Advertisement

ಮರೆಯಾದರೂ ಕಾಡುತ್ತಿರುವ ಗಾನ ಲೋಕದ ಸಾರ್ವಭೌಮ ಪಿಬಿ ಶ್ರೀನಿವಾಸ್…

10:36 AM Apr 22, 2018 | |

ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು… ಈ ಹಾಡು ಇಂದಿಗೂ ಎಂದೆಂದಿಗೂ ಚಿರ ನೂತನ ಎಲ್ಲರಿಗೂ ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡು. ಆ ಹಾಡಿನ ಕಂಚಿನ ಕಂಠದ ಗಾಯಕ, ದಕ್ಷಿಣ ಭಾರತದ ಚಿತ್ರರಂಗದ ಪ್ರಾತಃ ಸ್ಮರಣೀಯ ಗಾಯಕ ನಮ್ಮನ್ನಗಲಿ (ಏಪ್ರಿಲ್ 14) 5 ವರ್ಷಗಳು ಸಂದಿವೆ. 

Advertisement

ಮಾತೃಭಾಷೆ ತೆಲುಗು ಸೇರಿದಂತೆ ಕನ್ನಡ, ತಮಿಳು, ಹಿಂದಿ ಮಲಯಾಳಂ ಮತ್ತು ಕೊಂಕಣಿ  ಭಾಷೆಯ  ಮೂರು ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವ ಗಾಯನ ಲೋಕದ ಸಾರ್ವಭೌಮ ಪಿ.ಬಿ ಶ್ರೀನಿವಾಸ್. 

ಪ್ರತಿವಾದಿ ಭಯಂಕರ ಶ್ರೀನಿವಾಸ್ ಅವರು ಆಂಧ್ರದ ಪೂರ್ವ ಗೋದಾವರಿ ಜಿಲ್ಲೆಯ ಕಾಕಿನಾಡದಲ್ಲಿ  1930 ಸೆಪ್ಟಂಬರ್ 22 ರಂದು  ಪ್ರತಿವಾದಿ ಭಯಂಕರ ಫಣೀಂದ್ರಸ್ವಾಮಿ ಮತ್ತು ಶೇಷಗಿರಿಯಮ್ಮ ದಂಪತಿಗಳ ಕಿರಿಯ ಮಗನಾಗಿ  ಜನಿಸಿದರು. 

ಸರ್ಕಾರಿ ಉದ್ಯೋಗಿಯಾಗಿದ್ದ ತಂದೆಯ ಆಸೆ ಮಗನೊಬ್ಬ ಸರ್ಕಾರಿ ಉದ್ಯೋಗಿಯಾಗಬೇಕು ಎಂಬುದಾಗಿತ್ತು. ಗಾಯಕಿಯಾಗಿದ್ದ ತಾಯಿಗೆ ಮಗನೊಬ್ಬ ಗಾಯಕನಾಗಬೇಕು ಎಂಬ ಮಹದಾಸೆ ಇತ್ತು. 

ಜನನಿ ತಾನೆ ಮೊದಲ ಗುರು ಎಂಬಂತೆ ಶಾಸ್ತ್ರೀಯ ಸಂಗೀತವನ್ನು ತಾಯಿಯಿಂದಲೇ ಅಭ್ಯಸಿಸಿರುವುದು ಪಿಬಿಎಸ್ ಅವರ ಅಪಾರ ಯಶಸ್ಸಿಗೆ ಕಾರಣವಾಯಿತು ಎನ್ನಬಹುದು.

Advertisement

ಬಾಲ್ಯದಲ್ಲಿ ರೇಡಿಯೋ ಕೇಳುವುದನ್ನು ಹವ್ಯಾಸವಾಗಿಸಿಕೊಂಡಿದ್ದ ಪಿಬಿಎಸ್ ಅವರಿಗೆ ಮೊಹಮದ್ ರಫಿ ಅವರ ಕಂಠವೆಂದರೆ ಬಹಳ ಅಚ್ಚುಮೆಚ್ಚಿನದ್ದಾಗಿತ್ತಂತೆ.

ನಾಟಕಕಾರರಾಗಿದ್ದ ಮಾವ ಕಿಡಂಬಿ ಕೃಷ್ಣಸ್ವಾಮಿ ಅವರು 12 ವರ್ಷದ ಬಾಲಕ ಪಿಬಿಎಸ್ ಅವರಿಗೆ ಮೊದಲು ಹಾಡುವ ಅವಕಾಶ ನೀಡಿ ಬೆಳಗಲು ಅವಕಾಶ ಮಾಡಿಕೊಟ್ಟರು.

ಜೋತಿಷಿಯೊಬ್ಬರು ಪಿಬಿಎಸ್ ಅವರ ತಂದೆ ಬಳಿ ನಿನ್ನ ಮಗ ಸಂಗೀತದಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ ಎಂದಿದ್ದರಂತೆ. ಆದರೆ ಆ ಮಾತನ್ನು ಪಿಬಿಎಸ್ ತನ್ನ ಕಂಠ ಸಿರಿಯ ಮೂಲಕ ಸುಳ್ಳು ಮಾಡಿ ಕೋಟ್ಯಂತರ ಅಭಿಮಾನಿಗಳ ನೆಚ್ಚಿನ ಗಾಯಕನಾಗಿ ಸಾಧಿಸಿ ತೋರಿದರು.ಕರ್ನಾಟಕ ಸಂಗೀತ ಮತ್ತು ಗಝಲ್ನಲ್ಲೂ ಪಿಬಿಎಸ್ ಪರಿಪೂರ್ಣ ಗಾಯಕನಾಗಿ ಹೊರಹೊಮ್ಮಿದ್ದರು. 

ಮದ್ರಾಸ್ನ ಜೆಮಿನಿ ಸ್ಟುಡಿಯೋಗೆ ಬಂದ ಶ್ರೀನಿವಾಸ್ ಅವರು ಪ್ರಸಿದ್ಧ ವೀಣಾ ವಾದಕ ಎಮಾನಿ ಶಂಕರ ಶಾಸ್ತ್ರಿ ಅವರ ಬಳಿ ಪಳಗಿದರು. 1952 ರಲ್ಲಿ ಹಿಂದಿ ಚಿತ್ರ ಮಿಸ್ಟರ್ ಸಂಪತ್ ನ ಆಜ್ ಹಮ್ ಭಾರತ್ ಕೀ ನಾರಿ ಎನ್ನುವ ಗೀತೆಯನ್ನು ಗೀತಾ ದತ್ ಅವರೊಂದಿಗೆ ಹಾಡಿದರು. ಈ ಗೀತೆ ಜನಪ್ರಿಯವಾಗಿ  ಪಿಬಿಎಸ್ ಅವರಿಗೆ ಇನ್ನಷ್ಟು ಅವಕಾಶಗಳು ಸಿಗುವಂತಾಯಿತು.

1953 ರಲ್ಲಿ ತೆರೆಗೆ ಬಂದ ಆರ್ ನಾಗೇಂದ್ರ ರಾವ್ ಅವರ ತ್ರಿಭಾಷ ಚಿತ್ರ ‘ಜಾತಕಫಲ’ ದಲ್ಲಿ ಹಾಡುವ ಮೂಲಕ ಮೊದಲ ಬಾರಿಗೆ ಕನ್ನಡದ ಹಾಡಿಗೆ ಧ್ವನಿಯಾದರು. 

1960 ರಲ್ಲಿ ತೆರೆಗೆ ಬಂದ ಡಾ.ರಾಜ್ಕುಮಾರ್ ಅಭಿನಯದ ‘ಭಕ್ತ ಕುಂಬಾರ’ ಚಿತ್ರದಲ್ಲಿ ಪಿಬಿಎಸ್ ಅವರು ಹಾಡಿರುವ ‘ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ’ ಹಾಡು ಎಲ್ಲಾ ವರ್ಗದ ಸಂಗೀತ ಪ್ರಿಯರಿಗೆ ನೆಚ್ಚಿನ ಗೀತೆಯಾಗಿ ಉಳಿದಿದೆ. ಚಿತ್ರದ ಕುಲ ಕುಲ ಕುಲವೆಂದು ..ಸೇರಿದಂತೆ ಇನ್ನೂ ಕೆಲ ಹಾಡುಗಳು ಪಿಬಿಎಸ್ ಅವರ ಕಂಠ ಸಿರಿಯಲ್ಲಿ ಮೂಡಿ ಬಂದಿವೆ. 

‘ವಿಜಯ ನಗರದ ವೀರಪುತ್ರ’ ಚಿತ್ರದ ‘ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು.’ಹಾಡು ಪಿಬಿಎಸ್ ಅವರಿಗೆ ನಿಜವಾಗಿಯೂ ತಾರಾ ಮೌಲ್ಯ ತಂದುಕೊಟ್ಟಿತು. 

ಹೀಗೆ ಕನ್ನಡದ ಹಲವು ಗೀತೆಗಳನ್ನು ಹಾಡಿದ ಪಿಬಿಎಸ್ ಅವರು ‘ಮೇಯರ್ ಮತ್ತಣ್ಣ’ ಚಿತ್ರದಲ್ಲಿ ಅಯ್ಯಯ್ಯೋ ಹಳ್ಳಿ ಮುಕ್ಕ ಎಂಬ ಹಾಡಿನ ಮೂಲಕ ತಾನು ಎಲ್ಲಾ ಮಾದರಿಯ ಹಾಡುಗಳಿಗೂ ಸೈ ಎನಿಸಿಕೊಂಡರು. 1978 ರಲ್ಲಿ ಬಂದ’ಪಡುವಾರಳ್ಳಿ ಪಾಂಡವರು’ ಚಿತ್ರದ ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ ಹಾಡೂ ಕೂಡ ಜನಪ್ರಿಯವಾಯಿತು. 

ದಕ್ಷಿಣದ ಎಲ್ಲಾ ಸೂಪರ್‌ ಸ್ಟಾರ್‌ಗಳ ಚಿತ್ರಗಳಿಗೆ ಪಿಬಿಎಸ್ ಅವರು  ಹಾಡಿದ್ದಾರಾದರೂ ಡಾ ರಾಜ್ಕುಮಾರ್ ಅವರಿಗೆ ಹಾಡಿದ ಹಾಡುಗಳು ಮಾತ್ರ ಚಿರನೂತನ ಮತ್ತು ಹಾಲು ಜೇನು ಬೆರೆತಂತೆ ತೆರೆಯ ಮೇಲೆ ಮೋಡಿ ಮಾಡಿದ್ದವು. 300 ಕ್ಕೂ ಹೆಚ್ಚು ಜನಪ್ರಿಯ ಹಾಡುಗಳನ್ನು ರಾಜ್ ಅವರಿಗಾಗಿ ಪಿಬಿಎಸ್ ಅವರು ಹಾಡಿರುವುದು ಅಪಾರ ಮೆಚ್ಚುಗೆಗೆ ಪಾತ್ರವಾಗಿರುವುದಕ್ಕೆಸಾಕ್ಷಿ. 

ನನ್ನ ಏಳಿಗೆಗೆ ಶ್ರೀನಿವಾಸ್ ಅವರು ಕಾರಣ. ಅವರು ನನ್ನ ಶಾರೀರ ಎಂದು ಡಾ ರಾಜ್ ಕುಮಾರ್ ಅವರು ಹೇಳಿರುವುದು ಅವರ ಜನಮೆಚ್ಚುಗೆ ಎಂಥಹದ್ದು ಎನ್ನುವದನ್ನು ಸೂಚಿಸುತ್ತದೆ. 
ಸಂಪತ್ತಿಗೆ ಸವಾಲ್ ಚಿತ್ರದ ಹಾಡಿನ ಧ್ವನಿಮುದ್ರಣದ ವೇಳೆ ಶ್ರೀನಿವಾಸ್ ಅವರು ಅಲಭ್ಯರಾಗಿದ್ದರು. ಈ ವೇಳೆ ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್ ಅವರು ಒತ್ತಾಯ ಮಾಡಿ ರಾಜ್ ಅವರ ಬಳಿ ಯಾರೇ ಕೂಗಾಡಲಿ ಹಾಡನ್ನು ಹಾಡಿಸಿದ್ದು, ಅದು ಜನಪ್ರಿಯವಾಗಿ ರಾಜ್ ಕುಮಾರ್ ಓರ್ವ ಮೇರು ಗಾಯಕರೂ ಹೌದು ಎನಿಸಿಕೊಂಡದ್ದು ಈಗ ಇತಿಹಾಸ. 

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ಪ್ರಶಸ್ತಿ ಕಲೈಮಣಿ ಪ್ರಶಸ್ತಿ ಸೇರಿದಂತೆ ಸಾವಿರಾರು ಸನ್ಮಾನಗಳು ಪಿಬಿಎಸ್ ಅವರಿಗೆ ಸಂದಿವೆ. 

ಮಾಧುರ್ಯ ಸಾರ್ವಭೌಮ ಡಾ.ಪಿ.ಬಿ.ಶ್ರೀನಿವಾಸ್ ನಾದಯೋಗಿಯ ಸುನಾದಯಾನ ಎನ್ನುವ ಆತ್ಮಚರಿತ್ರೆಯೂ ಬಿಡುಗಡೆಗೊಂಡಿದೆ. ಈ ಪುಸ್ತಕ ಸಿನಿ ಸಾಹಿತ್ಯದ ಅತ್ಯುತ್ತಮ ಪುಸ್ತಕ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ. 

2013 ಎಪ್ರಿಲ್ 14 ರಂದು ಚೆನ್ನೈನ ನಿವಾಸದಲ್ಲಿ ತನ್ನ ಗಾಯನ ಪಯಣವನ್ನು ನಿಲ್ಲಿಸಿದ ಗಾನ ಗಂಧರ್ವ ನಮ್ಮನ್ನಗಲಿ 5 ವರ್ಷಗಳು ಸಂದಿವೆ. ಹಿರಿಯ ಗಾಯಕನ ಆದರ್ಶ ಸಾಧನೆಯ ಹಾದಿ ನಿಜಕ್ಕೂ ಇಂದಿನ ಯುವ ಗಾಯಕರಿಗೆ ಅನಸರಣೀಯ. 

Advertisement

Udayavani is now on Telegram. Click here to join our channel and stay updated with the latest news.

Next