಚ್ಚರಿಕೆ ವಹಿಸುವುದು ಉತ್ತಮ.

ಕೃತಕ ನೆರೆಯ ಭೀತಿ
ಪ್ರತಿ ವರ್ಷ ಬಿಜೈಯ ಭಾರತೀನಗರ ವ್ಯಾಪ್ತಿಯಲ್ಲಿ ಮಳೆನೀರು ಮನೆಗಳಿಗೆ ನುಗ್ಗಿ ಸಮಸ್ಯೆಯಾಗುತ್ತಿದೆ. ಸಮೀಪದ ರಾಜಕಾಲುವೆ ಸಮರ್ಪಕವಾಗಿ ಸ್ವತ್ಛಗೊಳಿಸ ದಿರುವುದು ಹಾಗೂ ತಗ್ಗುಪ್ರದೇಶದಲ್ಲಿ ಇರುವ ಕಾರಣದಿಂದ ಇಲ್ಲಿ ಮಳೆಗಾಲ ನಿರ್ವಹಣೆ ದೊಡ್ಡ ಸಮಸ್ಯೆ. ಕದ್ರಿ ವ್ಯಾಪ್ತಿಯಲ್ಲಿ ಎಂದಿನಂತೆ ಈ ಬಾರಿಯೂ ಡ್ರೈನೇಜ್‌ ಸಮಸ್ಯೆ ಉಲ್ಬಣವಾಗುವ ಸಾಧ್ಯತೆಯಿದೆ. ಗ್ರಾಮೀಣ ಭಾಗವಾಗಿರುವ ಮರೋಳಿಯಲ್ಲಿ ಭೂಕುಸಿತ ಸಾಧ್ಯತೆಯೂ ಇದೆ.

ಜ್ಯೋತಿ ಎಂಬ ಮಿನಿ ಕಡಲು!
ಜ್ಯೋತಿ ಬಸ್‌ ನಿಲ್ದಾಣ ಪ್ರತಿ ಮಳೆಗಾಲದಲ್ಲಿ ನೀರು ನಿಂತು ಮಿನಿ ಕಡಲಿನ ರೂಪ ಪಡೆಯುತ್ತದೆ. ಇಲ್ಲಿ ಚರಂಡಿಯಲ್ಲಿ ಹೂಳು, ಕಸ ಕಡ್ಡಿ ತುಂಬಿಕೊಂಡು ನೀರು ಸರಾಗವಾಗಿ ಹರಿಯಲು ಆಗದೆ ರಸ್ತೆ ತುಂಬ ನೀರು ನಿಲ್ಲುತ್ತದೆ. ಈ ಘಟನೆ ಪ್ರತಿವರ್ಷ ಮಳೆಗಾಲದಲ್ಲಿ ನಡೆಯುತ್ತಿದ್ದರೂ ಇದರ ಶಾಶ್ವತ ಪರಿಹಾರಕ್ಕೆ ಪಾಲಿಕೆ ಮನಸ್ಸು ಮಾಡಿಲ್ಲ. ಹೀಗಾಗಿ ಈ ಬಾರಿಯೂ ಸಮಸ್ಯೆ ಬಹುತೇಕ ಖಚಿತ.

ಭೋಜರಾಜ ರಾವ್‌ ಲೇನ್‌ ಕೃತಕ ನೆರೆ ಸಮಸ್ಯೆ
ಕುದ್ರೋಳಿ ಭಾಗದ ರಾಜಕಾಲುವೆಯ ಅಸಮರ್ಪಕ ವ್ಯವಸ್ಥೆಯಿಂದಾಗಿ ಮಳೆಗಾಲದಲ್ಲಿ ಸಮಸ್ಯೆ ಹೆಚ್ಚುತ್ತದೆ. ಅದರಲ್ಲಿಯೂ ಭೋಜರಾಜ ರಾವ್‌ ಲೇನ್‌ ವ್ಯಾಪ್ತಿಯಲ್ಲಿ ಮಳೆನೀರು ಮನೆ ಹಾಗೂ ಸಮೀಪದ ಗುಜರಾತಿ ಶಾಲೆ ಆವರಣಕ್ಕೂ ನುಗ್ಗುವ ಸ್ಥಿತಿಯಿದೆ. ನಗರದ ವಿವಿಧೆಡೆಗಳಿಂದ ಹರಿದುಬರುವ ನೀರು ಇಲ್ಲಿ ಸಮರ್ಪಕವಾಗಿ ಹರಿಯಲು ಅವಕಾಶವಿಲ್ಲದೆ ಕುದ್ರೋಳಿ ಸುತ್ತಮುತ್ತಲು ಕೃತಕ ನೆರೆ ಸೃಷ್ಟಿಯಾಗುತ್ತದೆ.

ಈ ವಾರ್ಡ್‌ಗಳ ಕಥೆ
ಇದು ಸುದಿನ ತಂಡವು 31. ಬಿಜೈ, 32. ಕದ್ರಿ (ಉತ್ತರ), 33. ಕದ್ರಿ (ದಕ್ಷಿಣ), 34. ಶಿವಬಾಗ್‌, 35. ಪದವು ಸೆಂಟ್ರಲ್‌, 36. ಪದವು (ಪೂರ್ವ), 37. ಮರೋಳಿ, 38. ಬೆಂದೂರು, 39. ಫಳ್ನೀರ್‌, 40. ಕೋರ್ಟ್‌, 41. ಸೆಂಟ್ರಲ್‌ ಮಾರ್ಕೆಟ್‌, 42. ಡೊಂಗರಕೇರಿ, 43. ಕುದ್ರೋಳಿ, 44 ಬಂದರ್‌, 45. ಪೋರ್ಟ್‌ ವಾರ್ಡ್‌ಗಳಲ್ಲಿ ಸಂಚರಿಸಿದಾಗ ಕಂಡು ಬಂದ ದೃಶ್ಯ.

ಮುನ್ನೆಚ್ಚರಿಕೆ ವಹಿಸಲಾಗಿದೆ
ಮಂಗಳೂರಿನಲ್ಲಿ ಈ ಬಾರಿ ಯಾವುದೇ ಸಮಸ್ಯೆ ಆಗದಂತೆ ಸರ್ವ ರೀತಿಯಲ್ಲಿಯೂ ಮುನ್ನೆಚ್ಚರಿಕೆ ವಹಿಸಲಾಗಿದೆ. ರಾಜಕಾಲುವೆ ಹಾಗೂ ಚರಂಡಿಯ ಹೂಳು ತೆಗೆಯುವ ಕಾರ್ಯ ನಡೆದಿದೆ. ಕೃತಕ ನೆರೆ ನಿಲ್ಲದಂತೆ ಎಲ್ಲೆಡೆಯೂ ವ್ಯವಸ್ಥೆ ಮಾಡಲಾಗಿದೆ. ಮಳೆಗಾಲದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಪಾಲಿಕೆಯಿಂದ ಸಹಾಯವಾಣಿ ಹಾಗೂ ಪ್ರತಿ ವಾರ್ಡ್‌ನಲ್ಲಿ ಸ್ಪೆಷಲ್‌ ಗ್ಯಾಂಗ್‌ ನಿಯೋಜಿಸಲಾಗಿದೆ.
 - ಶಾನಾಡಿ ಅಜಿತ್‌ ಕುಮಾರ್‌ ಹೆಗ್ಡೆ,, ಆಯುಕ್ತರು, ಮನಪಾ

ಮಳೆಗಾಲ ಸಂದರ್ಭ ಸಹಾಯವಾಣಿ
ಮಂಗಳೂರು ಪಾಲಿಕೆ: 2220306
ಮೆಸ್ಕಾಂ 1912
ಅಗ್ನಿಶಾಮಕದಳ 101

Advertisement

Udayavani is now on Telegram. Click here to join our channel and stay updated with the latest news.

Next