Advertisement

ಕೆಎಸ್ಸಾರ್ಟಿಸಿ ಚಾಲಕ, ನಿರ್ವಾಹಕರಿಗೆ ರಜೆಯ ಸಜೆ!

10:09 PM Oct 20, 2020 | mahesh |

ಬೆಳ್ತಂಗಡಿ: ನಾಡಿನೆಲ್ಲೆಡೆ ದಸರಾ ಸಂಭ್ರಮ ಮನೆಮಾಡಿದ್ದರೂ ಇತ್ತ ಕೆಎಸ್ಸಾರ್ಟಿಸಿಯ ಹಲವು ಮಂದಿ ಚಾಲಕ, ನಿರ್ವಾಹಕರು ಮಾತ್ರ ಕೆಲಸವೂ ಇಲ್ಲದೆ ವೇತನವೂ ಪಾವತಿಯಾಗದೆ ಸಂಕಷ್ಟ ಎದುರಿಸುತ್ತಿದ್ದಾರೆ.

Advertisement

ದ.ಕ. ಜಿಲ್ಲೆಯ ಪುತ್ತೂರು ವಿಭಾಗದಲ್ಲಿ ಈ ಸಮಸ್ಯೆ ಹೆಚ್ಚು. ಬಂಟ್ವಾಳ, ಪುತ್ತೂರು, ಧರ್ಮಸ್ಥಳ, ಸುಳ್ಯ, ಮಡಿಕೇರಿ ಘಟಕಗಳು ಈ ವಿಭಾಗಕ್ಕೆ ಒಳಪಡುತ್ತವೆ. 1,700ಕ್ಕೂ ಅಧಿಕ ಮಂದಿ ಚಾಲಕ, ನಿರ್ವಾಹಕರಿದ್ದಾರೆ. ಲಾಕ್‌ಡೌನ್‌ಗೆ ಮೊದಲು ಪ್ರತಿದಿನ 550ರಿಂದ 570 ಟ್ರಿಪ್‌ ನಡೆಯುತ್ತಿತ್ತು. ಪ್ರಸಕ್ತ 320-330 ಟ್ರಿಪ್‌ ಮಾಡಲಾಗುತ್ತಿದೆ. ದಸರಾ ಸಮಯದಲ್ಲಿ ಹೆಚ್ಚುವರಿ ಸಂಚಾರಕ್ಕೆ ಅವಕಾಶವಿದ್ದರೂ ಪ್ರಯಾಣಿಕರ ಕೊರತೆಯ ಭೀತಿಯಲ್ಲಿ ಡಿಪೋ ಅಧಿಕಾರಿಗಳು ಹೆಚ್ಚುವರಿ ಬಸ್‌ಗಳನ್ನು ಬಿಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಹಲವು ಚಾಲಕರಿಗೆ ಕೆಲಸ ಇಲ್ಲ ಎಂದಾಗಿದೆ.

ಸಾರಿಗೆ ಇಲಾಖೆಯ ಸಿಬಂದಿಗೆ ಲಾಕ್‌ಡೌನ್‌ ಅವಧಿಯ (ಮೇಯಿಂದ ನವೆಂಬರ್‌ ವರೆಗೆ) ವೇತನ ನೀಡಿ ಸರಕಾರ ಆದೇಶ ಹೊರಡಿಸಿದೆ. ಆದರೆ ರಾಜ್ಯಾದ್ಯಂತ ಬಹುತೇಕ ಕಡೆ ಚಾಲಕ, ನಿರ್ವಾಹಕರು ಹೇಳುವಂತೆ ಕೆಲಸ ನೀಡದೆ ಸಂಬಳವನ್ನೂ ಜಮೆ ಮಾಡದೆ ಮೇಲಧಿಕಾರಿಗಳು ಸತಾಯಿಸುತ್ತಿದ್ದಾರಂತೆ. ಹಿಂದೆ ಪ್ರತಿ ಕಿ.ಮೀ.ಗೆ ಸರಾಸರಿ 36 ರೂ. ಲಾಭ ಬರುತ್ತಿದ್ದಲ್ಲಿ ಪ್ರಸಕ್ತ ಗ್ರಾಮಾಂತರದಲ್ಲಿ 12-14 ರೂ. ಎಕ್ಸ್‌ಪ್ರೆಸ್‌ 22-28 ರೂ. ಬರುತ್ತಿದೆ. ಮತ್ತೂಂದೆಡೆ ಶಾಲೆಗಳು ಆರಂಭವಾಗದೆ ಬಸ್‌ಗಳು ಖಾಲಿ ಸಂಚರಿಸುತ್ತಿವೆ. ಇನ್ನೇನು ದಸರಾ ಆರಂಭಗೊಂಡಿದ್ದರಿಂದ ಹೆಚ್ಚುವರಿ ಬಸ್‌ ಓಡಾಟದಿಂದ ಕೆಲಸ ಸಿಗಬಹುದೆಂಬ ನಿರೀಕ್ಷೆ ಚಾಲಕ ನಿರ್ವಾಹಕರಲ್ಲಿತ್ತು ಆದರೆ ಹಾಗಾಗಿಲ್ಲ.

ರಜೆ ಕಡಿತ
ಒಬ್ಬ ಚಾಲಕ ಅಥವಾ ನಿರ್ವಾಹಕನಿಗೆ ತಿಂಗಳಿಗೆ 8 ದಿನ ತಪ್ಪಿದಲ್ಲಿ 12 ದಿನ ಕೆಲಸ ಸಿಗುತ್ತಿದೆ. ಉಳಿದ ದಿನ ರಜೆ ನೀಡಿ ಖಾತೆಯಲ್ಲಿದ್ದ ಇಎಲ್‌ ಹಾಗೂ ಸಿಎಂಎಲ್‌ಗೆ ಕತ್ತರಿ ಹಾಕಿ ಸಂಬಳ ನೀಡಲಾಗುತ್ತಿದೆ ಎಂಬ ಆರೋಪ ಚಾಲಕ ನಿರ್ವಾಹಕರದ್ದಾಗಿದೆ.

ಇದರಿಂದ ನಿವೃತ್ತಿ ಅಂಚಿನಲ್ಲಿ ರುವವರಿಗೆ ನಗದು ಬೋನಸ್‌ ಗ್ರ್ಯಾಚುವಿಟಿ (ಹಣರೂಪದ ಕೊಡುಗೆ) ಕೈತಪ್ಪಲಿದ್ದು, ಇತ್ತ ಪೂರ್ಣ ಪ್ರಮಾಣದ ಸಂಬಳವೂ ಇಲ್ಲದಂತಾಗಿದೆ. ಬೆಂಗಳೂರು, ಹಾಸನ, ಮೈಸೂರು ಭಾಗಗಳಲ್ಲಿ ಇಂತಹ ಸಮಸ್ಯೆಯಾಗಿಲ್ಲ. ಆದರೆ ಪುತ್ತೂರು ವಿಭಾಗಕ್ಕೆ ಸಂಬಂಧಿಸಿ ಧರ್ಮಸ್ಥಳ ಡಿಪೋದಲ್ಲಿ ಇಂತಹ ದೂರುಗಳು ಚಾಲಕ ನಿರ್ವಾಹಕರಿಂದ ಹೆಚ್ಚಾಗಿ ಕೇಳಿಬರುತ್ತಿವೆ. ಈ ಕುರಿತು ಚಾಲಕ ನಿರ್ವಾಹಕರ ಸಂಘದ ನಿಯೋಗವು ಸರಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

Advertisement

ಪ್ರತಿಭಟನೆ ಹಕ್ಕಿಲ್ಲ
ಮಕ್ಕಳ ಶಿಕ್ಷಣ ಶುಲ್ಕ, ಮನೆಬಾಡಿಗೆ/ ಮನೆ ಸಾಲ, ವಾಹನ ಸಾಲ ಭರಿಸಲು ಹಣವಿಲ್ಲ. ಉಳಿದ ದಿನ ಕೂಲಿ ಕೆಲಸಕ್ಕೆ ತೆರಳಿದರೆ ಸಂಸ್ಥೆಯ ನಿಯಮಕ್ಕೆ ವಿರುದ್ಧವಾಗುತ್ತದೆ. ಪ್ರತಿಭಟನೆಗೆ ಮುಂದಾದರೆ ಕೆಲಸದಿಂದ ವಜಾ ಶಿಕ್ಷೆಯ ಭಯದಲ್ಲಿ ದಿನ ಕಳೆಯುವಂತಾಗಿದೆ.

ಕೆಎಸ್ಸಾರ್ಟಿಸಿ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿ ಹಾಗೂ ಸಿಬಂದಿಗೆ ಪೂರ್ಣ ಹಾಜರಾತಿ ಜತೆಗೆ ವೇತನವೂ ಕೈಸೇರುತ್ತಿದೆ. ಕೆಲಸವಿಲ್ಲದಿದ್ದರೂ ಕಚೇರಿಗೆ ಬಂದು ಸಹಿ ಹಾಕಿ ಪೂರ್ಣ ವೇತನ ಪಡೆಯುತ್ತಿದ್ದಾರೆ. ಆದರೆ ಜೀವದ ಹಂಗು ತೊರೆದು 8ರಿಂದ 14 ತಾಸು ದುಡಿಯುವ ನಮ್ಮನ್ನು ಮಾತ್ರ ಕೇಳುವವರು ಇಲ್ಲದಂತಾಗಿದೆ. ಈ ಬಗ್ಗೆ ಸರಕಾರ ಗಮನ ಹರಿಸಬೇಕು ಎಂದು ಚಾಲಕ, ನಿರ್ವಾಹಕರು ಆಗ್ರಹಿಸುತ್ತಿದ್ದಾರೆ.

ಕ್ರಮ ಕೈಗೊಂಡಿದ್ದೇವೆ
ಶಾಲೆಗಳು ಆರಂಭವಾಗಿಲ್ಲ, ಗ್ರಾಮೀಣ ಭಾಗದಲ್ಲಿ ಬಸ್‌ ಸಂಚರಿಸಿದರೂ ಜನ ಬರುತ್ತಿಲ್ಲ. ಪ್ರಸಕ್ತ ಶೆಡ್ನೂಲ್‌ ಹೆಚ್ಚು ಮಾಡುತ್ತಿದ್ದು, ಸಿಬಂದಿಗೆ ಕೆಲಸ ನೀಡಲಾಗುತ್ತಿದೆ. ಸಮಾನವಾಗಿ ಕೆಲಸ ಹಂಚಲು ಕ್ರಮ ಕೈಗೊಂಡಿದ್ದೇವೆ.
-ಮುರಳೀಧರ್‌ ಆಚಾರ್ಯ, ಸಂಚಾರ ನಿಯಂತ್ರಣಾಧಿಕಾರಿ ಪುತ್ತೂರು ವಿಭಾಗ, ಕೆಎಸ್ಸಾರ್ಟಿಸಿ

ಶೀಘ್ರ ಪರಿಶೀಲನೆ
ಲಾಕ್‌ಡೌನ್‌ ಅವಧಿಯಲ್ಲಿ ಸರಕಾರ ಶೇ.70 ಹಾಗೂ ನಿಗಮದಿಂದ ಶೇ.30 ಭರಿಸಿ ಎಲ್ಲ ಸಿಬಂದಿಗೆ ಪೂರ್ಣ ವೇತನ ನೀಡಲಾಗಿದೆ. ಲಾಕ್‌ಡೌನ್‌ ಬಳಿಕ ಹಂಚಿಕೆಯಲ್ಲಿ ಡ್ನೂಟಿ ನೀಡಲಾಗುತ್ತಿದೆ. ಯಾರಿಗೂ ಬಲತ್ಕಾರವಾಗಿ ಇಎಲ…, ಸಿಎಂಎಲ್‌ ಕಡಿತಗೊಳಿಸಿಲ್ಲ. ಪುತ್ತೂರು ವಿಭಾಗದ ಗೊಂದಲ ಗಮನಕ್ಕೆ ಬಂದಿರಲಿಲ್ಲ. ಈ ಕುರಿತು ಶೀಘ್ರ ಪರಿಶೀಲನೆ ನಡೆಸಲಾಗುವುದು.
-ಶಿವಯೋಗಿ ಸಿ.ಕಳಸದ,  ವ್ಯವಸ್ಥಾಪಕ ನಿರ್ದೇಶಕ,  ಕೆ.ಎಸ್‌.ಆರ್‌.ಟಿ.ಸಿ.

 ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next