Advertisement

ಹಳೆ ಸ್ಟೇಶನ್‌ ಪೊಟ್ಟುಕೆರೆ ಅತಿಕ್ರಮಣ ಹುನ್ನಾರ

02:49 PM May 05, 2018 | Team Udayavani |

ಕಡಬ: ಕುಟ್ರುಪ್ಪಾಡಿ ಗ್ರಾ.ಪಂ. ವ್ಯಾಪ್ತಿಯ ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಹಳೆ ಸ್ಟೇಶನ್‌ನ ಪೊಟ್ಟುಕೆರೆಯ ಪರಂಬೋಕು ಪ್ರದೇಶವನ್ನು ಪಹಣಿ ಪತ್ರಿಕೆಯಲ್ಲಿ ತಿದ್ದುಪಡಿ ಮಾಡಿ ಸರಕಾರಿ ಜಮೀನು ಎಂದು ನಮೂದಿಸಿ ಅತಿಕ್ರಮಣ ಮಾಡಲು ಹುನ್ನಾರ ನಡೆಯುತ್ತಿದೆ ಎಂದು ಕುಟ್ರಾಪ್ಪಾಡಿ ಗ್ರಾ.ಪಂ. ವತಿಯಿಂದ ಕಂದಾಯ ಇಲಾಖೆಗೆ ದೂರು ಸಲ್ಲಿಸಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಕುಟ್ರುಪ್ಪಾಡಿ ಗ್ರಾಮದ ಸರ್ವೆ ನಂ. 40ರಲ್ಲಿ ಇರುವ ಹಳೆ ಸ್ಟೇಶನ್‌ ಪೊಟ್ಟುಕೆರೆಯನ್ನು ಉದ್ಯೋಗ ಖಾತರಿ ಯೋಜನೆಯಡಿ ಹೂಳೆತ್ತಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಮಾಹಿತಿ ಪಡೆದಾಗ ಈ ಹಿಂದೆ ಕೈಬರಹದ ಪಹಣಿ ಪತ್ರದಲ್ಲಿ ಕೆರೆ ಪರಂಬೋಕು ಎಂದು ಇರುವ ಜಾಗವನ್ನು ಸರಕಾರಿ ಜಾಗ ಎಂದು ದಾಖಲಿಸಿದ್ದು ಬೆಳಕಿಗೆ ಬಂದಿದೆ.

ಈ ಅಕ್ರಮ ತಿದ್ದುಪಡಿಯ ಹಿಂದೆ ಕೆರೆಯನ್ನು ಆತಿಕ್ರಮಣಗೊಳಿಸುವ ಹುನ್ನಾರ ಇರುವುದನ್ನು ಮನಗಂಡು ಅಕ್ರಮ ತಿದ್ದುಪಡಿಯನ್ನು ಸರಿಪಡಿಸಿ ಸದ್ರಿ ಪ್ರದೇಶವನ್ನು ಮತ್ತೆ ಕೆರೆ ಪರಂಬೋಕು ಎಂದು ಪಹಣಿಯಲ್ಲಿ ದಾಖಲಿಸಬೇಕು ಎಂದು ಪಂಚಾಯತ್‌ ವತಿಯಿಂದ ಎರಡು ತಿಂಗಳ ಹಿಂದೆಯೇ ಜಿಲ್ಲಾಧಿಕಾರಿ, ಸಹಾಯಕ ಕಮಿಷನರ್‌ ಹಾಗೂ ಕಡಬ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಇದುವರೆಗೆ ಕಂದಾಯ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಗ್ರಾಮಸ್ಥರಿಂದ ದೂರು ವ್ಯಕ್ತವಾಗಿದೆ.

ಕೆರೆ ಕಬಳಿಸುವ ಸಂಚು
ಹಳೆಯ ಕಡತಗಳಲ್ಲಿ ಹಾಗೂ ಪಹಣಿ ಪತ್ರಗಳಲ್ಲಿ ಕೆರೆ ಪರಂಬೋಕು ಎಂದೇ ದಾಖಲಿಸಿರುವ ಸದ್ರಿ ಭೂಮಿಯನ್ನು ಕೆಲವು ವರ್ಷಗಳ ಹಿಂದೆ ಏಕಾಏಕಿ ಸರಕಾರಿ ಜಮೀನು ಎಂದು ಪಹಣಿಯಲ್ಲಿ ದಾಖಲಿಸಿರುವುದರ ಹಿಂದೆ ಕೆರೆಯನ್ನು ಕಬಳಿಸುವ ಉದ್ದೇಶ ಇದೆ ಎನ್ನುವುದು ಸ್ಥಳೀಯರ ಆರೋಪ. ಯಾರಿಗೋ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೆರೆಯ ಜಮೀನನ್ನು ಸರಕಾರಿ ಎಂದು ನಮೂದಿಸಲಾಗಿದೆ. ಈಗಾಗಲೇ ಕರೆಯ ಒಂದು ಭಾಗದಲ್ಲಿ ಕಲ್ಲು, ಮಣ್ಣು ತುಂಬಿರುವುದರಿಂದ ಕೆರೆಯ ಗಾತ್ರ ಸಾಕಷ್ಟು ಕಿರಿದಾಗಿದೆ. ಕೆರೆಗಳನ್ನು ಉಳಿಸಿ ಅಭಿವೃದ್ಧಿಪಡಿಸಬೇಕೆಂದು ಆದೇಶ ಹೊರಡಿಸಿರುವ ಸರಕಾರ ಸದ್ರಿ ಕೆರೆಯ ಅತಿಕ್ರಮಣದ ಸಂಚನ್ನು ವಿಫಲಗೊಳಿಸಿ ಗ್ರಾಮಸ್ಥರಿಗೆ ಕೆರೆಯನ್ನು ಉಳಿಸಿಕೊಡಬೇಕು ಎನ್ನುವುದು ಸಾರ್ವಜನಿಕರ ಆಶಯವಾಗಿದೆ.

ಮತ್ತೆ ನೆನಪೋಲೆ
ಹಳೆಯ ಕೈಬರಹದ ಪಹಣಿ ಪತ್ರದಲ್ಲಿ ಕೆರೆ ಪರಂಬೋಕು ಎಂದು ಇರುವುದನ್ನು ಸರಕಾರಿ ಜಮೀನು ಎಂದು ತಿದ್ದುಪಡಿ ಮಾಡಿದ್ದು ಎರಡು ತಿಂಗಳ ಹಿಂದೆ ಗಮನಕ್ಕೆ ಬಂದ ಕೂಡಲೇ ಜಿಲ್ಲಾಧಿಕಾರಿಗಳು, ಎಸಿ ಹಾಗೂ ಕಡಬ ತಹಶೀಲ್ದಾರರಿಗೆ ದೂರು ನೀಡಿ ಸರಿಪಡಿಸಲು ಒತ್ತಾಯಿಸಿದ್ದೇವೆ. ಕೆರೆಗಳ ಹೂಳೆತ್ತಿ ಅಭಿವೃದ್ಧಿ ಮಾಡಬೇಕೆಂಬ ಸೂಚನೆ ಇದೆ. ನಮ್ಮ ದೂರಿಗೆ ಕಂದಾಯ ಇಲಾಖೆಯಿಂದ ಉತ್ತರ ಬಂದಿಲ್ಲ. ಮತ್ತೆ ನೆನಪಿನೋಲೆ ಕಳುಹಿಸಿ ಕಂದಾಯ ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ಮಾಡಿದ್ದೇವೆ.
– ವಿಲ್ಫ್ರೆಡ್ ಲಾರೆನ್ಸ್‌
ರೋಡ್ರಿಗಸ್‌, ಕುಟ್ರುಪ್ಪಾಡಿ ಪಿಡಿಒ

Advertisement

ಕಣ್ತಪ್ಪಿನಿಂದ ಆಗಿರಬಹುದು
ಕೆರೆಯನ್ನು ಸರಕಾರಿ ಜಮೀನು ಎಂದು ತಿದ್ದುಪಡಿ ಮಾಡಲು ಖಂಡಿತವಾಗಿಯೂ ಅವಕಾಶವಿಲ್ಲ. ಕಣ್ತಪ್ಪಿನಿಂದ ನಡೆದಿರಲೂ ಬಹುದು. ಈ ಕುರಿತು ಪರಿಶೀಲನೆ ನಡೆಸಿ ತಪ್ಪಾಗಿದ್ದರೆ ಸರಿಪಡಿಸುವ ಕುರಿತು ಕಂದಾಯ ಇಲಾಖೆಯ ಮೇಲಧಿಕಾರಿಗಳಿಗೆ ವರದಿ ನೀಡಲಾಗುವುದು. ಚುನಾವಣ ಕರ್ತವ್ಯಕ್ಕಾಗಿ ಸಂಬಂಧಪಟ್ಟ ಗ್ರಾಮ ಕರಣಿಕರನ್ನು ಬೇರೆಡೆ ನಿಯೋಜಿಸಿರುವುದರಿಂದಾಗಿ ಸ್ವಲ್ಪ ತಡವಾಗಿದೆ.
– ಕೊರಗಪ್ಪ ಹೆಗ್ಡೆ, ಕಂದಾಯ ನಿರೀಕ್ಷಕರು, ಕಡಬ

Advertisement

Udayavani is now on Telegram. Click here to join our channel and stay updated with the latest news.

Next