Advertisement

ಗ್ರಾಮ ಪಂಚಾಯಿತಿಗಳಲ್ಲಿ ಆನ್‌ಲೈನ್‌ ತೆರಿಗೆ ಸಂಗ್ರಹ ವ್ಯವಸ್ಥೆ

06:55 AM Sep 18, 2018 | |

ಬೆಂಗಳೂರು: ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ಸಂಗ್ರಹಣೆಯಲ್ಲಿ ನಗದು ವಹಿವಾಹಿಟಿಗೆ ಕಡಿವಾಣ ಹಾಕಿ ಪಾರದರ್ಶಕತೆ ತರಲು “ಆನ್‌ಲೈನ್‌ ತೆರಿಗೆ ಸಂಗ್ರಹ’ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ.

Advertisement

ಸದ್ಯ ಇಡೀ ದೇಶದಲ್ಲಿ ಕೇರಳ ರಾಜ್ಯದಲ್ಲಿ ಮಾತ್ರ ಆನ್‌ಲೈನ್‌ ತೆರಿಗೆ ಸಂಗ್ರಹ ವ್ಯವಸ್ಥೆ ಜಾರಿಯಲ್ಲಿದ್ದು, ಅದಕ್ಕಿಂತಲೂ ಪರಿಣಾಮಕಾರಿ ಹಾಗೂ ಬಳಕೆ ಸ್ನೇಹಿ ಆನ್‌ಲೈನ್‌ ವ್ಯವಸ್ಥೆ ಜಾರಿಗೆ ತಂದು ಇಡೀ ದೇಶಕ್ಕೆ ಮಾದರಿಯಾಗಬಲ್ಲ ವ್ಯವಸ್ಥೆಯನ್ನು ರೂಪಿಸಲು ಗ್ರಾಮೀಣಾಭಿವೃದ್ಧಿ ಇಲಾಖೆ ಚಿಂತನೆ ನಡೆಸಿದೆ. ಈಗಾಗಲೇ “ನೀಲ ನಕಾಶೆ’ ಸಿದ್ಧಗೊಂಡಿದ್ದು, ಅದನ್ನು ಕಾರ್ಯಾಗತಗೊಳಿಸುವ ನಿಟ್ಟಿನಲ್ಲಿ ಇಲಾಖೆ ಕಾರ್ಯೋನ್ಮುಖವಾಗಿದೆ.

ಪ್ರಸ್ತುತ ರಾಜ್ಯದ 6,024 ಗ್ರಾಮ ಪಂಚಾಯಿತಿಗಳಲ್ಲಿ “ಹಸ್ತಚಾಲಿತ’ (ಮ್ಯಾನುಯೆಲ್‌) ತೆರಿಗೆ ಸಂಗ್ರಹ ವ್ಯವಸ್ಥೆ ಜಾರಿಯಲ್ಲಿದೆ. ಇದರಿಂದ ಆಗುತ್ತಿರುವ ಅನಾನುಕೂಲಗಳು, ಆದಾಯ ಖೋತಾ, ಮೋಸ ಹಾಗೂ ವಂಚನೆಗಳನ್ನು ಮನಗಂಡಿರುವ ಇಲಾಖೆ ಆನ್‌ಲೈನ್‌ ತೆರಿಗೆ ಸಂಗ್ರಹ ವ್ಯವಸ್ಥೆ ಜಾರಿಗೆ ತರಲು ಮುಂದಡಿ ಇಟ್ಟಿದೆ. ಇದಕ್ಕಾಗಿ ಹೊಸ ಸಾಫ್ಟ್ವೇರ್‌ ತಯಾರಿಸಲಾಗುತ್ತಿದ್ದು, ಅನುಷ್ಠಾನದ ಕುರಿತು ಈಗಾಗಲೇ ಇಲಾಖಾ ಮಟ್ಟದಲ್ಲಿ ಹಲವು ಸುತ್ತಿನ ಸಭೆಗಳನ್ನು ನಡೆಸಲಾಗಿದೆ. 

ಆನ್‌ಲೈನ್‌ ವ್ಯವಸ್ಥೆಯ ಬಗ್ಗೆ ಗ್ರಾಮೀಣ ಜನರಿಗೆ ತಿಳುವಳಿಕೆ ಮಾಡಿಸುವ ಕೆಲಸವೂ ಸಾಗಿದೆ.

ಅಲ್ಲದೇ ಆನ್‌ಲೈನ್‌ ತೆರಿಗೆ ಸಂಗ್ರಹ ವ್ಯವಸ್ಥೆ ಜಾರಿಗೆ ತರುವ ಸಂಬಂಧ ಮೊದಲ ಹಂತದಲ್ಲಿ ಈಗಾಗಲೇ ಬ್ಯಾಂಕು ಅಧಿಕಾರಿಗಳ ಜತೆ 2-3 ಸಭೆಗಳನ್ನು ನಡೆಸಲಾಗಿದೆ. ಆನ್‌ಲೈನ್‌ ವ್ಯವಸ್ಥೆ ಜಾರಿಗೆ ತರುವುದರಿಂದ ತಮ್ಮ ಸ್ವಂತ ಗ್ರಾಮದಿಂದ ಹೊರಗಡೆ ದೂರದ ಸ್ಥಳಗಳಲ್ಲಿ ವಾಸ ಮಾಡುವವರಿಗೆ ತೆರಿಗೆ ಕಟ್ಟಲು ಅನುಕೂಲವಾಗಲಿದೆ. ನಗದು ವಹಿವಾಟಿಗೆ ಸಂಪೂರ್ಣ ಕಡಿವಾಣ ಬೀಳಲಿದೆ. ಇದರಿಂದ ಪಾರದರ್ಶಕತೆ ಕಾಯ್ದುಕೊಳ್ಳಲು ಸಾಧ್ಯವಾಗಲಿದೆ. ಗ್ರಾಮ ಪಂಚಾಯಿತಿಯ ಎಲ್ಲ ಆಸ್ತಿಗಳು ಡಿಜಟಿಲೀಕರಣ ಮಾಡುವುದರಿಂದ ತೆರಿಗೆ ಎಷ್ಟು, ಬಾಕಿ ಎಷ್ಟು ಇತ್ಯಾದಿ ವಿವರಗಳ ಆನ್‌ಲೈನ್‌ ಬಿಲ್‌ ಜನರೇಟ್‌ ಆಗುತ್ತದೆ. ಈ ವ್ಯವಸ್ಥೆಯಿಂದ ಯಾವುದೇ ಆಸ್ತಿ ಬಿಟ್ಟು ಹೋಗುವ ಅಥವಾ ತೆರಿಗೆ ಕೈತಪ್ಪುವ ಸಮಸ್ಯೆ ಇರುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

Advertisement

“ಕೈಚಳಕ’ಗಳಿಗೆ ಕಡಿವಾಣ:
ತೆರಿಗೆ ಸಂಗ್ರಹಕ್ಕೆ ಗ್ರಾಮ ಪಂಚಾಯಿತಿಗಳಲ್ಲಿ ವಿಪುಲ ಅವಕಾಶಗಳಿವೆ. ಮೇಲಾಗಿ ಕಾನೂನು ಸಹ ಇದೆ. ಆದರೆ, ಸ್ಥಳೀಯ ವ್ಯವಸ್ಥೆಯ ಲೋಪಗಳು ಮತ್ತು ಸಿಬ್ಬಂದಿಯ ಬೇಜವಾಬ್ದಾರಿತನದಿಂದಾಗಿ ಗ್ರಾಮ ಪಂಚಾಯಿತಿಗಳು ಆದಾಯದ ಅವಕಾಶಗಳನ್ನು ಕೈಚೆಲ್ಲಬೇಕಾಗುತ್ತಿದೆ. ಅಲ್ಲದೇ ತೆರಿಗೆ ಬೇಡಿಕೆ ಪಟ್ಟಿ ಸರಿಯಾಗಿ ಅಂದಾಜು ಮಾಡುವುದಿಲ್ಲ. 500 ರೂ. ತೆರಿಗೆ ಇದ್ದರೆ ಅದಕ್ಕಿಂತ ಕಡಿಮೆ ಮೊತ್ತದ ರಸೀದಿ ನೀಡಲಾಗುತ್ತದೆ. ವಸೂಲಿ ಮಾಡಿದ ತೆರಿಗೆಯನ್ನು ಜಮಾ ಮಾಡದೇ ತಮ್ಮಲ್ಲೇ ಉಳಿಸಿಕೊಳ್ಳಲಾಗುತ್ತದೆ. ಈ ರೀತಿ ತೆರಿಗೆ ವಸೂಲಿಯಲ್ಲಿ ಸ್ಥಳೀಯ ಸಿಬ್ಬಂದಿ ನಾನಾ “ಕೈಚಳಕ’ಗಳನ್ನು ತೋರುತ್ತಾರೆ. ಇದಕ್ಕೆಲ್ಲಾ ಕಡಿವಾಣ ಹಾಕಿ ಪಾರದರ್ಶಕತೆ ತಂದು ಗ್ರಾಮ ಪಂಚಾಯಿತಿಗಳ ಆದಾಯ ಹೆಚ್ಚಿಸುವುದು ಆನ್‌ಲೈನ್‌ ತೆರಿಗೆ ಸಂಗ್ರಹ ವ್ಯವಸ್ಥೆ ಜಾರಿಗೆ ತರುವ ಉದ್ದೇಶವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಬೇಡಿಕೆ-ವಸೂಲಿಯಲ್ಲಿ ಅಂತರ
ಈಗಿನ “ಹಸ್ತಚಾಲಿತ’ ತೆರಿಗೆ ಸಂಗ್ರಹ ವ್ಯವಸ್ಥೆಯಲ್ಲಿ ಸಾಕಷ್ಟು ಲೋಪಗಳಿವೆ. ತೆರಿಗೆ ಬೇಡಿಕೆ ಮತ್ತು ವಸೂಲಿಯಲ್ಲಿ ಅಜಗಜಾಂತರ ಅಂತರವಿದೆ. ಕೆಲವು ಕಡೆ ಬೇಡಿಕೆಯ ಶೇಕಡ 40ರಷ್ಟೂ ತೆರಿಗೆ ಸಂಗ್ರಹವಾಗುವುದಿಲ್ಲ. ಇದರಿಂದಾಗಿ ಆದಾಯ ಖೋತಾ ಆಗಿ ಇದೇ ನೇರವಾಗಿ ಗ್ರಾಮೀಣ ಭಾಗದ ಅಭಿವೃದ್ಧಿ ಮೇಲೆ ಪರಿಣಾಮ ಬೀರುತ್ತದೆ. ಪ್ರತಿ ವರ್ಷ ಕೋಟಿಗಟ್ಟಲೇ ತೆರಿಗೆ ಬಾಕಿ ಉಳಿಯುತ್ತದೆ. ಅದು ಮುಂದಿನ ವರ್ಷಕ್ಕೆ “ಕ್ಯಾರಿಓವರ್‌’ ಆಗುತ್ತದೆ. ಹಿಂದಿನ ಬಾಕಿ, ಹಾಲಿ ವರ್ಷದ ಹೊಸ ಅಂದಾಜು ಸೇರಿ ಮೊತ್ತ ಹೆಚ್ಚಾಗುತ್ತದೆ. ವಸೂಲಿ ಆಗುವುದಿಲ್ಲ. ಬಾಕಿ ಪಟ್ಟಿ ಬೆಳೆಯುತ್ತಲೇ ಇರುತ್ತದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ತೆರಿಗೆ ಸಂಗ್ರಹ ಪ್ರಮಾಣ ಒಂದಿಷ್ಟು ಉತ್ತಮವಾಗಿದ್ದರೆ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ರಾಯಚೂರು, ಬಳ್ಳಾರಿ, ಕಲಬುರಗಿ, ಯಾದಗಿರಿ ಜಿಲ್ಲೆಗಳು ಸೇರಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ತೆರಿಗೆ ಸಂಗ್ರಹ ತೀರಾ ಕಳಪೆಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

“ಹಸ್ತಚಾಲಿತ’ ತೆರಿಗೆ ವಸೂಲಿ ಪದ್ದತಿಯಿಂದ ಆಗುತ್ತಿರುವ ಅನಾನುಕೂಲಗಳನ್ನು ಗಮನಿಸಿ ಆನ್‌ಲೈನ್‌ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದ್ದೇವೆ. ಈಗಾಗಲೇ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಎಲ್ಲ ಸಿದ್ಧತೆಗಳು ಪೂರ್ಣಗೊಂಡ ಬಳಿಕ ರಾಜ್ಯದಲ್ಲಿ ಏಕಕಾಲದಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗುವುದು’
– ಎಂ.ಕೆ. ಕೆಂಪೇಗೌಡ, ನಿರ್ದೇಶಕರು, ಗ್ರಾಮೀಣಭಿವೃದ್ಧಿ-ಪಂಚಾಯತ್‌ರಾಜ್‌ ಇಲಾಖೆ.

– ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next