Advertisement

ವಿಕಲಚೇತನ ಪ್ರಮಾಣಪತ್ರ ಪಡೆಯಲು ಪರದಾಟ

12:29 PM Dec 14, 2021 | Team Udayavani |

ಸುರಪುರ: ವಿಕಲಚೇತನ ಪ್ರಮಾಣಪತ್ರ ನೀಡುವ ಕಚೇರಿ ತಾಲೂಕು ಕೇಂದ್ರಗಳಲಿಲ್ಲದೇ ವಿಕಲಾಂಗರು ಪ್ರಮಾಣಪತ್ರ ಪಡೆಯಲು ಪರದಾಡುವಂತಾಗಿದೆ. ಇದರಿಂದ ಸೌಲಭ್ಯಗಳಿಂದ ವಂಚಿತರಾಗುವಂತಾಗಿದೆ.

Advertisement

ಸರ್ಕಾರ ವಿಕಲಾಂಗರ ಸಬಲೀಕರಣಕ್ಕಾಗಿ ಪ್ರತ್ಯೇಕ ಮಂತ್ರಾಲಯ ಸ್ಥಾಪಿಸಿದ್ದು ಅನೇಕ ಯೋಜನೆ ಜಾರಿಗೊಳಿಸಿದೆ. ಇವುಗಳನ್ನು ಸಮರ್ಪಕ ಅನುಷ್ಠಾನಗೊಳಿಸಲು ಪ್ರತಿ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರತ್ಯೇಕ ಕಚೇರಿ ಸ್ಥಾಪಿಸಿದೆ. ಅಂದರೆ ವಿಕಲಾಂಗ ಪ್ರಮಾಣಪತ್ರ ನೀಡುವ ಕಚೇರಿ ಸ್ಥಾಪಿಸುವುದನ್ನು ಮರೆತು ಬಿಟ್ಟಿದೆ.

ವಿಕಲಾಂಗರು ಸೌಲಭ್ಯ ಪಡೆಯಲು ಪ್ರಮಾಣಪತ್ರ ಕಡ್ಡಾಯಗೊಳಿಸಲಾಗಿದೆ. ಶೇ.60 ಮೇಲ್ಪಟ್ಟು ಅಂಗವಿಕಲತೆ ಹೊಂದಿದ್ದರೆ ಮಾತ್ರ ಸೌಲಭ್ಯಕ್ಕೆ ಅರ್ಹರು. ಪ್ರತಿಶತ ಅಂಗವಿಕಲತೆ ಇದ್ದರೂ ಪ್ರಮಾಣಪತ್ರ ಇಲ್ಲದೇ ಸೌಲಭ್ಯ ಪಡೆಯುವಂತಿಲ್ಲ. ಪ್ರಮಾಣಪತ್ರ ನೀಡುವ ಅಧಿಕಾರ ಜಿಲ್ಲಾ ಮಟ್ಟದ ವಿಶೇಷ ವೈದ್ಯರಿಗೆ ನೀಡಿದ್ದು, ತಾಲೂಕಿನ ವಿಕಲಾಂಗರು ಪ್ರಮಾಣಪತ್ರಕ್ಕಾಗಿ ಪರದಾಡುತಿದ್ದಾರೆ.

ಶ್ರವಣದೋಷ (ಮೂಗರು, ಕಿವುಡರು) ಪ್ರಮಾಣಪತ್ರಕ್ಕೆ ರಾಯಚೂರು ಬುದ್ಧಿಮಾಂದ್ಯತೆ ಮತ್ತು ದೃಷ್ಟಿಹೀನತೆ ಪ್ರಮಾಣಪತ್ರಕ್ಕೆ ಯಾದಗಿರಿ ಜಿಲ್ಲಾಸ್ಪತ್ರೆಗೆ ಹೋಗಬೇಕು. ಕೆಲಸದ ನೆಪದಿಂದ ವೈದ್ಯರು ಸಕಾಲಕ್ಕೆ ಸಿಗಲ್ಲ. ಪ್ರಮಾಣಪತ್ರ ಪಡೆಯಲು ಮೂರ್‍ನಾಲ್ಕು ಬಾರಿ ಅಲೆದಾಡಬೇಕು. 8-10 ಸಾವಿರ ಖರ್ಚು ಆಗುತ್ತದೆ. ಪ್ರಮಾಣಪತ್ರ ಸರಳವಾಗಿ ಸಿಗುತ್ತಿಲ್ಲ. ಇದರಿಂದ ಮಹತ್ವಾಕಾಂಕ್ಷಿ ಯೋಜನೆ ಅರ್ಹರಿಗೆ ತಲುಪದೇ ವಿಫಲವಾಗುತ್ತಿದೆ ಎಂದು ವಿಕಲಾಂಗರು ಆರೋಪಿಸುತ್ತಾರೆ.

ವಿಕಲಚೇತನರ ಸೌಲಭ್ಯಕಾಗಿ ನಗರಸಭೆ, ಪುರಸಭೆ, ಪಪಂ ಮತ್ತು ಗ್ರಾಪಂನಲ್ಲಿ ಶೇ.5 ಅನುದಾನ ಮೀಸಲಾಗಿರುತ್ತದೆ. ಸಾಲ, ಸೌಲಭ್ಯ, ಬಗಲಬಡಿಗೆ, ವ್ಹೀಲ್‌ಚೇರ್‌, ಸೈಕಲ್‌ ರಿಕ್ಷಾ, ಕುರ್ಚಿ, ಲ್ಯಾಪ್‌ ಟ್ಯಾಪ್‌, ಶ್ರವಣ ಮಷೀನ್‌, ಗ್ಯಾಸ್‌, ಶಿಷ್ಯ ವೇತನ ಸೇರಿದಂತೆ ಇತರೆ ಸೌಲಭ್ಯ ನೀಡಲು ಅವಕಾಶವಿದೆ. ಆದರೆ ಗ್ರಾಪಂಗಳಲ್ಲಿ ಅನುದಾನ ಬಳಕೆಯಾಗಿಲ್ಲ. ವಿಕಲಚೇತನರನ್ನು ಸೌಲಭ್ಯದಿಂದ ವಂಚಿತರನ್ನಾಗಿ ಮಾಡಲಾಗಿದೆ ಎಂದು ವಿಕಲಚೇತನ ಸಂಘದ ತಾಲೂಕು ಅಧ್ಯಕ್ಷ ನಾಗೇಂದ್ರ ದೊರೆ ಚಂದ್ಲಾಪುರ ದೂರಿದ್ದಾರೆ.

Advertisement

700 ಶ್ರವಣದೋಷ, 60 ಕುಷ್ಠರೋಗಿಗಳು, 900 ಬುದ್ಧಿಮಾಂದ್ಯರು, 650 ಅಂಧರು, 1250 ಬಹುವಿಧ ವಿಕಲಾಂಗರು, 2050 ದೈಹಿಕ ವಿಕಲರು ಸೇರಿ ತಾಲೂಕಿನಲ್ಲಿ 6 ಸಾವಿರಕ್ಕೂ ಹೆಚ್ಚು ನೋಂದಾಯಿತರಿದ್ದಾರೆ. 3000 ಜನ ಪ್ರಮಾಣಪತ್ರ ಪಡೆದಿದ್ದು ಉಳಿದವರು ಪಡೆಯಲು ಸಾಧ್ಯವಾಗಿಲ್ಲ. ಹೊಸದಾಗಿ ಸಾವಿರಕ್ಕೂ ಹೆಚ್ಚು ಅರ್ಜಿ ಬಂದಿವೆ ಎಂದು ತಾಪಂ ಎಂಆರ್‌ ಡಬ್ಯೂ ಮಾಳಪ್ಪ ಪೂಜಾರಿ ತಿಳಿಸಿದ್ದಾರೆ.

ತಾಲೂಕು ಕೇಂದ್ರಗಳಲ್ಲಿ ಕಚೇರಿ ಸ್ಥಾಪನೆಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದ್ದೇವೆ. ಸಚಿವರು, ಶಾಸಕರು, ಆಯುಕ್ತರಿಗೆ ಮನವಿ ಸಲ್ಲಿಸಿದ್ದೇವೆ. ಮನವಿಗಳೆಲ್ಲ ಕಸದ ಬುಟ್ಟಿ ಸೇರುತ್ತಿವೆ. ನಮ್ಮ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ಸಂಗನಗೌಡ ಧನರೆಡ್ಡಿ, ವಿಕಲಚೇತನರ ಸಂಘದ ಜಿಲ್ಲಾಧ್ಯಕ್ಷ

ಪ್ರಮಾಣಪತ್ರಕ್ಕಾಗಿ ರಾಯಚೂರು- ಯಾದಗಿರಿಗೆ ಒಂದು ವರ್ಷದಿಂದ ಅಲೆದಿದ್ದೇನೆ. ಆದರೂ ಪ್ರಮಾಣಪತ್ರ ಸಿಕ್ಕಿಲ್ಲ. ಖರ್ಚು ಮಾಡಿ ಅಲೆಯವುದು ಆಗುತ್ತಿಲ್ಲ. ಕಾನೂನು ಸೇವಾ ಸಮಿತಿಯವರು ಪ್ರಮಾಣಪತ್ರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ತಾಲೂಕು ಕೇಂದ್ರದಲ್ಲಿ ಕಚೇರಿ ಸ್ಥಾಪಿಸಿದರೆ ಬಡವರಿಗೆ ಅನುಕೂಲವಾಗುತ್ತದೆ. ಬಲಭೀಮ ಬಾದ್ಯಾಪುರ, ವಿಕಲಚೇತನ

-ಸಿದ್ದಯ್ಯ ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next