Advertisement
ಒಂದೆಡೆ, ರಾಜಕೀಯವಾಗಿ ವಿರೋಧಿಗಳಾಗಿ ವಿಧಾನಸಭೆ ಚುನಾವಣೆಯಲ್ಲಿ ಪರಸ್ಪರ ಮಾತಿನ ಸಮರ ಸಾರಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದಾದರೆ, ಮತ್ತೂಂದೆಡೆ, ಹಿಂದೆ ಆತ್ಮೀಯರಾಗಿ ನಂತರ ದೂರವಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಜಮೀರ್ ಅಹಮದ್ ಒಂದುಗೂಡಿದ್ದಾರೆ.
Related Articles
Advertisement
ಎರಡು ದಿನಗಳ ಹಿಂದೆ ಈಗಲ್ಟನ್ ರೆಸಾರ್ಟ್ನಲ್ಲಿ ಎಂಟು ತಿಂಗಳ ನಂತರ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಎಚ್.ಡಿ.ಕುಮಾರಸ್ವಾಮಿ -ಜಮೀರ್ ಅಹಮದ್ ಉಭಯ ಕುಶಲೋಪರಿ ನಡೆಸಿದರು. ಇದು ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ.
ಕಾಂಗ್ರೆಸ್ ಶಾಸಕರು ತಂಗಿದ್ದ ರೆಸಾರ್ಟ್ಗೆ ಕುಮಾರಸ್ವಾಮಿ ತೆರಳಿದ ವೇಳೆ ಕಾಂಗ್ರೆಸ್ನ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಜಮೀರ್ ಅಹಮದ್ ಅವರನ್ನು ಭೇಟಿಯಾದ ಕುಮಾರಸ್ವಾಮಿ ಸ್ವಲ್ಪ ಹೊತ್ತು ಮಾತುಕತೆ ನಡೆಸಿದರು. ಸರ್ಕಾರ ರಚನೆಯ ಕಾರ್ಯತಂತ್ರಗಳ ಬಗ್ಗೆಯೂ ಚರ್ಚಿಸಿದರು.
ನಂತರ ಗುರುವಾರ ವಿಧಾನಸೌಧದ ಎದುರು ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕೂಡ ಅಲ್ಲಿ ಆಗಮಿಸಿದ್ದರು. ಕಾಂಗ್ರೆಸ್ ಶಾಸಕರು ಮತ್ತು ಮುಖಂಡರೊಂದಿಗೆ ದೇವೇಗೌಡರು ಚರ್ಚಿಸುತ್ತಿದ್ದ ವೇಳೆ ಜಮೀರ್ ಅಹಮದ್ ಪಕ್ಕದಲ್ಲೇ ನಿಂತಿದ್ದರು.
ಜಮೀರ್ ಹೆಗಲ ಮೇಲೆ ಕೈ ಇಟ್ಟು ದೇವೇಗೌಡರು ಮಾತನಾಡುತ್ತಿದ್ದರು. ನಂತರ ಜಮೀರ್ ಭುಜ ತಟ್ಟಿದ ದೇವೇಗೌಡರು ಅಲ್ಲಿಂದ ಮುಂದೆ ಸಾಗಿದರು. ಇನ್ನು ಧರಣಿ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಚ್.ಡಿ.ದೇವೇಗೌಡ ಸಹ ಪರಸ್ಪರ ಚರ್ಚಿಸುತ್ತಾ ಒಟ್ಟಿಗೆ ಕುಳಿತು ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣರಾದರು.