Advertisement

ರಸ್ತೆ ಅಗಲೀಕರಣದಲ್ಲಿ ತಾರತಮ್ಯ ಮಾಡಲ್ಲ

08:28 AM Feb 26, 2019 | |

ಚಿತ್ರದುರ್ಗ: ನಗರದ ರಸ್ತೆಗಳನ್ನು ಅಗಲೀಕರಣ ಮಾಡುತ್ತಿದ್ದು, ವರ್ತಕರು ಮತ್ತು ಸಾರ್ವಜನಿಕರು ಹಕಾರ ನೀಡಬೇಕು ಎಂದು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಮನವಿ ಮಾಡಿದರು. ಇಲ್ಲಿನ ಪ್ರವಾಸಿಮಂದಿರದ ಆವರಣದಲ್ಲಿ ಸೋಮವಾರ ನಡೆದ ಅಧಿಕಾರಿಗಳು ಮತ್ತು ರಸ್ತೆಗಾಗಿ ಮನೆ-ಅಂಗಡಿ ಕಳೆದುಕೊಳ್ಳುವವರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಕ್ಷೇತ್ರದ ಅಭಿವೃದ್ಧಿ ಹಾಗೂ ಭವಿಷ್ಯದ ದೃಷ್ಟಿಯಿಂದ ನೂರಾರು ಕೋಟಿ ರೂ.ವೆಚ್ಚದಲ್ಲಿ ರಸ್ತೆ ಅಗಲೀಕರಣ ಮಾಡಲಾಗುತ್ತಿದೆ. ವರ್ತಕರು ನ್ಯಾಯಾಲಯದಿಂದ ತಡೆಯಾಜ್ಞೆ ತರಲು ಪ್ರಯತ್ನಿಸಬಾರದು. ಒಂದು ವೇಳೆ ತಡೆಯಾಜ್ಞೆ ತಂದರೂ ಅದನ್ನು ತೆರವುಗೊಳಿಸಲು ಸರ್ಕಾರ ಸಿದ್ಧವಿದೆ. ನಗರದ ಮಧ್ಯ ಭಾಗದಲ್ಲಿ ಬೆಂಗಳೂರು-ಪೂನಾ ರಸ್ತೆ, ಜಿಲ್ಲಾಸ್ಪತ್ರೆಯಿಂದ ಕೋರ್ಟ-ತಿಪ್ಪಜ್ಜಿ ವೃತ್ತ ಮಾರ್ಗವಾಗಿ ಹಾದು ಹೋಗುವ ತುರುವನೂರು ರಸ್ತೆ, ಐಬಿಯಿಂದ ಕನಕ ವೃತ್ತದವರೆಗಿನ ರಸ್ತೆ ಸೇರಿದಂತೆ ಮತ್ತಿತರ ರಸ್ತೆಗಳ ಅಗಲೀಕರಣಕ್ಕಾಗಿ ರಸ್ತೆಯ ಮಧ್ಯ ಭಾಗದಿಂದ ಎರಡು ಬದಿಗಳಲ್ಲಿ 13.50 ಮತ್ತು 15 ಮೀಟರ್‌ಗಳಷ್ಟು ಗುರುತು ಮಾಡಲಾಗಿದೆ. ಆದರೆ ಮಾನಸಿಕವಾಗಿ 13.50 ಮೀಟರ್‌ ಅಗಲೀಕರಣಕ್ಕೆ ರಸ್ತೆಯ ಆಸುಪಾಸಿನ ವಾಣಿಜ್ಯ ಮಳಿಗೆಗಳು ಮತ್ತು ವಾಸದ ಮನೆಗಳವರು ಸಿದ್ಧರಾಗಬೇಕು. ಎರಡು ಬದಿಗಳಲ್ಲಿ ಅಗತ್ಯವಿರುವಷ್ಟು ಪ್ರಮಾಣದಲ್ಲಿ ವಾಣಿಜ್ಯ ಮಳಿಗೆಗಳು, ವಸತಿ ಕಟ್ಟಡ, ಶಾಲಾ ಕಾಂಪೌಂಡ್‌ ಸೇರಿದಂತೆ ಮತ್ತಿತರ ಕಟ್ಟಡಗಳನ್ನು ಒಡೆಯುವುದು ಅನಿವಾರ್ಯ ಎಂದರು.

ರಸ್ತೆ ಅಗಲೀಕರಣ ಸಂದರ್ಭದಲ್ಲಿ ಯಾವುದೇ ತಾರತಮ್ಯ ಮಾಡುವುದಿಲ್ಲ. ರಸ್ತೆಯ ಎರಡೂ ಬದಿಗಳಲ್ಲಿ ಸಮ ಪ್ರಮಾಣದಲ್ಲಿ ಅಗಲೀಕರಣ ಮಾಡಲಾಗುತ್ತದೆ. ಕಟ್ಟಡಗಳ ಮಾಲೀಕರು ತಾವೇ ಕಟ್ಟಡಗಳನ್ನು ಒಡೆದುಕೊಳ್ಳುವುದು ಉತ್ತಮ. ನಗರಸಭೆಯವರೇ ಕಟ್ಟಡ ಒಡೆದರೆ ಬೇಕಾಬಿಟ್ಟಿಯಾಗಿ ಒಡೆಯುವುದರಿಂದ ಉಳಿದ ಕಟ್ಟಡಕ್ಕೂ ಹಾನಿ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಎರಡು ಮೂರು ತಿಂಗಳೊಳಗೆ ಕಟ್ಟಡಗಳನ್ನು ಒಡೆದುಕೊಳ್ಳಿ. ರಸ್ತೆ ಅಗಲೀಕರಣಕ್ಕೆ ಕಟ್ಟಡಗಳನ್ನು ಅಗತ್ಯವಿರುವಷ್ಟು ಪ್ರಮಾಣದಲ್ಲಿ ಒಡೆಯಲಾಗುತ್ತದೆ.ಯಾವುದೇ ವದಂತಿಗಳಿಗೆ ಕಿವಿಗೊಡದೆ ನಗರದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಕೋರಿದರು.

ಚಳ್ಳಕೆರೆ ಟೋಲ್‌ ಗೇಟ್‌ ನಿಂದ ಪ್ರವಾಸಿಮಂದಿರದವರೆಗೆ 19 ಕೋಟಿ ರೂ.ಗಳಲ್ಲಿ ರಸ್ತೆ ಅಗಲೀಕರಣ ಮಾಡಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಜಿಲ್ಲಾಸ್ಪತ್ರೆಯಿಂದ ಆರ್‌ಟಿಒ ಕಚೇರಿ ತನಕ 5 ಕೋಟಿ, ಆರ್‌ಟಿಒ ಕಚೇರಿಯಿಂದ ತಾಲೂಕಿನ ಕಡಬನಕಟ್ಟೆ ತನಕ ತುರುವನೂರು ರಸ್ತೆಯನ್ನು 35 ಕೋಟಿ ರೂ.ಗಳಲ್ಲಿ ದ್ವಿಪಥವನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತದೆ. ಐಬಿ ಯಿಂದ ಕನಕ ವೃತ್ತದವರೆಗೆ 5 ಕೋಟಿ ರೂ.ಗಳಲ್ಲಿ ರಸ್ತೆ ಸುಧಾರಣಾ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದರು.

ಜಿಲ್ಲಾ ಖನಿಜ ಪ್ರತಿಷ್ಠಾನದ 12 ಕೋಟಿ ರೂ.ಗಳನ್ನು ರಸ್ತೆ ಅಭಿವೃದ್ಧಿಗೆ ನೀಡುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಲಾಗಿತ್ತು. ಆದರೆ ನಿಯಮಾನುಸಾರ ನೀಡಲು ಬರುವುದಿಲ್ಲ ಎಂದಿದ್ದಾರೆ. ಅವರು ಅನುದಾನ ನೀಡಿದರೆ ಮದೇಹಳ್ಳಿ ರಸ್ತೆ, ಜೆಸಿಆರ್‌ ರಸ್ತೆಗಳ ಅಗಲೀಕರಣಕ್ಕೆ ಮುಂದಾಗುವುದಾಗಿ ಭರವಸೆ ನೀಡಿದರು.
 
ಈಗಾಗಲೇ ನಾಲ್ಕೈದು ಮಂದಿ ತಮ್ಮ ಕಟ್ಟಡಗಳ ಮುಂಭಾಗದಲ್ಲಿ ರಸ್ತೆ ಅಗಲೀಕರಣ ಮಾಡದಂತೆ ತಡೆಯಾಜ್ಞೆ ತಂದಿದ್ದಾರೆ. ಆದರೆ ನ್ಯಾಯಾಲಯಕ್ಕೆ ವಾಸ್ತವಾಂಶ ಮನವರಿಕೆ ಮಾಡಿ ತೆರವುಗೊಳಿಸಲಾಗುತ್ತದೆ ಎಂದು ಹೇಳಿದರು. ಲೋಕೋಪಯೋಗಿ ಇಲಾಖೆ ಇಇ ಸತೀಶ್‌ ರೆಡ್ಡಿ, ಸಹಾಯಕ ಎಂಜಿನಿಯರ್‌ ಕೆ.ಜಿ.ಜಗದೀಶ್‌, ಪೌರಾಯುಕ್ತ ಚಂದ್ರಪ್ಪ ಮತ್ತಿತರರು ಇದ್ದರು.

Advertisement

ರೆಡ್ಡಿ ಸಂಘದ ಮಳಿಗೆಗಳನ್ನೇ ಮೊದಲು ಒಡೆಯುತ್ತೇವೆ ಕಟ್ಟಡ ಒಡೆಯುವ ಸಂದರ್ಭದಲ್ಲಿ ಯಾವುದೇ ಪರಿಹಾರ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಶಾಸಕ ತಿಪ್ಪಾರೆಡ್ಡಿ, ಮುಖ್ಯ ರಸ್ತೆಯಲ್ಲಿರುವ ರೆಡ್ಡಿ ಸಂಘದ ಹತ್ತಾರು ವಾಣಿಜ್ಯ ಮಳಿಗೆಗಳನ್ನು ಒಡೆಯುತ್ತೇವೆ. ನಾನು ಮೊದಲು ಒಡೆದ ಮೇಲೆ ನೀವು ಒಡೆದುಕೊಳ್ಳಿ ಎಂದರು.

ಇದಕ್ಕೆ ಅಪಸ್ಪರ ಎತ್ತಿದ ಕಟ್ಟಡಗಳ ಮಾಲೀಕರು, ನಿಯಮಾನುಸಾರ ಬರಬೇಕಾದ ಪರಿಹಾರ ನೀಡಬೇಕು. ಕೆಲವರು ಒಂದೊಂದು ಮಳಿಗೆ ಇಟ್ಟುಕೊಂಡಿದ್ದಾರೆ. ಅಂಥವರು ಬೀದಿಗೆ ಬೀಳಲಿದ್ದಾರೆ. ಹಾಗಾಗಿ ಪರಿಹಾರ ನೀಡಲೇಬೇಕು. ಪಾದಚಾರಿಗಳ ಮಾರ್ಗ ಒತ್ತುವರಿಯನ್ನು ತೆರವುಗೊಳಿಸಬೇಕು. ರಸ್ತೆ ಅಗಲೀಕರಣ ನೆಪದಲ್ಲಿ ಪದೇ ಪದೇ ಕಟ್ಟಡ ಒಡೆಯಬಾರದು. 13.50 ಮೀಟರ್‌ಗಿಂತ ಕಡಿಮೆ ಅಡಿ ನಿಗದಿ ಮಾಡುವಂತೆ ಶಾಸಕರಲ್ಲಿ ಮನವಿ ಮಾಡಿದರು.

ಪರಿಹಾರ ನೀಡಬೇಕು, ಕಟ್ಟಡ ಒಡೆಯಬೇಕು, ತೆರವುಗೊಳಿಸಬೇಕು ಎಂದು ಕಾನೂನು ಮಾತನಾಡಿದರೆ ನಮಗೂ ಕಾನೂನು ಗೊತ್ತಿದೆ. ಕೆಲವರು ರಾಜಕಾಲುವೆಗಳ ಒತ್ತುವರಿ ಮಾಡಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿಕೊಂಡಿದ್ದಾರೆ. ಶಂಕರ್‌ ಚಿತ್ರಮಂದಿರದ ಸಮೀಪದಲ್ಲಿದ್ದ ರಾಜಕಾಲುವೆ ಈಗ ಎಲ್ಲಿದೆ ಎಂದು ಹುಡುಕಬೇಕಿದೆ. ನೀವು ಸಹಕಾರ ನೀಡದಿದ್ದರೆ ಆಗ ಕಾನೂನು ಮಾತನಾಡುತ್ತದೆ.
 ಜಿ.ಎಚ್‌. ತಿಪ್ಪಾರೆಡ್ಡಿ, ಶಾಸಕರು.

ಚಿತ್ರದುರ್ಗ: ಭ್ರೂಣ ಪತ್ತೆ ಮಾಡುವುದು ಕಾನೂನಿಗೆ ವಿರುದ್ಧವಾಗಿದೆ. ಅಲ್ಲದೆ ಶಿಕ್ಷಾರ್ಹ ಅಪರಾಧ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಸಿ.ಎಲ್‌. ಫಾಲಾಕ್ಷ ಎಚ್ಚರಿಸಿದರು.

ಇಲ್ಲಿನ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವುಗಳ
ಸಂಯುಕ್ತಾಶ್ರಯದಲ್ಲಿ ಸೋಮವಾರ ಚಿತ್ರದುರ್ಗ ತಾಲೂಕಿನ ಆಯ್ದ ಶಿಕ್ಷಕರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ
ಏರ್ಪಡಿಸಿದ್ದ ಜಾಗೃತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೆಣ್ಣು ತಾಯಿಯಾಗಿ, ಬಾಳಸಂಗಾತಿಯಾಗಿ ಬೇಕು. ಆದರೆ ಮಗಳಾಗಿ ಏಕೆ ಬೇಡ ಎಂದು ಪ್ರಶ್ನಿಸಿದರು. ಮಹಿಳಾ ಸಮಾನತೆ ಮತ್ತು ಸಾರ್ವಭೌಮತ್ವಕ್ಕೆ ಸಮಾಜ ಸಜ್ಜಾಗ ಬೇಕಿದೆ. ಭ್ರೂಣಲಿಂಗ ಪತ್ತೆ ಮಾಡಿ ಜೈಲು ಸೇರಬೇಡಿ
ಎಂದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎನ್‌. ಎಸ್‌. ಮಂಜುನಾಥ ಮಾತನಾಡಿ, ಒಲಂಪಿಕ್‌ ಕ್ರೀಡಾಕೂಟದಲ್ಲಿ ನಮ್ಮ ದೇಶದ ಕೀರ್ತಿ ಪತಾಕೆ ಹಾರಿಸಿದ ಸಾಕ್ಷಿ ಮಲ್ಲಿಕ್‌, ಪಿ.ಎನ್‌.ಸಿಂಧು ನಮ್ಮ ದೇಶದ ಹೆಣ್ಣುಮಕ್ಕಳು. ಪ್ರತಿಯೊಬ್ಬರೂ ಸ್ತ್ರೀ ಸಮಾನತೆಗೆ ಧ್ವನಿ ಎತ್ತಿ ಹೋರಾಡಬೇಕು. ಈ ಬಗ್ಗೆ ಪ್ರತಿ
ಗ್ರಾಮಗಳಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಶಾಲೆಗಳ ಆಸುಪಾಸಿನಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿ ನಡೆಯುವ ತಾಯಂದಿರ ಸಭೆಗಳಲ್ಲಿ ಅರಿವು ಮೂಡಿಸಬೇಕು.

ಹೊರುವುದು, ಹೆರುವುದು, ಹಾಲುಣಿಸುವುದು ಹೆಣ್ಣು. ಆದರೆ ನಮ್ಮ ಸಮಾಜವೇ ಹೆಣ್ಣಿನ ಶತ್ರುವಾಗಿದೆ. ಒಲವಿನಿಂದ ಹುಟ್ಟಿದ ಭ್ರೂಣವನ್ನು ಚಾಕುವಿನಿಂದ ಹತ್ಯೆ ಮಾಡುವುದು ಸರ್ವಥಾ ಸರಿಯಲ್ಲ ಎಂದು ಆಕ್ಷೇಪಿಸಿದರು. ವಿದ್ಯಾವಂತರು ಮತ್ತು ತಿಳಿದವರಾಗಿರುವ ವೈದ್ಯರು ಭ್ರೂಣ ಪತ್ತೆ ಮಾಡುವ ಕಾರ್ಯಕ್ಕೆ ಕೈ ಹಾಕಬಾರದು. ಯಾವುದೇ ಶಾಸನದಲ್ಲಿ ಲಿಂಗ ಪತ್ತೆ ಮಾಡುವ ಕಾನೂನಿಲ್ಲ ಎಂದರು. ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ ಮಾತನಾಡಿದರು. ಕಾರ್ಯಾಗಾರದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವ್ಯವಸ್ಥಾಪಕ ಅಲಿ, ನಾಗವೇಣಿ, ಹಬೀಬುಲ್ಲಾ ಅನ್ಸಾರಿ, ಗೋಣಪ್ಪ, ಇಮ್ರಾನಾ, ಜಿಲ್ಲಾ ಎಂಐಎಸ್‌ ಮ್ಯಾನೇಜರ್‌ ಕುಮಾರ್‌, 20 ಶಿಕ್ಷಕರು, 20 ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next