Advertisement

ವಸ್ತುನಿಷ್ಠ ಅಧ್ಯಯನ ನಡೆಸಬೇಕಿದೆ: ಸರಕಾರಿ ಶಾಲೆಗಳ ದಾಖಲಾತಿ ಇಳಿಕೆ

06:14 PM Nov 17, 2017 | |

ಸರಕಾರಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಪ್ರಮಾಣ ಇಳಿಯುತ್ತಿರುವುದು ಕಳವಳಕಾರಿ ವಿಚಾರ. ಕರ್ನಾಟಕದ ಪ್ರಾಥಮಿಕ ಶಾಲೆಗಳಲ್ಲಿ ಕಳೆದ ಮೂರು ಶೈಕ್ಷಣಿಕ ವರ್ಷಗಳಲ್ಲಿ ದಾಖಲಾತಿ ಪ್ರಮಾಣ ಇಳಿದಿರುವುದನ್ನು ಸರಕಾರವೇ ಒಪ್ಪಿಕೊಂಡಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್ ಸದನಕ್ಕೆ ನೀಡಿರುವ ಮಾಹಿತಿ ಪ್ರಕಾರ 2014- 15ರಲ್ಲಿ 48,64,509 ಇದ್ದ ದಾಖಲಾತಿ 2016-17ರಲ್ಲಿ 46,50,349ಕ್ಕೆ ಇಳಿದಿದೆ. ಶೈಕ್ಷಣಿಕವಾಗಿ ಮುಂದುವರಿದಿರುವ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ ಹಿಂದುಳಿದಿರುವ ಬಾಗಲಕೋಟೆ ಜಿಲ್ಲೆಯಲ್ಲೂ ದಾಖಲಾತಿ ಪ್ರಮಾಣ ಕಡಿಮೆಯಾಗುತ್ತಿದೆ. ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆತರಲು ಸರಕಾರ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದರೂ ಇದರಿಂದ ಹೆಚ್ಚಿನ ಪ್ರಯೋಜನವಾಗುತ್ತಿಲ್ಲ. ಸಂಪೂರ್ಣ ಉಚಿತ ಶಿಕ್ಷಣ, ಮಧ್ಯಾಹ್ನ ದೂಟ, ಹಾಲು, ಮೊಟ್ಟೆ ಎಂದು ಸರ್ವ ಸೌಲಭ್ಯಗಳಿದ್ದರೂ ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಲು ಹಿಂದೇಟು ಹಾಕುತ್ತಿರು ವುದು ಏಕೆ ಎನ್ನುವುದು ಗಂಭೀರವಾಗಿ ಚಿಂತಿಸಬೇಕಾದ ವಿಚಾರ. ಶಿಕ್ಷಣ ಹಕ್ಕು ಕಾಯಿದೆ ಜಾರಿಯಾದ ಬಳಿಕ ಪ್ರತಿ ಮಗುವನ್ನು ಶಾಲೆಗೆ ಸೇರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಈ ಕಾಯಿದೆ ಸರಕಾರಿ ಶಾಲೆಗಳಿಗೆ ಮುಳುವಾಗುತ್ತಿದೆ ಎನ್ನುವ ವಾದವಿದೆ. ಕಾಯಿದೆಯಿಂದಾಗಿ ಖಾಸಗಿ ಶಾಲೆಗಳು ಕೂಡ ಶೇ.25 ಸೀಟುಗಳನ್ನು ಬಡ ಮಕ್ಕಳಿಗೆ ಮೀಸಲಿಡಬೇಕು. ಇದರಿಂದಾಗಿ ಖಾಸಗಿ ಶಾಲೆಗಳಲ್ಲಿ ಸೀಟು ಸಿಗದವರು ಮಾತ್ರ ಸರಕಾರಿ ಶಾಲೆಗಳಿಗೆ ಸೇರುತ್ತಿದ್ದಾರೆ. ಹೀಗಾಗಿ ಈ ಕಾಯಿದೆಯನ್ನೇ ರದ್ದುಗೊಳಿಸಬೇಕೆಂದು ಹೇಳುವುದು ಮಾತ್ರ ಸರಿಯಲ್ಲ. ಕಾಯಿದೆಯಿಂದ ಆಗಿರುವ ಇತರ ಲಾಭಗಳನ್ನು ಕೂಡ ಪರಿಗಣಿಸಬೇಕು. ಆದರೆ ಕಾಯಿದೆಯಲ್ಲಿರುವ ನಿಯಮಗಳಂತೆ ಸರಕಾರಿ ಶಾಲೆಗಳಲ್ಲಿ ಶಿಕ್ಷಣವನ್ನು ನೀಡಲು ನಮ್ಮ ವ್ಯವಸ್ಥೆಗೆ ಸಾಧ್ಯವಾಗುತ್ತಿಲ್ಲ ಎನ್ನುವುದು ಮಾತ್ರ ವಾಸ್ತವ. 

Advertisement

ಹಾಗೆಂದು ಸರಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಪ್ರಮಾಣ ಕಡಿಮೆಯಾಗುತ್ತಿರುವುದು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರುವ ಸಮಸ್ಯೆಯಲ್ಲ. ಇಡೀ ದೇಶದಲ್ಲಿ ಈ ಸಮಸ್ಯೆಯಿದೆ ಎನ್ನುವುದು ಅಧ್ಯಯನವೊಂದರ ಮೂಲಕ ಕಂಡುಕೊಳ್ಳಲಾಗಿದೆ. 2010-11ರಿಂದ 2015-16ರ ನಡುವೆ 20 ರಾಜ್ಯಗಳಲ್ಲಿ ಸರಕಾರಿ ಶಾಲೆಗಳಿಗೆ ಸೇರುವ ಮಕ್ಕಳ ಸಂಖ್ಯೆ 1.3 ಕೋಟಿಯಷ್ಟು ಕಡಿಮೆಯಾಗಿದೆ. ಇದೇ ಅವಧಿಯಲ್ಲಿ ಖಾಸಗಿ ಶಾಲೆಗಳಿಗೆ ಸೇರುವ ಮಕ್ಕಳ ಸಂಖ್ಯೆ 1.75 ಕೋಟಿ ಹೆಚ್ಚಾಗಿದೆ. ಸರಾಸರಿ ಪ್ರಕಾರ ಹೇಳುವುದಾದರೆ ಪ್ರತಿ ಸರಕಾರಿ ಶಾಲೆಯಲ್ಲಿ ದಾಖಲಾತಿ ಪ್ರಮಾಣ 122ರಿಂದ 108ಕ್ಕೆ ಕುಸಿದಿದೆ ಹಾಗೂ ಖಾಸಗಿ ಶಾಲೆಗಳಲ್ಲಿ 202ರಿಂದ 208ಕ್ಕೇರಿದೆ. ರಾಷ್ಟ್ರೀಯ ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣ ಕಾರ್ಯ ಕ್ರಮವಾಗಿರುವ ಸರ್ವ ಶಿಕ್ಷಾ ಅಭಿಯಾನಕ್ಕೆ ಸರಕಾರ 1.16 ಲಕ್ಷ ಕೋ. ರೂ. ಖರ್ಚು ಮಾಡಿದ್ದರೂ ಸರಕಾರ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕಡಿಮೆ ಯಾಗುತ್ತಿದೆ ಎಂಬ ಕಳವಳಕಾರಿ ಅಂಶವೂ ಈ ಅಧ್ಯಯನದಲ್ಲಿದೆ. 

ದಾಖಲಾತಿ ಪ್ರಮಾಣ ಕಡಿಮೆಯಾಗಲು ಜನರ ಜೀವನ ಮಟ್ಟ ಸುಧಾರಣೆ, ನಗರಗಳಿಗೆ ವಲಸೆ ಮತ್ತಿತರ ಕಾರಣಗಳನ್ನು ಸರಕಾರ ತೋರಿಸಿದರೂ ಸರಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟ ಕಳಪೆ ಎನ್ನುವ ಸಾರ್ವತ್ರಿಕ ಅಭಿಪ್ರಾಯವೇ ಮೂಲ ಕಾರಣ ಎನ್ನುವುದು ಅಲ್ಲಗಳೆಯ ಲಾಗದ ಸತ್ಯ. ಇಷ್ಟು ಮಾತ್ರ ಅಲ್ಲದೆ, ಶಾಲೆಗಳನ್ನು ಅಕಾಡೆಮಿಕ್‌ ಕಲಿಕೆಯ ಕೇಂದ್ರಗಳಷ್ಟೇ ಆಗಿ ಪರಿಭಾವಿಸಿರುವ ನಮ್ಮ ಸದ್ಯದ ಆಲೋಚನಾ ಕ್ರಮವನ್ನೂ ಪ್ರಸ್ತುತ ಕಾಲಘಟ್ಟಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬೇಕಾದ ಅಗತ್ಯವಿದೆ. ಜತೆಗೆ ಸರಕಾರ ಶಿಕ್ಷಣ ಕ್ಷೇತ್ರವನ್ನು ಪ್ರಯೋಗಶಾಲೆಯೆಂಬಂತೆ ಪರಿಗಣಿಸಿ ಪ್ರತಿ ವರ್ಷ ಹೊಸ ಹೊಸ ನಿಯಮಗಳನ್ನು ರಚಿಸುತ್ತಿರುವುದು ಪೋಷಕರಲ್ಲಿ ಗೊಂದಲವುಂಟು ಮಾಡುತ್ತಿದೆ. ಪ್ರಸ್ತುತ ಸರಕಾರ ಹಾಕಿಕೊಳ್ಳುತ್ತಿರುವ ಕಾರ್ಯಕ್ರಮಗಳು ಮಕ್ಕಳನ್ನು ಶಾಲೆಗೆ ಸೆಳೆಯುವ ಉದ್ದೇಶಗಳನ್ನು ಹೊಂದಿವೆಯೇ ಹೊರತು ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಕಾಳಜಿ ಹೊಂದಿಲ್ಲ. ಸರಕಾರಿ ಶಾಲೆಗಳಲ್ಲಿ ಕಲಿತರೆ ನೌಕರಿ ಸಿಗುವ ಖಾತರಿಯಿಲ್ಲ ಎನ್ನುವ ಭೀತಿಯೂ ಹೆತ್ತವರನ್ನು ಸಾಲಸೋಲ ಮಾಡಿಯಾದರೂ ಖಾಸಗಿ ಶಾಲೆಗಳಿಗೆ ಕಳುಹಿಸುವಂತೆ ಮಾಡುತ್ತಿದೆ. ಸರಕಾರಿ ಶಾಲೆಗಳ ಶಿಕ್ಷಕರನ್ನು ಜೀತದಾಳುಗಳಂತೆ ದುಡಿಸಿಕೊಳ್ಳುವ ಧೋರಣೆ ಬದಲಾಗದೆ ಶಿಕ್ಷಣದ ಗುಣಮಟ್ಟ ಸುಧಾರಿಸುವುದನ್ನು ನಿರೀಕ್ಷಿಸುವುದು ಅಸಾಧ್ಯ. ಎಲ್ಲೇ ಹೋದರೂ ಸರಕಾರಿ ಶಾಲೆಗಳ ಕುರಿತು ಸಿಗುವುದು ಈ ರೀತಿಯ ದೂರುಗಳೇ. ಆದರೆ ಈ ನ‌ಡುವೆಯೂ ಒಂದೆರಡು ರಾಜ್ಯಗಳು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಎನ್ನಬಹುದಾದ ಸುಧಾರಣೆ ಮಾಡಿರುವ ಗಮನಾರ್ಹ ಅಂಶ. ಪಕ್ಕದ ಕೇರಳದಲ್ಲಿ 2016ನೇ ಸಾಲಿನಲ್ಲಿ ಸರಕಾರಿ ಶಾಲೆಗಳ ದಾಖಲಾತಿ ಪ್ರಮಾಣ ಶೇ.40.6ರಿಂದ ಶೇ. 49.9ಕ್ಕೇರಿರುವುದು ಅಚ್ಚರಿಪಡಿಸುವ ಸಾಧನೆ. ಅಂತೆಯೇ ಗುಜರಾತಿನಲ್ಲಿ ಶೇ.79.2ರಿಂದ ಶೇ.86ಕ್ಕೇರಿದೆ. ಈ ರಾಜ್ಯಗಳಲ್ಲಿ ಈ ಸಾಧನೆ ಹೇಗೆ ಸಾಧ್ಯವಾಯಿತು ಎನ್ನುವ ಕುರಿತು ವಸ್ತುನಿಷ್ಠ ಅಧ್ಯಯನ ನಡೆಸಿ ಆ ಮಾದರಿಯನ್ನು ಅಳವಡಿಸಿಕೊಂಡು ನೋಡಬಹುದಲ್ಲವೆ?

Advertisement

Udayavani is now on Telegram. Click here to join our channel and stay updated with the latest news.

Next