Advertisement

ಅಹಿಂಸೆಯೇ ಸರ್ವೋತ್ತಮ ಮಾರ್ಗ

08:30 AM Jul 23, 2017 | |

ಬೆಂಗಳೂರು: “ಅನ್ಯಾಯದ ವಿರುದ್ಧ ಹೋರಾಟ ನಡೆಸಲು ಗಾಂಧೀಜಿ ಅನುಸರಿಸಿದ ಅಹಿಂಸೆಯೇ ಉತ್ತಮ ಮಾರ್ಗ’ ಎಂದು ಅಂತಾರಾಷ್ಟ್ರೀಯ ಮಟ್ಟದ ಸಾಮಾಜಿಕ ಹೋರಾಟಗಾರ ಮಾರ್ಟಿನ್‌ ಲೂಥರ್‌ಕಿಂಗ್‌ 3 ಹೇಳಿದ್ದಾರೆ.

Advertisement

ಡಾ.ಬಿ.ಆರ್‌.ಅಂಬೇಡ್ಕರ್‌ ಅಂತಾ ರಾಷ್ಟ್ರೀಯ ಸಮ್ಮೇಳನದ 2ನೇ ದಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಈ ಸಮ್ಮೇಳನದ ಮೂಲಕ ಸಾಮಾಜಿಕ ನ್ಯಾಯದ ಪರ ಹೋರಾಟಗಾರರು ಒಗ್ಗೂಡಲು ವೇದಿಕೆ ಕಲ್ಪಿಸಿಕೊಡಲಾಗಿದೆ. ಈ ಎಲ್ಲಾ ಹೋರಾಟಗಾರರು ಒಗ್ಗಟ್ಟಾಗಿ ಹೋರಾಡಿದರೆ ಸಾಮಾಜಿಕ ನ್ಯಾಯ ಒದಗಿಸಿಕೊಡಬಹುದು. ಇದಕ್ಕೆ ಅಹಿಂಸೆಯೇ ಸರ್ವೋತ್ತಮ ಮಾರ್ಗ’ ಎಂದು ಹೇಳಿದರು.

“ಸಾಮಾಜಿಕ ನ್ಯಾಯದ ಪರ ಹೋರಾಟಗಾರರು ಈ ಸಮ್ಮೇಳನದ ಮೂಲಕ ಒಂದಾಗಿದ್ದೇವೆ. ನಾವು
ವಿದೇಶದಿಂದ ಬಂದವರು. ನಮ್ಮ ಮಾತಿನಿಂದ ಈ ದೇಶದ ನೀತಿಗಳು ಬದಲಾಗುವುದಿಲ್ಲ. ಇದನ್ನು ಭಾರತೀಯರೇ ಮುಂದೆ ನಿಂತು ಮಾಡಬೇಕು. ನಾವು ಕೇವಲ ಬೆಂಬಲವಾಗಿ ನಿಲ್ಲಬಹುದಷ್ಟೇ’ ಎಂದು ಅಭಿಪ್ರಾಯಪಟ್ಟರು.

“ನನ್ನ ತಂದೆ ಹೇಳಿದಂತೆ ವಿಶ್ವದ ಯಾವುದೇ ಭಾಗದಲ್ಲಿ ಅನ್ಯಾಯವಾದರೆ ಅದು ನ್ಯಾಯಕ್ಕೆ ವಿಶ್ವದೆಲ್ಲೆಡೆ
ಅನ್ಯಾಯವಾದಂತೆ. ಸಾಮಾಜಿಕ ನ್ಯಾಯದಂತಹ ಬದಲಾವಣೆ ಹೋರಾಟಕ್ಕೆ ಒಂದು ಗುಂಪು ಸಾಕು. ನನ್ನ ತಂದೆಯ
ಹೋರಾಟದಲ್ಲೂ ಸಂಖ್ಯೆ ಕಡಿಮೆಯಿತ್ತು.

ಅಹಿಂಸೆ ಎಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ತನ್ನಿಂದ ತಾನೇ ನೀಡುತ್ತದೆ. 2011ರ ಸೆಪ್ಟೆಂಬರ್‌ನಲ್ಲಿ ಉಗ್ರರ ದಾಳಿ ನಡೆದಾಗ, ಅಮೆರಿಕ ಶತಕೋಟಿ ಖರ್ಚು ಮಾಡಿ ಪ್ರತಿ ದಾಳಿ ಮಾಡಿತು. ಆದರೆ ಉಗ್ರರ ದಾಳಿಗೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿಲ್ಲ. ಎಲ್ಲ ದೇಶದ ಸಂಸ್ಕೃತಿ ಬೇರೆ ಬೇರೆಯದ್ದಾಗಿದ್ದು, ಒಬ್ಬರನ್ನೊಬ್ಬರು ಗೌರವ ಕೊಟ್ಟು ಬದುಕಲು ಕಲಿಯಬೇಕು’ ಎಂದು ಮಾರ್ಟಿನ್‌ ಲೂಥರ್‌ ಕಿಂಗ್‌ ಅಭಿಪ್ರಾಯಪಟ್ಟರು.

Advertisement

“ಅಮೆರಿಕದಲ್ಲಿಯೂ ಶೋಷಣೆ ನಡೆಯುತ್ತಲೇ ಇದೆ. ಕರಿಯರ ಮೇಲೆ ಬಿಳಿಯರು ಶೋಷಣೆ ನಡೆಸುತ್ತಲೇ ಇದ್ದಾರೆ. ಅಲ್ಲಿ ಒಗ್ಗಟ್ಟಿನ ಹೋರಾಟದ ಮೂಲಕ ಶೋಷಣೆ ಮುಕ್ತರಾಗಿದ್ದೇವೆ. ಅಮೆರಿಕದಲ್ಲಿ ಕಳೆದ ಚುನಾವಣೆಯಲ್ಲಿ ಹೆಚ್ಚಿನ ಮತದಾರರು ಮತದಾನ ಮಾಡಿದ್ದರೆ ಡೊನಾಲ್ಡ್‌ ಟ್ರಂಪ್‌ ಗೆಲ್ಲುತ್ತಲೇ ಇರಲಿಲ್ಲ. ಆದರೆ ಭಾರತದ ಪರಿಸ್ಥಿತಿ ಹಾಗಲ್ಲ. ಇಲ್ಲಿ ಕೆಳ ವರ್ಗದ ಜನರ ಸಂಖ್ಯೆ ಹೆಚ್ಚಿದೆ. ಸರ್ಕಾರವೂ ಕೆಳ ವರ್ಗದ ಪರವಾಗಿ ಸೂಕ್ತ ಕಾನೂನು, ನಿಯಮ ರೂಪಿಸಿದರೆ, ನ್ಯಾಯ ದೊರಕುತ್ತದೆ’ ಎಂದು ಹೇಳಿದರು.

ನಾಯಕರ ಸ್ವಾರ್ಥದಿಂದ ದಲಿತ ಚಳವಳಿ ಒಡೆಯಿತು
ಬೆಂಗಳೂರು:
ಬಿ.ಆರ್‌. ಅಂಬೇಡ್ಕರ್‌ ಅವರ ಆಶಯಗಳನ್ನು ಕಾರ್ಯರೂಪಕ್ಕೆ ತರಲು ಹುಟ್ಟಿಕೊಂಡ ದಲಿತ ಚಳವಳಿ
ವಿಘಟನೆಗೆ ಸಿದಾಟಛಿಂತ ಅಲ್ಲ, ನಾಯಕರ ಸ್ವಾರ್ಥ ಕಾರಣ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ಅಭಿಪ್ರಾಯಪಟ್ಟಿದ್ದಾರೆ.

ಡಾ. ಬಿ.ಆರ್‌. ಅಂಬೇಡ್ಕರ್‌ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಶನಿವಾರ ಬೆಂಗಳೂರು ಕೃಷಿ ವಿವಿ ಆವರಣದ
ಬಿ-5 ವೇದಿಕೆಯಲ್ಲಿ ಆಯೋಜಿಸಿದ್ದ “ಅಂಬೇಡ್ಕರ್‌ ವಾದ ಮತ್ತು ಕರ್ನಾಟಕದಲ್ಲಿ ದಲಿತ ಚಳವಳಿ ಯಶೋಗಾಥೆ’ ಗೋಷ್ಠಿಯಲ್ಲಿ ವಿಷಯ ಮಂಡಿಸಿದ ಅವರು, ದಲಿತ ಸಂಘಟನೆಗಳ ನಾಯಕರ ಸ್ವಾರ್ಥ ಮತ್ತು ವೈಯಕ್ತಿಕ ವಿಚಾರಗಳ ಕಾರಣಕ್ಕಾಗಿ ದಲಿತ ಚಳವಳಿ ಒಡೆದು ಹೋಯಿತು ಎಂದರು.

ದಲಿತ ಮುಖಂಡ ಎನ್‌. ಮುನಿಸ್ವಾಮಿ ಮಾತನಾಡಿ, ಅಂಬೇಡ್ಕರ್‌ ವಾದವನ್ನು ಮುನ್ನಡೆಸುತ್ತಿರುವವರನ್ನು ಇಂದು
ಮನುವಾದ ನಿಯಂತ್ರಿಸುತ್ತಿದೆ. ಅಂಬೇಡ್ಕರ ವಾದಿಗಳಿಗೆ ಮನುವಾದ ಅರ್ಥ ಮಾಡಿಕೊಳ್ಳಲು ಈಗಲೂ ಆಗಿಲ್ಲ.
ಮನುವಾದ ಅರ್ಥ ಮಾಡಿಕೊಳ್ಳದೇ ಅಂಬೇಡ್ಕರವಾದ ಕಾರ್ಯರೂಪಕ್ಕೆ ತರುವುದು ಕಷ್ಟ ಎಂದರು.

ದಸಂಸ (ಸಮತವಾದ) ರಾಜ್ಯ ಸಂಚಾಲಕ ಮೋಹನ್‌ ರಾಜ್‌ ಮಾತನಾಡಿ, ಎಪ್ಪತ್ತರ ದಶಕದ ನಂತರ ಅಂಬೇಡ್ಕರ್‌
ಆಶಯಗಳನ್ನು ಅಂತರಾಳದಲ್ಲಿ ಇಟ್ಟುಕೊಳ್ಳಲು ದಲಿತ ಚಳವಳಿ ಸೋತು ಹೋಗಿದೆ ಎಂದರು. ಗೋಷ್ಠಿಯಲ್ಲಿ ದಲಿತ
ಮುಖಂಡರಾದ ಮಾವಳ್ಳಿ ಶಂಕರ್‌, ಡಿ.ಜಿ. ಸಾಗರ್‌, ಇಂದಿರಾ ಕೃಷ್ಣಪ್ಪ, ಎನ್‌. ಮೂರ್ತಿ ಮತ್ತಿತರರು ವಿಷಯ ಮಂಡಿಸಿದರು.ಗುರುಪ್ರಸಾದ್‌ ಕೆರಗೋಡು ಅಧ್ಯಕ್ಷತೆ ವಹಿಸಿದ್ದರು.

ಭಾರತ ವಿಚಿತ್ರ ಸನ್ನಿವೇಶದಲ್ಲಿದ್ದು, ಅಂಬಾನಿ ಮತ್ತು ದೇಶದ ಬಡ ರೈತ ಇಬ್ಬರನ್ನೂ ಒಂದೇ ತಕ್ಕಡಿಯಲ್ಲಿಟ್ಟು ಆರ್ಥಿಕತೆ ಅಳೆಯಲಾಗುತ್ತಿದೆ. 
– ಶ್ರೀರಾಮರೆಡ್ಡಿ, ಸಿಪಿಐ ನಾಯಕ

ರಾಜ್ಯದಲ್ಲಿ ಕನ್ನಡ ಮಾಧ್ಯಮವನ್ನು ಕಡ್ಡಾಯ ಮಾಡಿದಾಗ ಸುಪ್ರೀಂಕೋರ್ಟ್‌ ಅದನ್ನು ತಳ್ಳಿ ಹಾಕಿತು. ಅದೇ ರೀತಿ ಗ್ರಾಮೀಣ ಕೃಪಾಂಕವನ್ನೂ ತೆಗೆದು ಹಾಕಿ ಎಲ್ಲರೂ ಸಮಾನರು ಎಂದು ಹೇಳಿತು. ಆದರೆ, ಸಾಮಾಜಿಕ ನ್ಯಾಯ ಬರಬೇಕಾದರೆ, ಹಳ್ಳಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಬಡ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕಾಗಿರುವುದು ಸಂಸತ್ತಿನ ಜವಾಬ್ದಾರಿ. ಸಂಸತ್ತು ಆ ಕೆಲಸ ಮಾಡುವ ಬದಲು ಕೋರ್ಟ್‌ಗೆ ಹೆದರಿ ಸುಮ್ಮನಾಗಿದೆ.
– ಬಿ.ಎಲ್‌.ಶಂಕರ್‌,
ಕಾಂಗ್ರೆಸ್‌ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next