Advertisement

ಅನಾಥವಾಗಿವೆ ಪಿರಂಗಿ ಗುಂಡುಗಳು!

12:31 PM Jan 09, 2018 | Team Udayavani |

ಮಾಗಡಿ: ಪಟ್ಟಣದ ನಾಡಪ್ರಭು ಕೆಂಪೇಗೌಡ ಕೋಟೆಯಲ್ಲಿ ದುರಸ್ತಿ ಕಾಮಗಾರಿ ನಡೆಸುತ್ತಿದ್ದ ವೇಳೆ ಶನಿವಾರ, 35 ಪಿರಂಗಿ ಗುಂಡುಗಳು ಪತ್ತೆಯಾಗಿವೆ. ಆದರೆ, ಅಪರೂಪದ ಗುಂಡುಗಳು ಪತ್ತೆಯಾಗಿ ಮೂರು ದಿನ ಕಳೆದರೂ ಪ್ರಾಚ್ಯವಸ್ತು ಇಲಾಖೆ ಅಥವಾ ಸಂಬಂಧಿಸಿದ ಯಾವುದೇ ವಿಭಾಗದ ಅಧಿಕಾರಿಗಳು ಗುಂಡುಗಳನ್ನು ವಶಕ್ಕೆ ಪಡೆಯಲು ಬಾರದೆ ಬೇಜವಾಬ್ದಾರಿ ಪ್ರದರ್ಶಿಸಿದ್ದಾರೆ ಎಂದು ಕೆಂಪೇಗೌಡ ಹಿತರಕ್ಷಣಾ ಸಮಿತಿ ಸಂಚಾಲಕ ಎ.ಎಚ್‌.ಬಸವರಾಜು ಆರೋಪಿಸಿದ್ದಾರೆ.

Advertisement

ಬೆಂಗಳೂರು ವಿಶ್ವವಿದ್ಯಾಲಯದ  ಕೆಂಪೇಗೌಡ ಅಧ್ಯಯನ ಕೇಂದ್ರದ ಸಂಚಾಲಕ ಡಾ.ಅಪ್ಪಾಜಿಗೌಡ ಅರೊಂದಿಗೆ ಸೋಮವಾರ ಕೋಟೆಗೆ ಭೇಟಿ ನೀಡಿದ್ದ ವೇಳೆ ಮಾತನಾಡಿದ ಅವರು, ಪಟ್ಟಣದ ನಾಡಪ್ರಭು ಕೆಂಪೇಗೌಡ ಕೋಟೆ ಗೋಡೆ ದುರಸ್ತಿ ಕಾಮಗಾರಿ ನಡೆಸುವಾಗ ಶನಿವಾರ ಗೋಡೆಯ ಗೂಡಿನಲ್ಲಿ ಪಿರಂಗಿಗೆ ಬಳಸುತಿದ್ದ 35 ಗುಂಡುಗಳು ಪತ್ತೆಯಾಗಿದ್ದವು. ಕೆಂಪೇಗೌಡರ ಕಾಲದ ಪಿರಂಗಿ ಗುಂಡುಗಳನ್ನು ಪ್ರಾಚ್ಯವಸ್ತು ಇಲಾಖೆ, ತಾಲೂಕು ಆಡಳಿತ ಇಲ್ಲವೇ ಪುರಸಭೆಯವರು ಸಂರಕ್ಷಣೆ ಮಾಡಬೇಕಿತ್ತು. ಆದರೆ ಇದುವರೆಗೆ ಯಾರೂ ಸಮೀಪ ಸುಳಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೆಂಪೇಗೌಡ ಅಧ್ಯಯನ ಕೇಂದ್ರದ ಸಂಚಾಲಕ ಡಾ.ಅಪ್ಪಾಜಿಗೌಡ ಮಾತನಾಡಿ, ಈ ಪಿರಂಗಿ ಗುಂಡುಗಳು ಯಾವ ಅವಧಿಯಲ್ಲಿ ಬಳಕೆಯಾಗುತ್ತಿದ್ದವು ಎಂಬ ಬಗ್ಗೆ ಪ್ರಾಚ್ಯವಸ್ತು ಇಲಾಖೆ ಸಂಶೋಧನೆ ನಡೆಸಬೇಕಿದೆ. ಇಲ್ಲಿ ಕಾಮಗಾರಿ ನಡೆಸುವಾಗ ಕೆಂಪೇಗೌಡರ ಕಾಲದಲ್ಲಿ ಬಳಕೆಯಾಗುತ್ತಿದ್ದ ಶಸ್ತ್ರಗಳು, ಪಳಿಯುಳಕೆಗಳು ಕೂಡ ಸಿಗಬಹುದು. ಹಾಗೇನಾದರೂ ಅಪರೂಪದ ವಸ್ತುಗಳಿ ಸಿಕ್ಕಲ್ಲಿ ಕೆಲಸಗಾರರು ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next