Advertisement

Sudan ಸಂಘರ್ಷದ ನಡುವೆಯೇ ಸ್ಥಳಾಂತರ ;ಜೆಡ್ಡಾ ತಲುಪಿದ ಭಾರತೀಯರ 10ನೇ ತಂಡ

10:37 PM Apr 28, 2023 | Team Udayavani |

ಖಾರ್ತೋಮ್‌/ನವದೆಹಲಿ: ಕದನ ವಿರಾಮ ವಿಸ್ತರಣೆಯ ನಡುವೆಯೂ ಸುಡಾನ್‌ನಲ್ಲಿ ಸೇನೆ ಮತ್ತು ಬಲಿಷ್ಠ ಅರೆಸೇನಾ ಪಡೆಯ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ರಾಜಧಾನಿ ಖಾರ್ತೋಮ್‌ ಹಾಗೂ ಒಮುರ್ಮನ್‌ನಲ್ಲಿ ಗುರುವಾರ ರಾತ್ರಿಯಿಂದೀಚೆಗೆ ಭಾರಿ ಸ್ಫೋಟಗಳು, ಗುಂಡಿನ ಕಾಳಗ ನಡೆದಿದ್ದು, ಜನರು ಭೀತಿಯಲ್ಲೇ ರಾತ್ರಿ ಕಳೆದಿದ್ದಾರೆ.

Advertisement

ವಿದೇಶಿಯರ ಸುರಕ್ಷಿತ ಸ್ಥಳಾಂತರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕದನ ವಿರಾಮವನ್ನು 72 ಗಂಟೆಗಳ ಕಾಲ ವಿಸ್ತರಿಸಲು ಎರಡೂ ಕಡೆಯವರು ಒಪ್ಪಿಗೆ ನೀಡಿದ್ದರು. ಆದರೆ, ವಾಸ್ತವದಲ್ಲಿ ಇದು ಜಾರಿಯಾಗಿಲ್ಲ. ಸೇನೆಯು ಯುದ್ಧವಿಮಾನಗಳ ಮೂಲಕ ಬಾಂಬ್‌ಗಳ ಮಳೆಗರೆದಿದ್ದರೆ, ಸೇನಾ ಪ್ರಧಾನ ಕಚೇರಿಯಲ್ಲಿ ಭಾರೀ ಘರ್ಷಣೆ ವರದಿಯಾಗಿದೆ. ಇಂಥ ಸಂಕಷ್ಟದ ನಡುವೆಯೂ ಭಾರತೀಯರ 10ನೇ ತಂಡ ಯುದ್ಧಪೀಡಿತ ದೇಶವನ್ನು ತೊರೆಯುವಲ್ಲಿ ಯಶಸ್ವಿಯಾಗಿದೆ. ಶುಕ್ರವಾರ 8, 9 ಮತ್ತು 10ನೇ ತಂಡವು ಸುಡಾನ್‌ನಿಂದ ಜೆಡ್ಡಾಗೆ ತಲುಪಿವೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್‌ ಬಗ್ಚಿ ಹೇಳಿದ್ದಾರೆ.

ಸಿಬ್ಬಂದಿಯ ಕೊರತೆಯ ನಡುವೆಯೂ ಸುಡಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ದಿನದ 24 ಗಂಟೆಗಳ ಕಾಲವೂ ಕೆಲಸ ಮಾಡಿ, ಅಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕ್ರಮ ಕೈಗೊಂಡಿದೆ ಎಂದು “ಆಪರೇಷನ್‌ ಕಾವೇರಿ’ ಮೂಲಕ ಶುಕ್ರವಾರ ಮುಂಬೈಗೆ ಬಂದಿಳಿದ 39 ವರ್ಷದ ಉದ್ಯಮಿ ಅಬ್ದುಲ್‌ ಖಾದಿರ್‌ ಹೇಳಿದ್ದಾರೆ. ಖಾರ್ತೋಮ್‌ನಲ್ಲಿ ಪರಿಸ್ಥಿತಿ ಬಿಗಡಾಯಿಸಿದ ಕೂಡಲೇ ಭಾರತದ ರಾಯಭಾರಿ ಬಿ.ಎಸ್‌.ಮುಬಾರಕ್‌ ಮತ್ತು ಅವರ ತಂಡದಲ್ಲಿದ್ದ 8 ಅಧಿಕಾರಿಗಳು ದಣಿವರಿಯದೇ ಕೆಲಸ ಮಾಡಿದ್ದಾರೆ. ಸೀಮಿತ ಸಿಬ್ಬಂದಿಯ ನಡುವೆಯೂ, ಅಪರಿಮಿತ ಶ್ರಮವಹಿಸಿ ಭಾರತೀಯರೆಲ್ಲರನ್ನೂ ಸುರಕ್ಷಿತವಾಗಿ ತಾಯ್ನಾಡಿಗೆ ಕಳುಹಿಸಲು ಪಣತೊಟ್ಟಿದ್ದಾರೆ. ಮುಬಾರಕ್‌ ಅವರು ಸುಡಾನ್‌ನ ಪ್ರತಿಯೊಂದು ಪ್ರದೇಶದಲ್ಲಿರುವ ಭಾರತೀಯರ ಮಾಹಿತಿ ಕಲೆಹಾಕಿ, ವಾಟ್ಸ್‌ಆ್ಯಪ್‌ ಗ್ರೂಪ್‌ಗಳನ್ನು ರಚಿಸಿ, ನಿರಂತರವಾಗಿ ನಮ್ಮೊಂದಿಗೆ ಸಂಪರ್ಕ ಸಾಧಿಸಿದ್ದರು. ಅವರ ಶ್ರಮದಿಂದಾಗಿಯೇ ನಾವಿಂದು ಸ್ವದೇಶಕ್ಕೆ ತಲುಪಲು ಸಾಧ್ಯವಾಯಿತು ಎಂದೂ ಭಾರತ ತಲುಪಿದವರು ಹೇಳಿದ್ದಾರೆ.

ಭಾರತ ಶುಕ್ರವಾರ 754 ಜನರನ್ನು ಸುರಕ್ಷಿತವಾಗಿ ಕರೆತಂದಿದೆ. ಭಾರತೀಯ ವಾಯುಪಡೆಯ C-17 ಹೆವಿ-ಲಿಫ್ಟ್ ವಿಮಾನದಲ್ಲಿ 392 ಜನರು ನವದೆಹಲಿಗೆ ಆಗಮಿಸಿದರೆ, 362 ಭಾರತೀಯರ ಮತ್ತೊಂದು ಬ್ಯಾಚ್ ಅನ್ನು ಬೆಂಗಳೂರಿಗೆ ಕರೆತರಲಾಯಿತು.ಅಧಿಕೃತ ಮಾಹಿತಿಯ ಪ್ರಕಾರ, ದೇಶಕ್ಕೆ ಕರೆತಂದ ಒಟ್ಟು ಭಾರತೀಯರ ಸಂಖ್ಯೆ ಈಗ 1,360 ಆಗಿದೆ.

ಈ ನಡುವೆ, ಶುಕ್ರವಾರ ಬೆಳಗ್ಗೆ ಗುಜರಾತ್‌ನ 56 ನಾಗರಿಕರು ಮುಂಬೈ ಮೂಲಕ ಅಹಮದಾಬಾದ್‌ ತಲುಪಿದ್ದಾರೆ. ಸುರಕ್ಷಿತವಾಗಿ ಕರೆತಂದಿದ್ದಕ್ಕೆ ಸರ್ಕಾರಕ್ಕೆ ಧನ್ಯವಾದವನ್ನೂ ಸಲ್ಲಿಸಿದ್ದಾರೆ.

Advertisement

ಟರ್ಕಿ ವಿಮಾನದ ಮೇಲೆ ಫೈರಿಂಗ್‌
ತನ್ನ ನಾಗರಿಕರನ್ನು ಕರೆದೊಯ್ಯಲೆಂದು ಖಾರ್ತೋಮ್‌ನ ವಾಯುನೆಲೆಗೆ ಬಂದಿಳಿದ ಟರ್ಕಿಯ ರಕ್ಷಣಾ ವಿಮಾನದ ಮೇಲೆ ಶುಕ್ರವಾರ ಗುಂಡಿನ ದಾಳಿಯಾಗಿದೆ. ಯಾರಿಗೂ ಯಾವುದೇ ಗಾಯಗಳಾಗಿಲ್ಲ. ವಿಮಾನವು ವಾಡಿ ಸೇಡ್ನಾದಲ್ಲಿ ಸುರಕ್ಷಿತವಾಗಿ ಕೆಳಗಿಳಿದಿದೆ ಎಂದು ಮೂಲಗಳು ತಿಳಿಸಿವೆ. ಟರ್ಕಿ ವಿಮಾನದ ಮೇಲೆ ಅರೆಸೇನಾಪಡೆಯೇ ಗುಂಡಿನ ದಾಳಿ ನಡೆಸಿ, ಇಂಧನ ವ್ಯವಸ್ಥೆಯನ್ನು ಹಾನಿಗೀಡುಮಾಡಿದೆ ಎಂದು ಸುಡಾನ್‌ ಸೇನೆ ಆರೋಪಿಸಿದೆ. ಆದರೆ ಆರೋಪ ನಿರಾಕರಿಸಿರುವ ಅರೆಸೇನಾಪಡೆ, ನಾಗರಿಕರ ಸುರಕ್ಷಿತ ಸ್ಥಳಾಂತರಕ್ಕೆ ನಾವು ಬದ್ಧರಾಗಿದ್ದೇವೆ ಎಂದಿದೆ.

ಸುಡಾನ್‌ ತೊರೆಯುವಂತೆ ಸೂಚನೆ
ಯಾವುದೇ ಕ್ಷಣದಲ್ಲಾದರೂ ಸುಡಾನ್‌ನಲ್ಲಿ ಪರಿಸ್ಥಿತಿ ಕೈಮೀರಿ ಹೋಗಬಹುದು. ಹೀಗಾಗಿ, ಅಲ್ಲಿರುವ ಎಲ್ಲ ಅಮೆರಿಕನ್‌ ನಾಗರಿಕರು 24ರಿಂದ 48 ಗಂಟೆಗಳೊಳಗಾಗಿ ಸುಡಾನ್‌ ತೊರೆಯಬೇಕು ಎಂದು ತನ್ನ ನಾಗರಿಕರಿಗೆ ಶ್ವೇತಭವನ ಸೂಚಿಸಿದೆ. ಜತೆಗೆ, ಸುಡಾನ್‌ನಲ್ಲಿರುವ ಅಮೆರಿಕದ ನಾಗರಿಕರ ರಕ್ಷಣೆಗೆ ಅಗತ್ಯವಾದ ಆಯ್ಕೆಗಳನ್ನು ನಾವು ಸೃಷ್ಟಿಸುತ್ತಿದ್ದೇವೆ ಎಂದು ಶ್ವೇತಭವನದ ವಕ್ತಾರ ಕರೈನ್‌ ಜೀನ್‌ ಪೀರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next