Advertisement

ನೋಟಾ: ಸದ್ಯ ಪ್ರಯೋಗಕ್ಕೆ ಮಾತ್ರ!

12:53 PM May 07, 2018 | |

ಮಂಗಳೂರು: NOTA: ಪ್ರಸಕ್ತ ಚುನಾವಣೆಗಳ ಸಂದರ್ಭದಲ್ಲಿ ಸುದ್ದಿಯಲ್ಲಿದೆ- ಚರ್ಚೆಯಲ್ಲಿದೆ ಈ ನೋಟಾ. ಇದು ಚನಾವಣಾ ಪ್ರಕ್ರಿಯೆಯಲ್ಲಿ ಮತದಾರರಿಗೆ ಲಭ್ಯವಾದ ಅಧಿಕಾರಗಳಲ್ಲೊಂದು. NOTA= None of the above.. ಅಂದರೆ ಕಣದಲ್ಲಿರುವ ಈ
ಯಾವ ಅಭ್ಯರ್ಥಿಯೂ ತನಗೆ ಸಮ್ಮತವಲ್ಲ ಎಂದು ಮತದಾರನು ನೀಡುವ ತೀರ್ಪು.

Advertisement

ನೋಟಾದ ಬಗ್ಗೆ ನಿರಂತರವಾಗಿ ಪರ- ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಲೇ ಇವೆ. ಇದೇ ವೇಳೆ, ಜಗತ್ತಿನ ಕೆಲವು ಪ್ರಜಾ ತಾಂತ್ರಿಕ ದೇಶಗಳು ಈ ನೋಟಾದ ಆಯ್ಕೆಯನ್ನು ಮತದಾರನಿಗೆ ನೀಡಲು ಮುಂದಾಗಿವೆ. ನೋಟಾ ಚಲಾವಣೆ ಮತದಾನದ ಪ್ರಕ್ರಿಯೆಗಳಲ್ಲೊಂದೆಂಬಂತೆ ಭಾರತೀಯ ಚುನಾವಣೆಗಳಲ್ಲಿ ಈಗ ಅಂತರ್ಗತವಾಗಿದೆ.

ಎಲೆಕ್ಟ್ರಾನಿಕ್‌ ಮತ ಪೆಟ್ಟಿಗೆಗಳಲ್ಲಿ ನೋಟಾ ಈಗ ಸೂಚಕ ಚಿಹ್ನೆಯ ಬಟನ್‌ ಜತೆಗೆ ಸ್ಥಾನವನ್ನು ಪಡೆದಿದೆ. ಭಾರತದ ಸರ್ವೋಚ್ಚ ನ್ಯಾಯಾಲಯ ಈ ಬಗ್ಗೆ ಸ್ಪಷ್ಟವಾದ ತೀರ್ಪನ್ನು ಕೂಡ ನೀಡಿದೆ. ಸ್ಪರ್ಧಾಕಣದಲ್ಲಿರುವ ಅಭ್ಯರ್ಥಿಗಳನ್ನು ನಿರಾಕರಿಸುವ ಹಕ್ಕು ಮತದಾರರಿಗಿದೆ. ರಾಜಕೀಯ ವ್ಯವಸ್ಥೆಯನ್ನು ಶುದ್ಧೀಕರಣಗೊಳಿಸಲು ಇದು ಸಾಧನವಾಗಬಹುದು ಎಂದು ತೀರ್ಪಿನಲ್ಲಿ ಅಭಿಪ್ರಾಯಪಡಲಾಗಿತ್ತು.

ನೋಟಾ ಅಧಿಕೃತ ಸ್ವರೂಪ ಪಡೆಯುವ ಮೊದಲು ಪ್ರತ್ಯೇಕವಾಗಿ ಋಣಾತ್ಮಕ ಅಭಿಪ್ರಾಯಗಳನ್ನು ಪ್ರತ್ಯೇಕ ಪತ್ರದಲ್ಲಿ ದಾಖಲಿಸುವ ಅವಕಾಶ ಮತದಾರರಿಗೆ ಇತ್ತು. ಕಳೆದ ವರ್ಷ ದೇಶದ ಐದು ವಿಧಾನಸಭಾ ಚುನಾವಣೆಗಳಲ್ಲಿ ನೋಟಾ ವ್ಯಾಪಕ ಪ್ರಚಾರ ಪಡೆದಿತ್ತು. 15 ಲಕ್ಷ ಮಂದಿ ನೋಟಾ ದಾಖಲಿಸಿದ್ದರು. ಒಟ್ಟು ಮತದಾನದಲ್ಲಿದು ಕೇವಲ ಶೇ. 1.5ರಷ್ಟಿತ್ತು. ನೋಟಾವನ್ನು ಎಗೈನ್ಗ್ಟ್ ಆಲ್‌ ಅಥವಾ ಸ್ಕ್ರಾಚ್‌ ಎಂದು ಕೂಡ ವ್ಯಾಖ್ಯಾನಿಸಲಾಗಿದೆ.

ಜಗತ್ತಿನ ಕೆಲವು ರಾಷ್ಟ್ರಗಳು ನಿರ್ದಿಷ್ಟ ಚುನಾವಣೆಯಲ್ಲಿ ನೋಟಾದ ಸಂಖ್ಯೆಯೇ ಅಧಿಕವಾದರೆ ಯಾವ ಕ್ರಮ ಕೈಗೊಳ್ಳಬೇಕು ಎಂಬ ಜಿಜ್ಞಾಸೆ ನಡೆಸುತ್ತಿವೆ. ಚಲಾಯಿತ ಮತಗಳಲ್ಲಿ ಶೇ. 50ಕ್ಕಿಂತ ಹೆಚ್ಚು ನೋಟಾ ಆಗಿದ್ದರೆ, ಆ ಚುನಾವಣೆ ರದ್ದಾಗಿ ಮರು ಚುನಾವಣೆ ನಡೆಸಬೇಕೇ ಎಂಬ ಅಭಿಪ್ರಾಯವೂ ಇತ್ತು. ಮರು ಚುನಾವಣೆಯಲ್ಲೂ ನೋಟಾ ಅಧಿಕವಾಗಿದ್ದರೆ, ಗರಿಷ್ಠ ಮತ ಪಡೆದಿರುವ ಅಭ್ಯರ್ಥಿಯನ್ನು ಆ ಸಂದರ್ಭದಲ್ಲಿ ವಿಜಯಿ ಎಂದು ಘೋಷಿಸಬೇಕೆಂಬುದು ಆ ಜಿಜ್ಞಾಸೆಯ ಸಾರಾಂಶವಾಗಿತ್ತು.

Advertisement

ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ತಮ್ಮ ನೆಚ್ಚಿನ ಪಕ್ಷದ ಅಭ್ಯರ್ಥಿ ಅಥವಾ ನೆಚ್ಚಿನ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಮೂಲಭೂತ ಹಕ್ಕು. ಅಂತೆಯೇ ಆಯ್ಕೆ ಮಾಡದೇ ಇರುವುದು ಕೂಡ ಈ ನೋಟಾದ ಪರಿಕಲ್ಪನೆಯ ಹಿಂದಿದೆ. ಮುಂದಿನ ಚುನಾವಣೆಗಳಲ್ಲಿ ನೋಟಾ ಅಭಿಯಾನದ ಸ್ವರೂಪ ಪಡೆದುಕೊಳ್ಳುತ್ತದೆ ಎಂಬ ಸೂಚನೆ ಈ ಬಾರಿಯ ಚುನಾವಣಾ ಪೂರ್ವದಲ್ಲಿ ದೊರೆತಿದೆ.

ಅಂದಹಾಗೆ
ಈ ಬಾರಿಯ (ಮೇ 12) ಚುನಾವಣೆಯಲ್ಲಿ ನೋಟಾಕ್ಕೆ ಸಂಬಂಧಿಸಿ ಸ್ಪಷ್ಟವಾದ ಮಾಹಿತಿಯನ್ನು ಚುನಾವಣಾ ಆಯೋಗ ನೀಡಿದೆ. ಅದರ ಪ್ರಕಾರ: ಅಭ್ಯರ್ಥಿಗಳಿಗೆ ದೊರೆತ ಮತಗಳಿಗಿಂತಲೂ ನೋಟಾ ಮತ ಸಂಖ್ಯೆ ಹೆಚ್ಚಿದ್ದ ಸಂದರ್ಭದಲ್ಲಿ, ಮತ್ತೊಮ್ಮೆ ಮತದಾನಕ್ಕೆ ಅವಕಾಶ ನೀಡುವುದಿಲ್ಲ. ಬದಲಿಗೆ, ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ಅತೀ ಹೆಚ್ಚು ಮತ ಗಳಿಸಿದ ಅಭ್ಯರ್ಥಿಯನ್ನು ವಿಜೇತ ಎಂದು ಘೋಷಿಸಲಾಗುವುದು. 

ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next