Advertisement

ಸರ್ಜರಿ, ಭರ್ಜರಿ ಯಾವುದೂ ಇಲ್ಲ

10:00 PM May 23, 2018 | |

ನಟಿ ಪಾವನ ಈಗಂತೂ ಫ‌ುಲ್‌ ಹ್ಯಾಪಿ ಮೂಡ್‌ನ‌ಲ್ಲಿದ್ದಾರೆ. ಅವರ ಆ ಖುಷಿಗೆ ಕಾರಣ, ಮೊದಲನೆಯದು ಅವರು ಎಂದಿಗಿಂತ ಬದಲಾಗಿರೋದು. ಎರಡನೆಯದು ಈ ವರ್ಷ ಅವರ ಅಭಿನಯದ ಮೂರು ಚಿತ್ರಗಳು ಬಿಡುಗಡೆಯಾಗುತ್ತಿರೋದು. ಒಬ್ಬ ನಟಿಗೆ ಇದಕ್ಕಿಂತ ಖುಷಿಯ ವಿಷಯ ಬೇರೇನಿದೆ ಹೇಳಿ? ಇರಲಿ, ಪಾವನ ಅಭಿನಯದ “ವೆನಿಲ್ಲಾ’ ಮುಂದಿನ ವಾರ ಬಿಡುಗಡೆಯಾಗುತ್ತಿದೆ. “ಮೈಸೂರು ಡೈರೀಸ್‌’ ಚಿತ್ರ ಕೂಡ ಪೂರ್ಣಗೊಂಡಿದೆ.

Advertisement

“ಪ್ರಭುತ್ವ’ ಹಾಡುಗಳನ್ನು ಚಿತ್ರೀಕರಿಸಿದರೆ ಅದೂ ಸಹ ಮುಗಿಯಲಿದೆ. ಅಲ್ಲಿಗೆ ಈ ವರ್ಷ ಈ ಮೂರು ಚಿತ್ರಗಳು ಪ್ರೇಕ್ಷಕರ ಎದುರು ಬರಲಿವೆ. ಈ ಕುರಿತು ಖುಷಿಯಿಂದಲೇ ಹೇಳಿಕೊಳ್ಳುವ ಪಾವನ, “ನಾನು ಇಂಡಸ್ಟ್ರಿಗೆ ಬಂದು ಐದು ವರ್ಷಗಳಾಗಿವೆ. ಈ ಐದು ವರ್ಷಗಳಲ್ಲಿ 10 ಚಿತ್ರಗಳಲ್ಲಿ ನಟಿಸಿದ್ದೇನೆ. “ಗೊಂಬೆಗಳ ಲವ್‌’ ನನಗೊಂದು ಬದುಕು ಕಲ್ಪಿಸಿಕೊಟ್ಟ ಚಿತ್ರ. ಹಾಗಂತ, ಆ ನಂತರ ಬಂದ ಚಿತ್ರಗಳ್ಯಾವೂ ಅಷ್ಟರ ಮಟ್ಟಿಗೆ ಪವಾಡ ಎನಿಸಲಿಲ್ಲ.

ಆದರೆ, ಎಲ್ಲಾ ಚಿತ್ರಗಳೂ ಚೆನ್ನಾಗಿದ್ದವು. ಜನರು ಅಷ್ಟಾಗಿ ಒಪ್ಪಲಿಲ್ಲವಷ್ಟೇ. ಚಿತ್ರರಂಗದಲ್ಲಿ ಸಕ್ಸಸ್‌ ಮತ್ತು ಫೇಲ್ಯೂರ್‌ ಸಾಮಾನ್ಯ. ನನಗೆ ಗೆಲುವು, ಸೋಲು ಮುಖ್ಯವಲ್ಲ. ಆದರೆ, ಸಿಕ್ಕ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕೆಂಬ ಉದ್ದೇಶವಿದೆ. ಈಗ “ವೆನಿಲ್ಲಾ’ ತೆರೆಗೆ ಬರಲು ಸಜ್ಜಾಗಿದೆ. ಆ ಚಿತ್ರದಲ್ಲಿ ನನ್ನದು ಕ್ರಿಶ್ಚಿಯನ್‌ ಹುಡುಗಿ ಪಾತ್ರ. ಅಲ್ಲೊಂದು ಸಸ್ಪೆನ್ಸ್‌ ಇದೆ. ಅದನ್ನು ಸಿನಿಮಾದಲ್ಲೇ ನೋಡಬೇಕು.

ಇನ್ನು, “ಮೈಸೂರು ಡೈರೀಸ್‌’ ಚಿತ್ರದಲ್ಲಿ ಎನ್‌ಆರ್‌ಐ ಪಾತ್ರ. ಆಕೆ ಮೈಸೂರು ಸಿಟಿಗೆ ಬಂದಾಗ, ಏನೆಲ್ಲಾ ಬದಲಾವಣೆಗಳಾಗುತ್ತವೆ ಅನ್ನೋದು ಕಥೆ. ಆ ಚಿತ್ರದ ವಿಶೇಷವೆಂದರೆ, ಆ ಸುಂದರ ನಗರದ ಸಂಸ್ಕೃತಿ, ಸ್ನೇಹ, ಸಂಬಂಧ, ಬಾಂಧವ್ಯವನ್ನು ತೋರಿಸಲಾಗಿದೆ. ಅಷ್ಟೇ ಅಲ್ಲ, ಅದು ಪಕ್ಕಾ ಮೈಸೂರು ಬದುಕಿನ ಕತೆ. ಅದರಲ್ಲಿ ನನ್ನದು ಒಂಥರಾ ಪೊಸೆಸಿವ್‌ ಲವ್ವರ್‌ ಆಗಿರುವಂತಹ ಪಾತ್ರವಿದೆ. “ಪ್ರಭುತ್ವ’ ಚಿತ್ರದಲ್ಲಿ ಎನರ್ಜಿಯಾಗಿರುವಂತಹ ಹುಡುಗಿ ಪಾತ್ರವಿದೆ.

ಅಲ್ಲಿ ನಾಯಕಿಗೂ ಹೆಚ್ಚು ಜಾಗ ಕಲ್ಪಿಸಲಾಗಿದೆ. ಅದು ಬೇರೆ ತರಹದ ಚಿತ್ರವಾಗಿ ಮೂಡಿಬರುತ್ತಿದೆ’ ಎಂದು ವಿವರ ಕೊಡುತ್ತಾರೆ ಪಾವನ. ಎಲ್ಲಾ ಸರಿ, ಪಾವನ ಮುಖದಲ್ಲೇನೋ ಹೊಸ ಬದಲಾವಣೆ ಕಾಣುತ್ತಿದೆಯಲ್ಲಾ? ಈ ಪ್ರಶ್ನೆಗೆ, ಜೋರು ನಗೆ ಬೀರುವ ಪಾವನ, “ಎಂಥದ್ದೂ ಇಲ್ಲ, ನಾನು ಈಗ ಬೆಳೆಯುತ್ತಿದ್ದೇನೆ ಅನಿಸುತ್ತಿದೆ. ಅದಕ್ಕೆ ಆ ಬದಲಾವಣೆ ಕಾಣುತ್ತಿದೆ. ನನಗೆ ನಿಂತು ನೀರಾಗಲು ಇಷ್ಟವಿಲ್ಲ. ಸದಾ ಹರಿಯುವ ನದಿಯಂತಿರಬೇಕು. ಪ್ರತಿ ಚಿತ್ರದಲ್ಲೂ ಹೊಸತನ್ನು ಬಯಸುತ್ತೇನೆ.

Advertisement

ತಾಂತ್ರಿಕವಾಗಿಯೂ ಪಕ್ವಗೊಳ್ಳುವ ಮೂಲಕ ಸಾಕಷ್ಟು ಕಲಿಯುತ್ತಲೇ ಇಲ್ಲಿ ಗಟ್ಟಿ ಜಾಗ ಮಾಡಿಕೊಳ್ಳುವ ಬಯಕೆ ಹೊಂದಿದ್ದೇನೆ’ ಎಂದು ಉತ್ತರಿಸುವ ಪಾವನಗೆ ಸೌಂದರ್ಯ ಹೆಚ್ಚಿಸಿಕೊಳ್ಳಲು, ಸರ್ಜರಿಯೇನಾದರೂ ಮಾಡಿಸಿಕೊಂಡಿದ್ದೀರೋ? ಎಂಬ ಪ್ರಶ್ನೆ ಮುಂದಿಟ್ಟರೆ, ಮತ್ತದೇ ನಗು. “ಅಂತಹ ಸರ್ಜರಿ, ಭರ್ಜರಿ ಯಾವುದೂ ಇಲ್ಲ ಎಂದು ಮಾತು ಮರೆಸುತ್ತಲೇ, ಜೂನ್‌ 10 ರಂದು ಹೊಸದೊಂದು ಸಿನಿಮಾ ಶುರುವಾಗಲಿದೆ. ದೇವ್‌ ಎಂಬುವವರು ನಿರ್ದೇಶಿಸಿ, ನಿರ್ಮಿಸುತ್ತಿರುವ ಚಿತ್ರವದು. ಅದು ನಾಯಕಿ ಪ್ರಧಾನ ಚಿತ್ರ’ ಎಂದಷ್ಟೇ ಹೇಳಿ ಸುಮ್ಮನಾಗುತ್ತಾರೆ ಪಾವನ.

Advertisement

Udayavani is now on Telegram. Click here to join our channel and stay updated with the latest news.

Next