Advertisement

ಈಗ ಪಾಲಿಕೆ ಆವರಣದ ಕಟ್ಟಡದಲ್ಲೇ ಕಸದ ರಾಶಿ!

11:24 AM Jul 07, 2018 | Team Udayavani |

ಮಹಾನಗರ: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸ್ವಚ್ಛತಾ ಸರ್ವೇಕ್ಷಣಾ ಪಟ್ಟಿಯಲ್ಲಿ ದೇಶದಲ್ಲಿಯೇ ಘನತಾಜ್ಯ ನಿರ್ವಹಣೆಗೆ ಮೊದಲ ಸ್ಥಾನ ಪಡೆದ ಮಂಗಳೂರು ಮಹಾನಗರ ಪಾಲಿಕೆ ಕಚೇರಿಯ ಸಮೀಪದಲ್ಲೇ ಇರುವ ಪಾಲಿಕೆಗೆ ಸೇರಿದ ಕಟ್ಟದಲ್ಲಿಯೇ ಕಸದ ರಾಶಿ ಬಿದ್ದಿದ್ದು, ಗಬ್ಬು ನಾರುತ್ತಿದೆ. ಇನ್ನೊಂದೆಡೆ, ಸ್ಥಳೀಯ ನಿವಾಸಿಗಳು ಇಲ್ಲಿ ಪ್ರತಿನಿತ್ಯದ ಕಸ ರಾಶಿ ನೋಡಿ ರೋಸಿ ಹೋಗಿದ್ದು, ರೋಗದ ಭೀತಿಯಿಂದ ಬದುಕುತ್ತಿದ್ದಾರೆ.

Advertisement

ನಗರದ ಲಾಲ್‌ಬಾಗ್‌ನ ಮಹಾನಗರ ಪಾಲಿಕೆ ಕಟ್ಟಡದ ಸಮೀಪದಲ್ಲೇ ಇರುವ ಪಾಲಿಕೆ ಅಧೀನ ಕಟ್ಟಡದ ಹಿಂಭಾಗದಲ್ಲಿ ಕಸ ಸೇರಿದಂತೆ ಕಟ್ಟಡದ ತ್ಯಾಜ್ಯಗಳನ್ನು ರಾಶಿ ಹಾಕಲಾಗಿದ್ದು, ಈ ಬಗ್ಗೆ ಮೇಯರ್‌ ಸಹಿತ ಅಧಿಕಾರಿಗಳ ಗಮನಕ್ಕೆ ಸ್ಥಳೀಯರು ತಂದಿದ್ದರೂ ಯಾರೂ ಗಮನ ಹರಿಸುತ್ತಿಲ್ಲ ಎನ್ನಲಾಗಿದೆ.

ಕಸದ ರಾಶಿಯಿಂದ ರೋಗ ಭೀತಿ
ಪಾಲಿಕೆ ಕಟ್ಟಡದ ಸಮೀಪ ಬಸ್‌ ನಿಲ್ದಾಣದ ಹಿಂಭಾಗದಲ್ಲಿರುವ ವಾಣಿಜ್ಯ ಕಟ್ಟಡದಲ್ಲಿ ಕಸ ಹಾಗೂ ತ್ಯಾಜ್ಯಗಳನ್ನು ರಾಶಿ ಹಾಕಿದ್ದರಿಂದ ಮಳೆ ನೀರಿಗೆ ಸೊಳ್ಳೆಗಳು ಉತ್ಪತ್ತಿಯಾಗಿ ರೋಗ ಹರಡುವ ಭೀತಿ ಮೂಡಿದೆ. ಈ ಕಟ್ಟಡದ ಹಿಂಭಾಗದಲ್ಲೇ ಕೆಲವು ಮನೆಗಳಿವೆ, ಇಲ್ಲಿ ದಿನನಿತ್ಯ ನೂರಾರು ಮಂದಿ ಓಡಾಡುತ್ತಿದ್ದು, ಪಾಲಿಕೆ ನಿರ್ಲಕ್ಷ್ಯವನ್ನು
ಸಾರ್ವಜನಿಕರು ದೂಷಿಸುವಂತಾಗಿದೆ.

ಬಸ್‌ ನಿಲ್ದಾಣಗಳಲ್ಲಿನ ಕಸದ ಬುಟ್ಟಿ ಮಾಯ
ಸ್ಮಾರ್ಟ್‌ ಸಿಟಿ ನಗರಗಳ ಪಟ್ಟಿಯಲ್ಲಿ ಹೆಸರು ಪಡೆದ ಮಂಗಳೂರು ಕೆಲವು ಚಿಕ್ಕ ಸಮಸ್ಯೆಗಳನ್ನು ಕಡೆಗಣಿಸಿ ನಗೆಪಾಟಲಿಗೀಡಾಗುತ್ತಿದೆ. ನಗರದ ಪ್ರಮುಖ ಬಸ್‌ ನಿಲ್ದಾಣಗಳನ್ನು ಮೇಲ್ದರ್ಜೆ ಗೇರಿಸಲಾಗಿದೆಯಾದರೂ ಬಸ್‌ ನಿಲ್ದಾಣಗಳಲ್ಲಿ ಕಸದ ಬುಟ್ಟಿಯನ್ನು ಇಡದ ಪರಿಣಾಮ ಜನರು ಎಲ್ಲೆಂದರಲ್ಲಿ ಕಸಗಳನ್ನು ಬೀಸಾಡುತ್ತಿದ್ದಾರೆ. ಹಾಗಾಗಿ ಪ್ರಮುಖ ಬಸ್‌ ನಿಲ್ದಾಣಗಳಲ್ಲಿ ಕಸದ ಬುಟ್ಟಿಗಳನ್ನು ಇಡುವುದು ಉತ್ತಮ ಎಂಬುದು ಸಾರ್ವಜನಿಕರ ಅಭಿಪ್ರಾಯ.

ತ್ಯಾಜ್ಯ ನಿರ್ವಹಣೆಯಲ್ಲಿ  ದೇಶದಲ್ಲೇ ನಂಬರ್‌ ಒನ್‌ ಪಾಲಿಕೆ!
ಸ್ವಚ್ಛ ಸರ್ವೇಕ್ಷಣ- 2016ರಲ್ಲಿ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ ನಗರಗಳನ್ನು ಆಯ್ಕೆ ಮಾಡಲಾಗಿತ್ತು. 2017ರಲ್ಲಿ 1 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ ನಗರಗಳನ್ನು ಆಯ್ಕೆ ಮಾಡಲಾಗಿತ್ತು. ಈ ಬಾರಿ ಭಾರತ ದೇಶದ ಎಲ್ಲ ನಗರಗಳನ್ನು ಆಯ್ಕೆಯಲ್ಲಿ ಪರಿಗಣಿಸಲಾಗಿದೆ. ಆ ಪ್ರಕಾರ ಘನತ್ಯಾಜ್ಯ ನಿರ್ವಹಣೆಯಲ್ಲಿ ಮಂಗಳೂರು ನಗರವು ದೇಶದಲ್ಲಿಯೇ ಮೊದಲ ಸ್ಥಾನ ಪಡೆದುಕೊಂಡಿತ್ತು.

Advertisement

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ‘ಸ್ವಚ್ಛ ಭಾರತ ಮಿಷನ್‌’ ಅಡಿಯಲ್ಲಿ ಸ್ವಚ್ಛತೆಗಾಗಿ ನಗರಗಳಿಗೆ ನೀಡುವ ರೇಟಿಂಗ್‌ ಸಂಬಂಧಿಸಿದಂತೆ, ನಗರದಲ್ಲಿ ಸ್ವಚ್ಛತೆಗಾಗಿ ಕೈಗೊಂಡ ಅಂಶಗಳನ್ನು ಪರಿಶೀಲಿಸಲು ಕೇಂದ್ರದ ಉನ್ನತ ಮಟ್ಟದ ಅಧಿಕಾರಿಗಳ ತಂಡ ಜನವರಿಯಲ್ಲಿ ನಗರಕ್ಕೆ ಆಗಮಿಸಿ ಪರಿಶೀಲನೆ ನಡೆಸಿತ್ತು. ಪಾಲಿಕೆಯು ಈ ಹಿಂದೆ ಸ್ವತ್ಛತೆ ಬಗ್ಗೆ ಕೇಂದ್ರಕ್ಕೆ ಕಳುಹಿಸಿದ ಮಾಹಿತಿಯ ನೈಜತೆಯ ಬಗ್ಗೆ ಕೇಂದ್ರದ ತಂಡ ಪರಿಶೀಲಿಸಿ, ಜತೆಗೆ ನಗರದ ಜನರಿಂದ ಪ್ರಶ್ನೆಗಳಿಗೆ ಉತ್ತರ ಆಹ್ವಾನಿಸಿ, ಅಂಕಗಳ ಹಂಚಿಕೆ ನಡೆಸಿ, ಬಳಿಕ ಫಲಿತಾಂಶ ಪ್ರಕಟಗೊಂಡಿತ್ತು. ಕೆಲವು ದಿನಗಳ ಹಿಂದೆ ಮೇಯರ್‌, ಪಾಲಿಕೆ ಆಯುಕ್ತರು, ಅಧಿಕಾರಿಗಳು ಪ್ರಶಸ್ತಿ ಸ್ವೀಕರಿಸಿ ಬಂದಿದ್ದರು.

ಅಧಿಕಾರಿಗಳಿಗೆ ಮನವಿ
ಸಾರ್ವಜನಿಕ ಸ್ಥಳದಲ್ಲಿ ಹೀಗೆ ಹಾಕುವುದರಿಂದ ಆಗಬಹುದಾದ ತೊಂದರೆ ಬಗ್ಗೆ ನಾನು ಪಾಲಿಕೆ ಪರಿಸರ ಅಭಿಯಂತರ, ಮೇಯರ್‌ ಕಚೇರಿಗೆ ತಿಳಿಸಿದ್ದೆ. ಆದರೆ ಯಾರೂ ಇತ್ತ ಗಮನ ನೀಡಿಲ್ಲ.
– ಜೋಸೆಫ್‌ ಡಿ’ಸೋಜಾ,
ಹಿರಿಯ ನಾಗರಿಕರು

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next