Advertisement

ಹೊಸ ವರುಷಕೆ ಲಸಿಕೆ : ಆಕ್ಸ್‌ಫ‌ರ್ಡ್‌ ಲಸಿಕೆಗೆ ಇಂಗ್ಲೆಂಡ್‌ ಅಸ್ತು; ಭಾರತದ ಒಪ್ಪಿಗೆ ಬಾಕಿ

02:40 AM Dec 31, 2020 | Team Udayavani |

ಲಂಡನ್‌/ ಹೊಸದಿಲ್ಲಿ: ಹೊಸ ವರ್ಷದ ಆರಂಭಕ್ಕೂ ಮೊದಲೇ ಭಾರತದಲ್ಲಿ “ಲಸಿಕೆ ಆಶಾಕಿರಣ’ ಮೂಡಿದೆ. ಆಕ್ಸ್‌ಫ‌ರ್ಡ್‌- ಅಸ್ಟ್ರಾಜೆನೆಕಾ ಲಸಿಕೆಯನ್ನು ಸಾರ್ವಜನಿಕ ತುರ್ತು ಬಳಕೆಗೆ ಬ್ರಿಟನ್‌ ಸರಕಾರ ಮಂಗಳವಾರ ಸಮ್ಮತಿ ಸೂಚಿಸಿದ್ದು, “ಕೋವಿಶೀಲ್ಡ್‌’ ಈಗ ಭಾರತ ಸರಕಾರದ ಒಪ್ಪಿಗೆಯನ್ನು ನಿರೀಕ್ಷಿಸುತ್ತಿದೆ.

Advertisement

ಫೈಝರ್‌ ಬಳಿಕ ಸಾರ್ವಜನಿಕ ಬಳಕೆ ಮಾನ್ಯತೆ ಪಡೆದ 2ನೇ ಲಸಿಕೆ ಇದಾಗಿದೆ. ಆಕ್ಸ್‌ಫ‌ರ್ಡ್‌ ವಿವಿ ತನ್ನ ಲಸಿಕೆ ಕುರಿತಾದ ಎಲ್ಲ ದತ್ತಾಂಶ ವಿವರಗಳನ್ನು ಇತ್ತೀಚೆಗಷ್ಟೇ ಇಂಗ್ಲೆಂಡಿನ ರಾಷ್ಟ್ರೀಯ ಆರೋಗ್ಯ ಸೇವೆ ಇಲಾಖೆಗೆ ಸಲ್ಲಿಸಿತ್ತು. “ಆಕ್ಸ್‌ಫ‌ರ್ಡ್‌ ಲಸಿಕೆಯನ್ನು ತುರ್ತು ಬಳಕೆಗೆ ಬಳಸಲು ಬ್ರಿಟನ್‌ ಮುಂದಾಗುತ್ತಿರು ವುದು ಸಂತಸದ ವಿಚಾರ. ಎಷ್ಟು ಸಾಧ್ಯವೋ ಅಷ್ಟು ಬೇಗ ವ್ಯಾಕ್ಸಿನೇಶನ್‌ ಆರಂಭಿಸಲಾಗುತ್ತದೆ’ ಎಂದು ಇಂಗ್ಲೆಂಡ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ತಿಳಿಸಿದ್ದಾರೆ. ಇದರೊಂದಿಗೆ ಜ.4ರಿಂದ ಲಸಿಕೆ ಆರಂಭಿಸಲು ಮುಹೂರ್ತ ಕೂಡ ನಿಗದಿಯಾಗಿದೆ. ಇಂಗ್ಲೆಂಡಿಗಾಗಿ ಆಕ್ಸ್‌ಫ‌ರ್ಡ್‌- ಅಸ್ಟ್ರಾಜೆನೆಕಾ, 10 ಕೋಟಿ ಡೋಸ್‌ ಲಸಿಕೆ ಉತ್ಪಾದಿಸಿದೆ.

ಭಾರತಕ್ಕೆ ಆಶಾಕಿರಣ: ಭಾರತದಲ್ಲಿ ಆಕ್ಸ್‌ಫ‌ರ್ಡ್‌ ಲಸಿಕೆಯನ್ನು ಸೀರಮ್‌ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಉತ್ಪಾದಿಸುತ್ತಿದ್ದು, ವಾರದ ಹಿಂದೆ ಪ್ರಯೋಗ ಫ‌ಲಿತಾಂಶ ಕುರಿತಾದ ಎಲ್ಲ ದತ್ತಾಂಶಗಳನ್ನು ಸಂಸ್ಥೆ ಕೇಂದ್ರ ಸರಕಾರಕ್ಕೆ ಸಲ್ಲಿಸಿತ್ತು. ಸದ್ಯ ಈ ವರದಿ ವಿಷಯ ತಜ್ಞರ ಸಮಿತಿಯ (ಎಸ್‌ಇಸಿ) ಮುಂದಿದ್ದು, ಬುಧವಾರ ತಜ್ಞರ ತಂಡ ಸಮಗ್ರ ಪರಿಶೀಲನೆಯನ್ನೂ ನಡೆಸಿದೆ. ಲಸಿಕೆ ಕುರಿತಾಗಿ ಮತ್ತಷ್ಟು ದತ್ತಾಂಶಗಳನ್ನು ಒದಗಿಸುವಂತೆ ಎಸ್‌ಇಸಿ ಕೋರಿದೆ.

ನಾಳೆ ಮತ್ತೆ ಪರಿಶೀಲನೆ: ಆಕ್ಸ್‌ಫ‌ರ್ಡ್‌ನ ಕೋವಿಶೀಲ್ಡ್‌   ನಂತೆ ಭಾರತ್‌ ಬಯೋಟೆಕ್‌ ಕೊವ್ಯಾಕ್ಸಿನ್‌, ಫೈಝರ್‌ ಲಸಿಕೆಯ ದತ್ತಾಂಶಗಳನ್ನೂ ಎಸ್‌ಇಸಿ ಬುಧವಾರ ಪರಿಶೀಲಿಸಿದೆ. ಈ ಮೂರೂ ಲಸಿಕೆ ಕುರಿತಾಗಿ ಶುಕ್ರವಾರ ಮತ್ತೆ ಪರಿಶೀಲನೆ ಮುಂದುವರಿಸಲು
ಎಸ್‌ಇಸಿ ನಿರ್ಧರಿಸಿದೆ. ಜನವರಿ ಮೊದಲ ವಾರದಲ್ಲಿ ಭಾರತಕ್ಕೆ ಲಸಿಕೆ ತುರ್ತು ಬಳಕೆ ಕುರಿತ ಸಿಹಿಸುದ್ದಿ ಲಭ್ಯವಾಗುವ ನಿರೀಕ್ಷೆಯಿದೆ.

ಮತ್ತೆ 20,549 ಪಾಸಿಟಿವ್‌: ಹೊಸ ರೂಪದ ಕೊರೊನಾ ಭೀತಿ ನಡುವೆ ಭಾರತದಲ್ಲಿ ಬುಧವಾರ ಒಂದೇ ದಿನ 20,549 ಮಂದಿಗೆ ಪಾಸಿಟಿವ್‌ ದೃಢಪಟ್ಟಿದೆ. ಹೊಸದಾಗಿ 286 ಮಂದಿ ಸೋಂಕಿನಿಂದಾಗಿ ಪ್ರಾಣ ಬಿಟ್ಟಿದ್ದಾರೆ. ರಾಷ್ಟ್ರೀಯ ಚೇತರಿಕೆ ಪ್ರಮಾಣ ಶೇ. 95.99 ಇದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

Advertisement

ಧಾರಾವಿಯಲ್ಲಿ ಮತ್ತೆ ಸೋಂಕು!: ಸೋಂಕಿನಿಂದ ಮುಕ್ತವಾಗಿದ್ದ ಏಷ್ಯಾದ ಅತೀದೊಡ್ಡ ಕೊಳೆಗೇರಿ, ಮುಂಬಯಿನ ಧಾರಾವಿಯಲ್ಲಿ ಮತ್ತೆ ಕೊರೊನಾ ಪ್ರತ್ಯಕ್ಷವಾಗಿದೆ. ಬುಧವಾರ ಹೊಸದಾಗಿ 7 ಮಂದಿಗೆ ಪಾಸಿಟಿವ್‌ ದೃಢಪಟ್ಟಿದ್ದು, ಒಟ್ಟು 17 ಸಕ್ರಿಯ ಪ್ರಕರಣಗಳು ದಾಖಲಾಗಿವೆ.

ಜ.31ರ ವರೆಗೆ ಅಂ.ರಾ. ವಿಮಾನಗಳಿಗೆ ನಿರ್ಬಂಧ: ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನ ಸಂಚಾರ ಸೇವೆ ನಿರ್ಬಂಧವನ್ನು ಕೇಂದ್ರ ಸರಕಾರ ಜ.31ರ ವರೆಗೆ ವಿಸ್ತರಿಸಿದೆ. “ಆಯ್ದ ಮಾರ್ಗಗಳಲ್ಲಿ ಮಾತ್ರವೇ ತುರ್ತು ಸಂದರ್ಭದಲ್ಲಿ ವಿಮಾನ ಸೇವೆ ಲಭ್ಯವಿರಲಿದೆ’ ಎಂದು ಡಿಜಿಸಿಎ ಸ್ಪಷ್ಟಪಡಿಸಿದೆ. “ಏರ್‌ ಬಬಲ್‌’ ಒಪ್ಪಂದದಡಿ ಯಲ್ಲಿ ಆಯ್ದ 24 ರಾಷ್ಟ್ರಗಳಿಗೆ ಮಾತ್ರವೇ ವಿಮಾನಗಳು ಹಾರಾಡಲಿವೆ. ಇನ್ನೊಂದೆಡೆ, ಭಾರತ- ಇಂಗ್ಲೆಂಡ್‌ ನಡುವಿನ ಪ್ರಯಾಣಿಕ ವಿಮಾನ ಸಂಚಾರವನ್ನು ಜ.7ರವರೆಗೆ ನಿರ್ಬಂಧಿಸಲಾಗಿದೆ ಎಂದು ಸಚಿವ ಹರ್‌ದೀಪ್‌ ಸಿಂಗ್‌ ಪುರಿ ತಿಳಿಸಿದ್ದಾರೆ.

ಜನವರಿಯಿಂದ ಎಲ್ಲೆಲ್ಲಿ ಶಾಲೆ ಓಪನ್‌?
ಕರ್ನಾಟಕ: ಪೋಷಕರ ಒಪ್ಪಿಗೆ ಪಡೆದು. ಜ.1ರಿಂದ 6-12ನೇ ತರಗತಿವರೆಗೆ ಶಾಲೆ ತೆರೆಯಲಾಗುತ್ತಿದೆ.
ಅಸ್ಸಾಂ: ಜ.1ರಿಂದ ಎಲ್ಲ ತರಗತಿಗಳನ್ನೂ ತೆರೆಯಲು ಸರಕಾರ ನಿರ್ಧರಿಸಿದೆ.
ಬಿಹಾರ: ಜ.4ರಿಂದ 9ರಿಂದ 12ನೇ ತರಗತಿ ವರೆಗೆ ಶಾಲೆಗಳು ಆರಂಭಗೊಳ್ಳಲಿವೆ.
ಪುದುಚೇರಿ: ಜ.4ರಿಂದ ಅರ್ಧ ದಿನ ಶಾಲೆ, ಜ.18ರಿಂದ ಇಡೀ ದಿನ.
ಪುಣೆ: ಮಹಾರಾಷ್ಟ್ರದಲ್ಲಿ ಪುಣೆ ಪಾಲಿಕೆ 9-12ರ ವರೆಗೆ ತರಗತಿ ಶುರುವಿಗೆ ನಿರ್ಧಾರ.
ರಾಜಸ್ಥಾನ: ಜನವರಿ ಮೊದಲ ವಾರದಲ್ಲಿ 15 ದಿನ ಮಟ್ಟಿಗೆ ಪ್ರಾಯೋಗಿಕ ಶಾಲಾರಂಭ.

ರೂಪಾಂತರಿ ಪ್ರಕರಣ 20ಕ್ಕೆ ಏರಿಕೆ
ಭಾರತದಲ್ಲಿ ಹೊಸ ತಳಿಯ ಕೊರೊನಾ ನಿಧಾನಕ್ಕೆ ಇನ್ನಿಂಗ್ಸ್‌ ಮುಂದುವರಿಸಿದ್ದು, ಬುಧವಾರದ 2ನೇ ದಿನ ಒಟ್ಟು 6 ಮಂದಿಗೆ “ರೂಪಾಂತರಿ ಹೆಮ್ಮಾರಿ’ ತಗಲಿದೆ. ಈ ಮೂಲಕ ದೇಶದ ರೂಪಾಂತರಿ ಕೊರೊನಾ ಪ್ರಕರಣಗಳ ಸಂಖ್ಯೆ 20ಕ್ಕೆ ಏರಿದೆ. ಕರ್ನಾಟಕದ 4, ಉತ್ತರ ಪ್ರದೇಶದ ಇಬ್ಬರಿಗೆ ಹೊಸ ರೂಪದ ಕೊರೊನಾ ತಗಲಿದೆ. ಉ.ಪ್ರ.ದ ಸೋಂಕಿತರು ಮೀರತ್‌ ಮತ್ತು ಗೌತಮ್‌ ಬುದ್ಧನಗರದವರಾಗಿದ್ದಾರೆ.
33 ಸಾವಿರ ಮಂದಿ ಮೇಲೆ ಕಣ್ಣು!: ಈ ನಡುವೆ ನ.25- ಡಿ.23ರವರೆಗೆ ಇಂಗ್ಲೆಂಡಿನಿಂದ ಭಾರತಕ್ಕೆ ಮರಳಿದ 33 ಸಾವಿರ ಪ್ರಯಾಣಿಕರ ಪತ್ತೆಹಚ್ಚುವಲ್ಲಿ ಕೇಂದ್ರ ಸರಕಾರ ಯಶಸ್ವಿಯಾಗಿದ್ದು, ಅವರೆಲ್ಲರ ಮೇಲೂ ನಿಗಾ ಹೆಚ್ಚಿಸಿದೆ.

ಫೈಝರ್‌ ಪಡೆದ ಒಂದೇ ವಾರದಲ್ಲಿ ಕೊರೊನಾ!
ಅಮೆರಿಕ, ಇಂಗ್ಲೆಂಡ್‌, ಯುರೋಪ್‌ ದೇಶಗಳಲ್ಲಿ ನೀಡಲಾಗುತ್ತಿರುವ “ಫೈಝರ್‌’ ಲಸಿಕೆಗೆ ಆರಂಭದ ಲ್ಲಿಯೇ ವಿಘ್ನ ಎದುರಾಗಿದೆ. ಫೈಝರ್‌ ಲಸಿಕೆ ಪಡೆದ ಒಂದೇ ವಾರದಲ್ಲಿ ಕ್ಯಾಲಿಫೊರ್ನಿಯಾ ಮಹಿಳೆಗೆ ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ. ಲಸಿಕೆ ಪಡೆದ ಬಳಿಕ ಈಕೆಗೆ ಸ್ನಾಯು ನೋವು, ವಿಪರೀತ ದಣಿವು ಕಾಣಿಸಿಕೊಂಡಿತ್ತು. “ಲಸಿಕೆ ಪಡೆದ 10-14 ದಿನಗಳ ಬಳಿಕ ಅದು ದೇಹದಲ್ಲಿ ಕೆಲಸ ಮಾಡಲಿದೆ’ ಎಂದು ತಜ್ಞರು ಫೈಝರ್‌ ಪರ ವಕಾಲತ್ತು ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next