Advertisement

ಟಿಪ್ಪು ಜಯಂತಿ ಆಮಂತ್ರಣದಲ್ಲಿಹೆಸರು ಬೇಡ

08:55 AM Oct 21, 2017 | Team Udayavani |

ಬೆಂಗಳೂರು: ಟಿಪ್ಪು ಜಯಂತಿ ಆಚರಣೆ ವಿವಾದ ಸ್ವರೂಪ ಪಡೆದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಆಯೋಜಿಸಿರುವ ಟಿಪ್ಪು ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಮುದ್ರಿಸದಂತೆ ಕೇಂದ್ರ ಸಚಿವ ಅನಂತ ಕುಮಾರ್‌ ಹೆಗಡೆ ರಾಜ್ಯ ಸರ್ಕಾರಕ್ಕೆ ಪತ್ರ 
ಬರೆದಿದ್ದಾರೆ.

Advertisement

ಟಿಪ್ಪು ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಕಾಂಗ್ರೆಸ್‌ ಸರ್ಕಾರ ಆಚರಿಸಲು ಆದೇಶ ನೀಡಿದ ವರ್ಷದಿಂದ ಸಂಘಪರಿವಾರ ಹಾಗೂ ಬಿಜೆಪಿಯವರು ಅಧಿಕೃತವಾಗಿ ವಿರೋಧಿಸುತ್ತಲೇ ಬಂದಿರುವ ಹಿನ್ನೆಲೆಯಲ್ಲಿ ಅನಂತ ಕುಮಾರ್‌ ಹೆಗಡೆ ಈ ನಿಲುವು ತಾಳಿದ್ದಾರೆ. ಈ ಕುರಿತು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ನ.10ರಂದು ಸರ್ಕಾರದಿಂದ ನಡೆಸಲಾಗುತ್ತಿರುವ ಟಿಪ್ಪು ಜಯಂತಿಯ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರು ಮುದ್ರಿಸುವುದು ಬೇಡ ಎಂದು ಹೇಳಿದ್ದಾರೆ. ಟಿಪ್ಪು ಕನ್ನಡ ಹಾಗೂ ಹಿಂದೂ ವಿರೋಧಿ ಯಾಗಿದ್ದ ಎಂಬುದು ಇತಿಹಾಸದಿಂದ ತಿಳಿಯುತ್ತದೆ. ಕಳೆದ ವರ್ಷ ಟಿಪ್ಪು ಜಯಂತಿ ಆಚರಣೆ ವೇಳೆ ವಿರೋಧ ವ್ಯಕ್ತವಾಗಿತ್ತು. ಕೊಡಗಿನಲ್ಲೂ ಹಿಂಸಾಚಾರಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತ ಅಥವಾ ರಾಜ್ಯ ಸರ್ಕಾರ ತಮ್ಮ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಬಾರದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಸಚಿವರು ಪತ್ರ ಬರೆದಿದ್ದಾರೆ ಎಂದು ಅವರ ಆಪ್ತ ಕಾರ್ಯದರ್ಶಿ ಸುರೇಶ ಶೆಟ್ಟಿ ತಿಳಿಸಿದ್ದಾರೆ. ಬಿಜೆಪಿಯ ಹಲವು ಸಂಸದರು ಹಾಗೂ ಶಾಸಕರು ಕೂಡ ಜಿಲ್ಲಾಡಳಿತಕ್ಕೆ ಇದೇ ಮಾದರಿಯಲ್ಲಿ ಪತ್ರ ಬರೆಯವ ಸಾಧ್ಯತೆಯಿದೆ ಎಂನ್ನಲಾಗಿದೆ.

ರಾಜ್ಯಮಟ್ಟದ ಸಮಾವೇಶ
ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯಿಂದ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಅ.23ರ ಬೆಳಗ್ಗೆ 10.30ರಿಂದ ಮಧ್ಯಾಹ್ನ 1 ಗಂಟೆಯ ತನಕ ಬೆಂಗಳೂರಿನ ಶಿವಾನಂದ ವೃತ್ತದ ಗುರುರಾಜ ಕಲ್ಯಾಣ ಮಂಟಪದಲ್ಲಿ ಸಮಾವೇಶ ನಡೆಯಲಿದೆ. ವಿಶ್ವಹಿಂದು ಪರಿಷತ್‌ನ ಪ್ರಮುಖರಾದ ಗೋಪಾಲ್‌, ಬಿಜೆಪಿಯ ಸಂಸದರಾದ ಪ್ರತಾಪಸಿಂಹ, ಬಿ.ಶ್ರೀರಾಮುಲು, ಮುಖಂಡರಾದ ಡಿ.ಎಸ್‌.ವೀರಯ್ಯ, ರಾಜೂ ಗೌಡ ಹಾಗೂ ಅಡ್ಡಂಡ ಕಾರ್ಯಪ್ಪ ಮೊದಲಾದವರು ಭಾಗವಹಿಸಲಿದ್ದಾರೆ.

29ಕ್ಕೆ ಮೋದಿ ಧರ್ಮಸ್ಥಳಕ್ಕೆ
ಪ್ರಧಾನಿ ನರೇಂದ್ರ ಮೋದಿಯವರು ಅ.29ಕ್ಕೆ ಬೆಂಗಳೂರಿಗೆ ಬರಲಿದ್ದಾರೆ. ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾದ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ಧಾರ್ಮಿಕ ಕಾರ್ಯಕ್ರಮವೊಂದನ್ನು ಪೂರೈಸಿದ ಬಳಿಕ ಬೆಂಗಳೂರಿಗೆ ಬರಲಿದ್ದಾರೆ. ಈ ವೇಳೆ ಅರಮನೆ ಮೈದಾನದಲ್ಲಿ ಬೃಹತ್‌ ಕಾರ್ಯಕ್ರಮ ಆಯೋಜಿಸಲು ರಾಜ್ಯ ಬಿಜೆಪಿ ಚಿಂತನೆ ನಡೆಸುತ್ತಿದೆ. ವೇದಾಂತ ಭಾರತಿ ಸಂಸ್ಥೆ ಆಯೋಜಿಸಿರುವ ದಶ ಮಹಾ ಸೌಂದರ್ಯ ಲಹರಿ ಪಾರಾಯಣ ಉತ್ಸವದ ಮಹಾ ಸಮರ್ಪಣೆ ಕಾರ್ಯಕ್ರಮದಲ್ಲಿ ಮೋದಿಯವರು ಭಾಗವಹಿಸಲಿದ್ದಾರೆ. 

ಶೃಂಗೇರಿ ಸ್ವಾಮೀಜಿಯವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಇದಾದ ನಂತರ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಇಲ್ಲಿಂದ ಬೀದರ್‌ಗೆ ತೆರಳಲಿದ್ದಾರೆ. ಬೀದರ್‌ ಮತ್ತು ಕಲಬುರಗಿ ರೈಲು ಮಾರ್ಗ ಉದ್ಘಾಟಿಸಿ, ಪ್ರಯಾಣ ಮುಂದುವರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ರದ್ದು: ಜೋಶಿ
ಹುಬ್ಬಳ್ಳಿ: “ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ಆಚರಣೆಯನ್ನು ರದ್ದು ಪಡಿಸಲಿದೆ ‘ ಎಂದು ಸಂಸದ
ಪ್ರಹ್ಲಾದ ಜೋಶಿ ತಿಳಿಸಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಟಿಪ್ಪು ಜಯಂತಿಗೆ ನಮ್ಮದು ಯಾವಾಗಲೂ ವಿರೋಧವಿದೆ. ಸರಕಾರ ಹಠಕ್ಕೆ ಬಿದ್ದು ಟಿಪ್ಪು ಜಯಂತಿ ಆಚರಿಸುತ್ತಿದೆ. ಟಿಪ್ಪು ಕನ್ನಡ ಭಾಷೆ, ಸಂಸ್ಕೃತಿ, ಹಿಂದೂ ವಿರೋಧಿಯಾಗಿದ್ದ. ಅಂತಹವರ ಜಯಂತಿಯನ್ನು ಸರಕಾರದಿಂದ ಆಚರಿಸುತ್ತಿರುವುದನ್ನು ನಾವು ಒಪ್ಪಲಾರೆವು. ನಾಡಿಗಾಗಿ ಶ್ರಮಿಸಿದ ಅನೇಕ ಮಹನೀಯರಿದ್ದಾರೆ. ಬೇಕಾದರೆ ಅಂಥವರ ಜಯಂತಿಗಳನ್ನು ಆಚರಿಸಲಿ. ಆದರೆ ಟಿಪ್ಪು ಜಯಂತಿ ಆಚರಣೆಯನ್ನು ಸಹಿಸಲು ಸಾಧ್ಯವಿಲ್ಲ’ ಎಂದರು. 

ಸಿಎಂಗೆ ಕೊನೇ ದೀಪಾವಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಂದಿನ ಬಾರಿ ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಆದರೆ ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಇದು ಅದರ ಕೊನೆಯ ಆಡಳಿತಾವಧಿಯಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next