Advertisement

ಉಗ್ರರಿಂದ ಹೊಸ ಕಾರ್ಯತಂತ್ರ: ದೇಶದೆಲ್ಲೆಡೆ ಕಟ್ಟೆಚ್ಚರ ಅಗತ್ಯ

08:39 PM Jun 11, 2023 | Team Udayavani |

ಜಮ್ಮು- ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರಕಾರ ಹಿಂಪಡೆದು ಅಲ್ಲಿನ ಕಾನೂನು ಸುವ್ಯವಸ್ಥೆ ಮತ್ತು ಭದ್ರತೆಯ ಹೊಣೆಯನ್ನು ಕೇಂದ್ರೀಯ ಪಡೆಗಳ ಸುಪರ್ದಿಗೆ ಒಪ್ಪಿಸಿದಾಗಿನಿಂದ ಅಲ್ಲಿನ ಒಟ್ಟಾರೆ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ. ಇದರ ಹೊರತಾಗಿಯೂ ಅಲ್ಲೊಂದು ಇಲ್ಲೊಂದು ಎಂಬಂತೆ ಉಗ್ರರು ದುಷ್ಕೃತ್ಯಗಳನ್ನು ನಡೆಸಿ ಶಾಂತಿಯನ್ನು ಕದಡುವ ಪ್ರಯತ್ನ ನಡೆಸುತ್ತಲೇ ಬಂದಿದ್ದರೂ ಉಗ್ರರನ್ನು ಮಟ್ಟ ಹಾಕುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ. ಇನ್ನು ಗಡಿಯಾಚೆಯಿಂದ ಅಂದರೆ ಪಾಕಿಸ್ಥಾನದ ಕಡೆಯಿಂದ ಕಾಶ್ಮೀರದ ಕಣಿವೆಗೆ ನುಸುಳುವ ಉಗ್ರರನ್ನು ಸದೆಬಡಿಯುವ ಮೂಲಕ ಜಮ್ಮು- ಕಾಶ್ಮೀರದಲ್ಲಿನ ಕಾನೂನು ಸುವ್ಯವಸ್ಥೆಗೆ ಭಂಗ ಬಾರದಂತೆ ಕಟ್ಟೆಚ್ಚರ ವಹಿಸಿವೆ.

Advertisement

ಈ ಎಲ್ಲ ಕ್ರಮಗಳಿಂದಾಗಿ ಜಮ್ಮು – ಕಾಶ್ಮೀರ ಈಗ ದೇಶ ಮಾತ್ರವಲ್ಲದೆ ಜಾಗತಿಕ ವ್ಯವಹಾರಗಳಿಗೆ ತೆರೆಯಲ್ಪಟ್ಟಿದ್ದು ಈ ಪ್ರದೇಶದ ಬಗೆಗೆ ಜನತೆಯಲ್ಲಿದ್ದ ಆತಂಕವೆಲ್ಲ ಮಾಯವಾಗಿದೆ. ಈ ಬೆಳವಣಿಗೆಗಳಿಂದ ಭಯೋತ್ಪಾದಕ ಸಂಘಟನೆಗಳು ಮತ್ತು ಉಗ್ರರಿಗೆ ಸದಾ ಆಶ್ರಯ ನೀಡುವ ಮೂಲಕ ಭಾರತದಲ್ಲಿ ಭಯೋತ್ಪಾದಕ ಕೃತ್ಯ ನಡೆಸಲು ದುಷ್ಪ್ರೇರಣೆ ಮತ್ತು ಆರ್ಥಿಕ ನೆರವು ನೀಡುತ್ತ ಬಂದಿರುವ ಪಾಕಿಸ್ಥಾನ ವಿಚಲಿತವಾಗಿವೆ. ಈ ಕಾರಣದಿಂದಾಗಿ ಜಮ್ಮು – ಕಾಶ್ಮೀರದಲ್ಲಿ ಶಾಂತಿಯನ್ನು ಕದಡಲು ಪ್ರಯತ್ನಿಸುತ್ತಲೇ ಬಂದಿರುವ ಪಾಕಿಸ್ಥಾನದ ಐಎಸ್‌ಐ ಮತ್ತು ಇನ್ನಿತರ ಭಯೋತ್ಪಾದಕ ಸಂಘಟನೆಗಳು ತಮ್ಮ ತಂತ್ರಗಾರಿಕೆಯನ್ನು ಸದಾ ಬದಲಾಯಿಸುತ್ತಿವೆ. ಆದರೆ ಭಾರತೀಯ ಸೇನೆ, ಭಯೋತ್ಪಾದಕರ ಈ ಎಲ್ಲ ಸಂಚು, ಷಡ್ಯಂತ್ರಗಳನ್ನು ಬಯಲು ಮಾಡಿ, ಯಶಸ್ವಿಯಾಗಿ ಎದುರಿಸಿವೆ.

ಈಗ ಐಎಸ್‌ಐ ಮತ್ತು ಭಯೋತ್ಪಾದಕ ಸಂಘಟನೆಗಳು ತಮ್ಮ ಜಾಲವನ್ನು ಕಾಶ್ಮೀರ ಕಣಿವೆಯಲ್ಲಿ ಸಕ್ರಿಯವಾಗಿಸಲು ಮತ್ತು ವಿಸ್ತರಿಸುವ ಕಾರ್ಯತಂತ್ರದ ಭಾಗವಾಗಿ ಮಹಿಳೆಯರು ಅದರಲ್ಲೂ ಮುಖ್ಯವಾಗಿ ಬಾಲಕಿಯರು ಮತ್ತು ಬಾಲಾಪರಾಧಿಗಳನ್ನು ಬಳಸಿಕೊಳ್ಳುತ್ತಿರುವುದು ಬಂಧಿತರ ವಿಚಾರಣೆಯ ವೇಳೆ ಬಯಲಾಗಿದೆ. ಇದು ಭದ್ರತಾ ಪಡೆಗಳಿಗೆ ಬಲುದೊಡ್ಡ ಸವಾಲಾಗಿ ಪರಿಣಮಿಸಿದೆ. ಮಕ್ಕಳನ್ನು ಭಯೋತ್ಪಾದನ ಜಾಲದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಅವರ ಭವಿಷ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಭಯೋತ್ಪಾದಕ ಸಂಘಟನೆಗಳ ಈ ಷಡ್ಯಂತ್ರವನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಭದ್ರತಾ ಪಡೆಗಳ ಹಿರಿಯ ಅಧಿಕಾರಿಗಳು ಕಿವಿಮಾತು ಹೇಳಿದ್ದಾರೆ.

ಕಾಶ್ಮೀರ ಕಣಿವೆ ಮತ್ತು ಗಡಿ ಭಾಗಗಳಲ್ಲಿ ಭದ್ರತಾ ಕಾರ್ಯದಲ್ಲಿ ತೊಡಗಿಕೊಂಡಿರುವ ಭಾರತೀಯ ಸೇನೆಯ ವಿವಿಧ ಪಡೆಗಳ ಹಿರಿಯ ಅಧಿಕಾರಿಗಳ ಪ್ರಕಾರ ಐಎಸ್‌ಐ ಮತ್ತು ಉಗ್ರರು ಸಂದೇಶ, ಶಸ್ತ್ರಾಸ್ತ್ರ ರವಾನೆ, ಮಾದಕ ಪದಾರ್ಥಗಳ ಸಾಗಣೆಗೆ ಈ ಹಿಂದೆ ಅನುಸರಿಸುತ್ತಿದ್ದ ಸಾಂಪ್ರದಾಯಿಕ ಪದ್ಧತಿಗಳಾದ ಮೊಬೈಲ್‌ ಮೂಲಕ ಸಂವಹನ, ತಂತ್ರಜ್ಞಾನ ಆಧಾರಿತ ಗೂಢಚಾರಿಕೆ ಮತ್ತು ಸ್ಥಳೀಯವಾಗಿ ಸಂದೇಶ ವಾಹಕರ ಬಳಕೆ ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗಿದೆ.

ಈಗ ಉಗ್ರರು ಮಹಿಳೆಯರು ಮತ್ತು ಬಾಲಾಪರಾಧಿಗಳನ್ನು ಈ ಎಲ್ಲ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಬಳಸಿಕೊಳ್ಳಲಾರಂಭಿದ್ದಾರೆ. ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ತೀವ್ರ ನಿಗಾ ಇಡುವ ಜತೆಯಲ್ಲಿ ಮಕ್ಕಳು ಹಾದಿತಪ್ಪದಂತೆ ಎಚ್ಚರ ವಹಿಸಬೇಕಿದೆ. ರಂಗೋಲಿಯಡಿಗೆ ತೂರುವ ಉಗ್ರರ ಈ ಪ್ರಯತ್ನವನ್ನು ಭದ್ರತಾ ಪಡೆಗಳು ಪ್ರಾಥಮಿಕ ಹಂತದಲ್ಲಿಯೇ ವಿಫ‌ಲಗೊಳಿಸಿ, ಜಮ್ಮು – ಕಾಶ್ಮೀರದಲ್ಲಿ ಶಾಂತಿಗೆ ಭಂಗ ಬಾರದಂತೆ ಎಚ್ಚರ ವಹಿಸಬೇಕು. ಅಲ್ಲದೆ ಇದೇ ಕಾರ್ಯತಂತ್ರವನ್ನು ಇತರ ಉಗ್ರ ಸಂಘಟನೆಗಳು ಅನುಸರಿಸುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ದೇಶದೆಲ್ಲೆಡೆ ಕಟ್ಟೆಚ್ಚರ ವಹಿಸಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next