Advertisement

ಮಕ್ಕಳ ದೌರ್ಜನ್ಯ ತಡೆಗೆ ಬರಲಿದೆ ಹೊಸ ರಕ್ಷಣ ನೀತಿ; ಶಿಕ್ಷಣೇತರ ಸಂಸ್ಥೆಗಳಿಗೂ ಅನ್ವಯ

12:24 AM Nov 07, 2022 | Team Udayavani |

ಮಂಗಳೂರು: ಮಕ್ಕಳ ಮೇಲಿನ ದೌರ್ಜನ್ಯ ತಡೆ ಮತ್ತು ಅವರ ಹಕ್ಕುಗಳ ರಕ್ಷಣೆಗೆ ನೂತನ “ಕರ್ನಾಟಕ ರಾಜ್ಯಮಕ್ಕಳ ರಕ್ಷಣ ನೀತಿ’ (ಕೆಎಸ್‌ಸಿಪಿಪಿ) ಸಿದ್ಧಗೊಳ್ಳುತ್ತಿದ್ದು, ಇದು ಶಿಕ್ಷಣ ಸಂಸ್ಥೆಗಳು ಮಾತ್ರ ವಲ್ಲದೆ ಇತರ ಸಂಸ್ಥೆ ಸಹಿತ ಸಾರ್ವಜನಿಕ ಸ್ಥಳಗಳಲ್ಲೂ ಅನುಷ್ಠಾನ ಗೊಳ್ಳಲಿದೆ.

Advertisement

ಮಕ್ಕಳ ಕಳ್ಳ ಸಾಗಾಣಿಕೆ, ಲೈಂಗಿಕ ಶೋಷಣೆ, ಲೈಂಗಿಕ ದೌರ್ಜನ್ಯ, ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ, ಮಾದಕ ವಸ್ತುಗಳ ವ್ಯಸನ ಮೊದಲಾದವು ಗಳಿಂದ ಮಕ್ಕಳನ್ನು ರಕ್ಷಿಸುವುದು ನೀತಿಯ ಮುಖ್ಯ ಉದ್ದೇಶ. ಪೊಲೀಸ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಇತರ ಇಲಾಖೆಗಳು ಇದನ್ನು ಅನುಷ್ಠಾನಗೊಳಿಸಲಿವೆ.

ಮಕ್ಕಳ ರಕ್ಷಣ ಸಮಿತಿ ಕಡ್ಡಾಯ
ಪ್ರತೀ ಶಾಲೆಯಲ್ಲೂ ಪೋಷಕರು, ಮಕ್ಕಳು ಮತ್ತು ಶಿಕ್ಷಕರನ್ನು ಒಳಗೊಂಡ “ಮಕ್ಕಳ ರಕ್ಷಣ ಸಮಿತಿ’ಯನ್ನು ಕಡ್ಡಾಯವಾಗಿ ರಚಿಸಬೇಕು, ಮಕ್ಕಳ ಮೇಲೆ ಸಂಭವಿಸ ಬಹುದಾದ ಅಪರಾಧಗಳನ್ನು ಮೊದಲೇ ಗುರುತಿಸಲು ಕ್ರಮ ಕೈಗೊಳ್ಳಬೇಕು. ದೌರ್ಜನ್ಯಕ್ಕೆ ಒಳಗಾದ ಮಕ್ಕಳ ಮಾನಸಿಕ ಸ್ಥಿತಿಯನ್ನು ನಿಭಾಯಿಸಲು ಆಪ್ತ ಸಮಾ ಲೋಚಕರನ್ನು ನಿಯೋಜಿಸಬೇಕು, ಬಾಲ್ಯ ವಿವಾಹ ಪ್ರಕರಣಗಳ ತಡೆಗೆ ಎಲ್ಲ ಜಿಲ್ಲೆ ಯಲ್ಲಿ ಬಾಲ್ಯವಿವಾಹ ನಿಷೇಧ ಅಧಿಕಾರಿಗಳನ್ನು ನೇಮಿಸ ಬೇಕು ಎಂದು ನೂತನ ನೀತಿಯಲ್ಲಿ ಉಲ್ಲೇಖೀಸಲಾಗಿದೆ.

ಮಕ್ಕಳ ಸ್ನೇಹಿ ಪೊಲೀಸ್‌ ಠಾಣೆ
ಪೊಲೀಸ್‌ ಠಾಣೆಗಳು ಮಕ್ಕಳ ಸ್ನೇಹಿಯಾಗಬೇಕು. ಠಾಣೆಗಳಲ್ಲಿ ಮಕ್ಕಳ ವಯಸ್ಸಿಗೆ ಅಗತ್ಯವಾದ ಸೌಲಭ್ಯಗಳನ್ನು ಹೊಂದಿರಬೇಕು. ಮಕ್ಕಳ ವಿರುದ್ಧದ ಪ್ರಕರಣಗಳನ್ನು ಅತ್ಯುತ್ತಮವಾಗಿ ತನಿಖೆ ಮಾಡಿ ತಾರ್ಕಿಕ ಅಂತ್ಯ ಕಾಣಿಸಿದ ಪೊಲೀಸ್‌ ಅಧಿಕಾರಿಗಳನ್ನು ಗುರುತಿಸಿ ಪ್ರಶಂಸಿಸಬೇಕು ಹಾಗೂ ಪ್ರಕರಣದಲ್ಲಿ ವಾದಿಸುವ ಸರಕಾರಿ ಅಭಿ ಯೋಜಕರನ್ನು ಪ್ರೋತ್ಸಾಹಿಸುವಂತೆ ನೀತಿಯಲ್ಲಿ ಸೂಚಿಸಲಾಗಿದೆ.

ಡಿಜಿಟಲ್‌ ಶೋಷಣೆಗೂ ಅಂಕುಶ
ಡಿಜಿಟಲ್‌ ಸಾಧನಗಳ ಮೂಲಕ ಮಕ್ಕಳನ್ನು ಶೋಷಣೆ ಮಾಡುವುದರ ಮೇಲೆ ನಿಗಾ ಇರಿಸಬೇಕು. ಆನ್‌ಲೈನ್‌ನಲ್ಲಿ ಲೈಂಗಿಕ ಶೋಷಣೆ, ಲೈಂಗಿಕ ಬಳಕೆ, ಸೈಬರ್‌ ಬೆದರಿಕೆ ಮೊದಲಾದ ದೌರ್ಜನ್ಯಗಳನ್ನು ತಪ್ಪಿಸಲು ಡಿಜಿಟಲ್‌ ಸಾಧನಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಬಯೋಮೆಟ್ರಿಕ್‌ ವ್ಯವಸ್ಥೆಯನ್ನು ಅಳವಡಿಸಬೇಕು. ಮಕ್ಕಳ ವಿರುದ್ಧದ ಅಪರಾಧಗಳನ್ನು ತಡೆಗಟ್ಟಲು ಮತ್ತು ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಭೌಗೋಳಿಕ ಮಾಹಿತಿ ವ್ಯವಸ್ಥೆಗಳು (ಜಿಐಎಸ್‌), ಕೃತಕ ಬುದ್ಧಿಮತ್ತೆ (ಎಐ), ಬಿಗ್‌ ಡೇಟಾ ವಿಶ್ಲೇಷಣೆ ಮತ್ತು ಇತರ ಹೊಸ ಹೊಸ ತಂತ್ರಜ್ಞಾನಗಳ ಪ್ರಕಾರಗಳನ್ನು ಬಳಸಿಕೊಳ್ಳಬೇಕು. ಮಕ್ಕಳು ಶೈಕ್ಷಣಿಕ ಮತ್ತು ಮನೋರಂಜನೆ ಉದ್ದೇಶಗಳಿಗಾಗಿ ಪೋಷಕರು ಮತ್ತು ಶಿಕ್ಷಕರ ಮಾರ್ಗದರ್ಶನದಲ್ಲಿ ಮಾತ್ರ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಬೇಕು ಎಂಬುದನ್ನೂ ಉಲ್ಲೇಖೀಸಲಾಗಿದೆ.

Advertisement

ಶಾಲೆಗೆ ಮಾತ್ರ ಸೀಮಿತವಲ್ಲ
ಹೊಸ ಮಕ್ಕಳ ರಕ್ಷಣ ನೀತಿ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಸೀಮಿತ ವಲ್ಲ. ಇದು ಮಕ್ಕಳ ಪಾಲನಾ ಸಂಸ್ಥೆ ಗಳು, ಶಾಲೆಗಳು, ಆಸ್ಪತ್ರೆಗಳು, ಶಿಶು ವಿಹಾರ ಗಳು, ಕುಟುಂಬಗಳು ಮತ್ತು ಸಮು ದಾಯ ಗಳು, ಸರಕಾರೇತರ ಇಲಾಖೆ ಗಳು, ಸ್ವಯಂ ಸೇವಾ ಸಂಸ್ಥೆಗಳು ಮತ್ತು ಮಕ್ಕಳೊಂದಿಗೆ ನೇರ ಅಥವಾ ಪರೋಕ್ಷ ಸಂಪರ್ಕಕ್ಕೆ ಬರುವ ಎಲ್ಲ ವ್ಯಕ್ತಿ/ ಸಂಸ್ಥೆಗಳಿಗೆ ಅನ್ವಯಿಸಲಿದೆ.

ಮಕ್ಕಳ ಶೋಷಣೆ, ದೌರ್ಜನ್ಯ ತಡೆಗೆ ಸರಕಾರ ಹೊಸದಾಗಿ ಮಕ್ಕಳ ರಕ್ಷಣ ನೀತಿಯ ಕರಡು ಸಿದ್ಧಪಡಿಸಿ ಸಲಹೆಗಳನ್ನು ಆಹ್ವಾನಿಸಿದೆ. ಇದು 2016ರ ರಕ್ಷಣ ನೀತಿಗಿಂತ ಉತ್ತಮವಾಗಿದೆ. ಆದರೆ ಇದು ಹಲ್ಲಿಲ್ಲದ ಹಾವಿನಂತೆ ಆಗಬಾರದು. ಕಾಯಿದೆಯ ಚೌಕಟ್ಟಿನಡಿ ಇದನ್ನು ತಂದರೆ ತುಂಬಾ ಪರಿಣಾಮಕಾರಿಯಾಗಲು ಸಾಧ್ಯವಿದೆ. ಈ ಬಗ್ಗೆ ಸರಕಾರಕ್ಕೆ ಸಲಹೆ ನೀಡುತ್ತೇವೆ.
-ರೆನ್ನಿ ಡಿ’ಸೋಜ,
ಅಧ್ಯಕ್ಷರು, ಮಕ್ಕಳ ಕಲ್ಯಾಣ ಸಮಿತಿ, ದಕ್ಷಿಣ ಕನ್ನಡ ಜಿಲ್ಲೆ

ಮಕ್ಕಳ ಮೇಲಿನ ದೌರ್ಜನ್ಯಗಳ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಬೇಕು. ದೌರ್ಜನ್ಯವನ್ನು ಗಂಭೀರವಾಗಿ ಪರಿಗಣಿಸದೆ ಮುಚ್ಚಿಟ್ಟರೆ ಮಕ್ಕಳ ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಅಪಾಯವಿದೆ.
– ಕುಮಾರ್‌, ಮಕ್ಕಳ ರಕ್ಷಣಾಧಿಕಾರಿ (ಪ್ರಭಾರ) ಉಡುಪಿ ಜಿಲ್ಲೆ


-ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next