Advertisement

ನಿರ್ಭಯಾ ಪ್ರಕರಣ: ಮತ್ತೆ ಕ್ಷಮಾದಾನ ಅರ್ಜಿ ಸಲ್ಲಿಸಿದ ವಿನಯ್ ಶರ್ಮಾ: ಫೆ.1ಕ್ಕೆ ಗಲ್ಲು ಡೌಟ್

08:26 AM Jan 30, 2020 | Hari Prasad |

ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ನೇಣಿಗೇರಿಸಲು ದಿನಾಂಕ ನಿಗದಿಯಾಗಿದ್ದರೂ ನೇಣು ಕುಣಿಕೆಯಿಂದ ಪಾರಾಗಲು ನಾಲ್ವರೂ ಶತಾಯಗತಾಯ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ.

Advertisement

ಬುಧವಾರವಷ್ಟೇ ಮುಖೇಶ್ ಕುಮಾರ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ ಪ್ರಕರಣದ ಇನ್ನೋರ್ವ ಅಪರಾಧಿ ವಿನಯ್ ಶರ್ಮಾ ಮತ್ತೆ ಕ್ಷಮಾದಾನ ಕೋರಿ ರಾಷ್ಟ್ರಪತಿಯವರಿಗೆ ಇಂದು ಅರ್ಜಿಯನ್ನು ಸಲ್ಲಿಸಿದ್ದಾನೆ.

ಘಟನೆ ನಡೆದು 10 ತಿಂಗಳೊಳಗೆ ಈ ಪ್ರಕರಣದ ವಿಚಾರಣೆ ನಡೆಸಿದ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯವು ತನ್ನ ತೀರ್ಪನ್ನು ಪ್ರಕಟಿಸಿ ನಾಲ್ವರಿಗೆ ಮರಣ ದಂಡನೆ ಶಿಕ್ಷೆಯನ್ನು ವಿಧಿಸಿದ್ದರೂ, ಅಪರಾಧಿಗಳು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನ ಬಾಗಿಲನ್ನು ಪದೇ ಪದೇ ತಟ್ಟುತ್ತಿರುವುದರಿಂದ ಈ ಪ್ರಕರಣದ ಶಿಕ್ಷೆ ಜಾರಿ ಪ್ರಕ್ರಿಯೆ ವಿಳಂಬಗೊಳ್ಳುತ್ತಿದೆ.

ಅಂತಿಮವಾಗಿ, ಅಪರಾಧಿಗಳಿಗೆ ನೇಣು ಕುಣಿಕೆಯಿಂದ ಪಾರಾಗಲಿರುವ ಎಲ್ಲಾ ಕಾನೂನು ಮಾರ್ಗಗಳು ಮುಚ್ಚಲ್ಪಟ್ಟರೂ ಕಾನೂನಿನಲ್ಲಿರುವ ಅವಕಾಶದಂತೆ ಆರೋಪಿಗಳಿಗೆ ಮತ್ತೂ 14 ದಿನಗಳ ಕಾಲಾವಕಾಶ ದೊರೆಯಲಿದೆ. ಇದನ್ನೆಲ್ಲಾ ನೋಡಿದಾಗ ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಫೆಬ್ರವರಿ 01ರಂದು ಗಲ್ಲಾಗುವುದು ಬಹುತೇಕ ಸಂಶಯದಿಂದ ಕೂಡಿದೆ.

2012ರ ಡಿಸೆಂಬರ್ 16ರಂದು ವೈದ್ಯಕೀಯ ವಿದ್ಯಾರ್ಥಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಬಳಿಕ ಬರ್ಭರವಾಗಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಫಾಸ್ಟ್ಟ್ ಟ್ರ್ಯಾಕ್ ನ್ಯಾಯಾಲಯವು ವಿನಯ್ ಕುಮಾರ್ ಮುಖೇಶ್ ಕುಮಾರ್ ಸಿಂಗ್, ಪವನ್ ಗುಪ್ತಾ ಮತ್ತು ಅಕ್ಷಯ್ ಅವರನ್ನು ಅಪರಾಧಿಗಳೆಂದು ಪರಿಗಣಿಸಿ ಮರಣದಂಡನೆ ಶಿಕ್ಷೆಯನ್ನು ವಿಧಿಸಿತ್ತು.

Advertisement

ಇವರನ್ನು ಹೊರತುಪಡಿಸಿ ಇನ್ನೊಬ್ಬ ಅಪ್ರಾಪ್ತನಾಗಿದ್ದ ಕಾರಣ ಅವನನ್ನು ಬಾಲಾಪರಾಧಿ ಕೇಂದ್ರದಲ್ಲಿರಿಸಲಾಗಿತ್ತು ಮತ್ತು ಆ ಬಳಿಕ ಆತ ಬಿಡುಗಡೆಗೊಂಡಿದ್ದ. ಪ್ರಕರಣದ ಆರನೇ ಆರೋಪಿ ಪ್ರಕರಣದ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಜೈಲಿನಲ್ಲೇ ನೇಣಿಗೆ ಶರಣಾಗಿದ್ದ.

ಇದೀಗ ಈ ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಮೂವರಿಗೆ ಮಾತ್ರವೇ ನೇಣು ಕುಣಿಕೆಯಿಂದ ಪಾರಾಗಲು ಕಾನೂನು ಮಾರ್ಗಗಳು ಉಳಿದುಕೊಂಡಿವೆ. ಆ ಕುರಿತಾದ ವಿವರ ಈ ರೀತಿಯಾಗಿದೆ.

ವಿನಯ್ ಕುಮಾರ್ ಶರ್ಮಾ: ಈತ ಬುಧವಾರದಂದು ಮತ್ತೆ ರಾಷ್ಟ್ರಪತಿಯವರಿಗೆ ತನ್ನ ಕ್ಷಮಾದಾನದ ಅರ್ಜಿಯನ್ನು ಸಲ್ಲಿಸಿದ್ದಾನೆ. ದೆಹಲಿ ಸರಕಾರ ಮತ್ತು ಗೃಹ ಸಚಿವಾಲಯ ತಮ್ಮ ತಮ್ಮ ಶಿಫಾರಸುಗಳನ್ನು ಸಲ್ಲಿಸಿದ ಬಳಿಕ ರಾಷ್ಟ್ರಪತಿಯವರು ಈ ಅರ್ಜಿಯ ಕುರಿತಾಗಿ ತಮ್ಮ ನಿರ್ಧಾರವನ್ನು ಪ್ರಕಟಿಸಲಿದ್ದಾರೆ. ಒಂದು ವೇಳೆ ರಾಷ್ಟ್ರಪತಿಯವರು ಈತನ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದರೆ, ಇದನ್ನು ಪ್ರಶ್ನಿಸಿ ಆತ ಮತ್ತೆ ಸುಪ್ರೀಂ ಕೋರ್ಟ್ ಮುಂದೆ ಮನವಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ. ಈತನ ಕ್ಯುರೇಟಿವ್ ಮನವಿ ಅರ್ಜಿಯನ್ನು ಉಚ್ಛನ್ಯಾಯಾಲವು ಈಗಾಗಲೇ ತಿರಸ್ಕರಿಸಿದೆ.

ಪವನ್ ಗುಪ್ತಾ: 25 ವರ್ಷದ ಈತನ ಪಾಲಿಗೆ ಕಾನೂನು ಮಾರ್ಗಗಳು ಇನ್ನೂ ಉಳಿದುಕೊಂಡಿದೆ. ಈತ ತನ್ನ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮುಂದೆ ಇನ್ನೂ ಸಲ್ಲಿಸಿಲ್ಲ. ಒಂದುವೇಳೆ ಈತ ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸಿ ಅದು ನ್ಯಾಯಾಲಯದಲ್ಲಿ ತಿರಸ್ಕೃತಗೊಂಡರೆ ಆತ ಕ್ಷಮಾದಾನಕ್ಕಾಗಿ ರಾಷ್ಟ್ರಪತಿಯವರ ಮೊರೆ ಹೋಗಬಹುದಾಗಿದೆ. ಮತ್ತು ಅದೂ ತಿರಸ್ಕೃತಗೊಂಡರೆ ಇದನ್ನು ಪ್ರಶ್ನಿಸಿ ಆತ ಮತ್ತೆ ಸುಪ್ರೀಂ ಕೋರ್ಟ್ ಮೊರೆ ಹೋಗಲು ಅವಕಾಶವಿದೆ.

ಅಕ್ಷಯ್ ಕುಮಾರ್ ಸಿಂಗ್: ಈತ ತನ್ನ ಕ್ಯುರೇಟಿವ್ ಅರ್ಜಿಯನ್ನು ಇಂದು ಸಲ್ಲಿಸಿದ್ದಾನೆ. ‘ಮಹಿಳೆಯರ ಮೇಲಿನ ಹಿಂಸೆಯ ವಿಚಾರದಲ್ಲಿ ಸಾರ್ವಜನಿಕ ಒತ್ತಡ ಮತ್ತು ಸಾರ್ವಜನಿಕ ಅಭಿಪ್ರಾಯವನ್ನು ಪರಿಗಣಿಸಿ ಕಠಿಣ ಶಿಕ್ಷೆಯನ್ನು ನೀಡಬೇಕೆಂಬ ನೆಲೆಯಲ್ಲಿ ನ್ಯಾಯಾಲಯವು ತನಗೆ ಮರಣ ದಂಡನೆ ಶಿಕ್ಷೆಯನ್ನು ವಿಧಿಸಿದೆ’ ಎಂಬ ಅಂಶವನ್ನು ಆತ ತನ್ನ ಅರ್ಜಿಯಲ್ಲಿ ವಾದಿಸಿದ್ದಾನೆ. ಇದರ ಹೊರತಾಗಿ ಈತನಿಗೆ ಕ್ಷಮಾದಾನ ಅರ್ಜಿಯನ್ನು ಸಲ್ಲಿಸುವ ಇನ್ನೊಂದು ಅವಕಾಶ ಬಾಕಿ ಇದೆ. ಮತ್ತು ರಾಷ್ಟ್ರಪತಿಯವರು ಈತನ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದರೆ ಅದನ್ನು ಪ್ರಶ್ನಿಸಿ ಆತ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲನ್ನೇರಲು ಅವಕಾಶವಿದೆ.

ಮುಖೇಶ್ ಕುಮಾರ್ ಸಿಂಗ್: ಈತನ ಪಾಲಿಗೆ ಎಲ್ಲಾ ಕಾನೂನು ಮಾರ್ಗಗಳು ಮುಚ್ಚಲ್ಪಟ್ಟಿವೆ. ಈತನ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಯವರು ಈಗಾಗಲೇ ತಿರಸ್ಕರಿಸಿದ್ದಾರೆ ಮತ್ತು ಇದನ್ನು ಪ್ರಶ್ನಿಸಿ ಆತ ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯೂ ಸಹ ತಿರಸ್ಕೃತಗೊಂಡಿದೆ.

ಆದರೆ ಈತನೊಬ್ಬನನ್ನೇ ನೇಣಿಗೇರಿಸಲು ಈ ಪ್ರಕರಣದ ತೀರ್ಪಿನಲ್ಲಿ ಅವಕಾಶವಿಲ್ಲ. ಯಾಕೆಂದರೆ, ಒಂದೇ ಪ್ರಕರಣದಲ್ಲಿ ಒಂದಕ್ಕಿಂತ ಹೆಚ್ಚಿನ ಅಪರಾಧಿಗಳಿಗೆ ನ್ಯಾಯಾಲಯವು ಮರಣದಂಡನೆ ವಿಧಿಸಿದ್ದರೆ ಅವರಲ್ಲಿ ಒಬ್ಬ ಅಪರಾಧಿಯನ್ನು ಪ್ರತ್ಯೇಕವಾಗಿ ಗಲ್ಲಿಗೇರಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಹಾಗಾಗಿ ತನ್ನ ಮೂವರು ಸಹಚರರ ಕಾನೂನು ಪ್ರಕ್ರಿಯೆಗಳೆಲ್ಲಾ ಮುಗಿಯುವಲ್ಲಿವರೆಗೆ ಈತ ಸೇಫ್!

Advertisement

Udayavani is now on Telegram. Click here to join our channel and stay updated with the latest news.

Next