Advertisement

ನಿರ್ಮಲ ನಗು

06:00 AM Oct 10, 2018 | |

ಕನ್ನಡದ ಹಾಸ್ಯ ಲೇಖಕರಲ್ಲಿ ಎಂ.ಎಸ್‌. ನರಸಿಂಹಮೂರ್ತಿ, “ಎಮ್ಮೆಸ್ಸೆನ್‌’ ಅಂತಲೇ ಖ್ಯಾತರು. ಕೇವಲ ಬರವಣಿಗೆಗೆ ಸೀಮಿತಗೊಳಿಸಿಕೊಳ್ಳದೇ ಕಿರುತೆರೆ ಕ್ಷೇತ್ರಕ್ಕೂ ಲಗ್ಗೆ ಇಟ್ಟು ಅಲ್ಲಿಯೂ ಯಶಸ್ಸನ್ನು ಪಡೆದವರು. ಇವರು ರಚಿಸಿದ “ಕ್ರೇಜಿ ಕರ್ನಲ್‌’, “ಪಾ.ಪ. ಪಾಂಡು’ ಧಾರಾವಾಹಿಗಳು ಜನರನ್ನು ಅಪಾರವಾಗಿ ಸೆಳೆದಿದ್ದವು. ಅವರ ಬರವಣಿಗೆಗೆ ಸ್ಫೂರ್ತಿ ಬರುವುದು ಮನೆಯಿಂದಲೇ, ಮನೆಯೊಡತಿಯಿಂದಲೇ ಅಂತೆ. ಎಮ್ಮೆಸ್ಸೆನ್‌ರ ಪತ್ನಿ ನಿರ್ಮಲಾ ಎನ್‌. ಮೂರ್ತಿ. “ನನ್ನ ಪತಿ ನನಗೆ ಕೊಟ್ಟಿರುವ ದೊಡ್ಡ ಆಸ್ತಿ, ನಗು’ ಎಂದು ಹೇಳುತ್ತಾರವರು. ಇವರದು ಸುಖಿ ಕುಟುಂಬ. “ಜೀವನದಲ್ಲಿ ಗಂಡ ಮತ್ತು ಮಕ್ಕಳ ಯಶಸ್ಸು ನೋಡುವುದಕ್ಕಿಂತ ಮತ್ತೂಂದು ಭಾಗ್ಯ ಇಲ್ಲ’ ಎನ್ನುತ್ತಾರೆ ನಿರ್ಮಲಾ.

Advertisement

– ನಿಮ್ಮದು ಲವ್‌ ಮ್ಯಾರೇಜಾ ಅಥವಾ ಅರೇಂಜ್ಡ್ ಮ್ಯಾರೇಜಾ?
ನಮ್ಮದು ಲವ್‌ ಮ್ಯಾರೇಜ್‌. ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ನಾವು ಮೊದಲು ಭೇಟಿಯಾಗಿದ್ದು. ಗೊರೂರು ಅವರ ಕಾರ್ಯಕ್ರಮದಲ್ಲಿ, ನಾನು ಪ್ರಾರ್ಥನೆ ಹಾಡುವುದಿತ್ತು. ಸಮಾರಂಭ ಮುಗಿದ ಬಳಿಕ ಇವರು ಪರಿಚಯವಾದರು. ಆಗ ನಾವಿಬ್ಬರೂ ಕಾಲೇಜು ವಿದ್ಯಾರ್ಥಿಗಳಾಗಿದ್ದ ಕಾರಣ, ಹಲವಾರು ಕಾರ್ಯಕ್ರಮಗಳಲ್ಲಿ ಭೇಟಿಯಾಗುತ್ತಿದ್ದೆವು. ಆ ಬಳಿಕ ಅವರೇ ಪ್ರಪೋಸ್‌ ಮಾಡಿದರು. ಮನೆಯವರು ಒಪ್ಪುತ್ತಾರೋ ಇಲ್ಲವೋ ಎಂಬ ಶಂಕೆಯಿಂದಲೇ ನಾನು ಒಪ್ಪಿಕೊಂಡೆ. ಕಡೆಗೆ, ಅಪ್ಪನನ್ನು ಮದುವೆಗೆ ಒಪ್ಪಿಸಲು ಅಪ್ಪನ ಸ್ನೇಹಿತರೊಬ್ಬರ ಸಹಾಯ ಪಡೆದಿದ್ದೆ. ಐಡಿಯಾ ಕ್ಲಿಕ್‌ ಆಯಿತು. 

– ನಿಮ್ಮ ಬಾಲ್ಯ, ಕಾಲೇಜು ದಿನಗಳು ಹೇಗಿದ್ದವು?
ನಾವು ಮೂಲತಃ ಬಂಟ್ವಾಳದವರು. ಆದರೆ, ನಮ್ಮ ಕುಟುಂಬ ನೆಲೆ ನಿಂತಿದ್ದು ಬೆಂಗಳೂರಿನ ಶ್ರೀರಾಮಪುರದಲ್ಲಿ. ಈಗಲೂ ನನ್ನ ತಾಯಿ ಮನೆಯಿರುವುದು ಶ್ರೀರಾಮಪುರದಲ್ಲಿಯೇ. ನಮ್ಮದು ತುಂಬು ಕುಟುಂಬ. ನನಗೆ ಮೂವರು ಅಣ್ಣಂದಿರು, ಮೂವರು ಅಕ್ಕಂದಿರು, ಒಬ್ಬ ತಮ್ಮ, ಒಬ್ಬಳು ತಂಗಿ. ನನ್ನ ಸೋದರ ಮಾವ, ಓದಲು ಬೆಂಗಳೂರಿಗೆ ಬಂದಿದ್ದ ವಾರಿಗೆಯ ಮಕ್ಕಳು ನಮ್ಮ ಮನೆಯಲ್ಲೇ ಇದ್ದರು. ಮನೆಯಲ್ಲಿ ಮಕ್ಕಳು ಜಾಸ್ತಿಯಿದ್ದದ್ದರಿಂದ ಅಮ್ಮನಿಗೆ ಮನೆಗೆಲಸದಲ್ಲಿ ಸಹಾಯ ಮಾಡುತ್ತಿದ್ದೆವು. ನಾನು, ನಮ್ಮ ಅಕ್ಕ- ತಂಗಿಯಂದಿರು ಸೇರಿ ಪ್ರಮುಖ ಕವಿಗಳ ಕವಿತೆಗಳಿಗೆ ಸಿನಿಮಾ ಹಾಡುಗಳ ರಾಗ ಹಾಕಿ ನಮ್ಮಷ್ಟಕ್ಕೆ ನಾವು ಹಾಡಿಕೊಳ್ಳುತ್ತಿದ್ದೆವು. ಈಗಿನಂತೆ ಟಿ.ವಿ, ಧಾರಾವಾಹಿ ಭರಾಟೆ ಅಗಿರಲಿಲ್ಲ. ಹೀಗಾಗಿ, ಏನಾದರೊಂದು ಕೆಲಸದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಿರುತ್ತಿದ್ದೆವು.

– ನಿಮ್ಮ ನೆಚ್ಚಿನ ಕವಿ ಮತ್ತು ಕವಿತೆ ಯಾವುದು?
ಕೆ.ಎಸ್‌. ನರಸಿಂಹಮೂರ್ತಿ ನನ್ನ ನೆಚ್ಚಿನ ಕವಿ. ಕುವೆಂಪು, ಬೇಂದ್ರೆ ಕವನಗಳೂ ತುಂಬಾ ಇಷ್ಟ. ಸದಾ ಕಾಡುವ ಕವಿತೆ ಎಂದರೆ ಕೆ.ಎಸ್‌.ನ ಅವರ “ಹತ್ತು ವರ್ಷದ ಹಿಂದೆ…’

– ಮದುವೆ ಬಳಿಕ ನರಸಿಂಹಮೂರ್ತಿ ಅವರಿಂದ ನೀವು ಕಲಿತಿದ್ದು ಏನು? ಮತ್ತು ನಿಮ್ಮಿಂದ ಅವರು ಕಲಿತಿದ್ದು ಏನು?
ಅವರ ಮನೆಮಾತು ತೆಲುಗು. ಮದುವೆಯಾಗುತ್ತಿದ್ದಂತೆ ನಾನು ತೆಲುಗು ಕಲಿತುಕೊಂಡೆ. ಆದರೆ, ಅವರಿಗೆ ನನ್ನ ಮಾತೃಭಾಷೆ ಕೊಂಕಣಿಯನ್ನು ಕಲಿಸಲು ಸಾಧ್ಯವೇ ಆಗಲಿಲ್ಲ. ಅವರು ಕೊಂಕಣಿ ಕಲಿಯಲಿಲ್ಲ ಎಂಬ ಬೇಜಾರು ಈಗಲೂ ಇದೆ.

Advertisement

– ಅವರ ಬರಹಗಳನ್ನು ಓದಿ ಅವರಿಗೆ ಸಲಹೆ ನೀಡುತ್ತೀರಾ?
 ಅವರ ಬರಹಗಳನ್ನು ಮೊದಲು ಓದಿ ತಿದ್ದುಪಡಿ ಮಾಡುವುದು ನಾನೇ. ಎಲ್ಲಾದರೂ ಸ್ವಲ್ಪ ಡಬಲ್‌ ಮೀನಿಂಗ್‌ ಇದ್ದರೆ ನಾನವರಿಗೆ ಚಿವುಟಿ ಹೇಳುತ್ತೇನೆ. ಅವರು ಅದನ್ನು ಸರಿಪಡಿಸುತ್ತಾರೆ. ಮೊದಲೆಲ್ಲಾ ಕೈಯಲ್ಲೇ ಬರೆಯಬೇಕಿತ್ತು. ಯಾವುದಾದರೂ ಪತ್ರಿಕೆಗೆ ಅವರು ಲೇಖನ ಕಳಿಸುವುದಿದ್ದರೆ ಆಫೀಸ್‌ನಿಂದ ಬಂದು ರಾತ್ರಿಯೆಲ್ಲಾ ಕೂತು ಬರೆಯುತ್ತಿದ್ದರು. ಬೆಳಗ್ಗೆ ಎದ್ದವರೇ “ನಿದ್ದೆಗಣ್ಣಿನಲ್ಲಿ ಬರೆದಿದ್ದೇನೆ. ತಿದ್ದುಪಡಿ ಮಾಡಿ ಪತ್ರಿಕೆಗೆ ಕಳಿಸು’ ಎಂದು ಹೇಳಿ ಆಫೀಸ್‌ಗೆ ಹೋಗುತ್ತಿದ್ದರು. ನಾನು ತಿದ್ದುಪಡಿ ಮಾಡಿ ಲೇಖನಗಳನ್ನು ಪೋಸ್ಟ್‌ ಮಾಡುತ್ತಿದ್ದೆ. ಕೆಲವೊಮ್ಮೆ ನಾನೇ ಪತ್ರಿಕೆಗಳ ಕಚೇರಿಗೆ ಹೋಗಿ ಲೇಖನ ಕೊಟ್ಟಿದ್ದೂ ಇದೆ. ಅವರ ಲೇಖನಗಳನ್ನು ಪತ್ರಿಕೆಗಳಿಗೆ ಕಳಿಸುವ ಜವಾಬ್ದಾರಿ ಬಹುತೇಕ ನನ್ನದೇ ಆಗಿರುತ್ತಿತ್ತು.

– ಕಚೇರಿ ಕೆಲಸ, ಸಾಹಿತ್ಯ ಕೃಷಿ, ಧಾರಾವಾಹಿ ಬರವಣಿಗೆ… ಹೀಗೆ ಸದಾ ಬ್ಯುಸಿ ಇರುವ ಎಮ್ಮೆಸ್ಸೆನ್‌ ಸಾಂಸಾರಿಕ ಬದುಕನ್ನು ಹೇಗೆ ಬ್ಯಾಲೆನ್ಸ್‌ ಮಾಡುತ್ತಿದ್ದರು?
ಮದುವೆಯಾದಾಗಿನಿಂದಲೂ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ನಾನೇ ತೆಗೆದುಕೊಂಡಿದ್ದೇನೆ. ಅವರು ಅಂಗಡಿಗೆ ಹೋಗಿ ಚಿಕ್ಕ ವಸ್ತು ತರುವುದಕ್ಕೂ ಪೇಚಾಡುತ್ತಾರೆ. ಅಷ್ಟರಮಟ್ಟಿಗೆ ಮನೆಯ ವ್ಯವಹಾರಗಳನ್ನು ನಾನು ವಹಿಸಿಕೊಂಡಿದ್ದೇನೆ. ಹೀಗಾಗಿ, ಕಚೇರಿ ಮುಗಿದ ನಂತರದ ಎಲ್ಲಾ ಸಮಯವೂ ಅವರಿಗೆ ಅವರ ಸಾಹಿತ್ಯ ಕೆಲಸಕ್ಕೆ ಸಿಗುತ್ತದೆ. ಅದರ ನಡುವೆಯೂ ಬಿಡುವು ಮಾಡಿಕೊಂಡು ನಮ್ಮ ಜೊತೆ ನಗುನಗುತ್ತಾ ಕಾಲ ಕಳೆಯುತ್ತಾರೆ.

– ಮನೆಯಲ್ಲಿ ಸದಾ ನಗುವಿನ ವಾತಾವರಣ ಇರುತ್ತದೆ ಅನಿಸುತ್ತದೆ. ಹೌದಾ?
ಹೌದು… ನಮ್ಮ ಮನೆಯಲ್ಲಿ ನಗುವೇ ಯಜಮಾನ. ನಮ್ಮ ಮನೆಯವರು ನನ್ನನ್ನು, ಮಗ, ಸೊಸೆಯನ್ನು ಗೇಲಿ ಮಾಡುತ್ತಾ ಇರುತ್ತಾರೆ. ನಾವೂ ಅವರನ್ನು ಅಷ್ಟೇ ಗೇಲಿ ಮಾಡುತ್ತೇವೆ. ಒಬ್ಬರ ಕಾಲು ಒಬ್ಬರು ಎಳೆದುಕೊಂಡು ತಮಾಷೆ ಮಾಡುತ್ತೇವೆ. ಮನೆಯಲ್ಲಿ ನಾವಿಬ್ಬರು, ನಮ್ಮ ಮಗ ಸೊಸೆ ಮತ್ತು ನಮ್ಮ ಅತ್ತೆ… ಮೂರು ತಲೆಮಾರಿಗೆ ಸೇರಿದ ಐವರ ಕುಟುಂಬವಿದೆ. ಆದರೆ, ಕೀಟಲೆ ಮಾಡುವ ವಿಷಯದಲ್ಲಿ ವಯಸ್ಸಿನ ಅಂತರ ಕಾಣುವುದೇ ಇಲ್ಲ.

– ಬರಹಗಾರರಾಗಿ ಖ್ಯಾತರಾಗಿದ್ದ ಎಮ್ಮೆಸ್ಸೆನ್‌ ಧಾರಾವಾಹಿ ಬರಹಗಾರರಾಗಿ, ಹಾಸ್ಯ ಭಾಷಣಕಾರರಾಗಿ ಪ್ರಖ್ಯಾತರಾಗುತ್ತಾರೆ ಎಂದು ನಿರೀಕ್ಷಿಸಿದ್ದೀರಾ? 
“ಕ್ರೇಜಿ ಕರ್ನಲ್‌’, ಅವರು ಸಂಭಾಷಣೆ ಬರೆದ ಮೊದಲ ಧಾರಾವಾಹಿ. ಅದು ಜನಪ್ರಿಯವಾಗಿದ್ದಲ್ಲದೇ ಅದಕ್ಕೆ ಅವರಿಗೆ ಪ್ರಶಸ್ತಿಯೂ ಬಂತು. “ಪಾ.ಪ. ಪಾಂಡು’ ನನಗೆ ಈಗಲೂ ವಿಸ್ಮಯ ಅಂತನ್ನಿಸುವುದು. ಅದು ಅಷ್ಟೊಂದು ಜನಪ್ರಿಯವಾಗುತ್ತದೆ ಎಂದು ಊಹಿಸಿರಲಿಲ್ಲ. ಜನರು ಅದನ್ನು ಎಷ್ಟು ಇಷ್ಟಪಟ್ಟರು ಎಂದರೆ, ಅದು 5 ವರ್ಷಕ್ಕೂ ಹೆಚ್ಚು ಕಾಲ ಪ್ರಸಾರವಾಯಿತು.  

– ಎಮ್ಮೆಸ್ಸೆನ್‌ರ ಯಾವ ಬರಹ/ ಪುಸ್ತಕ ನೀವು ಹೆಚ್ಚು ಇಷ್ಟಪಟ್ಟು ಓದುತ್ತೀರ?
ನನಗೆ ಅವರ ಹಾಸ್ಯ ಬರಹಗಳೇ ಹೆಚ್ಚು ಇಷ್ಟ. ಅದರಲ್ಲೂ ಕಂಡಕ್ಟರ್‌ ಕರಿಯಪ್ಪ, ಸ್ವಯಂವಧು ತುಂಬಾ ಇಷ್ಟ. ಅವರು ಧಾರಾವಾಹಿಗೆ ಬರೆದಾಗಲೂ ನಾನು ಅದನ್ನು ಮೊದಲೇ ಓದುತ್ತೇನೆ. ಕೆಲವೊಮ್ಮೆ ಬರಹ ಓದಿದಾಗ ಆಗುವ ಖುಷಿ ಅದನ್ನು ಟಿ.ವಿ. ಪರದೆ ಮೇಲೆ ನೋಡಿದಾಗ ಆಗುವುದಿಲ್ಲ. ಇನ್ನಷ್ಟು ಚೆನ್ನಾಗಿ ಚಿತ್ರೀಕರಣ ಮಾಡಬಹುದಿತ್ತು ಎಂದು ಬೇಸರವಾಗಿದ್ದೂ ಇದೆ.

– ಗಂಡ, ಮಗ, ಸೊಸೆ, ಎಲ್ಲರೂ ಮಾಧ್ಯಮ ಕ್ಷೇತ್ರಗಳಲ್ಲಿ ಹೆಸರು ಮಾಡುತ್ತಿರುವವರು. ಈ ಬಗ್ಗೆ ಏನನ್ನಿಸುತ್ತದೆ?
ಮನೆಯಲ್ಲಿರುವ ಐವರಲ್ಲಿ, ಮೂವರು ಮಾಧ್ಯಮದಲ್ಲಿದ್ದಾರೆ. ಅವರ ಬೆಳವಣಿಗೆ ನೋಡಿ ಖುಷಿ ಪಡಲು ನಾನು- ಅತ್ತೆ ಇದ್ದೇವೆ. ಮಗ ಶ್ರೀಹರ್ಷ ಮೊದಲು ಪ್ರಸಾರವಾಗುತ್ತಿದ್ದ “ಪಾ.ಪ. ಪಾಂಡು’ಗೇ ಕೆಲವೊಮ್ಮೆ ಸಂಚಿಕೆಗಳನ್ನು ಬರೆಯುತ್ತಿದ್ದ. ಈಗ ಮನರಂಜನಾ ಕ್ಷೇತ್ರದಲ್ಲಿ ಹೆಸರು ಮಾಡುತ್ತಿದ್ದಾನೆ. ಸೊಸೆ ಅನುಷಾ ಕೂಡ ಕಾರ್ಯಕ್ರಮ ನಿರೂಪಣೆ, ಮತ್ತಿತರ ಕೆಲಸಗಳನ್ನು ಮಾಡುತ್ತಾಳೆ. ಆಕೆಯನ್ನು ಪರದೆ ಮೇಲೆ ನೋಡಲು ನನಗೆ ತುಂಬಾ ಖುಷಿ.

– ನಿಮ್ಮ ಅಡುಗೆ ಮನೆ ಕತೆಯನ್ನು ಹೇಳುತ್ತೀರಾ?
ನಮ್ಮ ಮನೆಯಲ್ಲಿ ಖಾರಖಾರವಾಗಿ ಮಾಡಿದ ತಿನಿಸುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಮೆಣಸಿನಕಾಯಿ ಬಜ್ಜಿ, ಅವರೇಕಾಳು ರೊಟ್ಟಿ, ಅವರೇಕಾಳು ಸಾರಿಗೆ ಹೆಚ್ಚು ಬೇಡಿಕೆ ಇರುತ್ತದೆ. ನಾನು ಮಾಡುವ ಮೈಸೂರ್‌ ಪಾಕ್‌ ಕೂಡ ಎಲ್ಲರಿಗೂ ಪ್ರಿಯ. ಮಂಗಳೂರು ಶೈಲಿಯ ಅಡುಗೆಯನ್ನು ಮಾಡುತ್ತಿರುತ್ತೇನೆ. ಆ ಮೂಲಕ ನನ್ನೂರಿನ ನೆನಪನ್ನು ಹಸಿಯಾಗಿಟ್ಟಿದ್ದೇನೆ. 

ಹೀರೇಕಾಯಿ ಚಟ್ನಿಯ ಗೇಲಿ
ನಮ್ಮನೆಯವರಿಗೆ ನನ್ನ ಅಡುಗೆಯಲ್ಲೂ ಹಾಸ್ಯ ಕಾಣುತ್ತದೆ. ನಾನು ಮಾಡುವ ಹಲವಾರು ಬಗೆಯ ಅಡುಗೆ ಬಗೆಗಳ ಕುರಿತು ಹಾಸ್ಯ ಕಾರ್ಯಕ್ರಮಗಳಲ್ಲಿ ಗೇಲಿ ಮಾಡಿ ಜನರನ್ನು ನಗಿಸಿದ್ದಾರೆ. ನಾನು ಹೀರೇಕಾಯಿ ಸಿಪ್ಪೆಯ ಚಟ್ನಿ ಮಾಡುತ್ತೇನೆ. ಚೆನ್ನಾಗಿಯೇ ಮಾಡುತ್ತೇನೆ. ತಿನ್ನುವಾಗ ಚಪ್ಪರಿಸಿ ತಿಂದ ನಮ್ಮನೆಯವರು ಅದನ್ನೂ ಹಾಸ್ಯದ ವಸ್ತುವಾಗಿಸಿದ್ದಾರೆ. “ಹೆಂಡತಿ ಸಿಪ್ಪೆಯನ್ನೂ ವೇಸ್ಟ್‌ ಮಾಡುವುದಿಲ್ಲ’ ಎಂದು ವ್ಯಂಗ್ಯ ಮಾಡಿದ್ದಾರೆ.

ಕತ್ತೆ, ಕೋತಿಗಳ ಮೇಲೆಲ್ಲಾ ಹಾಡು
ಮನೆಯಲ್ಲಿರುವಾಗ ಅವರಿಗೆ ಬಿಡುವಿದ್ದರೆ ಕತ್ತೆ, ಕೋತಿಗಳ ಮೇಲೆಲ್ಲಾ ಹಾಡು ಕಟ್ಟಿ ಹಾಡುತ್ತಾರೆ. ಸಂಸಾರದ ಕುರಿತೂ ಹಾಡು ಕಟ್ಟಿ ಹಾಡುತ್ತಾರೆ. ಈ ಹಾಡುಗಳನ್ನು ಹೊರಗಿನವರು ಯಾರೂ ಕೇಳುವ ಸಾಧ್ಯತೆ ಇಲ್ಲ. ಇಂಥ ಹಾಡು, ಕವಿತೆಗಳನ್ನು ಕೇಳುವ ಅದೃಷ್ಟ ಇರುವುದು ನನಗೆ ಮಾತ್ರ. ಅವರು ಮನೆಯಲ್ಲಿದ್ದರೆ, ಮನೆಯಲ್ಲಿ ನಗು ತುಂಬಿ ತುಳುಕುತ್ತಿರುತ್ತದೆ.

ಪ್ರೇಮಪತ್ರಗಳಲ್ಲಿ ಗೌಪ್ಯಲಿಪಿ
ನಾವು ಪ್ರೀತಿಸುತ್ತಿದ್ದ ದಿನಗಳಲ್ಲಿ ಅವರು ಸಾಗರದಲ್ಲಿದ್ದರು. ಆಗ ನಾವು ಪತ್ರದಲ್ಲೇ ಸಂಭಾಷಣೆ ನಡೆಸಬೇಕಿತ್ತು. ಪತ್ರ ಯಾರ ಕೈಗಾದರೂ ಸಿಕ್ಕಿ ಓದಿಬಿಟ್ಟರೆ ಎಂದು ನಾವೇ ಗೂಢಲಿಪಿಯೊಂದನ್ನು ಕಂಡುಕೊಂಡಿದ್ದೆವು. ಈ ಲಿಪಿಯನ್ನು ನರಸಿಂಹ ಮೂರ್ತಿ ಮೊದಲಿಗೆ ಕಂಡು ಹಿಡಿದಿದ್ದು. ನನಗೆ ಅದನ್ನು ಓದುವುದು ಹೇಗೆ ಎಂದು ಹೇಳಿಕೊಟ್ಟಿದ್ದರು. ನಾವು ಆಗ ಬರೆದಿರುವ ಪತ್ರಗಳನ್ನೂ ಈಗಲೂ ಯಾರಿಂದಲೂ ಓದಲು ಸಾಧ್ಯವಿಲ್ಲ. ಅಷ್ಟೊಂದು ಗೌಪ್ಯಲಿಪಿ ನಮ್ಮಿಬ್ಬರದ್ದು. 

ಚೇತನ ಜೆ.ಕೆ. 
 

Advertisement

Udayavani is now on Telegram. Click here to join our channel and stay updated with the latest news.

Next