Advertisement

ಕರಗ ಹೊತ್ತವರೇ ಬೇರೆ

12:33 PM Apr 02, 2018 | Team Udayavani |

ಬೆಂಗಳೂರು: ಜಗತ್ಪ್ರಸಿದ್ಧ ಬೆಂಗಳೂರು ಕರಗ ಮಹೋತ್ಸವದಲ್ಲಿ ಕೊನೆಯ ಕ್ಷಣದಲ್ಲಿ ಕೆಲವು ಗೊಂದಲಗಳು ಉಂಟಾಗಿರುವುದು ಚರ್ಚೆಗೆ ಗ್ರಾಸವಾಗಿದೆ. 
ಅಂತಿಮ ಕ್ಷಣದಲ್ಲಿ ಕರಗ ಹೊರುವ ಪೂಜಾರಿಯೇ ಬದಲಾಗಿ ಮನು ಬದಲಿಗೆ ಜ್ಞಾನೇಂದ್ರ ಎಂಬುವರು ಕರಗ ಹೊತ್ತಿದ್ದು, ನಸುಕಿನ 3.30ರ ನಂತರ ದೇವಾಲಯದಿಂದ ಕರಗ ಹೊರಡಿದ್ದು ಭಕ್ತರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ರೀತಿಯ ಘಟನೆಯ ಅಪರೂಪದ ಎಂದು ಹೇಳಲಾಗುತ್ತಿದ್ದು ಕಾರಣವೇನು ಎಂಬ ಪ್ರಶ್ನೆಗಳು ಮೂಡಿವೆ.

Advertisement

ಕಳೆದ ಎಂಟು ದಿನಗಳಿಂದ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿಯಾಗಿದ್ದ ಅರ್ಚಕ ಎನ್‌.ಮನು ಅವರು ಕರಗ ಹೊರಲು ಶನಿವಾರ ತಡರಾತ್ರಿ 1.30ರ ಸುಮಾರಿಗೆ ದೇವಸ್ಥಾನ ಪ್ರವೇಶಿಸಿದ್ದಾರೆ. ಆದರೆ, ಎರಡು ಗಂಟೆ ಕಳೆದರೂ ಅವರು ಕರಗ ಹೊತ್ತು ದೇವಾಲಯದಿಂದ ಹೊರಬಂದಿಲ್ಲ. ಆದರೆ, ನುಸುಕಿನ 3.50ರ ಸುಮಾರಿಗೆ ದೇವಸ್ಥಾನದಿಂದ ಕರಗ ಹೊತ್ತು ಹೊರಬಂದಿದ್ದು ಮನು ಅಲ್ಲ, ಜ್ಞಾನೇಂದ್ರ ಎಂದು ಹೇಳಲಾಗುತ್ತಿದೆ.

ಅದರ ನಡುವೆಯೇ ಭಾನುವಾರ ಬೆಳಗ್ಗೆಯಿಂದ ದೇವಾಲಯದಲ್ಲಿ ಎನ್‌.ಮನು ಭಕ್ತರಿಂದ ಪಾದಪೂಜೆ ಸ್ವೀಕರಿಸುತ್ತಿರುವುದು ಇನ್ನಷ್ಟು ಗೊಂದಲಗಳಿಗೆ ಎಡೆಮಾಡಿಕೊಟ್ಟಿದೆ. ಸಾಮಾನ್ಯವಾಗಿ ಕರಗ ಹೊತ್ತವರು ದೇವಾಲಯದಲ್ಲಿ ಭಕ್ತರಿಂದ ಪಾದಪೂಜೆಯನ್ನು ಸ್ವೀಕರಿಸುವುದು ವಾಡಿಕೆಯಾಗಿದೆ.

ಈ ಕುರಿತು ಕರಗ ಮಹೋತ್ಸವದ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ರಾಜಗೋಪಾಲ್‌ ಅವರನ್ನು ಕೇಳಿದರೆ, “ದೇವಾಲಯದಿಂದ ಕರಗ ಹೊರಡಲು ತಡವಾಗಿದ್ದು ಏಕೆ ಮತ್ತು ಕಡೇ ಕ್ಷಣದಲ್ಲಿ ಕರಗ ಹೊರುವ ಅರ್ಚಕ ಬದಲಾಗಿದ್ದಕ್ಕೆ ಕಾರಣವೇನು ಎಂಬ ಕುರಿತು ಸೋಮವಾರ ಸಂಪೂರ್ಣ ಮಾಹಿತಿ ನೀಡಲಾಗುವುದು,’ ಎಂದು ಹೇಳಿದ್ದಾರೆ.

ಸರದಿ ಅರ್ಚಕರೂ ಕರಗ ಹೊರಬಹುದು: ಸಾಮಾನ್ಯವಾಗಿ ಪ್ರತಿ ಬಾರಿಯೂ ಕರಗ ಹೊರುವ ಅರ್ಚಕರ ಜತೆಗೆ ಸರದಿ ಅರ್ಚಕರನ್ನು ಆಯ್ಕೆ ಮಾಡಲಾಗಿರುತ್ತದೆ. ಕರಗ ಹೊರುವ ಅರ್ಚಕರಿಗೆ ಅನಾರೋಗ್ಯ ಅಥವಾ ಇತರೆ ತೊಂದರೆಯಾದಾಗ ಸರದಿ ಅರ್ಚಕರು ಕರಗವನ್ನು ಹೊರುತ್ತಾರೆ. ಆದರೆ, ಭಾನುವಾರ ಬೆಳಗ್ಗೆಯಿಂದ ಮನು ಅವರು ಪಾದಪೂಜೆ ಸ್ವೀಕರಿಸಿದ್ದಾರೆ. ಕೆಲವೊಮ್ಮೆ ಸರದಿ ಅರ್ಚಕರು ಕರಗ ಹೊತ್ತರೂ ಎಂಟು ದಿನಗಳಿಂದ ವಿಧಿ ವಿಧಾನ ಪೂರೈಸಿದ ಅರ್ಚಕರು ಪಾದಪೂಜೆ ಸ್ವೀಕರಿಸುತ್ತಾರೆ. ಈ ಕುರಿತು ಅರ್ಚಕರಿಂದ ಸಂಪೂರ್ಣ ಮಾಹಿತಿ ಪಡೆಯಲಾಗುವುದು ಎಂದು ಸಮಿತಿ ಅಧ್ಯಕ್ಷ ರಾಜಗೋಪಾಲ್‌ ಹೇಳಿದ್ದಾರೆ.

Advertisement

-ವಾರದಿಂದ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿಯಾಗಿದ್ದ ಮನು
-ಮನು ಬದಲಿಗೆ ಕರಗ ಹೊತ್ತು ಹೊರಬಂದ ಜ್ಞಾನೇಂದ್ರ
-ಅಪರೂಪದ ಘಟನೆಗೆ ಸಾಕ್ಷಿಯಾದ ಜಗತøಸಿದ್ಧ ಕರಗ ಮಹೋತ್ಸವ
-ಅರ್ಚಕ ಬದಲಾಗಲು ಕಾರಣವೇನು ಎಂಬ ಗೊಂದಲದಲ್ಲಿ ಭಕ್ತರು
-ಸೋಮವಾರ ಎಲ್ಲ ಗೊಂದಲ ಬಗೆಹರಿಸುವುದಾಗಿ ಹೇಳಿದ ಸಮಿತಿ
-1.30 (ರಾತ್ರಿ): ದೇವಸ್ಥಾನ ಪ್ರವೇಶಿಸಿದ ಅರ್ಚಕ ಎನ್‌.ಮನು
-3.50 (ನಸುಕು): ದೇವಸ್ಥಾನದಿಂದ ಕರಗ ಹೊತ್ತು ಹೊರಬಂದ ಜ್ಞಾನೇಂದ್ರ

ಕರಗ ಹೊರಲು ಮನು ಅವರು ಮಾನಸಿಕವಾಗಿ ಸಿದ್ಧರಾಗಿರಲಿಲ್ಲ. ಆದ ಕಾರಣ ಜ್ಞಾನೇಂದ್ರ ಅವರು ಕರಗ ಹೊತ್ತಿದ್ದಾರೆ. ಇದೇ ಕಾರಣದಿಂದಾಗಿ ದೇವಾಲಯದಿಂದ ಕರಗ ಹೊರಡುವುದು ಸಹ ತಡವಾಯಿತು.
-ಪಿ.ಆರ್‌.ರಮೇಶ್‌, ವಿಧಾನ ಪರಿಷತ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next