Advertisement

ನಮ್ಮ ಎದುರಾಳಿ ಸ್ಟ್ರಾಂಗ್‌ ಇದ್ದಷ್ಟೂ ಗೆಲುವಿನ ಬೆಲೆ ಹೆಚ್ಚು

08:51 AM Jun 19, 2018 | Harsha Rao |

ಪೆದ್ದರ ಜೊತೆ ಜಗಳ ಆಡುವುದು, ತರ್ಕ ಮಾಡುವುದು, ಮೂರ್ಖರಿಗೆ ಯಾವುದು ಸರಿ ಯಾವುದು ತಪ್ಪು ಅಂತ ತಿಳಿ ಹೇಳುವುದು, ಏನೂ ಗೊತ್ತಿಲ್ಲದಿರುವವನ ಹತ್ತಿರ ಚಾಲೆಂಜ್‌ ಮಾಡುವುದು ಇವೆಲ್ಲ ಕಾಲಹರಣದ ಕೆಲಸಗಳು. ಅಲ್ಪಜ್ಞಾನಿಗಳು ಯಾವತ್ತೂ ನಮಗೆ ಕಾಂಪಿಟೇಟರ್‌ ಆಗಲು ಸಾಧ್ಯವಿಲ್ಲ.

Advertisement

ಶಾಲೆ ದಿನಗಳಿಂದಲೇ ಈಗ ಕಾಂಪಿಟೇಶನ್‌ ಶುರುವಾಗಿರುತ್ತದೆ. ಕೆಲವರು ಗೆಲ್ಲುತ್ತಾರೆ, ಕೆಲವರು ಸೋಲುತ್ತಾರೆ, ಇನ್ನು ಕೆಲವರು ಸ್ಪರ್ಧೆಗೆ ಸೇರಿಕೊಳ್ಳದೆ ವೀಕ್ಷಕರಾಗಿ ಚಪ್ಪಾಳೆ ತಟ್ಟುತ್ತಾರೆ. ಮತ್ತೆ ಕೆಲವರು, ಈ ಸಣ್ಣಪುಟ್ಟ ಕಾಂಪಿಟೇಶನ್‌ ನಮ್ಮ ಲೆವೆಲ್‌ಗೆ ಅಲ್ಲ, ನಾನ್ಯಾಕೆ ಅವರ ಜೊತೆ ಸ್ಪರ್ಧೆಗಿಳಿಯಲಿ ಎಂದು ಉದಾಸೀನ ಮಾಡಿ ಕುಳಿತು ಬಿಡುತ್ತಾರೆ. ಇವರು ಸ್ಪರ್ಧೆಯ ವೀಕ್ಷಕರೂ ಆಗುವುದಕ್ಕೆ ಇಷ್ಟಪಡುವುದಿಲ್ಲ.

ಆದರೆ ಬದುಕಿನಲ್ಲಿ ಸ್ಪರ್ಧೆ ಅನಿವಾರ್ಯ. ಜೀವ ವಿಕಾಸದ ಮೂಲ ನಿಯಮದಲ್ಲೇ ಸ್ಪರ್ಧೆಯಿದೆ. ಪ್ರಬಲರ ಉಳಿವು, ದುರ್ಬಲರ ಅಳಿವು ಆಗಬೇಕೆಂದರೆ ಅದಕ್ಕೆ ಸ್ಪರ್ಧೆಯೇ ಮಾನದಂಡ. ಜೀವನದ ಪ್ರತಿಯೊಂದು ಹಂತದಲ್ಲೂ ಪ್ರತಿಯೊಂದು ಕೆಲಸದಲ್ಲೂ ಸ್ಪರ್ಧೆ ಇದ್ದೇ ಇರುತ್ತದೆ. ಆದರೆ ನಾವು ಯಾರ ಜೊತೆ ಸ್ಪರ್ಧೆಗಿಳಿಯುತ್ತೇವೆ ಎಂಬುದು ಮುಖ್ಯ. ಯಾವುದೇ ಸ್ಪರ್ಧೆಯಲ್ಲಿ ನಮಗೆ ಎದುರಾಳಿಗಳನ್ನು ನೋಡಿದ ತಕ್ಷಣ ಒಳಗೊಳಗೇ ಒಂದು ಭಯ ಶುರುವಾಗುತ್ತದೆ. ಅದು ನಮಗೆ ಮಾತ್ರ ಅಲ್ಲ, ಎದುರಿರುವ ಸ್ಪರ್ಧಿಯಲ್ಲೂ ಹುಟುತ್ತದೆ. ಅದನ್ನು ಕೆಲವರು ತೋರ್ಪಡಿಸಿಕೊಳ್ಳದೆ ಧೈರ್ಯವಂತರಂತೆ ನಡೆದುಕೊಳ್ಳುತ್ತಾರೆ. ಕೆಲವರಂತೂ ಏನೂ ಗೊತ್ತಿಲ್ಲದೆ ಜೀವನದ ಎಲ್ಲಾ ಹಂತದಲ್ಲೂ ಚಾನ್ಸ್‌ ತೆಗೆದುಕೊಳ್ಳುವುದಕ್ಕೆ ಮುಂದಾಗುತ್ತಾರೆ. ನಮಗೆ ಲಕ್‌ ಇದ್ದರೆ ಎಲ್ಲವೂ ಸಿಗುತ್ತದೆ ಅಂತ ಎಲ್ಲ ಗೊತ್ತಿರುವವರಂತೆ ಮುಂದೆ ಬಂದು ಕೆಲಸ ಕೆಡಿಸಲು ಪ್ರಯತ್ನ ಮಾಡುವವರೂ ಇದ್ದಾರೆ. ಇವರು ತಾವೂ ಗೆಲ್ಲುವುದಿಲ್ಲ. ಗೆಲ್ಲುವವರನ್ನೂ ಸರಾಗವಾಗಿ ಗೆಲ್ಲಲು ಬಿಡುವುದಿಲ್ಲ. ಭಂಡ ಧೈರ್ಯದಿಂದ ಹೋರಾಟ ಮಾಡುತ್ತಾರೆ, ಜೊತೆಗೆ ಬೇರೆಯವರಿಗೂ ತೊಂದರೆ ಕೊಡುತ್ತಾರೆ.

ಹಾಗಾದರೆ ಬದುಕಿನಲ್ಲಿ ನಮ್ಮ ಸೋಲು, ಗೆಲುವುಗಳನ್ನು ನಿರ್ಧಾರ ಮಾಡುವ ಸಂಗತಿ ಯಾವುದು? ಅದು ನಮ್ಮ ಕರ್ಮ ಹಾಗೂ ಪ್ರಯತ್ನ. ಮನುಷ್ಯ ತನ್ನ ಕರ್ಮಕ್ಕನುಗುಣವಾಗಿ ಎಲ್ಲಾ ಅಡಚಣೆಗಳನ್ನು ದಾಟಿಕೊಂಡೇ ಗೆಲುವು ಸಾಧಿಸಬೇಕು. ಈ ಅಡಚಣೆಗೆ ಎಷ್ಟು ಪ್ರಬಲವಾಗಿರುತ್ತವೆ ಅಂದರೆ, ಕೆಲವು ಸಲ ಬರೀ ಅಡಚಣೆಗಳಲ್ಲೇ ಸಿಕ್ಕಿಹಾಕಿಕೊಂಡು ಗೆಲುವಿನ ಮುಖ ಕೂಡ ನೋಡಲು ಸಾಧ್ಯವಾಗುವುದಿಲ್ಲ .ಇದಕ್ಕೆ ಒಂದು ಕಾರಣ ಕರ್ಮವಾದರೆ, ಇನ್ನೊಂದು ಕಾರಣ ನಾವು ನಮ್ಮ ಶಕ್ತಿಯ ಮಟ್ಟಕ್ಕೆ ಪ್ರಯತ್ನ ಮಾಡಿ ಹೋರಾಡದೇ ಇರುವುದು. ಯಾವುದೋ ಬೇಡದಿರುವುದನ್ನು ಗಮನಿಸಿ, ಅದೇ ನಮ್ಮ ಗೆಲವು ಅಂತ ನಮಗೆ ನಾವೇ ಊಹಿಸಿಕೊಂಡು ಟೈಂ ವೇಸ್ಟ್‌ ಮಾಡುತ್ತಾ, ಯಾರ್ಯಾರ ಜೊತೆಗೋ ಕಾಂಪಿಟೇಶನ್‌ಗೆ ಇಳಿದು ಮಾನಸಿಕ ಗೊಂದಲಕ್ಕೆ ಒಳಗಾಗುವುದೂ ಇದೆ. ಸ್ಪರ್ಧೆಯಲ್ಲಿ ನಮ್ಮನ್ನು ಹಿಂದಕ್ಕೆ ಹಾಕುವ ಸಂಗತಿಗಳಿವು.

ನಮ್ಮ ಕಾಂಪಿಟೇಟರ್‌ ಯಾರು?
ಪೆದ್ದರ ಜೊತೆ ಜಗಳ ಆಡುವುದು, ತರ್ಕ ಮಾಡುವುದು, ಮೂರ್ಖರಿಗೆ ಯಾವುದು ಸರಿ ಯಾವುದು ತಪ್ಪು ಅಂತ ತಿಳಿ ಹೇಳುವುದು, ಏನೂ ಗೊತ್ತಿಲ್ಲದಿರುವವನ ಹತ್ತಿರ ಚಾಲೆಂಜ್‌ ಮಾಡುವುದು ಇವೆಲ್ಲ ಕಾಲಹರಣದ ಕೆಲಸಗಳು. ಅಲ್ಪಜ್ಞಾನಿಗಳು ಯಾವತ್ತೂ ನಮಗೆ ಕಾಂಪಿಟೇಟರ್‌ ಆಗಲು ಸಾಧ್ಯವಿಲ್ಲ. ಹಾಗಾದರೆ ಅಲ್ಪಜ್ಞಾನಿಗಳು ಯಾರು? ಒಂದರ್ಥದಲ್ಲಿ ನಾವೆಲ್ಲರೂ ಅಲ್ಪಜ್ಞಾನಿಗಳೇ. ಪ್ರಪಂಚದಲ್ಲಿ ಇರುವ ಜ್ಞಾನರಾಶಿಯಲ್ಲಿ ನಾವು ತಿಳಿದುಕೊಂಡಿರುವುದು 0.00001 ಪರ್ಸೆಂಟ್‌ ಕೂಡಾ ಅಲ್ಲ. ಆದರೆ, ಸಾಮಾನ್ಯರ್ಥದಲ್ಲಿ ಅಲ್ಪಜ್ಞಾನಿಯೆಂದರೆ ಲೋಕಜ್ಞಾನ ಹಾಗೂ ವಿಷಯಜ್ಞಾನ ಇಲ್ಲದೇ ಇರುವವನು. ನಮ್ಮ ಬುದ್ಧಿಮತ್ತೆಯ ಮಟ್ಟಕ್ಕೆ ಹೊಂದದೇ ಇರುವವನು ನಮಗೆ ಅಲ್ಪಜ್ಞಾನಿ.

Advertisement

ಪ್ರತಿಸ್ಪರ್ಧಿ ಯಾವಾಗಲೂ ವೀಕ್‌ ಆಗಿರಬಾರದು. ಅವರು ನಮ್ಮ ಲೆವಲ್‌ಗೆ ಸರಿಹೊಂದುವಂತೆ ಇರಬೇಕು. ಅವರು ಪ್ರಬಲರಾಗಿದ್ದರೆ ಮಾತ್ರ ಯುದ್ಧವೂ ಪ್ರಬಲವಾಗಿರುತ್ತದೆ. ದುರ್ಬಲರ ಬಳಿ ಹೋರಾಟ ಮಾಡಿ ಗೆದ್ದರೆ ಯಾವ ಪ್ರಯೋಜನವೂ ಇಲ್ಲ. ನಿಜವಾದ ಗೆಲವು ಸಿಗುವುದೇ ನಾವು ಪ್ರಬಲ ವ್ಯಕ್ತಿಯ ಜೊತೆ ಹೋರಾಡಿ ಗೆದ್ದಾಗ.
ಆದರೆ, ನಮ್ಮನ್ನು ಕೆಸರಿಗೆಳೆದು ಅವಮಾನಗೊಳಿಸಲೆಂದೇ ಕೆಲವರು ಹೋರಾಟಕ್ಕೆ ಕರೆಯುತ್ತಾರೆ. ನಮ್ಮನ್ನು ಸುಮ್ಮನೆ ಛೇಡಿಸಿ, ನಮ್ಮಲ್ಲಿ ಸಿಟ್ಟು ಹುಟ್ಟುವಂತೆ ಮಾಡಿ ಸ್ಪರ್ಧೆಗೆ ಕರೆಯುತ್ತಾರೆ. ಅವರ ಮಾತನ್ನು ಸವಾಲಾಗಿ ತೆಗೆದುಕೊಂಡು ಸ್ಪರ್ಧೆಗೆ ಇಳಿದರೆ ನಮ್ಮ ಕತೆ ಮುಗಿಯಿತು. ಅಲ್ಲಿ ನಾವೇ ಗೆದ್ದರೂ ನಮ್ಮ ಹೆಸರು ಹಾಳಾಗಿರುತ್ತದೆ. ಅಂತಹ ಹೋರಾಟಗಳಿಂದ ನಾವು ದೂರವೇ ಉಳಿಯಬೇಕು. ಅವರ ಮುಖವನ್ನೊಮ್ಮೆ ನೋಡಿ ನಕ್ಕು ನೀವು ನನಗೆ ಸ್ಪರ್ಧಿಯೇ ಅಲ್ಲ. ಸುಮ್ನೆ ಏಕೆ ಎನರ್ಜಿ ವೇಸ್ಟ್‌ ಮಾಡಿಕೊಳ್ತೀರಿ ಎಂದು ನಯವಾಗಿ ಹೇಳಿ ಸುಮ್ಮನಾಗಬೇಕು. ರೇಗಿಸಿದವರ ಜೊತೆ ಜಗಳಕ್ಕೆ ನಿಂತರೆ ಕೊಚ್ಚೆಯಲ್ಲಿ ಭರತನಾಟ್ಯ ಮಾಡಿದಂತೆ!

ಮೊನ್ನೆ ನಮ್ಮ ಮನೆಯೆದುರು ಇಬ್ಬರು ಹುಡುಗರ ಮಧ್ಯೆ ಜಗಳವಾಗುತ್ತಿತ್ತು. ಒಬ್ಬ 5ನೇ ಕ್ಲಾಸ್‌ ಫೇಲು. ಇನ್ನೊಬ್ಬ ಎಸ್‌.ಎಸ್‌.ಎಲ್‌.ಸಿ. ಪಾಸು. 5ನೇ ಕ್ಲಾಸ್‌ ಫೇಲಾದವನು ಕನ್ನಡ ರಾಜ್ಯೋಸ್ತವ ಎನ್ನುತ್ತಿದ್ದ. 10ನೇ ಕ್ಲಾಸು ಪಾಸಾದವನು ಅದು ತಪ್ಪು ಕನ್ನಡ ರಾಜ್ಯೋತ್ಸವ ಎನ್ನುತ್ತಿದ್ದ. ಇವನು ಒಪ್ಪಲು ಸಿದ್ಧವಿರಲಿಲ್ಲ. ಏಯ್‌, ನಿನಗೇಗು ಗೊತ್ತು, ನಾವೆಲ್ಲ ರಾಜ್ಯೋಸ್ತವ ಅಂತಲೇ ಹೇಳ್ಳೋದು. ಯಾರನ್ನು ಬೇಕಾದ್ರೂ ಕೇಳಿ ನೋಡು ಎಂದು ಧಮಕಿ ಹಾಕಿದ. ಬುದ್ಧಿವಂತ ಹುಡುಗ ಪುಸ್ತಕ ತೆಗೆದು ರಾಜ್ಯೋತ್ಸವದ ಸ್ಪೆಲ್ಲಿಂಗ್‌ ತೋರಿಸಿ ಅದು ರಾಜ್ಯ+ಉತ್ಸವ ಅಂತ ಇಲ್ಲಿ ಬರೆದಿದೆ ನೋಡು ಎಂದ. ಫೇಲಾದ ಹುಡುಗ ಆಗಲೂ ಒಪ್ಪಲಿಲ್ಲ. ಪುಸ್ತಕದಲ್ಲಿ ಬರೆಯೋದು ಹಾಗೇ, ಆದರೆ ಬಾಯಲ್ಲಿ ರಾಜ್ಯೋಸ್ತವ ಅಂತಲೇ ಹೇಳ್ಳೋದು ಎಂದು ವಾದಿಸಿದ. ಈ ಜಗಳ ಯಾವತ್ತಾದರೂ ಬಗೆಹರಿಯುತ್ತದೆಯೇ? ಆಧಾರ ತೋರಿಸಿ ವಾದಿಸಿದರೂ ಒಪ್ಪಿಕೊಳ್ಳದವರ ಜೊತೆ ವಾದ ಮಾಡಿ ಪ್ರಯೋಜನವೇನು?

ಹೋರಾಟಕ್ಕಿಂತ ಗುಣಮಟ್ಟ ಮುಖ್ಯ
ಹೋರಾಟದಲ್ಲಿ ಗೆಲುವಿಗಿಂತ ಮುಖ್ಯವಾದದ್ದು ಕ್ವಾಲಿಟಿ ಆಫ್ ಫೈಟ್‌, ಹೋರಾಟದ ಗುಣಮಟ್ಟ ಮುಖ್ಯ. ತ್ರೇತಾಯುಗದಲ್ಲಿ ಶ್ರೀ ರಾಮಚಂದ್ರ, ರಾವಣನ ಎದುರಿಗೆ ಯುದ್ಧಕ್ಕೆ ನಿಂತಾಗ ರಾವಣನ ವರ್ಚಸ್ಸನ್ನು ನೋಡಿ ಇವನಿಗೆ ಭಯ ಆಯಿತಂತೆ. ಆಗ ಅಗಸ್ತÂರು ಆದಿತ್ಯ ಹೃದಯ ಮಂತ್ರ ಪಠಿಸುವಂತೆ ಹೇಳಿ ಶ್ರೀರಾಮನಿಗೆ ಧೈರ್ಯ ತುಂಬಿದರು. ಹಾಗೇ ದ್ವಾಪರ ಯುಗದಲ್ಲಿ ಅರ್ಜುನ, ಕೌರವರ ಶಕ್ತಿಯುತವಾದ ಸೈನ್ಯ ನೋಡಿ ಶ್ರೀ ಕೃಷ್ಣನ ಸಹಾಯವನ್ನು ಬೇಡಿದ. ಶ್ರೀ ಕೃಷ್ಣ ಭಗವದ್ಗೀತೆ ಉಪದೇಶ ಮಾಡಿ ಅರ್ಜುನನಿಗೆ ದಿವ್ಯ ಚೈತನ್ಯವನ್ನು ನೀಡಿ ಯುದ್ಧಕ್ಕೆ ಸನ್ನದ್ಧನನ್ನಾಗಿಸಿದ. ಈ ಎರಡೂ ಯುದ್ಧದಲ್ಲಿ ನ್ಯಾಯಕ್ಕೆ ಗೆಲುವಾಯಿತು. ಆದರೆ, ಅದಕ್ಕೂ ಮುಂಚೆ ನಡೆದ ಹೋರಾಟದ ಗುಣಮಟ್ಟವಿದೆಯಲ್ಲ, ಅದು ಅದ್ಭುತವಾಗಿತ್ತು.

ಕೆಲವು ಸಲ ಅನಿವಾರ್ಯತೆಯಿಂದ ನಾವು ನಮ್ಮ ಬುದ್ಧಿವಂತಿಕೆಗೆ ಸಮವಲ್ಲದ ಕೆಲಸ ಮಾಡುತ್ತಿರುತ್ತೇವೆ. ಹಲವಾರು ಜನರು ಅದರ ಮಧ್ಯೆ ಬಂದು ಹೋಗುತ್ತಾರೆ. ಅವರೆಲ್ಲ ನಮಗಿಂತ ದೊಡ್ಡ ಕೆಲಸದಲ್ಲಿರಬಹುದು ಅಥವಾ ಶ್ರೀಮಂತರಾಗಿರಬಹುದು. ಹಾಗಿದ್ದ ಮಾತ್ರಕ್ಕೆ ಅವರನ್ನೆಲ್ಲ ನಮ್ಮ ಸ್ಪರ್ಧಿಗಳು ಅಂತ ನೋಡಬಾರದು. ದೊಡ್ಡ ಕೆಲಸ ಅಥವಾ ಶ್ರೀಮಂತಿಕೆ ಒಬ್ಬ ವ್ಯಕ್ತಿಯನ್ನು ಅಳೆಯುವ ಮಾನದಂಡವಲ್ಲ. ತಲೆಯಲ್ಲಿ ಏನೂ ಇಲ್ಲದವರೂ ಶ್ರೀಮಂತರಾಗಿರಬಹುದು ಅಥವಾ ಏನನ್ನೂ ಓದದವರೂ ಪ್ರಭಾವಿಗಳಿಂದ ವಶೀಲಿ ಮಾಡಿಸಿಕೊಂಡು ದೊಡ್ಡ ಹುದ್ದೆಗೆ ಹೋಗಿರಬಹುದು. ಯಾರ ಜೊತೆಗಿನ ಸ್ಪರ್ಧೆಯಲ್ಲಿ ನಾವು ಗೆದ್ದರೆ ನಮಗೆ ಹೆಸರು ಬರುತ್ತದೆಯೋ ಮತ್ತು ಅದರಿಂದ ನಮಗೆ ಪ್ರಯೋಜನವಾಗುತ್ತದೆಯೋ ಆ ಸ್ಪರ್ಧೆಗೆ ಮಾತ್ರ ಇಳಿಯುವುದು ಬುದ್ಧಿವಂತರ ಲಕ್ಷಣ. ಜಗತ್ತಿನ ನಂ.1 ಕುಸ್ತಿಪಟು ಕೂಡ ಬೀದಿಯಲ್ಲಿ ಹೋಗುವವರನ್ನೆಲ್ಲ ನನ್ನ ಜೊತೆ ಕುಸ್ತಿ ಮಾಡು ಬಾ ಎಂದು ಕರೆಯುವುದಿಲ್ಲ. ಎಲ್ಲಿ ಅವನ ಕುಸ್ತಿಯಿಂದ ಅವನಿಗೆ ಲಾಭವಿದೆಯೋ ಅಲ್ಲಿ ಮಾತ್ರ ಕುಸ್ತಿ ಮಾಡುತ್ತಾನೆ.

ನಮಗಿಂತ ದೊಡ್ಡವರೂ ನಮಗಿಂತ ಚಿಕ್ಕವರೂ ಬೇಕಾದಷ್ಟು ಜನರು ನಮ್ಮ ಸುತ್ತಮುತ್ತ ಇರುತ್ತಾರೆ. ದೊಡ್ಡವರನ್ನು ನೋಡಿ ಅಸೂಯೆಪಡುವುದು, ಚಿಕ್ಕವರನ್ನು ನೋಡಿ ಅಹಂಕಾರ ಪಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ, ಏಕೆಂದರೆ, ಅವರು ನಮಗೆ ಸ್ಪರ್ಧಿಗಳೇ ಅಲ್ಲ. ನಾವು ಕೆಲಸ ಮಾಡುವ ಕ್ಷೇತ್ರದಲ್ಲಿ ನಮ್ಮ ಸಮಕ್ಕೆ ಯಾರಿದ್ದಾರೋ ಅವರೇ ನಮಗೆ ಸ್ಪರ್ಧಿಗಳು. ಅಲ್ಲಿ ಹೋರಾಟ ಮಾಡಿ ಗೆದ್ದರೆ ಮಾತ್ರ ನಮಗೆ ಲಾಭವಿದೆ. ಅದನ್ನು ಬಿಟ್ಟು ಕಂಡಕಂಡವರ ಜೊತೆಗೆಲ್ಲ ಜಗಳಕ್ಕಿಳಿದರೆ ಜಗಳಗಂಟ ಎನ್ನಿಸಿಕೊಳ್ಳಬೇಕಾಗುತ್ತದೆ.

– ರೂಪಾ ಅಯ್ಯರ್‌

Advertisement

Udayavani is now on Telegram. Click here to join our channel and stay updated with the latest news.

Next