Advertisement

ಹಳೇ ಬ್ಯಾಟು ಹಳೇ ಚೆಂಡು

10:12 PM Jan 31, 2020 | Lakshmi GovindaRaj |

ಅಪ್ಪ-ಅಮ್ಮನಿಗೆ ನಮಸ್ಕಾರ ಮಾಡಿ…
ಟೆಸ್ಟ್‌, ಏಕದಿನ ಅಥವಾ ಟಿ20… ಈ ಯಾವುದೇ ಮಾದರಿಯ ಪಂದ್ಯಗಳನ್ನು ಆಡುವ ಮೊದಲು ಎಲ್ಲ ಆಟಗಾರರೂ ಒಂದು ಅಥವಾ ಎರಡುದಿನ ಅಭ್ಯಾಸ ಮಾಡುತ್ತಾರೆ. ಈ ಸಂದರ್ಭದಲ್ಲಿ , ಹೆಸರಾಂತ ಆಟಗಾರರಿಗೆ ಬೌಲಿಂಗ್‌ ಮಾಡಲು, ಮೈದಾನದ ಅಂಚಿಗೆ ಬಿದ್ದ ಚೆಂಡನ್ನು ಹಿಡಿಯಲು ರಣಜಿ ಕ್ರಿಕೆಟ್‌ನಂತಹ ಕೂಟಗಳಲ್ಲಿ ಪಾಲ್ಗೊಂಡ ಕಿರಿಯರಿಗೆ ಅವಕಾಶ ಸಿಗುತ್ತದೆ. ನೆಟ್‌ ಅಭ್ಯಾಸ ಎಂದು ಕರೆಸಿಕೊಳ್ಳುವ ಈ ಆಟದ ಸಂದರ್ಭದಲ್ಲಿ ಆಟಗಾರರನ್ನು ಮಾತನಾಡಿಸುವ, ಅವರೊಂದಿಗೆ ಚಿತ್ರ ತೆಗೆಸಿಕೊಳ್ಳುವ ಅದೃಷ್ಟವೂ ಕೆಲವರಿಗೆ ಸಿಗುತ್ತದೆ. ಅಂಥದೇ ಒಂದು ಸಂದರ್ಭ. 2010ರ ಐಪಿಎಲ್‌ ಪಂದ್ಯಾವಳಿ ಸಂದರ್ಭದಲ್ಲಿ ಮುಂಬೈನ ಬಾಂದ್ರಾ ಕುರ್ಲಾ ಮೈದಾನದಲ್ಲಿ ನೆಟ್‌ ಅಭ್ಯಾಸ ನಡೆದಿತ್ತು.

Advertisement

ಅಲ್ಲಿದ್ದ ಸಚಿನ್‌ ತೆಂಡುಲ್ಕರ್‌ ಅವರ ಹಸ್ತಾಕ್ಷರ ಪಡೆಯಲು, ಅವರ ಕೈಕುಲುಕಿ ಸಂಭ್ರಮಿಸಲು ಸಾಕಷ್ಟು ಮಕ್ಕಳು ಸೇರಿದ್ದರು. ಕಡೆಗೊಮ್ಮೆ ಅಭ್ಯಾಸ ಮುಗಿಯುತ್ತಿದ್ದಂತೆಯೇ, ಮಕ್ಕಳೆಲ್ಲ ತೆಂಡುಲ್ಕರ್‌ರನ್ನು ಸುತ್ತುವರಿದರು. ಕೆಲವರು ಹಸ್ತಾಕ್ಷರ ಪಡೆದರು. ಈ ಮಧ್ಯೆಯೇ, ತೆಂಡುಲ್ಕರ್‌ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಬಾಲಕನೊಬ್ಬ ಅವರ ಕಾಲಿಗೆ ಬೀಳಲು ಮುಂದಾದ. ತಕ್ಷಣ ಆತನನ್ನು ತಡೆದ ತೆಂಡುಲ್ಕರ್‌ ಹೇಳಿದ್ದು: “ಹಾಗೆಲ್ಲ, ಯಾರ ಕಾಲಿಗೂ ಬೀಳಬಾರದು. ಕಾಲಿಗೆ ಬೀಳಲೇಬೇಕು ಅಂದರೆ, ಮನೆಗೆ ಹೋಗಿ, ಅಲ್ಲಿರುವ ತಾಯಿತಂದೆಯ ಕಾಲು ಮುಟ್ಟಿ ನಮಸ್ಕರಿಸಿ. ಹೆತ್ತವರಿಗಿಂತ ದೊಡ್ಡವರು, ಅವರಿಗಿಂತ ಶ್ರೇಷ್ಠರು ಈ ಜಗತ್ತಿನಲ್ಲಿ ಯಾರೂ ಇಲ್ಲ…’

ನೀವು ಬರೆದ್ರೇ ಚೆನ್ನಾಗಿರುತ್ತೆ ಸರ್‌…
ಮಿಸ್ಟರ್‌ ಡಿಪೆಂಡೆಬಲ್‌ ಅನಿಸಿಕೊಂಡಾತ ರಾಹುಲ್‌ ದ್ರಾವಿಡ್‌. ಖ್ಯಾತಿಯ ಶಿಖರವೇರಿದ ನಂತರವೂ ತನ್ನ ವಿನಯದ ಮಾತುಗಳಿಂದಲೇ ಎಲ್ಲರಿಗೂ ಇಷ್ಟವಾದದ್ದು ದ್ರಾವಿಡ್‌ ಅವರ ಹೆಚ್ಚುಗಾರಿಕೆ. ಅವರ ಸರಳತೆ, ಸೌಜನ್ಯಕ್ಕೆ ಸಾಕ್ಷಿಯಾಗುವ ಪ್ರಸಂಗವೊಂದು ಹೀಗಿದೆ: ದ್ರಾವಿಡ್‌ ಓದಿದ್ದು ಬೆಂಗಳೂರಿನ ಸೇಂಟ್‌ ಜೋಸೆಫ್ ಶಾಲೆ, ಕಾಲೇಜಿನಲ್ಲಿ. ಚಿಕ್ಕಂದಿನಿಂದಲೂ ಅವರಿಗೆ ಕ್ರಿಕೆಟ್‌ನಲ್ಲಿ ಆಸಕ್ತಿಯಿತ್ತು. ಶಾಲೆ-ಕಾಲೇಜಿನಲ್ಲಿದ್ದಾಗ, ಕ್ರಿಕೆಟ್‌ನಲ್ಲಿ ಗೆದ್ದಾಗಲೆಲ್ಲ ಒಂದು ಚಿತ್ರ ಮತ್ತು ವರದಿಯೊಂದಿಗೆ ಇಂಡಿಯನ್‌ ಎಕ್ಸ್‌ಪ್ರೆಸ್‌ ಕಚೇರಿಗೆ ಹೋಗುತ್ತಿದ್ದರು ದ್ರಾವಿಡ್‌. ಅಲ್ಲಿದ್ದ ಹಿರಿಯ ಕ್ರೀಡಾ ವರದಿಗಾರ ವೇದಂ ಜೈಶಂಕರ್‌ ಅವರ ಎದುರು ನಿಂತು-“ಸರ್‌, ನಿನ್ನೆ ಟೂರ್ನಮೆಂಟ್‌ ಇತ್ತು. ನಾವೇ ಗೆದ್ದಿದ್ದು. ದಯವಿಟ್ಟು ಈ ಸುದ್ದಿಯನ್ನು ನಾಳಿನ ಪತ್ರಿಕೆಯಲ್ಲಿ ಪ್ರಕಟಿಸಿ’ ಎನ್ನುತ್ತಿದ್ದರು. ವೇದಂ, “ಆಯ್ತಪ್ಪ ಹಾಕ್ತೇನೆ. ಆದ್ರೆ ಒಂದು ಷರತ್ತು.

ಎಲ್ಲ ಪಂದ್ಯಗಳಲ್ಲೂ ನೀನು ಚೆನ್ನಾಗಿ ಆಡಬೇಕು’ ಎನ್ನುತ್ತಿದ್ದ­ರಂತೆ. ಆನಂತರದಲ್ಲಿ ಪದೇಪದೇ ಕ್ರೀಡಾಸುದ್ದಿ­ಯೊಂದಿಗೆ ದ್ರಾವಿಡ್‌, ಎಕ್ಸ್‌ ಪ್ರಸ್‌ ಬಿಲ್ಡಿಂಗಿನ ಮೆಟ್ಟಿಲೇರು­ವುದು, ವೇದಂ ಜೈಶಂಕರ್‌ ಅವರ ಮೆಚ್ಚುಗೆಗೆ ಪಾತ್ರನಾಗು­ವುದು ಮಾಮೂಲಾ­ಯಿತು. ಹೀಗೇ ಹತ್ತುವರ್ಷ ಕಳೆದಾಗ, ದ್ರಾವಿಡ್‌ ಕ್ರಿಕೆಟ್‌ ಅಂಗಳದ ದಂತಕಥೆ ಅನ್ನಿಸಿಕೊಂಡರು. ದಾಖಲೆಗಳ ವೀರನಾದರು. ದ ವಾಲ್‌ ಅನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಆಗಲೇ ಅವರ ಬದುಕಿನ ಕಥೆ ಬರೆಯಲು ಕ್ರೀಡಾಪತ್ರಕರ್ತರು ಸಾಲುಗಟ್ಟಿ ನಿಂತರು. ನಿಮ್ಮ ಕಥೆ ಬರೆಯಲು ಅವಕಾಶ ಕೊಡಿ ಸರ್‌ ಎಂದು ಕೇಳಿಕೊಂಡರು. ಆಗ ದ್ರಾವಿಡ್‌ ಏನು ಮಾಡಿದರು ಗೊತ್ತೇ? ಸೀದಾ ವೇದಂ ಜೈಶಂಕರ್‌ ಬಳಿಗೆ ಬಂದು, ಸರ್‌ ನನ್ನನ್ನು ತುಂಬಾ ಹತ್ತಿರದಿಂದ ಕಂಡಿರುವುದು ನೀವೇ. ನನ್ನ ಕಥೆಯನ್ನು ನೀವೇ ಬರೆಯಿರಿ, ಆಗ ಮಾತ್ರ ಅದು ಚೆನ್ನಾಗಿರುತ್ತೆ ಅಂದರು! ವೇದಂ ಬರೆದಿರುವ ಪುಸ್ತಕ, ನಾಲ್ಕು ಭಾಷೆಗಳಿಗೆ ಅನುವಾದವಾಗಿದೆ!

Advertisement

Udayavani is now on Telegram. Click here to join our channel and stay updated with the latest news.

Next